Advertisement

ಪವಾಡ ಪುರುಷ ಗೋಣಿಬಸವೇಶ್ವರ ರಥೋತ್ಸವ ಇಂದು

07:10 AM Mar 17, 2019 | |

ಹರಪನಹಳ್ಳಿ: ಶರಣರು ಹಾಕಿಕೊಟ್ಟ ಭಕ್ತಿಪಂಥದ ನೆಲೆಯಲ್ಲಿ ಅವರ ತತ್ವಾದರ್ಶಗಳನ್ನು ಪುನರ್‌ ಸ್ಥಾಪಿಸಲು ಅನೇಕ ಪವಾಡ ಪುರುಷರು ಜನ್ಮತಾಳಿದ್ದು, ಇದರಲ್ಲಿ ನಡು ಕರ್ನಾಟಕದ ಪಂಚಗಣಾಧೀಶ್ವರರು ಪ್ರಮುಖರಾಗಿದ್ದಾರೆ. ಶಿವನ ಅಣತೆಯಂತೆ ಹರಪನಹಳ್ಳಿ ಪಟ್ಟಣದಲ್ಲಿ ಕೆಂಪೇಶ್ವರ, ತಾಲೂಕಿನ ಅರಸೀಕೆರೆ ಗ್ರಾಮದಲ್ಲಿ ಕೋಲುಶಾಂತೇಶ್ವರ, ಕೂಲಹಳ್ಳಿ ಗ್ರಾಮದಲ್ಲಿ ಮದ್ದಾನೇಶ್ವರ, ನಾಯಕನಹಟ್ಟಿಯಲ್ಲಿ ತಿಪ್ಪೇರುದ್ರೇಶ್ವರ, ಕೊಟ್ಟೂರಿನಲ್ಲಿ ಗುರು ಕೊಟ್ಟೂರೇಶ್ವರ ನೆಲೆಸಿದರು ಎಂಬ ಐತಿಹ್ಯವಿದೆ.

Advertisement

ಐವರು ಗಣಾಧೀಶ್ವರರಲ್ಲಿ ಕೆಂಪೇಶ್ವರ, ಕೋಲುಶಾಂತೇಶ್ವರ, ಮದ್ದಾನೇಶ್ವರ ತ್ರಿಮೂರ್ತಿ ಗಣಾಧೀಶ್ವರರು ಹರಪನಹಳ್ಳಿ ತಾಲೂಕಿನಲ್ಲಿಯೇ ನೆಲೆಸಿರುವುದು ವಿಶೇಷವಾಗಿದೆ.

ಪವಾಡಗಳ ಪುರುಷ: ಪಂಚಾಗಣಾಧೀಶ್ವರರಲ್ಲಿ ಮದ್ದಾನೇಶ್ವರ ಮಾತ್ರ ಶರಣೆ ಕನಕಾಂಬಿಕೆಯನ್ನು ವರಿಸುವ ಮೂಲಕ ಸಾಂಸಾರಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಮದ್ದಾನೇಶ್ವರ ಮತ್ತು ಕನಕಾಂಬಿಕೆ ಮಗನಾಗಿ ಜನಿಸಿದ ಗೋಣಿಬಸವೇಶ್ವರ ಲೋಕ ಕಲ್ಯಾಣಕ್ಕೆ 14-15ನೇ ಶತಮಾನದ ಮಧ್ಯ ಭಾಗದಲ್ಲಿ ಧರ್ಮ, ಭಕ್ತಿಯ ಜ್ಯೋತಿ ಬೆಳಗಿದ್ದಾರೆ.

ಮನುಕುಲದ ಕಲ್ಯಾಣಕ್ಕಾಗಿ ಆಚಾರ-ವಿಚಾರ, ಸಂಸ್ಕೃತಿಗಳ ಪರಿಕಲ್ಪನೆಯಲ್ಲಿ ಧರ್ಮ ಜಾಗೃತಿ ಮೂಡಿಸಿದ ಪುರುಷರಲ್ಲಿ ಕೂಲಹಳ್ಳಿ ಗೋಣಿಬಸವೇಶ್ವರರು ಪ್ರಮುಖರಾಗಿದ್ದಾರೆ. ಚಿಕ್ಕನಹಳ್ಳಿಯಲ್ಲಿ ಗೋಣಿಬಸವೇಶ್ವರರು ವ್ಯವಸಾಯದಲ್ಲಿ ನಿರತನಾಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಆಗಮಿಸಿದ ಜೋಡಿ ಹುಲಿಗಳನ್ನೇ ಎತ್ತುಗಳ ರೀತಿ ವ್ಯವಸಾಯ ಚಟುವಟಿಕೆಗೆ ಬಳಸಿಕೊಂಡಿದ್ದಾರೆ. ಅಳಿಲು ಚರ್ಮವನ್ನೇ ತೆಪ್ಪ ಮಾಡಿಕೊಂಡು, ಕೈಯಲ್ಲಿನ ಬೆತ್ತವನ್ನೇ ಹರಿಗೋಲು ಮಾಡಿಕೊಂಡು ರಭಸವಾಗಿ ಹರಿಯುತ್ತಿದ್ದ ತುಂಗಭದ್ರಾ ನದಿಯನ್ನು ದಾಟಿದ ಪವಾಡ ಮಾಡಿರುವ ಪ್ರತೀತಿ ಇದೆ.

ಮುಂಡರಗಿ ತಾಲೂಕಿನ ಗುಮ್ಮಗೋಳ ತಲುಪಿದ ಗೋಣಿಬಸವೇಶ್ವರ ಜನಪ್ರಿಯತೆ ಸಹಿಸದ ಚಿಗಟೇರಿ ಶಿವನಯ್ಯ ಎಂಬ ಸಾಮಂತ ದೊರೆ ಗೋಣಿಬಸವೇಶ್ವರರನ್ನು ಸುಣ್ಣದ ಗೋಣಿಚೀಲದಲ್ಲಿ ಸುತ್ತಿ ಹರಪನಹಳ್ಳಿ ಪಟ್ಟಣದಲ್ಲಿರುವ ಅಯ್ಯನಕೆರೆಗೆ ಎಸೆಯುವಂತೆ ಆದೇಶ ನೀಡಿದ್ದನು. ಹೀಗೆ ಕೆರೆಯಲ್ಲಿ ಎಸೆಯಲಾಗಿದ್ದ ಸುಣ್ಣದ ಚೀಲವನ್ನು ಬಗೆದು ಅವತಾರ ಪುರುಷನಾಗಿ ಎದ್ದು ಬಂದ ಹಿನ್ನೆಲೆಯಲ್ಲಿ ಗೋಣಿಬಸವೇಶ್ವರ ಜನಮಾಸನದಲ್ಲಿ ನೆಲೆಯೂರಿದರು ಎಂಬ ನಂಬಿಕೆ ಇದೆ.

Advertisement

ದೇವಾಲಯದಲ್ಲಿ 6 ಗುಹೆ: ಮಠದ ಆವರಣದಲ್ಲಿರುವ ಮದ್ದಾನೇಶ್ವರ ದೇವಾಲಯದಲ್ಲಿ 6 ವಿಶೇಷ ಗುಹೆಗಳಿವೆ. ಅದರಲ್ಲಿ ಹೂವಿನಹಡಗಲಿ ತಾಲೂಕಿನ ಬೆಟ್ಟದ ಮಲ್ಲೇಶ್ವರ ದೇವಸ್ಥಾನ, ತಾಲೂಕಿನ ಬಾಗಳಿ ಕಲ್ಲೇಶ್ವರ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಉಳಿದಂತೆ ಪಾತಾಳ ಗಂಗಮ್ಮ, ವ್ಯಾಯಮ ಶಾಲೆ, ಪಾಠ ಶಾಲೆ, ವಿಶ್ರಾಂತಿ ಗೃಹದ ಅಕಾರಗಳ್ಳುಳ ಗುಹೆಗಳಿವೆ. ವಿಶೇಷವಾಗಿ ಗುಹೆಯಲ್ಲಿರುವ ಪಾತಾಳ ಗಂಗಮ್ಮ ಬಾವಿಗೆ ತೆರಳಿ ಮಕ್ಕಳಾಗದವರು ಅಲ್ಲಿನ ನೀರು ಸೇವಿಸಿದರೇ ಮಕ್ಕಳಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿ ನೆಲೆಯೂರಿದೆ.

ವಿವಿಧ ಧಾರ್ಮಿಕ ಕಾರ್ಯಕ್ರಮ
ಅನೇಕ ಪವಾಡಗಳ ಮೂಲಕ ಜನಮನದಾಳದಲ್ಲಿ ನೆಲೆಸಿರುವ ಗೋಣಿಬಸವೇಶ್ವರ ರಥೋತ್ಸವ ಮಾ.17ರಂದು ಸಂಜೆ 4.30ಕ್ಕೆ ಜರುಗಲಿದೆ. ವಿವಿಧ ಜಿಲ್ಲೆಗಳಿಂದ ಅಪಾರ ಭಕ್ತರ ದಂಡು ಆಗಮಿಸುತ್ತದೆ. ಜಾತ್ರೆ ಆರಂಭಕ್ಕೂ ಮುನ್ನ ಎಂಟು ದಿನಗಳ ಮುಂಚೆಯೊ ದೇವರ ಪಲ್ಲಕ್ಕಿ ಉತ್ಸವ ನಡೆದಿದ್ದು, 8 ದಿನಗಳ ಕಾಲ ಪ್ರತಿ ನಿತ್ಯ ತೇರು ಚಕ್ರ ಹಾಗೂ ಕಣಗಳಿಗೆ ವಿಶೇಷ ಪೂಜೆ ಮತ್ತು ಹುಚ್ಚಯ್ಯ ದೇವರ ಸಣ್ಣ ರಥೋತ್ಸವ ನಡೆಯುತ್ತದೆ.

ಬಸವ ಉತ್ಸವ, ಮುಖ್ಯ ರಥೋತ್ಸವದ ಮರು ದಿನವಾದ ಮಾ.18ರಂದು ಓಕಳಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮದ್ದಾನೇಶ್ವರ(ಗೋಣಿಬಸವೇಶ್ವರ) ಸಂಸ್ಥಾನದ ಪಟ್ಟಾಧ್ಯಕ್ಷ ಚಿನ್ಮಯಿ ಸ್ವಾಮೀಜಿ ತಿಳಿಸಿದ್ದಾರೆ.

ದೇವರ ದರ್ಶನದಿಂದ ರೋಗ ದೂರ ಅನೇಕ ಪವಾಡಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಗೋಣಿಬಸವೇಶ್ವರ ದರ್ಶನ ಪಡೆಯಲು ರಥೋತ್ಸವ ಸಂದರ್ಭದಲ್ಲಿ ಲಕ್ಷಾಂತರ ಜನರು ಸೇರುತ್ತಾರೆ. ಮಧ್ಯ ಕರ್ನಾಟಕದಲ್ಲಿ ಪಂಚಗಣಾ ಧೀಶ್ವರರು ಜನಮಾಸನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. 

ಪ್ರತಿವರ್ಷ ಜಾತ್ರೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆಯುವುದರಿಂದ ಅನೇಕ ರೋಗಗಳು ದೂರವಾಗಲಿದ್ದು, ಜಾತ್ರೆಯಲ್ಲಿ ಭಾಗವಹಿಸುವುದೇ ಭಕ್ತರ ಪುಣ್ಯದ ಕೆಲಸ. 
 ಎಚ್‌.ಬಿ.ಪರುಶುರಾಮಪ್ಪ, ಜಿಪಂ ಸದಸ್ಯರು

ಎಸ್‌.ಎನ್‌.ಕುಮಾರ್‌ ಪುಣಬಗಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next