ಬೆಂಗಳೂರು: ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟಿರುವ ರೈತರ ಸಾಲ, ಮನ್ನಾ ವ್ಯಾಪ್ತಿಗೆ ಒಳಪಡದಿರುವುದರಿಂದ ಎಷ್ಟು ಜನ ರೈತರು ಠೇವಣಿ ಇಟ್ಟಿದ್ದಾರೆ ಎಂಬ ವರದಿ ನೀಡುವಂತೆ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಹೇಳಿದ್ದಾರೆ.
ಈ ಬಗ್ಗೆ “ಉದಯವಾಣಿ’ಯಲ್ಲಿ ಶನಿವಾರ ವಿಶೇಷ ವರದಿ ಪ್ರಕಟಗೊಂಡಿತ್ತು. ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಸಾಲ ಮನ್ನಾದಿಂದ ಠೇವಣಿ ಕಡಿತಗೊಳಿಸುವ ಆದೇಶ ಕಡಿಮೆ ಸಂಖ್ಯೆ ರೈತರಿಗೆ ಅನ್ವಯವಾಗುತ್ತದೆ ಎಂಬ ಕಾರಣಕ್ಕೆ ಆ ಷರತ್ತನ್ನು ವಿಧಿಸಲಾಗಿತ್ತು. ಈಗ ನಿಜವಾಗಿ ಎಷ್ಟು ಜನ ಠೇವಣಿ ಇಟ್ಟಿದ್ದಾರೆ ಎಂಬ ವರದಿ ನೀಡಲು ಸಹಕಾರಿ ಬ್ಯಾಂಕ್ಗಳಿಗೆ ಸೂಚಿಸಲಾಗಿದೆ ಎಂದರು.
ರಾಜ್ಯ ಸರ್ಕಾರ ಒಂದು ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿದ್ದು, ಇದರಿಂದ ಸಾಮಾನ್ಯ ಬಡ ರೈತರಿಗೆ ಅನುಕೂಲವಾಗಬೇಕೆಂದು ಈ ಯೋಜನೆ ಜಾರಿಗೆ ತರಲಾಗಿದೆ. ರೈತರು ಠೇವಣಿ ಇಟ್ಟಿರುವ ಹಣವನ್ನು ಮಾತ್ರ ಕಡಿತಗೊಳಿಸಿ ಉಳಿದ ಹಣವನ್ನು ಮನ್ನಾ ಮಾಡಲಾಗುತ್ತದೆ. ಬ್ಯಾಂಕಿನಲ್ಲಿರುವುದು ಜನರದ್ದೇ ಹಣ. ಕಷ್ಟದಲ್ಲಿದ್ದವರಿಗೆ ಅನುಕೂಲವಾಗಬೇಕು ಎಂದು ಠೇವಣಿ ಇಟ್ಟವರ ಹಣವನ್ನು ಕಡಿತಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ, ರಾಷ್ಟ್ರೀಕೃತ ಬ್ಯಾಂಕ್ಗಳು ಸಾಲ ಮನ್ನಾ ಮಾಡಲು ಒಪ್ಪಿಕೊಂಡಿವೆ. ಆದರೆ, ಬಡ್ಡಿ ಹಣ ಬಿಡಲು ನಿರಾಕರಿಸಿವೆ. ಆದರೆ, ಹಣಕಾಸು ಇಲಾಖೆ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ನೀಡುವ ಬಡ್ಡಿಯನ್ನೂ ಸೇರಿಸಿ ಕೊಡಲು ತೀರ್ಮಾನಿಸಿದೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ತುಂಬಿ ಚಾಲ್ತಿ ಸಾಲ ಮಾಡಿಕೊಂಡಿರುವ ರೈತರಿಗೆ 25 ಸಾವಿರ ರೂಪಾಯಿ ಪ್ರೋತ್ಸಾಹ ನೀಡಲು ತೀರ್ಮಾನಿಸಲಾಗಿದೆ. ಸಹಕಾರ ಬ್ಯಾಂಕ್ಗಳಲ್ಲಿ ಸಾಲ ಪಡೆದು ಚಾಲ್ತಿ ಮಾಡಿಕೊಂಡ ರೈತರಿಗೆ ಮಾತ್ರ 1 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಬಂಡೆಪ್ಪ ಕಾಂಶಪೂರ್ ತಿಳಿಸಿದರು.