Advertisement

ಮೆಟ್ರೋ ಸಿಬ್ಬಂದಿಗೂ ಎಸ್ಮಾ ಅಧಿಸೂಚನೆಗೆ ಹೈ ತಡೆಯಾಜ್ಞೆ

11:04 AM Oct 08, 2017 | Team Udayavani |

ಬೆಂಗಳೂರು: ಮೆಟ್ರೋ ಸಿಬ್ಬಂದಿಗೂ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆ-2013 (ಎಸ್ಮಾ) ಅನ್ವಯವಾಗಲಿದೆ ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಶನಿವಾರ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ನೀಡಿದೆ.

Advertisement

ಈ ಕುರಿತು ಮೆಟ್ರೋ ಉದ್ಯೋಗಿಗಳ ಒಕ್ಕೂಟ ಹಾಗೂ ಇಬ್ಬರು ನೌಕರರು ಸಲ್ಲಿಸಿದ್ದ  ರಿಟ್‌ ಅರ್ಜಿ ವಿಚಾರಣೆ ನಡೆಸಿದ  ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಸರ್ಕಾರದ ಅಧಿಸೂಚನೆಗೆ ಮುಂದಿನ ವಿಚಾರಣೆಯವರೆಗೂ ಮಧ್ಯಂತರ ತಡೆಯಾಜ್ಞೆ ನೀಡಿ, ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕೇಂದ್ರ ಸರ್ಕಾರ ಹಾಗೂ ಬಿಎಂಆರ್‌ಸಿಎಲ್‌ಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಡಿ. ಲೀಲಾಕೃಷ್ಣನ್‌, ಮೆಟ್ರೋ ನಿಗಮ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಒಳಪಡಲಿದೆ. ಆದರೆ,  ತನಗೆ ಅಧಿಕಾರ ವ್ಯಾಪ್ತಿಗೆ ಬರದಿದ್ದರೂ ರಾಜ್ಯ ಸರ್ಕಾರ ಮೆಟ್ರೋ ಸಿಬ್ಬಂದಿಗೆ ಎಸ್ಮಾ ಕಾಯಿದೆ ಅನ್ವಯವಾಗಲಿದೆ ಎಂದು ಅಧಿಸೂಚನೆ ಹೊರಡಿಸಿದೆ.

ಜತೆಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವ ಮುನ್ನ  ಕೇಂದ್ರ ಎಸ್ಮಾ ಕಾಯಿದೆಯನ್ನು ಅವಲೋಕಿಸದೆ ಕಾನೂನು ಬಾಹಿರವಾಗಿ ಅಧಿಕಾರ ಚಲಾಯಿಸಿದೆ. ಇದರಿಂದ ಬಿಎಂಆರ್‌ಸಿಎಲ್‌ ಸಿಬ್ಬಂದಿ ತಮಗಾಗುವ ಅನ್ಯಾಯ, ಸಿಗಬೇಕಾದ ಸವಲತ್ತುಗಳನ್ನು ಪಡೆಯಲು ಪ್ರತಿಭಟನೆ ನಡೆಸುವ ಹಕ್ಕನ್ನೇ ಕಸಿದುಕೊಳ್ಳುವ ಹುನ್ನಾರ ನಡೆಸಿದೆ. 

ಹೀಗಾಗಿ ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು. ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರದ ಅಧಿಸೂಚನೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಿತು.

Advertisement

ಅರ್ಜಿದಾರರ ಆರೋಪ: ಸೆಂಟ್ರಲ್‌ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಕ್ಷುಲ್ಲಕ ಕಾರಣಕ್ಕೆ ಮೆಟ್ರೋ ಸಿಬ್ಬಂದಿಯನ್ನು ಕೇಂದ್ರ ಕೈಗಾರಿಕಾ ಭದ್ರತಾಪಡೆ ಸಿಬ್ಬಂದಿ ಥಳಿಸಿದ್ದನ್ನು ಖಂಡಿಸಿ ಜುಲೈ 7ರಂದು ನಗರದ ಎಲ್ಲ ಮೆಟ್ರೋ ನಿಲ್ದಾಣಗಳ ಬಳಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರು.

ಮೆಟ್ರೋ ಟರ್ಮಿನಲ್‌ ಇರುವ ಬೈಯಪ್ಪನಹಳ್ಳಿ ನಿಲ್ದಾಣದ ಬಳಿ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದರಿಂದ ಮೆಟ್ರೋ ಸಂಚಾರ ಕೆಲ ಗಂಟೆಗಳ ಕಾಲ ರದ್ದಾಗಿತ್ತು. ಆದರೆ, ಪ್ರತಿಭಟನೆ ಹತ್ತಿಕ್ಕುವ ಸಲುವಾಗಿಯೇ ಎಸ್ಮಾ ಕಾಯಿದೆ ಅನ್ವಯವಾಗಲಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಉಪ ಕಾರ್ಯದರ್ಶಿ ಮೂಲಕ ಅಧಿಸೂಚನೆ ಹೊರಡಿಸಿದ್ದ ರಾಜ್ಯ ಸರ್ಕಾರ ಪ್ರತಿಭಟನೆ ಹಿಂಪಡೆಯುವಂತೆ ಮಾಡಿತ್ತು.

ಆದರೆ, ಕೇಂದ್ರ ರೈಲ್ವೇ ಇಲಾಖೆ ವ್ಯಾಪ್ತಿಗೆ ಒಳಪಡಲಿರುವ ಬಿಎಂಆರ್‌ಸಿಎಲ್‌ ಸಿಬ್ಬಂದಿಗೆ ಎಸ್ಮಾ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ. ಮೆಟ್ರೋ ಹಿರಿಯ ಅಧಿಕಾರಿಗಳು ಸಿಬ್ಬಂದಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು, ಅನ್ಯಾಯದ ಬಗ್ಗೆ ಸಿಬ್ಬಂದಿ ಧ್ವನಿ ಎತ್ತದಂತೆ ಮಾಡುವ ದುರುದ್ದೇಶದಿಂದ ಎಸ್ಮಾ ಜಾರಿಗೊಳಿಸಿದ್ದಾರೆ.

ಈಗಾಗಲೇ ಮೆಟ್ರೋ ಸಿಬ್ಬಂದಿ ಹಲವು ತೊಂದರೆ ಅನುಭವಿಸುತ್ತಿದ್ದು, ಇದೀಗ ಎಸ್ಮಾ ಅನ್ವಯವಾಗಲಿದೆ ಎಂದು ಹೊರಡಿಸಿರುವ ಅಧಿಸೂಚನೆಯಿಂದ ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ. ಹೀಗಾಗಿ ಸರ್ಕಾರದ ಅಧಿಸೂಚನೆ ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದಾರೆ.

ಮೆಟ್ರೋ ವಿರುದ್ಧದ 2ನೇ ರಿಟ್‌ ಅರ್ಜಿ!: ಮೆಟ್ರೋ ನಿಯಮಾವಳಿ ಹಾಗೂ ಅಧಿಕಾರಿಗಳ ವಿರುದ್ಧ ಹೈಕೋರ್ಟ್‌ಗೆ ಸಲ್ಲಿಕೆಯಾದ ಎರಡನೇ ರಿಟ್‌ ಅರ್ಜಿ ಇದಾಗಿದೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ಬಿಎಂಆರ್‌ಸಿಎಲ್‌ ಉದ್ಯೋಗಿಗಳ ವರ್ತನೆ, ಶಿಸ್ತು ಹಾಗೂ ಅಪೀಲು ನಿಯಮಾವಳಿ (ಸಿಡಿಎ) -2014 ಅನ್ನು ರದ್ದುಗೊಳಿಸುವಂತೆ ಕೋರಿ ಮೆಟ್ರೋ ಉದ್ಯೋಗಿಗಳ ಒಕ್ಕೂಟ, ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಸಂಬಂಧ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ ಸೆ.6ಂದು ಹೈಕೋರ್ಟ್‌ ಆದೇಶಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next