Advertisement

ಮಡಿಕೇರಿಯಲ್ಲಿ ಹುಚ್ಚ ವೆಂಕಟ್‌ನ ಹುಚ್ಚಾಟ

11:18 PM Aug 29, 2019 | Team Udayavani |

ಮಡಿಕೇರಿ: ನಟ ಹುಚ್ಚ ವೆಂಕಟ್‌ನ ಹುಚ್ಚಾಟದಿಂದ ಬೇಸತ್ತ ಸಾರ್ವಜನಿಕರು ಅವರಿಗೆ ಗೂಸಾ ನೀಡಿದ ಘಟನೆ ಮಡಿಕೇರಿ ನಗರದಲ್ಲಿ ನಡೆದಿದೆ. ಯುವಕನೊಬ್ಬನ ಮೇಲೆ ಹಲ್ಲೆ ನಡೆಸಿ, ಮಾರುತಿ ಕಾರೊಂದಕ್ಕೆ ಹಾನಿಗೊಳಿಸಿದ ಕಾರಣಕ್ಕಾಗಿ ಅಸಮಾಧಾನಗೊಂಡ ಕೆಲವು ಯುವಕರು ವೆಂಕಟ್‌ನಿಗೆ ಥಳಿಸಿ, ಅವರನ್ನು ಪೊಲೀಸರಿಗೆ ಒಪ್ಪಿಸಿದರು.

Advertisement

ನಡೆದಿದ್ದೇನು?: ನಗರದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ಬಳಿ ಗುರುವಾರ ಮಧ್ಯಾಹ್ನ ದಿಢೀರ್‌ ಆಗಿ ಪ್ರತ್ಯಕ್ಷರಾದ ಹುಚ್ಚ ವೆಂಕಟ್‌, ದಾರಿ ಬದಿಯಲ್ಲಿ ನಿಂತಿದ್ದರು. ಇವರನ್ನು ಗಮನಿಸಿದ ದಿಲೀಪ್‌ ಎಂಬ ಯುವಕ, “ನೀವು ಹುಚ್ಚ ವೆಂಕಟ್‌ ಅಲ್ವಾ’ ಎಂದು ಕುತೂಹಲದಿಂದ ಕೇಳಿದರು. ಈ ವೇಳೆ, “ಏನೋ ಹೀಗೆ ಗುರಾಯಿಸ್ತೀಯ’ ಎಂದು ದಿಲೀಪ್‌ ಮೇಲೆ ವೆಂಕಟ್‌ ಹಲ್ಲೆ ಮಾಡಿದರು.

ಹಲ್ಲೆಯಿಂದ ತಪ್ಪಿಸಿಕೊಂಡು ಯುವಕ ಓಡುತ್ತಿದ್ದಂತೆ ಕುಪಿತಗೊಂಡ ವೆಂಕಟ್‌, ಯುವಕನ ಮಾರುತಿ-800 ಕಾರಿನ ಗಾಜನ್ನು ಪುಡಿ ಮಾಡಿದರು. ಹುಚ್ಚ ವೆಂಕಟ್‌ನ ಹುಚ್ಚಾಟ ಮಿತಿ ಮೀರುತ್ತಿದ್ದಂತೆ ಎಚ್ಚೆತ್ತುಕೊಂಡ ಸಾರ್ವಜನಿಕರು, ಅವರಿಗೆ ಸರಿಯಾಗಿ ಗೂಸಾ ನೀಡಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರ ಠಾಣಾ ಪೊಲೀಸರು, ವೆಂಕಟ್‌ನನ್ನು ಠಾಣೆಗೆ ಕರೆದೊಯ್ದು, ಬುದ್ಧಿವಾದ ಹೇಳಿ, ಕಳಿಸಿದರು.

ಪಾಂಡವಪುರದಲ್ಲಿ ಹುಚ್ಚನಂತೆ ಓಡಾಡಿದ: ಇದಕ್ಕೂ ಮೊದಲು ಗುರುವಾರ ಬೆಳಗ್ಗೆ ಮಂಡ್ಯ ಜಿಲ್ಲೆ ಪಾಂಡವಪುರಕ್ಕೆ ಕಾರಿನಲ್ಲಿ ಏಕಾಂಗಿಯಾಗಿ ಬಂದ ಹುಚ್ಚ ವೆಂಕಟ್‌, ಮದ್ಯಪಾನ ಮಾಡಿದ್ದು, ಪಟ್ಟಣದ ಡಾ.ರಾಜ್‌ಕುಮಾರ್‌ ವೃತ್ತದಲ್ಲಿ ಏಕಾಂಗಿಯಾಗಿ ತಿರುಗಾಡುತ್ತಿದ್ದರು. ವಿಷಯ ತಿಳಿದ ಅಭಿಮಾನಿಗಳು ಹಾಗೂ ಯುವಕರು ಮೊಬೈಲ್‌ ಹಿಡಿದು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಒಮ್ಮೊಮ್ಮೆ ನಗುತ್ತಾ ಫೋಸ್‌ ಕೊಟ್ಟರೆ, ಇನ್ನೊಮ್ಮೆ ಸಿಟ್ಟಿಗೆದ್ದು, “ಥೂ ನನ್‌ ಮಕ್ಲಾ, ಏನ್ಲಾ, ಏಯ್‌’ ಎಂದು ಜೋರಾಗಿ ಕಿರುಚಾಡುತ್ತಿದ್ದರು. ಈ ವೇಳೆ, ಕೆಲ ಅಭಿಮಾನಿಗಳು ಅವರಿಗೆ ಟೀ ಕುಡಿಸಿ, ಸತ್ಕರಿಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅವರನ್ನು ಅಲ್ಲಿಂದ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next