Advertisement

Food Corporation; ಸ್ಥಳೀಯ ಕುಚ್ಚಲಕ್ಕಿ ಪಡಿತರದಲ್ಲಿ ಇಲ್ಲ

12:27 AM Feb 22, 2024 | Team Udayavani |

ಉಡುಪಿ: ಉಭಯ ಜಿಲ್ಲೆಯ ಗ್ರಾಹಕರಿಗೆ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಯಿಂದ ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ (ಪಿಡಿಎಸ್‌) ಸ್ಥಳೀಯ ಕುಚ್ಚಲಕ್ಕಿ ವಿತರಿಸಬೇಕೆಂಬ ಬೇಡಿಕೆ ಅನೇಕ ವರ್ಷಗಳಿಂದಲೂ ಇದೆ. ಕಳೆದ ಎರಡು ವರ್ಷ ಈ ಸಂಬಂಧ ಕೇಂದ್ರ ಸರಕಾರದ ರಾಷ್ಟ್ರಿಯ ಆಹಾರ ನಿಗಮದ ಅನುಮತಿಯನ್ನು ಪಡೆಯಲಾಗಿತ್ತು.

Advertisement

ಅಕ್ಕಿಯ ಅಲಭ್ಯತೆಯಿಂದ ವಿತರಣೆ ಸಾಧ್ಯವಾಗಿರಲಿಲ್ಲ. ಈ ವರ್ಷ ಆಹಾರ ನಿಗಮದಿಂದ ಅನುಮತಿಯೇ ಸಿಕ್ಕಿಲ್ಲ ಹಾಗೂ ಸ್ಥಳೀಯವಾಗಿ ಕುಚ್ಚಲಕ್ಕಿಗೆ ಪೂರಕವಾದ ಭತ್ತ ನೀಡಲು ಯಾವೊಬ್ಬ ರೈತರು ನೋಂದಣಿ ಮಾಡಿಕೊಂಡಿಲ್ಲ. ಕೇಂದ್ರ ಆಹಾರ ನಿಗಮದ ಪಟ್ಟಿಯಲ್ಲಿ ಸ್ಥಳೀಯ ಕುಚ್ಚಲಕ್ಕಿ ಈ ವರ್ಷ ಸೇರದೇ ಇರುವುದರಿಂದ ಖರೀದಿ/ವಿತರಣೆ ಪ್ರಕ್ರಿಯೆಯೇ ಸಾಧ್ಯವಿಲ್ಲ.

ಇದೆಲ್ಲದರ ಒಟ್ಟು ಪರಿಣಾಮವಾಗಿ ಇನ್ಮುಂದೆ ಸ್ಥಳೀಯ ಕುಚ್ಚಲಕ್ಕಿ ಪಡಿತರ ವ್ಯವಸ್ಥೆಯಡಿ ಸಿಗುವುದು ಬಹುತೇಕ ಅನುಮಾನ ಮತ್ತು ಅದಕ್ಕೆ ಪೂರಕವಾದ ಬೇಡಿಕೆಯನ್ನು ದಿಲ್ಲಿಯವರೆಗೂ ಮುಟ್ಟಿಸಲು ಜನ ಪ್ರತಿನಿಧಿಗಳು ಮನಸ್ಸು ಮಾಡುವುದು ಕಷ್ಟ ಎನ್ನಲಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಸ್ಥಳೀಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಹಾಗೂ ಸಂಸದರು ಸತತ ಪ್ರಯತ್ನ ಮೂಲಕ ಉಭಯ ಜಿಲ್ಲೆಯಿಂದ ರಾಜ್ಯಕ್ಕೆ, ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅನುಮತಿ ಪಡೆಯಲಾಗಿತ್ತು. ಈ ವರ್ಷ ಜಿಲ್ಲೆಯಿಂದ ಪ್ರಸ್ತಾವನೆ ಹೋಗಿದ್ದು ಮಾತ್ರ ಅನುಮತಿ ಸಿಕ್ಕಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸಹಿತವಾಗಿ ಸ್ಥಳೀಯ ಜನಪ್ರತಿನಿಧಿಗಳು ಇದನ್ನು ಮರೆತು ಬಿಟ್ಟಿದ್ದಾರೆ.ಸದ್ಯ ಪಡಿತರ ವ್ಯವಸ್ಥೆಯಡಿ ಬೆಳ್ತಿಗೆ ಅಕ್ಕಿಯ ಜತೆಗೆ ಕುಚ್ಚಲಕ್ಕಿಯನ್ನೂ ವಿತರಿಸಲಾಗುತ್ತದೆ. ಆದರೆ, ಅದು ಆಂಧ್ರ ಪ್ರದೇಶದಲ್ಲಿ ಬೆಳೆದ ಅಕ್ಕಿ. ಇಲ್ಲಿ ಅದರ ಬಳಕೆ ಮಾಡುವವರು ತೀರ ಕಡಿಮೆಯಿದ್ದಾರೆ.

ರೈತರು ಮುಂದೆ ಬಂದಿಲ್ಲ
ಭತ್ತವನ್ನು ಬೆಂಬಲ ಬೆಲೆಯಡಿ ಸರಕಾರಕ್ಕೆ ನೀಡಲು ಉಭಯ ಜಿಲ್ಲೆಯ ಯಾವೊಬ್ಬ ರೈತರು ರಾಜ್ಯ ಆಹಾರ ನಿಗಮದಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಕಳೆದ ವರ್ಷ ಒಬ್ಬರು ಮಾತ್ರ ಭತ್ತ ನೀಡಿದ್ದರು. ಸರಕಾರದ ಕಠಿನ ನಿಯಮ ಹಾಗೂ ನಿರ್ದಿಷ್ಟ ಸಮಯದಲ್ಲಿ ಹಣ ಪಾವತಿ ಆಗದೇ ಇರುವುದರಿಂದ ರೈತರು ಸರಕಾರಕ್ಕೆ ಭತ್ತ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಮಿಲ್‌ಗ‌ಳಿಗೆ ಭತ್ತ ನೀಡಿದರೆ ಹಣ ತತ್‌ಕ್ಷಣ ಸಿಗುತ್ತದೆ ಮತ್ತು ಪ್ರತಿ ವರ್ಷ ಭತ್ತ ಖರೀದಿಸಲಿದ್ದಾರೆ ಎಂಬ ಭರವಸೆಯೂ ಇರಲಿದೆ. ಆದರೆ, ಸರಕಾರ ಪ್ರತಿ ವರ್ಷ ಖರೀದಿ ಮಾಡಲಿದೆ ಎಂಬ ಯಾವ ಖಾತ್ರಿಯೂ ಇಲ್ಲ. ಅಲ್ಲದೆ, ಕೊಯ್ಲು ಆದ ತತ್‌ಕ್ಷಣ ಭತ್ತವನ್ನು ಸರಕಾರ ಪಡೆಯುವುದಿಲ್ಲ. ಹೀಗಾಗಿ ಮೂರ್‍ನಾಲ್ಕು ತಿಂಗಳು ಭತ್ತ ಶೇಖರಿಸಿಡಲು ನಮ್ಮಲ್ಲಿ ಯಾವ ವ್ಯವಸ್ಥೆಯೂ ಇಲ್ಲ ಎಂಬುದು ರೈತರ ವಾದ.

Advertisement

ಕುಚ್ಚಲಕ್ಕಿಗೆ ಬೇಡಿಕೆ
ಅಂಗಡಿಗಳಲ್ಲಿ ಸ್ಥಳೀಯ ಕುಚ್ಚಲಕ್ಕಿಗೆ ಉತ್ತಮ ಬೇಡಿಕೆಯಿದೆ. ಉತ್ಪಾದನೆಯು ಕಡಿಮೆ ಇರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ. ಕುಚ್ಚಲಕ್ಕಿ ಎಂಒ4, ಜಯ ಮೊದಲಾದ ತಳಿಯ ಅಕ್ಕಿ ಚಿಲ್ಲರೆ ದರ ಕೆ.ಜಿ.ಗೆ 54 ರೂ. ಇದ್ದರೆ, ಸಂಪೂರ್ಣ ಕಜೆ ಅಕ್ಕಿ ಕೆ.ಜಿ.ಗೆ 58 ರೂ. ಇದೆ. ಹೋಲ್‌ಸೇಲ್‌ ದರಲ್ಲಿ ತೆಗೆದುಕೊಳ್ಳುವಾಗ (25/30 ಕೆ.ಜಿ. ಬ್ಯಾಗ್‌) ಪ್ರತಿ ಕೆ.ಜಿ.ಗೆ 2 ರೂ. ಕಡಿಮೆಯಾಗುತ್ತದೆ. ಈ ವರ್ಷ ಸ್ಥಳೀಯ ಕುಚ್ಚಲಕ್ಕಿಗೆ ಬೇಡಿಕೆ ಚೆನ್ನಾಗಿದೆ ಎಂದು ಚಿಲ್ಲರೆ ಮಳಿಗೆಯ ಮಾಲಕರೊಬ್ಬರು ಮಾಹಿತಿ ನೀಡಿದರು.

ಸ್ಥಳೀಯ ಕುಚ್ಚಲಕ್ಕಿ ಸಂಬಂಧಿಸಿದಂತೆ ಪ್ರಸ್ತಾವನೆ ಯನ್ನು ರಾಜ್ಯಕ್ಕೆ ಕಳುಹಿಸಿದ್ದೇವೆ. ಈವರೆಗೆ ಯಾವುದೇ ಉತ್ತರ ಬಂದಿಲ್ಲ.
-ರವೀಂದ್ರ, ಆಹಾರ ಇಲಾಖೆ ಉಪನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next