ಬೆಂಗಳೂರು: ರೈತರ ಸಾಲ ಮನ್ನಾ ಪ್ರಕ್ರಿಯೆ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಿಕಾಸಸೌಧದಲ್ಲಿ ಗುರುವಾರ ಅಧಿಕಾರಿಗಳ ಜತೆ ಸಭೆ ನಡೆಸಿ ಸಾಲಮನ್ನಾ ಕುರಿತು ಮಾಹಿತಿ ಪಡೆದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಜೂನ್ ಅಂತ್ಯಕ್ಕೆ ಸಾಲಮನ್ನಾ ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿಗೆ ರೈತರಿಗೆ
ಹೊಸ ಸಾಲ ಕೊಡಲು ಸಿದ್ಧತೆ ಮಾಡಿಕೊಳ್ಳುವಂತೆ ನಿರ್ದೇಶನ ನೀಡಿದ್ದಾರೆ ಎಂದು ಹೇಳಲಾಗಿದೆ.
ಮಾರ್ಚ್ 8ಕ್ಕೆ 2600 ಕೋಟಿ ರೂ. ಸಹಕಾರ ಬ್ಯಾಂಕುಗಳ ಸಾಲ ಮನ್ನಾ ಬಾಬ್ತು ಚುಕ್ತಾ ಆಗಿದ್ದು,ಮಾರ್ಚ್ ಅಂತ್ಯದವರೆಗಿನ ಲೆಕ್ಕದಲ್ಲಿ 700 ಕೋಟಿ ರೂ. ಬಿಡುಗಡೆಗೆ ಬಾಕಿ ಇದ್ದು ತಕ್ಷಣ ಬಿಡುಗಡೆಗೆ ಸೂಚನೆ ನೀಡಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ 880 ಕೋಟಿ ರೂ.ಕ್ಲೈಮ್ ಬರಲಿದ್ದು ಅದಕ್ಕೂ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಸಾಲ ಮನ್ನಾಗಾಗಿ ಮಾರ್ಚ್ ಅಂತ್ಯಕ್ಕೆ 2800 ಕೋಟಿ ರೂ. ಬಿಡುಗಡೆಯಾಗಿರುವ ಬಗ್ಗೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು ಎಂದು ಹೇಳಲಾಗಿದೆ.
ಸಾವಿರ ಕೋಟಿ ರೂ. ಉಳಿತಾಯ: ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆ ಹಾಗೂ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಸುಮಾರು ಸಾವಿರ ಕೋಟಿ ರೂ. ಉಳಿತಾಯವಾಗಿದೆ.
ರೈತರ ಹೆಸರಿನಲ್ಲಿ ಬೇರೆಯವರು ಸಾಲ ಪಡೆಯುತ್ತಿದ್ದ ಪ್ರಕರಣಗಳು ಹಾಗೂ ಎರಡೆರಡು ಕಡೆ ಸಾಲ ಮನ್ನಾ ಲಾಭ ಪಡೆಯುತ್ತಿದ್ದ ಪ್ರಕರಣಗಳಿಗೆ ಬ್ರೇಕ್ ಬಿದ್ದಿದೆ ಎಂದು ತಿಳಿದು ಬಂದಿದೆ. 9448 ಕೋಟಿ ರೂ. ಸಾಲ ಮನ್ನಾ ಮೊತ್ತ ಇತ್ತಾದರೂ ಇದೀಗ ಅದು 8500 ಕೋಟಿ ರೂ.ಗೆ ತಲುಪಬಹುದು ಎಂದು ಹೇಳಲಾಗುತ್ತಿದೆ.