Advertisement

ಭೂ ಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲಿ ಪೂರ್ಣಗೊಳಿಸಿ

07:27 AM Feb 18, 2019 | Team Udayavani |

ರಾಮನಗರ: ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ- 275 ವಿಸ್ತರಣೆಗೆ ಭೂ ಸ್ವಾಧೀನ ಪ್ರಕ್ರಿಯೆನ್ನು ಸಬೂಬು ಹೇಳದೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್‌ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ತ್ತೈಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆವಹಿಸಿದ್ದ ಅವರು ಮಾತನಾಡಿ, ಹಾಲಿ ಫೆಬ್ರವರಿ ತಿಂಗಳಲ್ಲಿ ಹೆದ್ದಾರಿ ವಿಸ್ತರಣೆ ನಿರ್ಮಾಣ ಕಾಮಗಾರಿ ಆರಂಭವಾಗಬೇಕಾಗಿದೆ. ಆದರೆ, ಭೂ ಸ್ವಾಧೀನ ಪ್ರಕ್ರಿಯೆ ವಿಳಂಬಗತಿಯಲ್ಲಿ ಸಾಗುತ್ತಿದೆ ಏಕೆ ಎಂದು ಪ್ರಶ್ನಿಸಿದರು. 

ಫೆಬ್ರವರಿ ಅಂತ್ಯದಲ್ಲಿ ಕಾಮಗಾರಿ ಆರಂಭ: ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧಿಕಾರಿಗಳು, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ 150 ಪ್ರಕರಣಗಳ ಪೈಕಿ 80 ಪ್ರಕರಣಗಳು ಇತ್ಯಾರ್ಥವಾಗಿದೆ. ಉಳಿದ ಪ್ರಕರಣಗಳು ಶೀಘ್ರದಲ್ಲಿಯೇ ಇತ್ಯರ್ಥವಾಗಲಿದೆ. ಫೆಬ್ರವರಿ ಅಂತ್ಯದ ವೇಳೆಗೆ ಪ್ರಥಮ ಹಂತದ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಸಭೆಯ ಗಮನ ಸೆಳೆದರು. 

ರಾಮನಗರ ತಾಲೂಕಿನ ಶೇಷಗಿರಿಹಳ್ಳಿಯಲ್ಲಿ ಭೂ ಸ್ವಾಧೀನವಾಗಿರುವುದಕ್ಕೆ ಸಂಬಂಧಿಸಿದಂತೆ ಅಲ್ಲಿನ ನಿವಾಸಿಗಳ ಬಳಿ ಹಕ್ಕುಪತ್ರಗಳಿಲ್ಲ. ಆದರೂ ಪರ್ಯಾಯ ಜಾಗ ಒದಗಿಸುವಂತೆ ಒತ್ತಾಯಿಸುತ್ತಿರುವುದಾಗಿ, ಹೆಜಾಲದಲ್ಲಿನ ಚೊಕ್ಕಲಿಂಗ ವಿದ್ಯಾಲಯ ಕಟ್ಟಡವನ್ನು ತೆರವುಗೊಳಿಸಲು ತೊಡಕುಂಟಾಗಿದೆ ಎಂದು ಅಧಿಕಾರಿಗಳು ಸಂಸದರ ಗಮನ ಸೆಳೆದರು. 

ಗೋಮಾಳ ಜಾಗದಲ್ಲಿ ನಿವೇಶನ: ಸಂಸದ ಸುರೇಶ್‌ ಮಾತನಾಡಿ, ಶೇಷಗಿರಿಹಳ್ಳಿ ನಿವಾಸಿಗಳಿಗೆ ಗೋಮಾಳ ಜಾಗದಲ್ಲಿ ನಿವೇಶನ ಕಲ್ಪಿಸಲು ಕ್ರಮಕೈಗೊಳ್ಳುವುದು. ಚೊಕ್ಕಲಿಂಗ ವಿದ್ಯಾಲಯದ ಆಡಳಿತ ಮಂಡಳಿ ಅವರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸಬೇಕು ಎಂದು ಸೂಚನೆ ನೀಡಿದರು.

Advertisement

ಕಾಮಗಾರಿಗೆ ಕೆರೆ ಹೂಳನ್ನು ಬಳಸಿ: ತಾಲೂಕು ಪಂಚಾಯ್ತಿ ಅಧ್ಯಕ್ಷ ಗಾಣಕಲ್‌ ನಟರಾಜ್‌, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಕೆರೆ ಹೂಳನ್ನು ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದಾಗ ಸಂಸದರು ಸ್ಪಂದಿಸಿ ಅಧಿಕಾರಿಗಳಿಗೆ ಕೆರೆಯ ಹೂಳನ್ನೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಫ‌ಲಾನುಭವಿಗಳಿಗೆ ಕುರಿ ಶೆಡ್‌ ನಿರ್ಮಾಣ: ನರೇಗಾ ಯೋಜನೆಯಡಿಯಲ್ಲಿ ಕುರಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ. ಜಿಲ್ಲೆಯಲ್ಲಿ ಎಷ್ಟು ಕುಟುಂಬಗಳು ಕುರಿ ಸಾಕಾಣೆ ಮಾಡುತ್ತಿವೆ ಎಂಬುದರ ಸರ್ವೆ ನಡೆಸಿ ಪಟ್ಟಿ ಸಿದ್ಧಪಡಿಸಿಕೊಂಡರೆ ಆ ಕುಟುಂಬಗಳಿಗೆ ಕುರಿ ಶೆಡ್‌ಗಳನ್ನು ನಿರ್ಮಿಸಿಕೊಳ್ಳಲು ಪ್ರೋತ್ಸಾಹಿಸಬಹುದು. ಈಗ ನರೇಗಾದಲ್ಲಿ 150 ಮಾನವ ದಿನಗಳು ಲಭಿಸಿವೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಒಂದು ಊರು, ಒಂದು ಕೆರೆ, ಒಂದು ಓಣಿಯನ್ನು ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು ಎಂದರು. 

ಮಾದರಿ ಜಿಲ್ಲೆಯನ್ನಾಗಿ ರೂಪಿಸಿ: ಹಾಲಿ ಲೋಕಸಭೆಯ ಅವಧಿ ಸದ್ಯದಲ್ಲೇ ಮುಕ್ತಾಯವಾಗುತ್ತಿದ್ದು, ಬಹುಶಃ ದಿಶಾ ಸಭೆ ಕೊನೆಯಾದ್ದರಿಂದ ಸಂಸದ ಡಿ.ಕೆ.ಸುರೇಶ್‌ ಅಧಿಕಾರಿಗಳು ತಮ್ಮೊಂದಿಗೆ ಸಹಕರಿಸಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಜನತೆಯ ಉದ್ದೇಶದಲ್ಲಿ ಹಾಗೂ ಅಭಿವೃದ್ಧಿಯ ಉದ್ದೇಶದಲ್ಲಿ ತಾವು ಕೆಲವು ವೇಳೆ ಅಧಿಕಾರಿಗಳ ಹರಿಹಾಯ್ದಿರುವುದಾಗಿ.

ಇದು ಅಧಿಕಾರಿಗಳಿಗೆ ನೋವು ತಂದಿದ್ದರೆ ಕ್ಷಮಿಸಬೇಕು. ಜನಪ್ರತಿನಿಧಿಗಳ ಅವಧಿ ಕೇವಲ 5 ವರ್ಷ. ಮುಂದಿನ ಚುನಾವಣೆಯಲ್ಲಿ ಮತದಾರರ ತೀರ್ಪು ಏನು ಎಂಬುದು ಗೊತ್ತಿಲ್ಲ. ಆದರೆ, ಅಧಿಕಾರಿಗಳ ಕಾರ್ಯಾವಧಿ 30 ವರ್ಷ. ಹೀಗಾಗಿ ಅಧಿಕಾರಿಗಳು ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಸಿಇಒ ಮುಲ್ಲೆ„ ಮುಹಿಲನ್‌, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ, ಅಪರ ಜಿಲ್ಲಾಧಿಕಾರಿ ವಿಜಯ್‌, ಜಿಪಂ ಅಧ್ಯಕ್ಷ ಎಂ.ಎನ್‌.ನಾಗರಾಜ್‌, ಉಪಾಧ್ಯಕ್ಷೆ ವೀಣಾ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು. 

ಚೆಕ್‌ ಡ್ಯಾಂ ನಿರ್ಮಿಸಿ, ಬಹುಮಾನ ಪಡೆಯಿರಿ: ಚೆಕ್‌ಡ್ಯಾಂಗಳನ್ನು ಹೆಚ್ಚು ನಿರ್ಮಿಸುವ ಗ್ರಾಮ ಪಂಚಾಯ್ತಿಗಳಿಗೆ ತಲಾ ಒಂದು ಕೋಟಿ ರೂ. ಬಹುಮಾನವನ್ನು ಸರ್ಕಾರ ಘೋಷಿಸಿದೆ. ಗ್ರಾಮ ಪಂಚಾಯ್ತಿಗಳು ನರೇಗಾ ಯೋಜನೆಯಡಿಯಲ್ಲಿ ಹೆಚ್ಚು ಚೆಕ್‌ಡ್ಯಾಂಗಳನ್ನು ನಿರ್ಮಿಸುವಂತೆ ಸಂಸದ ಡಿ.ಕೆ.ಸುರೇಶ್‌ ತಾಖೀತು ಮಾಡಿದರು.

ದಿಶಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮೂರು ಪಂಚಾಯ್ತಿಗಳನ್ನು ಸರ್ಕಾರ ಆಯ್ಕೆ ಮಾಡಿಕೊಂಡು ತಲಾ 1 ಕೋಟಿ ರೂ. ಬಹುಮಾನ ನೀಡುತ್ತದೆ. ಪ್ರತಿ ಗ್ರಾಮ ಪಂಚಾಯ್ತಿಯವರು ಕನಿಷ್ಠ 150 ಚೆಕ್‌ ಡ್ಯಾಂಗಳನ್ನು ನಿರ್ಮಿಸಿದರೆ ಬಹುಮಾನ ಸಿಗುವ ವಿಶ್ವಾಸ ಇಟ್ಟುಕೊಳ್ಳಬಹುದು ಎಂದು ಹಾಜರಿದ್ದ ಪಿಡಿಒಗಳಲ್ಲಿ ಉತ್ಸಾಹ ತುಂಬಿದರು. ಚೆಕ್‌ ಡ್ಯಾಂಗಳ ನಿರ್ಮಾಣಕ್ಕೆ ರಿಮೋಟ್‌ ಸೆನ್ಸಿಂಗ್‌ ಕ್ರಾಕ್‌ ಜೋನ್‌ ತಂತ್ರಜ್ಞಾನದಿಂದ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.
 
ಕಾಡು ಪ್ರಾಣಿಗಳ ಹಾವಳಿ ತಡೆಗೆ ಕಾಡುಗಲ್ಲು ಗೋಡೆ: ಕಾಡಂಚಿನ ಗ್ರಾಮಗಳಲ್ಲಿ ಆನೆ, ಹಂದಿ ಮುಂತಾದ ಕಾಡುಪ್ರಾಣಿಗಳ ಹಾವಳಿ ತಪ್ಪಿಸಲು ಅರಣ್ಯದಲ್ಲಿ ಲಭ್ಯವಾಗುವ ಕಾಡುಗಲ್ಲುಗಳನ್ನು ಬಳಸಿ ತಡೆಗೋಡೆ ನಿರ್ಮಿಸುವಂತೆ ಸರ್ಕಾರದ ಸೂಚನೆಯನ್ನು ಕೈಗೆತ್ತಿಕೊಳ್ಳಿ ಎಂದು ಸಂಸದರು ಗ್ರಾಪಂ ಪಿಡಿಒಗಳಿಗೆ ಸಲಹೆ ನೀಡಿದರು.

ಅರಣ್ಯದಲ್ಲೆ ಲಭ್ಯವಿರುವ ಕಾಡುಗಲ್ಲು, ಮರಳು, ಮಣ್ಣು ಉಪಯೋಗಿಸಿ ತಡೆಗೋಡೆ ನಿರ್ಮಿಸಬೇಕು. ಅಡಿಪಾಯ 3 ಅಡಿ ಅದರ ಮೇಲೆ 8 ಅಡಿ ಎತ್ತರ, 5 ಅಡಿ ಎತ್ತರವರೆಗೆ 5 ಅಡಿ ಅಗಲ, ಅದರ ನಮತರ 2.5 ಅಡಿ ಅಗಲದ ತಡೆಗೋಡೆ ನಿರ್ಮಿಸುವಂತೆ ಸರ್ಕಾರ ಸೂಚಿಸಿದೆ. 75 ಮೀಟರ್‌ ತಡೆಗೋಡೆ ನಿರ್ಮಿಸಲು 10 ಲಕ್ಷ ರೂ. ಅನುದಾನ ಕೊಡುತ್ತದೆ. ಕಾಡಂಚಿನ ಗ್ರಾಮ ಪಂಚಾಯ್ತಿಗಳಲ್ಲಿ ಕನಿಷ್ಠ 10 ಕಿಮೀ ತಡೆಗೋಡೆ ನಿರ್ಮಿಸಬೇಕಾಗಿದೆ. ಪ್ರಸಕ್ತ ಸಾಲಿನಲ್ಲಿ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸಂಸದ ಡಿ.ಕೆ.ಸುರೇಶ್‌ ಪಿಡಿಒಗಳಿಗೆ ಸೂಚನೆ ನೀಡಿದರು. 

ಪಂಚಾಯ್ತಿ, ಸೇವಾ ಕೇಂದ್ರಗಳಲ್ಲಿ ನೆಟ್‌ ಸಮಸ್ಯೆ!: ಬಾಪೂಜಿ ಸೇವಾ ಕೇಂದ್ರಗಳು ಮತ್ತು ಗ್ರಾಮ ಪಂಚಾಯ್ತಿಗಳಲ್ಲಿ ಇಂಟರ್‌ನೆಟ್‌ನ ಸಮಸ್ಯೆ ಬಗ್ಗೆ ದಿಶಾ ಸಭೆಯಲ್ಲಿ ಮತ್ತೂಮ್ಮೆ ಪ್ರತಿಧ್ವನಿಸಿತು. ಸಭೆಯಲ್ಲಿ ಹಾಜರಿದ್ದ ರಾಮನಗರ ತಾಪಂ ಅಧ್ಯಕ್ಷ ಗಾಣಕಲ್‌ ನಟರಾಜು ಮಾತನಾಡಿ, ಇಂಟರ್‌ನೆಟ್‌ ಸಮಸ್ಯೆ ಇನ್ನು ಇತ್ಯರ್ಥವಾಗಿಲ್ಲ. ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಗಮನ ಸೆಳೆದರು. 

ಸಭೆಯಲ್ಲಿ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ಮತ್ತೆ ಗೈರಾಗಿರುವುದಕ್ಕೆ ಸಂಸದರು ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಗಮನ ಹರಿಸುವಂತೆ ಅವರು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next