Advertisement
ಬೆಳಗ್ಗೆ 11 ಗಂಟೆಗೆ ನ್ಯಾಯಾಲಯದ ಆವರಣದಲ್ಲಿ ಪ್ರತಿಭಟನ ಸಭೆ ನಡೆಸಿದ ವಕೀಲರ ಸಂಘದ ಪದಾಧಿಕಾರಿಗಳು ದಿನದ ಕೋರ್ಟ್ ಕಲಾಪದಲ್ಲಿ ಭಾಗವಹಿಸದಿರಲು ತೀರ್ಮಾನಿಸಿರುವ ಬಗ್ಗೆ ಪ್ರಕಟಿಸಿದರು.
Related Articles
ಸಂಘದ ಮಾಜಿ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಮಾತನಾಡಿ, ಸುಪ್ರೀಂ ಕೋರ್ಟಿನ ನ್ಯಾಯಾಂಗೀಯ ಆಯ್ಕೆ ಸಮಿತಿ ಯಾರದೋ ಒತ್ತಡಕ್ಕೆ ಮಣಿದು ಸಕಾರಣವಿಲ್ಲದೆ ನ್ಯಾ| ಜಯಂತ್ ಎಂ. ಪಟೇಲ್ ಅವರನ್ನು ವರ್ಗಾವಣೆ ಮಾಡಿದೆ. ಇದರಿಂದಾಗಿ ಕೆಲವೇ ದಿನಗಳಲ್ಲಿ ಮುಂಭಡ್ತಿ ಪಡೆದು ಮುಖ್ಯ ನ್ಯಾಯಾಧೀಶರಾಗುವ ಅವಕಾಶದಿಂದ ಅವರು ವಂಚಿತರಾಗಿರುವುದು ವಿಷಾದನೀಯ ಎಂದು ತಿಳಿಸಿದರು.
Advertisement
ನ್ಯಾಯಾಂಗ ವ್ಯವಸ್ಥೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಕಷ್ಟಕರ ಎನ್ನುವುದು ಇದರಿಂದ ಸಾಬೀತಾಗಿದೆ. ಎರಡುಬಾರಿ ವರ್ಗಾವಣೆ ಮಾಡಿರುವುದು ಜಯಂತ್ ಅವರಿಗೆ ನೀಡಿದ ಒಂದು ಶಿಕ್ಷೆ ಹಾಗೂ ಮಾನಸಿಕ ಕಿರುಕುಳವಾಗಿದೆ. ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆ ಪ್ರಕ್ರಿಯೆಯನ್ನು ರಾಷ್ಟ್ರಪತಿ ನಡೆಸುತ್ತಾರೆ. ನ್ಯಾ| ಜಯಂತ್ ವರ್ಗಾವಣೆ ಪ್ರಕ್ರಿಯೆಯಲ್ಲಿ ಸರಕಾರಗಳ ಕಾಣದ ಕೈಗಳು ಕೆಲಸ ಮಾಡಿರುವ ಸಂಶಯವಿದೆ. ಅದು ನಿಜವೇ ಆಗಿದ್ದಲ್ಲಿ ನ್ಯಾಯದಾನ ವ್ಯವಸ್ಥೆಗೆ ಕೊಟ್ಟ ದೊಡ್ಡ ಹೊಡೆತವಾಗಿದೆ. ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ಮತ್ತು
ವರ್ಗಾವಣೆ ವಿಚಾರದಲ್ಲಿ ಸುಪ್ರೀಂ ಕೋರ್ಟಿನ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದರೂ ಈ ವಿಷಯದಲ್ಲಿ ಕೆಲವೊಂದು ಸರಕಾರಗಳ ನಾಯಕರು ಹಸ್ತಕ್ಷೇಪ ಮಾಡುವುದು ಖಂಡನೀಯ ಎಂದು ಹೇಳಿದರು. ಹಿರಿಯ ವಕೀಲ ಮಹಮ್ಮದ್ ಹನೀಫ್ ಅವರೂ ಮಾತನಾಡಿದರು. ಸಂಘದ ಉಪಾಧ್ಯಕ್ಷೆ ಪುಷ್ಪಲತಾ ಯು.ಕೆ., ಕೋಶಾಧಿಕಾರಿ ಸುಜಿತ್ ಕುಮಾರ್, ಜತೆ ಕಾರ್ಯದರ್ಶಿ ರೂಪಾ ಕೆ., ಕಾರ್ಯಕಾರಿ ಸಮಿತಿ ಸದಸ್ಯರಾದ ಡೇನಿಯಲ್ ಮಸ್ಕರೇನ್ಹಸ್, ನವೀನ್ ಚಿಲ್ಪರ್, ಪ್ರೇಮನಾಥ ಶೆಟ್ಟಿ, ಶ್ರೀಕುಮಾರ್, ಉದನೀಶ್, ವಿನೋದ್ ಪಾಲ್, ಪ್ರಫುಲ್ಲ ಕುಮಾರಿ, ಕೆ. ರೇಖಾ, ಸುನೀಲ್ ಕುಂಬ್ಳೆ, ಪ್ರಮೋದ್ ಕುಮಾರ್, ಕಿಶೋರ್ ಕುಮಾರ್, ಇಸ್ಮಾಯಿಲ್, ಕಿಶೋರ್ ಡಿ’ಸಿಲ್ವಾ, ಧನವಂತಿ, ಝೀಟಾ ಪ್ರಿಯಾ ಮೋರಸ್ ಅವರು ನೇತೃತ್ವ ವಹಿಸಿದ್ದರು. ಹುದ್ದೆ ಭರ್ತಿಗೊಳಿಸಿ
ನ್ಯಾಯದಾನ ವಿಳಂಬವಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ ಖಾಲಿ ಇರುವ ನ್ಯಾಯಾಧೀಶರ ಹುದ್ದೆ ಭರ್ತಿಗೆ ಯಾವುದೇ ಕ್ರಮ ಜರಗಿಸುತ್ತಿಲ್ಲ. ನ್ಯಾಯಾಧೀಶರ ಕೊರತೆಯಿಂದಾಗಿ ಬೆಂಗಳೂರಿನ ಹೈಕೋರ್ಟಿನಲ್ಲಿ ಬಹುತೇಕ ಅಧೀನ ನ್ಯಾಯಾಲಯಗಳಲ್ಲಿ ಕಲಾಪ ನಡೆಯುತ್ತಿಲ್ಲ. ಆದ್ದರಿಂದ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು.
ಎಂ.ಆರ್. ಬಲ್ಲಾಳ್,
ವಕೀಲರ ಸಂಘದ ಅಧ್ಯಕ್ಷ