Advertisement

ಕೈಕೊಟ್ಟ ಪ್ರೀತಿ, ಆತ್ಮಹತ್ಯೆ ವಿಫಲವಾದ ಯುವತಿಯೊಬ್ಬಳ ಸ್ಫೂರ್ತಿಯ ಜೀವನಗಾಥೆ ಇದು!

11:13 AM Oct 17, 2019 | Hari Prasad |

ಮನೆಯಲ್ಲಿ ಅಪ್ಪ ಅಮ್ಮನ ನಡುವೆ ನಡೆಯುತ್ತಿದ್ದ ನಿತ್ಯ ಜಗಳ ನೋಡಿ ನೋಡಿ ಬೇಸತ್ತಿದ್ದ ಆ ಯುವತಿಗೆ ಅದೊಂದು ದಿನ ಇನ್ನೊಂದು ಶಾಕ್ ಕಾದಿತ್ತು. ತಾನು ತನ್ನ ಜೀವಕ್ಕಿಂತ ಜಾಸ್ತಿ ಪ್ರೀತಿಸುತ್ತಿದ್ದ ಮತ್ತು ತನ್ನ ಮನಸ್ಸಿನ ಭಾವನೆ ಹಾಗೂ ನೋವುಗಳನ್ನು ಹಂಚಿಕೊಳ್ಳಲು ಜತೆಗಿದ್ದ ಜೀವವೊಂದು ‘ನಾನಿನ್ನು ನಿನ್ನ ಜೊತೆ ಇರಲಾರೆ’ ಎಂದು ಕಡ್ಡಿಮುರಿದಂತೆ ಹೇಳಿ ಆಕೆಯಿಂದ ದೂರವಾಗಿ ಬಿಟ್ಟಿದ್ದ. ಆಯ್ತು ಇಲ್ಲಿಗೆ ನನ್ನ ಜೀವನ ಮುಗಿಯಿತು ಎಂದು ತನಗೆ ತಾನೇ ಹೇಳಿಕೊಂಡ ಆಕೆ ಅದೊಂದು ದೃಢ ನಿರ್ಧಾರಕ್ಕೆ ಬಂದು ಬಿಟ್ಟಿದ್ದಳು. ಅದೇ ‘ಆತ್ಮಹತ್ಯೆ’!.

Advertisement

ಅಂದು ಆಕೆಯ ಪಾಲಿಗೆ ಕೆಟ್ಟ ದಿನವೇ ಆಗಿಬಿಟ್ಟಿತ್ತು. ಗಾಢವಾಗಿ ಪ್ರೀತಿಸಿದ್ದ ಗೆಳೆಯ ದೂರಾಗಿದ್ದ, ಮನೆಯಲ್ಲಿ ಹೆತ್ತವರ ನಿತ್ಯ ಜಗಳ, ಪ್ರೀತಿ ಮತ್ತು ನೆಮ್ಮದಿ ಎಂಬುದು ಆಕೆಯ ಪಾಲಿಗೆ ಸತ್ತು ಹೋಗಿತ್ತು, ಹಾಗಾಗಿ ಆಕೆ ಸಾಯಲು ನಿರ್ಧರಿಸಿದ್ದಳು. ಹಾಗೆ ನಿರ್ಧರಿಸಿ ತನ್ನ ಮನೆಯಿಂದ ಹೊರಬಿದ್ದವಳೇ ತನ್ನ ಮನೆಯಿಂದ ಸ್ವಲ್ಪವೇ ದೂರದಲ್ಲಿದ್ದ ರಸ್ತೆಯಲ್ಲಿ ನಿಂತುಕೊಂಡೇ ಬರೋಬ್ಬರಿ ಒಂದು ಬಾಟಲಿ ಫಿನಾಯಿಲ್ ಅನ್ನು ಗಟಗಟನೇ ಕುಡಿದುಬಿಟ್ಟಿದ್ದಳು!

ಆದರೆ ಸಾವಿಗೂ ಅವಳು ಸದ್ಯಕ್ಕೆ ಅನಪೇಕ್ಷಿತ ಅತಿಥಿಯೇ ಆಗಿಬಿಟ್ಟಿದ್ದಳು. ಕಮಟು ವಾಸನೆಯ ಆ ದ್ರಾವಣವನ್ನು ಮೂಗುಮುಚ್ಚಿಕೊಂಡೇ ಕುಡಿದಿದ್ದ ಆಕೆ ಮತ್ತೆ ಕಣ್ಣುಬಿಟ್ಟಿದ್ದು ನಾಲ್ಕು ದಿನಗಳ ಬಳಿಕ ಆಸ್ಪತ್ರೆಯ ICU ಬೆಡ್ ಮೇಲೆ!

ಸಾವಿಗೂ ಒಲ್ಲದ ಅತಿಥಿಯಾಗಿಬಿಟ್ಟಿದ್ದ ಈ ಹುಡುಗಿಯನ್ನು ಇದೀಗ ಆಕೆಯ ಫ್ರೆಂಡ್ಸ್ ಸಹ ದೂರವಿಡಲು ಶುರುಮಾಡಿಬಿಟ್ಟಿದ್ದರು. ಒಂದು ವಿಫಲ ಆತ್ಮಹತ್ಯೆಯ ಪ್ರಯತ್ನ ಮಾಡಿಕೊಂಡು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಆಕೆಯನ್ನು ನೋಡಲೆಂದು ಬಂದ ಅಪ್ಪ ಎಂಬ ಮಹಾನುಭಾವ ಅಂದು ಆಡಿದ್ದ ಮಾತಾದರು ಏನು ಗೊತ್ತೇ, ‘ಹೀಗೆ ಮಾಡಿಕೊಳ್ಳುತ್ತಿದ್ದಿ ಎಂದು ನನಗೆ ಮೊದಲೇ ತಿಳಿಸಿದ್ದಿದ್ದರೆ ಸಾಯಲು ಇನ್ನೂ ಒಳ್ಳೆಯ ಉಪಾಯವನ್ನು ನಾನು ಕೊಡುತ್ತಿದ್ದೆ..’ ಎಂದು! ಆಗ ಆಕೆಗೆ ಮತ್ತೊಮ್ಮೆ ಅನ್ನಿಸಿಬಿಟ್ಟಿತ್ತು ‘ಯಾರಿಗಾಗಿ ನಾನು ಬದುಕಿರಬೇಕು..?’

ಆದರೆ, ಆಕೆಗಾಗಿ ಅವಳು ಬದುಕಲೇಬೇಕಿತ್ತು. ಈ ಸಮಾಜದಲ್ಲಿ ಸಣ್ಣ ಸಣ್ಣ ಕಾರಣಕ್ಕೆಲ್ಲ ನೊಂದುಕೊಂಡು ಕೊರಗುವ ಜೀವಗಳಿಗೊಂದು ಜೀವನ ಸ್ಪೂರ್ತಿಯನ್ನು ತುಂಬಲು ಆಕೆ ಜೀವಂತವಾಗಿರಬೇಕಿತ್ತು. ಇನ್ನು, ಅಪ್ಪ ನನಗೆ ಮೊಬೈಲ್ ಕೊಡಲಿಲ್ಲ, ಅಮ್ಮ ನನಗೆ ಬೈದಳು, ಫ್ರೆಂಡ್ಸ್ ನನ್ನನ್ನು ಗೇಲಿ ಮಾಡಿದ್ರು ಎಂಬೆಲ್ಲಾ ಕಾರಣಗಳಿಗೆ ನೇಣಿಗೆ ಜೀವ ಕೊಡುವ ಅದೆಷ್ಟೋ ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಪಾಠವಾಗಲು ಆಕೆ ಆಸ್ಪತ್ರೆಯ ಬೆಡ್ ಮೇಲಿಂದ ಎದ್ದು ಬರಲೇಬೇಕಿತ್ತು. ಹಾಗಿರುವಾಗಲೇ ಆ ಯುವತಿ ಮತ್ತೆ ಚೇತರಿಸಿಕೊಂಡು ಆಸ್ಪತ್ರೆಯಿಂದ ಹೊರಬರುತ್ತಾಳೆ. ಈ ಬಾರಿ ಆಕೆಯ ಮನಸ್ಸಿನಲ್ಲಿ ಸಾಯುವ ಆಲೋಚನೆ ಇರಲಿಲ್ಲ, ಆದರೆ ಅವಳ ಮುಂದೆ ಈಗ ಇನ್ನೊಂದು ಸವಾಲು ಭೂತಾಕಾರವಾಗಿ ನಿಂತಿತ್ತು. ಈಗವಳು ತನ್ನೊಳಗಿದ್ದ ಅಷ್ಟೂ ನೋವು ಮತ್ತು ನೆಗೆಟಿವ್ ಯೋಚನೆಗಳನ್ನು ಸಾಯಿಸಬೇಕಿತ್ತು.

Advertisement

ಒಂದು ವಾರಗಳ ಆಸ್ಪತ್ರೆಯ ವಾಸದ ನಂತರ ಹೊರಜಗತ್ತಿಗೆ ಕಾಲಿಟ್ಟವಳೇ ತನ್ನ ಹೊಸ ಬದುಕನ್ನು ರೂಪಿಸಿಕೊಳ್ಳಲು ಬೇಕಾಗಿದ್ದ ಆತ್ಮಸ್ಥೈರ್ಯ ಮತ್ತು ಮನೋಬಲವನ್ನು ಪಡೆದುಕೊಳ್ಳಲು ನಿರ್ಧರಿಸಿ ಅದಕ್ಕೆ ಅಗತ್ಯವಿದ್ದ ಕೌನ್ಸಿಲಿಂಗ್ ಅನ್ನು ಪಡೆದುಕೊಳ್ಳುತ್ತಾಳೆ ಹಾಗೂ ಮನೋವೈದ್ಯರು ನೀಡಿದ ಕೆಲವೊಂದು ಔಷಧಿಗಳೂ ಸಹ ಆಕೆಯ ಶೀಘ್ರ ಚೇತರಿಕೆಗೆ ಕಾರಣವಾಗುತ್ತದೆ.


ತನ್ನ ಆರೋಗ್ಯವೆಲ್ಲಾ ಒಂದು ಹಂತಕ್ಕೆ ಬಂದ ನಂತರ ಆಕೆ ಮಾಡಿದ ಮೊದಲ ಕೆಲಸವೆಂದರೆ ತನ್ನ ತಾಯಿಯನ್ನು ಕರೆದುಕೊಂಡು ಆ ಮನೆಯಿಂದ ಹೊರಬಂದದ್ದು. ಕಳೆದುಹೋದ ದಿನಗಳನ್ನು ಎಣಿಸಿ ಪಶ್ಚಾತ್ತಾಪ ಪಡುವುದೇನೂ ಇಲ್ಲ ಎಂದು ಖಾತ್ರಿ ಮಾಡಿಕೊಂಡ ಬಳಿಕ ಆಕೆ ತನ್ನ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸುತ್ತಾಳೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಳಿಕ ಆಲ್ ಇಂಡಿಯಾ ರೇಡಿಯೋದಲ್ಲಿ ಕೆಲಸಕ್ಕೂ ಸೇರಿಕೊಳ್ಳುತ್ತಾಳೆ.
ಈ ಯುವತಿಯ ಬಾಳಲ್ಲಿ ಈ ಘಟನೆಗಳೆಲ್ಲಾ ನಡೆದು ಇದೀಗ ಕೆಲವು ವರ್ಷಗಳೇ ಕಳೆದುಹೋಗಿದೆ. ಆದರೂ ಆ ದಿನಗಳನ್ನೊಮ್ಮೆ ನೆನೆದರೆ ಈಗಲೂ ಆಕೆಯ ಕಣ್ಣಲ್ಲಿ ಒಂದು ಅವ್ಯಕ್ತ ಭಯ ಇಣುಕುತ್ತದೆ.

ಆದರೆ ಹೀಗೆ ಸಾವನ್ನು ಗೆದ್ದು ಬಂದ ಈಕೆಯ ಜೀವನ ಇದೀಗ ಚೆನ್ನಾಗಿದೆ ಮಾತ್ರವಲ್ಲ ಇತರರಿಗೆ ಮಾದರಿಯಾಗಿಯೂ ಇದೆ. ಸಮಾನ ಮನಸ್ಕರ ಜೊತೆಗೂಡಿ ತನ್ನದೇ ಆದ ಸಂಸ್ಥೆಯೊಂದನ್ನು ಸ್ಥಾಪಿಸಿಕೊಂಡಿರುವ ಈಕೆ ವಿಶೇಷ ಸಂದರ್ಭಗಳಲ್ಲೆಲ್ಲಾ ಕರ್ತವ್ಯದಲ್ಲಿರುವ ಪೊಲೀಸರ ಬಳಿ ಹೋಗಿ ಅವರಿಗೆ ಚಹಾ ನೀಡುವ ವಿಭಿನ್ನ ಕಾರ್ಯವೊಂದನ್ನೂ ಸಹ ಮಾಡುತ್ತಿದ್ದಾಳೆ.


ತನ್ನ ಈ ಎಲ್ಲಾ ಕಥೆಯನ್ನು ‘ಹ್ಯೂಮನ್ಸ್ ಆಫ್ ಬಾಂಬೆ’ ಎಂಬ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿರುವ ಈ ಯುವತಿ ಆ ಬರಹದ ಜೊತೆಯಲ್ಲಿ ತನ್ನ ಫೊಟೋವನ್ನೂ ಸಹ ಹಾಕಿಕೊಂಡಿದ್ದಾಳೆ. ಆ ಫೊಟೋದಲ್ಲಿ ಆಕೆಯ ಆತ್ಮವಿಶ್ವಾಸದ ನಗುವನ್ನು ನೋಡಿದ ಯಾರೇ ಆದರೂ ಈಕೆಯ ಜೀವನದಲ್ಲಿ ಇಷ್ಟೆಲ್ಲಾ ಕಹಿ ಘಟನೆಗಳು ಆಗಿರಬಹುದು ಎಂಬುದನ್ನು ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲ.

ಆದರೆ, ಬದುಕೇ ಹಾಗೇ. ಯಾರಿಂದ ನಾವು ಪ್ರೀತಿ ವಿಶ್ವಾಸವನ್ನು ಬಯಸುತ್ತೇವೆಯೋ ಅವರಿಂದ ನಮಗೆ ಕಿಲುಬು ಕಾಸಿನ ಪ್ರೀತಿಯೂ ಸಿಕ್ಕಿರುವುದಿಲ್ಲ. ನಾವು ನಂಬಿದ ವ್ಯಕ್ತಿಗಳೇ ಅದೊಂದು ದಿನ ಸರೀಯಾಗಿ ಕೈ ಎತ್ತಿ ಹೋಗಿರುತ್ತಾರೆ. ಆದರೆ ಇವೆಲ್ಲದರ ನಡುವೆಯೂ ಎಲ್ಲೋ ಒಂದು ಕಡೆ ನಮಗೆ ಹೊಸ ಜೀವನ, ಹೊಸ ಸವಾಲುಗಳು ಕಾಯುತ್ತಿರುತ್ತವೆ. ಅವುಗಳನ್ನು ನಾವು ಗುರುತಿಸಿ, ಸ್ವೀಕರಿಸಿ ಮುನ್ನಡೆದಲ್ಲಿ ಮಾತ್ರವೇ ಆ ಸವಾಲುಗಳು ನಮ್ಮನ್ನು ನಾವು ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಮಾಡುತ್ತವೆ.

ಜೀವನದಲ್ಲಿ ಎದುರಾದ ನೋವುಗಳನ್ನು ಚಾದರವನ್ನಾಗಿಸಿ ಮುಸುಕು ಹೊದ್ದುಕೊಂಡು ನರಳುವ ಬದಲು ಅದನ್ನೇ ಮಾಯಾ ಚಾದರವಾಗಿಸಿ ಅದರ ಮೇಲೇರಿ ಅವಕಾಶಗಳೆಂಬ ವಿಶಾಲ ಆಗಸದಲ್ಲಿ ನಾವು ತೇಲಾಡಬಹುದಲ್ಲವೇ? ಆದರೆ, ಆಯ್ಕೆ ನಮ್ಮದು!

ಈ ಯುವತಿಯ ಇಷ್ಟೂ ಕಥೆ ಕೇಳಿದ ಮೇಲೆ ನಮಗೆಲ್ಲಾ ಅನ್ನಿಸುವುದು ಇದೇ ತಾನೇ…?

Advertisement

Udayavani is now on Telegram. Click here to join our channel and stay updated with the latest news.

Next