Advertisement

ಎಚ್‌ಐವಿ ಸೋಂಕಿತರ ಜೀವಿತಾವಧಿ ಹೆಚ್ಚಳ

03:04 PM Mar 22, 2017 | |

ದಾವಣಗೆರೆ: ಎಚ್‌ಐವಿ ಸೋಂಕಿತರು ಅಗತ್ಯ ಔಷದೋಪಚಾರ ಪಡೆಯುವ ಮೂಲಕ ಸಮಾಜದ ಎಲ್ಲರಂತೆ ಜೀವನ ನಡೆಸಬಹುದು ಎಂದು ಎಚ್‌ಐವಿ-ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಜಿ.ಡಿ. ರಾಘವನ್‌ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತಿಯ ಮಿನಿ ಸಭಾಂಗಣದಲ್ಲಿ ಮಂಗಳವಾರ ಅಂತರ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಎಚ್‌ ಐವಿ ಸೋಂಕಿತರ ಬಗ್ಗೆ ಮಾತನಾಡಿದರು.

Advertisement

10-15 ವರ್ಷಗಳ ಹಿಂದೆ ಎಚ್‌ಐವಿ ಸೋಂಕಿತರ ಬಗೆಗಿದ್ದ ತಪ್ಪು ಕಲ್ಪನೆ ದೂರವಾಗಿವೆ. ತಿರಸ್ಕಾರ ಭಾವನೆ ಹೋಗಲಾಡಿಸಿದರೆ ಅವರೂ ಸಮಾಜದ ಮುಖ್ಯ ವಾಹಿನಿಯಲ್ಲಿ ಬರುತ್ತಾರೆ ಎಂದರು. ಕೆಲವಾರು ವರ್ಷಗಳ ಹಿಂದೆ ಯಾರಲ್ಲೇ ಆಗಲಿ ಎಚ್‌ಐವಿ ಕಂಡು ಬಂದರೆ ವಾರ ತಿಂಗಳೊಳಗೆ ಮರಣ ಹೊಂದುತ್ತಾರೆ ಎಂಬ ಭಾವನೆಯಿತ್ತು.

ಅದರೆ, ಬದಲಾದ ಪರಿಸ್ಥಿತಿ, ಜೀವನಶೈಲಿ, ನಿರಂತರ ಔಷಧ ಸೇವನೆಯಿಂದ ಜೀವಿತಾವಧಿ ಹೆಚ್ಚಳವಾಗಿದೆ ಎಂದು ತಿಳಿಸಿದರು. ಎಚ್‌ಐವಿ, ಏಡ್ಸ್‌ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಅರೋಗ್ಯ ಇಲಾಖೆ, ನ್ಯಾಕೋ ವಿವಿಧ ಸ್ವಯಂಸೇವಾ ಸಂಸ್ಥೆಗಳು ಅವಿರತವಾಗಿ ಶ್ರಮಿಸುತ್ತಿವೆ. ಎಲ್ಲಾ ಅಧಿಕಾರಿ ಮಿತ್ರರು ತಮ್ಮ ಇಲಾಖೆಗೆ ಅಂತವರು ಬಂದಾಗ ಆದ್ಯತೆಯ ಮೇಲೆ ಅವರವರ ಕೆಲಸ ಮಾಡಿಕೊಡುವಂತಾಗಹಬೇಕು.

ಅವರಲ್ಲಿ ಜೀವನೋತ್ಸಾಹ ತುಂಬಬೇಕು. ರಾಜ್ಯದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ದಾವಣಗೆರೆ ಜಿಲ್ಲೆ 3ನೇ ಸ್ಥಾನದಲ್ಲಿದ್ದು ಆ ಪ್ರಮಾಣವನ್ನು ತಗ್ಗಿಸಲು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕರು, ಸರ್ಕಾರಿ ನೌಕರರು ಸೋಂಕು ಪೀಡಿತ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವರ ಅಭ್ಯುದಯಕ್ಕೆ ನೆರವಾಗಬೇಕು.

ವಿವಿಧ ಇಲಾಖೆಗಳಲ್ಲಿ ಎಚ್‌ ಐವಿ ಪೀಡಿತರಿಗೆ ಹಲವಾರು ಸೌಲಭ್ಯಗಳಿದ್ದು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು. ಎಲ್ಲಾ ಎಚ್‌ಐವಿ ಪೀಡಿತರಿಗೆ ಬಿಪಿಎಲ್‌ ಹಾಗೂ ಎಪಿಎಲ್‌ ಕಾರ್ಡ್‌ ನೀಡಲಾಗುತ್ತಿದೆ. ಈವರೆಗೂ 6,947 ರೇಷನ್‌ಕಾರ್ಡ್‌ ವಿತರಿಸಲಾಗಿದೆ. ಈಗಾಗಲೇ 100 ನಿವೇಶನ ಹಾಗೂ 80 ಮನೆಗಳಿಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅವು ಮಂಜೂರಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

Advertisement

ನಿವೇಶನ ಇರುವವರಿಗೆ ಮನೆ ಕಟ್ಟಿಕೊಳ್ಳಲು ಧನಸಹಾಯ ನೀಡಲಾಗುತ್ತಿದೆ. ಚೇತನ ಯೋಜನೆಯಲ್ಲಿ 20 ಸಾವಿರ ರೂ. ಧನಸಹಾಯ ಹಾಗೂ ಧನಶ್ರೀ ಯೋಜನೆಯಲ್ಲಿ ಗೃಹ ಕೈಗಾರಿಕೆ ಆರಂಭಿಸುವವರಿಗೆ 40 ಸಾವಿರ ರೂಪಾಯಿ ಧನಸಹಾಯ ನೀಡಲಾಗುವುದು. ಜಿಲ್ಲೆಯ ಎರಡು ಎಆರ್‌ಟಿ ಕೇಂದ್ರಗಳಲ್ಲಿ ಔಷಧಿ ನೀಡಲಾಗುತ್ತಿದೆ.

ತಂದೆ-ತಾಯಿ ಇಲ್ಲದ ಎಚ್‌ಐವಿ ಪೀಡಿತ 400 ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನೆರವಿನಿಂದ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಗೆ ಹೋಗುತ್ತಿರುವ ಮಕ್ಕಳಿಗೆ ತಿಂಗಳಿಗೆ 750 ರೂಪಾಯಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಇಂತಹ ಅನಾಥ ಮಕ್ಕಳನ್ನು ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ದತ್ತು ತೆಗೆದುಕೊಳ್ಳುವ ಮೂಲಕ ಅವರ ಭವಿಷ್ಯಕ್ಕೆ ದಾರಿದೀಪವಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ.ಎಸ್‌. ತ್ರಿಪುಲಾಂಬ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ| ಕೆ. ನೀಲಾಂಬಿಕೆ, ನಿವಾಸಿ ವೈದ್ಯಾಧಿಕಾರಿ ಡಾ| ರಾಘವೇಂದ್ರಸ್ವಾಮಿ, ದಾವಣಗೆರೆ ತಾಪಂ ಕಾರ್ಯನಿರ್ವಹಣಾಧಿಕಾರಿ ಎಲ್‌. ಎಸ್‌. ಪ್ರಭುದೇವ್‌, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸ್ವಯಂ ಸೇವಾ ಸಂಘದ ಪ್ರತಿನಿಧಿಗಳು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next