Advertisement

ಪತ್ನಿಯ ಕೊಂದು ಆತ್ಮಹತ್ಯೆ ಎಂದು ಬಿಂಬಿಸಿದ ಪತಿ ಬಂಧನ

11:47 AM Aug 11, 2017 | Team Udayavani |

ಬೆಂಗಳೂರು: ವರದಕ್ಷಿಣೆ ತರಲು ಒಪ್ಪದ ಪತ್ನಿಯನ್ನು ಕತ್ತುಹಿಸುಕಿ ಕೊಲೆಗೈದ ಕುಡುಕ ಪತಿಯೊಬ್ಬ ನಂತರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

Advertisement

 ಶಾಲಿನಿ (26) ಮೃತ ಗೃಹಿಣಿ.  ಈ ಬಗ್ಗೆ ಶಾಲಿನಿಯ ತಾಯಿ ಜಯಲಕ್ಷ್ಮಮ್ಮ ಅವರು ಪೊಲೀಸರಿಗೆ ದೂರು ನೀಡಿದ್ದು,  ಅಳಿಯ ಆನಂದ್‌ ವರದಕ್ಷಿಣೆಗಾಗಿ ಕಿರುಕುಳ ನೀಡಿ ಮಗಳನ್ನು ಕೊಲೈಗೈದಿದ್ದಾನೆ ಎಂದು ಆರೋಪಿಸಿದ್ದಾರೆ.

ದೂರಿನ ಅನ್ವಯ ಆನಂದ್‌ನನ್ನು ಬಂಧಿಸಿ ಐಪಿಸಿ ಕಲಂ 302,304(ಬಿ) ಸೇರಿದಂತೆ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮೃತ ಮಹಿಳೆಯ ಮರಣೋತ್ತರ ಪರೀಕ್ಷೆಯ ಬಳಿಕ ಕೊಲೆಯೋ? ಆತ್ಮಹತ್ಯೆಯೋ ಎಂಬುದು ನಿಖರವಾಗಿ ತಿಳಿಯಲಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ 8 ತಿಂಗಳಿಂದ ಜವರೇಗೌಡನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆರೋಪಿ ಆನಂದ್‌, ಆಟೋ ಚಾಲಕನಾಗಿದ್ದು ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಪತ್ನಿ ಶಾಲಿನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ. ಅಲ್ಲದೆ ಬೋಗ್ಯದ ಮನೆ ಹಾಕಿಕೊಳ್ಳಲು ಪೋಷಕರಿಂದ 1 ಲಕ್ಷ ರೂ. ತರುವಂತೆ ಪೀಡಿಸುತ್ತಿದ್ದ.

ಅದೇ ರೀತಿ ಬುಧವಾರ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದ ಆನಂದ್‌, ಹಣದ ವಿಚಾರಕ್ಕೆ ಪತ್ನಿಯ ಜೊತೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ. ಈ ಹಿನ್ನೆಲೆಯಲ್ಲಿ ಆಕೆ, ಪೋಷಕರಿಗೆ ಕರೆ ಮಾಡಿ ನೋವು ತೋಡಿಕೊಂಡಿದ್ದಾಳೆ. ಇದಾದ ಬಳಿಕ ಮಕ್ಕಳು ಮಲಗಿದ ಮೇಲೆ ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದಿದ್ದು, ಬಳಿಕ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಿಂಬಿಸಿದ್ದಾನೆ ಎಂದು ಶಾಲಿನಿ ಪೋಷಕರು ಪೊಲೀಸರಿಗೆ ದೂರಿದ್ದಾರೆ. 

Advertisement

ಗುರುವಾರ ಬೆಳಿಗ್ಗೆ ಏನು ಅರಿಯದವಂತೆ ನಟಿಸಿದ ಆನಂದ್‌, ತನ್ನ  ಸ್ನೇಹಿತರು ಹಾಗೂ ಸಂಬಂಧಿಕರಿಗೆ ಕರೆ ಮಾಡಿ ತನ್ನ ಪತ್ನಿ ಕಾಲು ಜಾರಿ ಬಚ್ಚಲ ಮನೆಯಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾನೆ. ಈ ವಿಚಾರ ಶಾಲಿನಿ ಪೋಷಕರಿಗೂ ಗೊತ್ತಾಗಿದ್ದು ಹುಣಸೂರಿನಿಂದ ಆಗಮಿಸಿದ್ದಾರೆ. ಅಕ್ಕ-ಪಕ್ಕದ ಮನೆಯವರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. 

ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿಗೆ ನಾಲ್ಕು ವರ್ಷದ ಒಂದು ಗಂಡು ಮಗು ಹಾಗೂ ಒಂದೂವರೆ ವರ್ಷದ ಹೆಣ್ಣುಮಗುವಿದೆ. ಗುರುವಾರ ಬೆಳಗಿನವರೆಗೂ ತಾಯಿ ಸತ್ತಿರುವ ವಿಷಯ ಮಕ್ಕಳಿಗೆ ಗೊತ್ತಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next