Advertisement

ಪೊಸಡಿಗುಂಪೆಯಲ್ಲೊಂದಿಷ್ಟು ಹೊತ್ತು

09:15 PM Sep 18, 2019 | mahesh |

ಕಾಸರಗೋಡಿನ ಪಿಕ್‌ನಿಕ್‌ ಸ್ಪಾಟ್‌ಗಳಲ್ಲಿ ಪೊಸಡಿ ಗುಂಪೆಯೂ ಒಂದು. ಸಮುದ್ರ ಮಟ್ಟದಿಂದ 1060 ಅಡಿ ಎತ್ತರದಲ್ಲಿರುವ ಈ ಪ್ರದೇಶಕ್ಕೆ ಹಲವಾರು ಇತಿಹಾಸಗಳಿವೆ. ಪರಿಸರ ಪ್ರೇಮಿಗಳಿಗೆ ಈ ತಾಣ ಹೇಳಿ ಮಾಡಿಸಿದಂತಿದೆ. ಸಮಾನ ಮನಸ್ಕರ ಸೈನ್ಯ ಕಟ್ಟಿಕೊಂಡು ಪೊಸಡಿಗುಂಪೆಯ ಸೌಂದರ್ಯ ಸವಿಯಲು ಹೊರಟ ನಮಗೆ ಬೆಟ್ಟದ ತುದಿ ತಲುಪಿದಾಗ ಸುಸ್ತೋ ಸುಸ್ತು. ಆ ಸುಸ್ತಿನಲ್ಲಿ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಸ್ವತ್ಛಂಧ ಹಸುರು. ಮೋಡಗಳು ನಮ್ಮನ್ನು ಹಾದುಹೋಗುವ ಚಿಕ್ಕ ಮಕ್ಕಳು ಚಿಟ್ಟೆಯನ್ನು ಹಿಡಿಯಲು ಮಾಡುವ ಪ್ರಯತ್ನದಂತೆ ಮೋಡಗಳು ಹಿಡಿಯುವ ಕೆಟ್ಟ ಕುತೂಹಲ.

Advertisement

“ಕೆಲಹಿತ್ತಲ ಗಿಡ ಮದ್ದಲ್ಲ ‘ಎಂಬ ಗಾದೆ ಮಾತನ್ನು ಕೇಳಿಕೊಂಡೇ ಬೆಳೆದವರು ನಾವು, ಅದರಂತೇ ವರ್ತಿಸುತ್ತೇವೆ ಎಂಬುದಕ್ಕೆ ಒಂದು ಸಣ್ಣ ಉದಾಹರಣೆ ಇಲ್ಲಿದೆ. ಪೊಸಡಿಗುಂಪೆ ಎಂಬ ಚಾರಣ ಪ್ರದೇಶಕ್ಕೆ ನಮ್ಮ ಮನೆಯಿಂದ ಇರುವುದು ಕೇವಲ ಕಿಲೋಮೀಟರ್‌ ದೂರವಷ್ಟೇ. ಗಾಳಿಪಟ ಉತ್ಸವದಂತಹ ಕೆಲವು ಕಾರ್ಯಕ್ರಮಗಳು ಇಲ್ಲಿ ಸತತವಾಗಿ ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದರೂ ನಾವು ಇಷ್ಟರವರೆಗೆ ಅಲ್ಲಿ ಭೇಟಿ ನೀಡಲಿಲ್ಲವೆಂಬುದೇ ವಿಪರ್ಯಾಸ. ಕೆಲಸದ ಒತ್ತಡದ ಮಧ್ಯೆ ಒಂದೆರಡು ದಿನಗಳ ರಜೆಯಲ್ಲಿ ಮನೆಗೆ ಹೋಗಿದ್ದೆ. ಅಂದು ರವಿವಾರವಾದ್ದರಿಂದ ಅಣ್ಣ ಮನೆಯಲ್ಲೇ ಇದ್ದ. ಬೆಳಗ್ಗೆಯಿಂದಲೇ ಪೊಸಡಿಗುಂಪೆ ರಾಗ ಶುರು ಮಾಡಿದ್ದೆ. ಅವನನ್ನು ಒಪ್ಪಿಸುವುದು ಅಷ್ಟೇನೂ ಕಷ್ಟದ ಕೆಲಸವಲ್ಲದ್ದರಿಂದ ನಡುವೆಯೇ ನನ್ನ ತಂಗಿಗೆ ಫೋನು ಹಾಯಿಸಿದೆ. ಅವಳೂ ಒಪ್ಪಿದಳು. ಜತೆಗೆ ಅವಳ ಕಸಿನ್ಸ್‌ ಬರುತ್ತಾರೆಂಬ ಭರವಸೆ ಸಿಕ್ಕಿತು. ಅಂತೂ ಇಂತೂ ಮನೆಯವರನ್ನೊಪ್ಪಿಸಿ ಪೊಸಡಿಗುಂಪೆಗೆ ತಲುಪುವಾಗ ಗಂಟೆ ಮೂರಾಗಿತ್ತು.

ಪ್ರದೇಶ ನಮಗೆ ಅಷ್ಟು ಪರಿಚಯವಿಲ್ಲದುದರಿಂದ ಅರ್ಧಂಬರ್ಧ ಗೊತ್ತಿದ್ದ ತಮ್ಮನೇ ಮಹಾ ಜ್ಞಾನಿಯಾಗಿದ್ದ. ಒಂದು ಕಡೆ ಕಾರು ನಿಲ್ಲಿಸಿ ಇಲ್ಲಿಂದ ಮೇಲೆ ಹತ್ತಿದರೆ ಗುಂಪೆ ಗುಡ್ಡೆಗೆ ತಲುಪುತ್ತದೆಂದಾಗ ನಮಗೆ ಅಚ್ಚರಿಯೋ ಅಚ್ಚರಿ. ಆದರೂ ಅಣ್ಣನಿಗೆ ಸಣ್ಣ ಅನುಮಾನ. ನಮ್ಮ ಸೈನ್ಯವಂತೂ ಹೊರಟೇ ಬಿಟ್ಟಿತು ಮುಳ್ಳು ಹಾದಿಗಳ ನಡುವೆ ಬೆಟ್ಟವೇರಲು. ಹತ್ತು ನಿಮಿಷ ನಡೆದು ಹಿಂತಿರುಗಿ ನೋಡಿದಾಗ ಅಣ್ಣ ನಿಂತಲ್ಲೇ ನಿಂತಿದ್ದ. ನಮ್ಮ ನಡುವೆ ಇದ್ದ ಒಬ್ಬ ಬುದ್ಧಿವಂತ ಅವನು. ಕೊನೆಗೆ ಏನೋ ಆಲೋಚಿಸಿ ನಮಗೆ ಹಿಂತಿರುಗಿ ಬರುವಂತೆ ಸನ್ನೆ ಮಾಡಿದ. ನಮಗೆಲ್ಲಾ ಅಲ್ಲೇ ನಿಂತಿರುವಂತೆ ಸೂಚಿಸಿ ಬೈಕ್‌ ಹಿಡಿದು ಹೊರಟ.

ಸ್ವಲ್ಪ ಹೊತ್ತಲ್ಲಿ ಹಿಂತಿರುಗಿ ಬಂದು ಗುಂಪೆಗೆ ಹೋಗುವ ದಾರಿ ಇದಲ್ಲವೆಂದು ಸೂಚಿಸಿ ಮುಂದೆ ಇರುವ ದಾರಿಯತ್ತ ಕರೆದೊಯ್ದ. ಅಲ್ಲಿಂದ ನಮ್ಮ ಚಾರಣ ಶುರು. ಹೊಸ ಹುಮ್ಮಸ್ಸು, ಜತೆಗೆ ತಲೆಬುಡವಿಲ್ಲದ ಮಾತುಗಳು ಒಂದಷ್ಟು ಫೋಟೋ….. ಕ್ಷಣಕ್ಷಣಕ್ಕೂ ಅಚ್ಚರಿ ಮೂಡಿಸುವ ಪರಿಸರ. ಮೋಡ ಕವಿದು ಮಳೆ ಬರುವ ಸೂಚನೆ ಇದ್ದುದರಿಂದ ಆಯಾಸ ಗಮನಕ್ಕೆ ಬರುತ್ತಿರಲಿಲ್ಲ. ಏರಿದಷ್ಟು ಮುಗಿಯದ ಬೆಟ್ಟ. ಕೊನೆಗೆ ಅಂತೂ ಇಂತು ಬೆಟ್ಟದ ತುತ್ತ ತುದಿಯಲ್ಲಿ ನಿಂತಾಗ ಏದುಸಿರು ಬಿಡುವಷ್ಟಾಗಿತ್ತು ನಮ್ಮ ಸ್ಥಿತಿ.

ಮುಗಿಲುಗಳು ಭೂಮಿಯನ್ನು ತಲುಪುತ್ತಿರುವಂತೆಯೇ ಭಾಸವಾಗುವ ಆ ಕ್ಷಣ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ಮೋಡಗಳು ಕಣ್ಣೆದುರಿಗೇ ಹಾದು ಹೋಗುವಾಗ ಅದನ್ನು ಹಿಡಿಯುವ ಆಸೆ ಮನದಲ್ಲಿತ್ತು. ಅದರ ತುದಿಯಲ್ಲಿ ನಿಂತಾಗ ಎವರೆಸ್ಟ್‌ ಶಿಖರವೇರಿದ ಅನುಭವ. ಅದು ಕೇವಲ ಬೆಟ್ಟವಲ್ಲ ಅದರ ಹಿಂದೆ ನಾಣ್ಣುಡಿಯಲ್ಲಿ ಹಲವಾರು ಇತಿಹಾಸಗಳಿವೆ. ಪಾಂಡವರ ಹೆಜ್ಜೆ ಗುರುತುಗಳೂ ಅಲ್ಲಿವೆ ಎಂದು ನಂಬುವವರು ಹಲವರು. ಅಯಂಸ್ಕಾಂತೀಯ ಗುಣವುಳ್ಳ ಕಲ್ಲುಗಳು ಈ ಬೆಟ್ಟದ ಮೇಲಿದೆ ಎಂದು ಹೇಳುತ್ತಾರೆ. ಒಂದೆರಡು ಕಲ್ಲುಗಳನ್ನು ಪರೀಕ್ಷಿಸಿಯೂ ಆಯಿತು. ಅಕ್ಕ ತಂಗಿಯರ ಬಾವಿಯೂ ಇಲ್ಲಿದೆ, ಇದನ್ನು ತೀರ್ಥದ ಬಾವಿಯೆಂದೂ ಕರೆಯುತ್ತಾರೆ. ಹಿಂದಿನ ಕಾಲದಲ್ಲಿ ಗುಣಪಡಿಸಲಾಗದ ಚರ್ಮಕಾಯಿಲೆಗಳಿಗೆ ಈ ಬಾವಿಯ ನೀರನ್ನು ಹಾಕಿದರೆ ಕಡಿಮೆಯಾಗುತ್ತಿತ್ತು ಎಂಬುದು ಇಲ್ಲಿನವರ ನಂಬಿಕೆ.

Advertisement

ಒತ್ತಡದ ಮಧ್ಯೆ ಮನಸ್ಸಿಗೆ ಒಂದಿಷ್ಟು ಸಮಾಧಾನ ಬೇಕಾದರೆ ಇಲ್ಲಿಗೆ ಬರಬಹುದು.

ಇದು ಕೇವಲ ಗುಡ್ಡವಲ್ಲ. ಚಾರಣಕ್ಕೆ ಹೇಳಿ ಮಾಡಿಸಿದ ಪ್ರದೇಶ. ಮೊಬೈಲ್‌, ವಾಟ್ಸಾಪ್‌ಗ್ಳಿಂದ ಸ್ವಲ್ಪ ಹೊತ್ತು ದೂರ ಉಳಿದರೆ ಇಲ್ಲಿನ ಪ್ರಕೃತಿ ಕಣ್ಣಿಗೆ ಗೋಚರವಾಗುತ್ತದೆ. ಸುತ್ತಲೂ ಹಬ್ಬಿ ನಿಂತಿರುವ ಮರಗಿಡಗಳು, ಆಕಾಶವನ್ನು ಮುಟ್ಟುವಂತೆ ಭಾಸವಾಗುತ್ತಿರುವ ಬೆಟ್ಟಗಳು, ನಿರ್ಮಲವಾದ ಗಾಳಿ ಹೀಗೆ ಆನಂದಿಸಲು ಹಲವಾರು ವಿಷಯಗಳಿವೆ. ಮಳೆಗಾಲದಲ್ಲಿ ಯಾವ ಹೊತ್ತಿನಲ್ಲಿ ಬೇಕಾದರೂ ಇಲ್ಲಿಗೆ ಭೇಟಿ ನೀಡಬಹುದು. ತುಂತುರು ಮಳೆ ಇದ್ದರಂತೂ ಹೇಳುವುದೇ ಬೇಡ ಅದ್ಭುತವಾದ ಆನಂದ. ಬೇಸಗೆಯಲ್ಲಿ ಸಂಜೆ ಭೇಟಿ ನೀಡುವುದು ಉತ್ತಮ. ಬಿಸಿಲಿನ ತೀಕ್ಷ್ಣತೆ ಗುಂಪೆಯ ಮೇಲೆ ಅಧಿಕವಾಗಿರುತ್ತದೆ. ಅರಬ್ಬೀ ಸಮುದ್ರ ಹಾಗೂ ಕುದುರೆಮುಖ ಗಿರಿಧಾಮಗಳು ಇಲ್ಲಿ ನಿಂತರೆ ಕಣ್ಣಿಗೆ ಗೋಚರವಾಗುತ್ತವೆ. ಹಾಗೇ ಒಂದಷ್ಟು ಹರಟೆ, ಫೋಟೋಗಳು ಮುಗಿದು ಬೆಟ್ಟದಲ್ಲೆಲ್ಲಾ ಸುತ್ತಾಡಿದಾಗ ಗಂಟೆ ಆರಾಗಿತ್ತು. ಹಿಂದಿರುಗಿ ಬರುವ ದಾರಿಯೂ ಅಸ್ಪಷ್ಟವಾಗಿದ್ದರೂ ಕಾಲು ಎಡವದಂತೆ ಇಳಿದು ಬಂದೆವು. ಹೆಜ್ಜೆ ಭಾರವಾಗಿತ್ತಾದರೂ ಮನಸ್ಸು ಮಾತ್ರ ಹಗುರ.

ರೂಟ್‌ ಮ್ಯಾಪ್‌
· ಮಂಗಳೂರು ಭಾಗದಿಂದ ಬರುವವರಿಗೆ ಬಂದ್ಯೋಡ್‌ನಿಂದ ಬಾಯಾರು ಮಾರ್ಗವಾಗಿ 19 ಕಿ.ಮೀ. ಸಂಚರಿಸಿದರೆ ಪೊಸಡಿಗುಂಪೆ ತಲುಪುತ್ತದೆ.
· ಕಾಸರಗೋಡಿನಿಂದ ಸೀತಾಂಗೋಳಿ, ಧರ್ಮತಡ್ಕ ಮಾರ್ಗವಾಗಿ ಸಂಚರಿಸಿದರೆ 39 ಕಿ. ಮೀ ದೂರವಿದೆ.
· ಚಾರಣಕ್ಕೆ ತೆರಳುವವರು ತುಂಬಾ ಹೊತ್ತು ಅಲ್ಲೇ ಇರುವುದಾದರೆ ತಿಂಡಿಗಳನ್ನು ತೆಗೆದುಕೊಂಡು ಹೋಗಬೇಕು.
· ಅಲ್ಲಿ ಸುತ್ತಮುತ್ತಲು ಎಲ್ಲೂ ವ್ಯಾಪಾರ ಕೇಂದ್ರಗಳಿಲ್ಲ.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

Advertisement

Udayavani is now on Telegram. Click here to join our channel and stay updated with the latest news.

Next