Advertisement

ಪರೀಕ್ಷೆ ಬರೆಯಲು ವಿಶೇಷ ಅವಕಾಶ ನಿರ್ದೇಶಿಸಿದ ಹೈಕೋರ್ಟ್‌

12:21 PM Mar 26, 2019 | Team Udayavani |

ಬೆಂಗಳೂರು: ನ್ಯಾಯಾಂಗ ನಿಂದನೆ ಅರ್ಜಿ ಸೇರಿದಂತೆ ಕಲಬುರಗಿಯ ಖ್ವಾಜಾ ಬಂದೇ ನವಾಜ್‌ (ಕೆ.ಬಿ.ಎನ್‌) ಎಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ವಿದ್ಯಾರ್ಥಿಯೊಬ್ಬರ ವಿವಿಧ 32 ಅರ್ಜಿಗಳನ್ನು ಸೋಮವಾರ ಒಂದೇ ದಿನದಲ್ಲಿ ವಿಲೇವಾರಿ ಮಾಡಿರುವ ಹೈಕೋರ್ಟ್‌, ಪರೀಕ್ಷೆ ಬರೆಯಲು ವಿಶೇಷ ಅವಕಾಶ ನೀಡಿದೆ.

Advertisement

ಈ ಕುರಿತಂತೆ ಕಾಲೇಜು ವಿದ್ಯಾರ್ಥಿ ಉಡುಪಿ ಜಿಲ್ಲೆ ಕಾರ್ಕಳ ಮೂಲದ ಜಿತೇಂದ್ರ ಕುಮಾರ್‌ ರಾಜನ್‌ ಸಲ್ಲಿಸಿದ್ದ ಎಲ್ಲ ಅರ್ಜಿಗಳ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ. ಎಲ್‌. ನಾರಾಯಣಸ್ವಾಮಿ ಹಾಗೂ ನ್ಯಾ. ಪಿ.ಎಸ್‌. ದಿನೇಶ್‌ ಕುಮಾರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ, ಅರ್ಜಿದಾರ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವಂತೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಗೆ ನಿರ್ದೇಶನ ನೀಡಿ, ಅರ್ಜಿಗಳನ್ನು ಇತ್ಯರ್ಥಪಡಿಸಿತು.

ವಿದ್ಯಾರ್ಥಿಯ ಕಲಿಕೆ ಹಾಗೂ ಆತನ ಉತ್ಸಾಹವನ್ನು ಗಮನದಲ್ಲಿಟ್ಟುಕೊಂಡು, ವಿಶ್ವವಿದ್ಯಾಲಯವು ಇದನ್ನೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಆತನಿಗೆ ಪರೀಕ್ಷೆ ಬರೆಯಲು ವಿಶೇಷ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣ?: ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಜಿತೇಂದ್ರ ಕುಮಾರ್‌ ರಾಜನ್‌ ಅವರು 2005ರಲ್ಲಿ ಕೆಬಿಎನ್‌ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಐದನೇ ಸೆಮಿಸ್ಟರ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದಾಗ ಆತ, ಸೂಕ್ತ ಸಮಯದಲ್ಲಿ ಫ‌ಲಿತಾಂಶ ನೀಡುತ್ತಿಲ್ಲ ಎಂದು ಆಕ್ಷೇಪಿಸಿ ವಿಶ್ವವಿದ್ಯಾಲಯದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ಸಂಬಂಧ ಕಲಬುರಗಿ ಹೈಕೋರ್ಟ್‌ ಸಂಚಾರಿ ಪೀಠದಲ್ಲಿ ದಾಖಲಾಗಿದ್ದ ಒಂದು ನ್ಯಾಯಾಂಗ ನಿಂದನೆ, ಎರಡು ಪುನರ್‌ ಪರಿಶೀಲನಾ ಹಾಗೂ 29 ರಿಟ್‌ ಅರ್ಜಿಗಳನ್ನು ಪ್ರಧಾನ ಪೀಠಕ್ಕೆ ತರಿಸಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳು, ವಿವೇಚನಾಧಿಕಾರ ಬಳಸಿ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ವಿವಿಗೆ ನಿರ್ದೇಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next