“ರುಸ್ತುಂ’ ಚಿತ್ರತಂಡಕ್ಕೆ ಈಗ ರಚಿತಾ ರಾಮ್ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಶಿವರಾಜಕುಮಾರ್ ಎದುರು ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದರು. ಹಾಗಿದ್ದರೆ, ಚಿತ್ರದಲ್ಲಿ ರಚಿತಾಗೇನು ಕೆಲಸ ಎಂಬ ಪ್ರಶ್ನೆ ಬರಬಹುದು.
ಈ ಚಿತ್ರದಲ್ಲಿ ರಚಿತಾ, ವಿವೇಕ್ ಒಬೆರಾಯ್ ಎದುರು ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಈಗಾಗಲೇ ರಚಿತಾ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಮುಂದಿನ ತಿಂಗಳಿನಿಂದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.
“ರುಸ್ತುಂ’ ಚಿತ್ರದಲ್ಲಿ ಶಿವರಾಜಕುಮಾರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದು ಮಿಕ್ಕಂತೆ ವಿವೇಕ್ ಒಬೆರಾಯ್, ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾ ರಾಮ್, ಶಿವಮಣಿ, ಮಹೇಂದ್ರನ್ ಮುಂತಾದವರು ನಟಿಸುತ್ತಿದ್ದಾರೆ.
ಈ ಚಿತ್ರದ ಮೂಲಕ ಸಾಹಸ ನಿರ್ದೇಶಕ ರವಿವರ್ಮ ಅವರು ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದು, ಜಯಣ್ಣ ಫಿಲಂಸ್ ಬ್ಯಾನರ್ನಡಿ ಜಯಣ್ಣ ಮತ್ತು ಭೋಗೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರಕ್ಕೆ ಅನೂಪ್ ಸೀಳಿನ್ ಅವರ ಸಂಗೀತ ಮತ್ತು ಮಹೇಂದ್ರ ಸಿಂಹ ಅವರ ಛಾಯಾಗ್ರಹಣವಿದೆ. ಈಗಾಗಲೇ ಬೆಂಗಳೂರಿನಲ್ಲಿ ಸತತ ಚಿತ್ರೀಕರಣ ನಡೆದಿದ್ದು, ಮುಂದಿನ ತಿಂಗಳು ಬಿಹಾರ ಮುಂತಾದ ಕಡೆ ಚಿತ್ರೀಕರಣ ನಡೆಸುವುದಕ್ಕೆ ಚಿತ್ರತಂಡ ಪ್ರಯಾಣ ಬೆಳೆಸಲಿದೆ.