Advertisement

ಮೇ ತಿಂಗಳ ಬಿಸಿಲ ತಾಪದ ಆತಂಕ ದೂರ

02:34 PM May 03, 2022 | Team Udayavani |

ಬೆಂಗಳೂರು: ಮೇ ತಿಂಗಳಲ್ಲೂ ಬಿಸಿಲಿನ ತಾಪ ಎದುರಿಸುವ ಆತಂಕದಲ್ಲಿದ್ದ ರಾಜ್ಯದ ಜನತೆಗೆ ವರುಣನ ಆಗಮನ ಶುಭ ಸೂಚನೆ ಕೊಟ್ಟಿದೆ.

Advertisement

ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿಯಾಗಿದೆ. ದೆಹಲಿ ಸೇರಿ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಜನ ತತ್ತರಿಸಿದ್ದಾರೆ. ಅದರ ಪ್ರಭಾವ ರಾಜ್ಯದಲ್ಲೂ ಬೀರಲಿದೆ ಎಂಬ ಆತಂಕ ಮನೆ ಮಾಡಿತ್ತು. ಆದರೆ, ಇದೇ ಸಮಯದಲ್ಲಿ ವರುಣನ ಆಗಮನ ಹಾಗೂ ಹವಾಮಾನ ತಜ್ಞರ ಮುನ್ಸೂಚನೆಯು ಜನರ ಆತಂಕ ತಕ್ಕಮಟ್ಟಿಗೆ ದೂರ ಮಾಡಿದೆ. ರಾಜ್ಯದಲ್ಲಿ “ಬೇಸಿಗೆಯ ಪೀಕ್‌’ ಅಂದರೆ ಮೇನಲ್ಲೂ ಮಳೆಯ ದಿನಗಳು ಹೆಚ್ಚು ಇರಲಿದ್ದು, ಇದರಿಂದ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ತಾಪಮಾನ ಕಡಿಮೆ ಇರಲಿದೆ.

ರಾಜ್ಯದಲ್ಲಿ ಮೇ ತಿಂಗಳಿನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಬಿಸಿಲಿನ ಪ್ರಮಾಣ ಕಡಿಮೆಯಾಗಲಿದ್ದು, ಮಳೆಯ ಪ್ರಮಾಣ ಹೆಚ್ಚಳವಾಗಿರುತ್ತದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಅಂದಾಜಿಸಿದೆ.

ಸಾಮಾನ್ಯವಾಗಿ “ಇಡೀ ತಿಂಗಳಲ್ಲಿ ಸರಾಸರಿ 6.7ರಿಂದ 7 ದಿನಗಳು ಮಳೆಯ ದಿನಗಳಾಗಿವೆ. ಈ ಬಾರಿ ಇದಕ್ಕಿಂತ ಹೆಚ್ಚಿನ ಮಳೆಯ ದಿನಗಳನ್ನು ನಿರೀಕ್ಷೆ ಮಾಡಲಾಗಿದೆ. 9ರಿಂದ 10 ದಿನಗಳು ಗುಡುಗು, ಮಿಂಚು ಸಹಿತ ಮಳೆ ಸುರಿಯಬಹುದು. ಪ್ರತಿ ವರ್ಷ ಮೇ ತಿಂಗಳಲ್ಲಿ ಸರಾಸರಿ 11 ಸೆಂ.ಮೀ. ಮಳೆಯಾಗಲಿದ್ದು, ಈ ವರ್ಷ ಇದಕ್ಕಿಂತ ಹೆಚ್ಚಿನ ಮಳೆಯಾಗಬಹುದು ಎಂದು ಇಲಾಖೆ ವಿಜ್ಞಾನಿ ಎ. ಪ್ರಸಾದ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

2 ಡಿಗ್ರಿ ಕಡಿಮೆಯಾಗುವ ನಿರೀಕ್ಷೆ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಉತ್ತರ ಒಳನಾಡು ಜಿಲ್ಲೆಗಳಾದ ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿ ಸಾಮಾನ್ಯವಾಗಿ ಸರಾಸರಿ 43ರಿಂದ 45 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರುತ್ತದೆ. ಇದಕ್ಕೆ ಹೋಲಿಸಿದರೆ ಮಳೆಯ ದಿನಗಳು ಹೆಚ್ಚಿರುವುದರಿಂದ ಈ ಬಾರಿ ಉಷ್ಣಾಂಶ ಕನಿಷ್ಠ 0.5ರಿಂದ 2 ಡಿಗ್ರಿಯಷ್ಟು ಕಡಿಮೆ ದಾಖಲಾಗಬಹುದು ಎಂಬ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಕಾರಣವೇನು? ವಾತಾವರಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚಳವಾದ ವೇಳೆ ಸಹಜವಾಗಿ ಮಳೆ ಬರುತ್ತದೆ. (ವೈಜ್ಞಾನಿಕವಾಗಿ ಇದನ್ನು “ಅಪ್‌ ಡ್ರಾಫ್ಟ್’ ಎನ್ನಲಾಗುತ್ತದೆ) ಅದೇ ರೀತಿ, ಏಪ್ರಿಲ್‌ನಲ್ಲಿ ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಮೇನಲ್ಲಿ ಹೆಚ್ಚಿನ ಮಳೆಯ ದಿನಗಳು ಇರುತ್ತವೆ. ಬಿಸಿಲು ಕೂಡ ಇರುತ್ತದೆ. ಆದರೆ, ತಾಪಮಾನ ಏರಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಮುಂಗಾರು ಮೇಲೆ ಪರಿಣಾಮವಿಲ್ಲ: ಪೂರ್ವ ಮುಂಗಾರು ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾದರೆ ಅಥವಾ ತಾಪಮಾನ ಕಡಿಮೆಯಾಗುವುದರಿಂದ ಮುಂಗಾರು ಮಳೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈಗಾಗಲೇ ಏಪ್ರಿಲ್‌ನಲ್ಲಿ ವರದಿ ನೀಡಿರುವಂತೆ ಸಾಮಾನ್ಯ ಮುಂಗಾರು ಇರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅದರಂತೆ ಎಂದಿನಂತೆ ಮುಂಗಾರು ಮಾರುತಗಳು ಮಳೆ ಸುರಿಸಲಿವೆ ಎಂದು ಅಂದಾಜಿಸಲಾಗಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಕೇಂದ್ರದ ವಿಜ್ಞಾನಿ ಎ. ಪ್ರಸಾದ್‌ ಹೇಳುತ್ತಾರೆ.

ಎನ್‌.ಎಲ್‌.ಶಿವಮಾದು

Advertisement

Udayavani is now on Telegram. Click here to join our channel and stay updated with the latest news.

Next