Advertisement

ಆರೋಗ್ಯ ಕಾರ್ಡ್‌ ಕಡ್ಡಾಯವಲ್ಲ

10:44 PM Apr 28, 2019 | Lakshmi GovindaRaju |

ಬೆಂಗಳೂರು: “ಆಯುಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ’ ಅಡಿಯಲ್ಲಿ ಚಿಕಿತ್ಸೆ ಪಡೆಯಲು ಆರೋಗ್ಯ ಕಾರ್ಡ್‌ ಕಡ್ಡಾಯವಲ್ಲ. ರೋಗಿಯು ತನ್ನ ಪಡಿತರ ಚೀಟಿ ಅಥವಾ ಆಧಾರ್‌ ಕಾರ್ಡ್‌ ಸಲ್ಲಿಸಿ ಚಿಕಿತ್ಸೆ ಪಡೆಯಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

Advertisement

ಈ ಯೋಜನೆಯಡಿ ಬಿಪಿಎಲ್‌ ಕಾರ್ಡುದಾರರು ಉಚಿತವಾಗಿ ಹಾಗೂ ಎಪಿಎಲ್‌ ಕಾರ್ಡುದಾರರು ಶೇ.30ರಷ್ಟು ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ವತಿಯಿಂದ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು “ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ’ ಕಾರ್ಡ್‌ ಕಡ್ಡಾಯ ಇರುವುದಿಲ್ಲ.

ರೋಗಿಯು ತನ್ನ ಪಡಿತರ ಚೀಟಿ ಅಥವಾ ಆಧಾರ್‌ ಕಾರ್ಡ್‌ ಸಲ್ಲಿಸಿ ಸೇವೆ ಪಡೆಯಬಹುದಾಗಿದೆ. ಆದಾಗ್ಯೂ ಯೋಜನೆಯ ಸೇವೆಗಳು ಸುಲಲಿತವಾಗಿ ಹಾಗೂ ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ “ಆಯುಷ್ಮಾನ್‌ ಭಾರತ್‌ -ಆರೋಗ್ಯ ಕರ್ನಾಟಕ’ ಕಾರ್ಡ್‌ ವಿತರಿಸಲಾಗುತ್ತಿದೆ.

ರಾಜ್ಯದ ಎಲ್ಲ ಸರ್ಕಾರಿ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆಗಳು, ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 10 ರೂ.ಶುಲ್ಕದೊಂದಿಗೆ ಎ4 ಹಾಳೆಯಲ್ಲಿ ಕುಟುಂಬದ ಮಾಹಿತಿ ಮುದ್ರಿಸಿ ಕಾರ್ಡ್‌ ನೀಡಲಾಗುತ್ತಿದೆ.

ಇವುಗಳ ಜತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ಒನ್‌ ಹಾಗೂ ಬೆಂಗಳೂರು ಒನ್‌ ಕೇಂದ್ರಗಳು ಮತ್ತು ಸೇವಾ ಸಿಂಧು ಕೇಂದ್ರಗಳ ಮುಖಾಂತರ 10 ರೂ.ಶುಲ್ಕ ನೀಡಿ ಎ4 ಹಾಳೆಯಲ್ಲಿ ಅಥವಾ 35 ರೂ.ಶುಲ್ಕ ನೀಡಿ ಪಿವಿಸಿ ಕಾರ್ಡ್‌ ಪಡೆಯಬಹುದಾಗಿದೆ.

Advertisement

ಒಂದು ವೇಳೆ, ಕಾರ್ಡ್‌ಗೆ ಹೆಚ್ಚಿನ ಶುಲ್ಕ ಪಡೆದರೆ ಅಥವಾ ಕಾರ್ಡ್‌ ಇಲ್ಲವೆಂದು ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದರೆ ಇಲಾಖೆಗೆ ದೂರು ಸಲ್ಲಿಸಬಹುದು. ಇಲಾಖೆಯ ಸಹಾಯವಾಣಿ 104 ಹಾಗೂ “write2k1@gmail.com / pmk1@karnataka.gov.in / sahaaya-sevasindhu@karnataka.gov.in ಗೆ ದೂರು ಸಲ್ಲಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next