Advertisement

ಸರಕಾರದ ಕೇಸು ಎಂದರೆ ಅಸಡ್ಡೆ ಬೇಡ: ಮುಖ್ಯಮಂತ್ರಿ ಸಿದ್ದರಾಮಯ್ಯ

12:00 AM Aug 27, 2023 | Team Udayavani |

ಬೆಂಗಳೂರು: ಸರಕಾರಿ ವಕೀಲರಿಗೆ ಸರಕಾರದ ಕೇಸು ಎಂದರೆ ಅಸಡ್ಡೆ ಇರಬಾರದು. ಸರಕಾರದ್ದು ಎಂದರೆ ಜನರ ಕೇಸುಗಳು. ಜನರಿಗೆ ನ್ಯಾಯ ಸಿಗುವ ಪ್ರಮಾಣ ಇನ್ನೂ ಹೆಚ್ಚಾಗಬೇಕು. ಬಡವರಿಗೆ ಮೇಲಿನ ನ್ಯಾಯಾಲಯಗಳಿಗೆ ಹೋಗುವ ಶಕ್ತಿ ಇರುವುದಿಲ್ಲ. ಬಡವರಿಗೆ ನ್ಯಾಯ ಸಿಗದಿದ್ದರೆ ಸರಕಾರಿ ವಕೀಲರನ್ನು ನೇಮಿಸಿಕೊಂಡದ್ದು ಸಾರ್ಥಕ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಹಾಗೂ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣ ಸಂಸ್ಥೆ ಸಹಯೋಗದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕರ್ನಾಟಕ ಸರಕಾರಿ ವ್ಯಾಜ್ಯ ನಿರ್ವಹಣ ಅಧಿನಿಯಮ -2023ರ ಸಭೆಯಲ್ಲಿ ಮಾತನಾಡಿದರು.

ಪ್ಲೀಡಿಂಗ್ಸ್‌ ಸರಿಯಾಗಿ, ಪರಿಣಾಮಕಾರಿಯಾಗಿ ಬರೆಯುವುದು ಬಹಳ ಮುಖ್ಯ. ಈ ಹಂತದÇÉೇ ಅಸಡ್ಡೆ, ಉಡಾಫೆತನ ಪ್ರದರ್ಶಿಸಿದರೆ ನ್ಯಾಯ ಪ್ರಕ್ರಿಯೆಯ ಮುಂದಿನ ಎಲ್ಲ ಹಂತಗಳಲ್ಲಿ ವೈಫ‌ಲ್ಯ ಆಗುತ್ತದೆ. ಆದ್ದರಿಂದ ಬಹಳ ಜವಾಬ್ದಾರಿಯುತವಾಗಿ ಸರಕಾರಿ ವಕೀಲರು ವರ್ತಿಸಬೇಕು. ಸರಕಾರಿ ವಕೀಲರು ಮತ್ತು ಅಧಿಕಾರಿಗಳ ವೈಫ‌ಲ್ಯದಿಂದ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ವ್ಯಾಜ್ಯ ಸಣ್ಣದಿರಲಿ, ದೊಡ್ಡದಿರಲಿ ಅದನ್ನು ಗಂಭೀರವಾಗಿ ಪರಿಗಣಿಸಿ ಹೋಂ ವರ್ಕ್‌ ಮಾಡಿ. ನಮಗೆ ಹಣ ಕೊಡುವುದು ಜನರು. ಜನರ ಹಣದಲ್ಲಿ ನಮಗೆ ಸವಲತ್ತುಗಳು ಸಿಗುತ್ತಿವೆ. ಈ ಬಗ್ಗೆ ನಮಗೆ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆ ಹಾಗೂ ಧನ್ಯತೆ ಇರಬೇಕು ಎಂದು ಸೂಚಿಸಿದರು.

ನ್ಯಾಯಾಂಗ ನಿಂದನೆ ಆಗದಂತೆ ವೃತ್ತಿಪರತೆ ಪ್ರದರ್ಶಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸರಕಾರವೇ ನಿಮ್ಮ ಕಕ್ಷಿದಾರ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಕರ್ತವ್ಯ ಪ್ರಜ್ಞೆ ಮೆರೆಯಬೇಕು. ಸರಕಾರ ಮತ್ತು ಜನರ ಹಿತ ಕಾಪಾಡುವ ಮತ್ತು ಸರಕಾರದ ಆಸ್ತಿ ಉಳಿಸುವ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ ಎಂದು ವಕೀಲರಿಗೆ ಸೂಚಿಸಿದರು.

ರಾಜಿ-ಸಂಧಾನ (ಆರ್ಬಿಟ್ರೇಶನ್‌) ಪ್ರಕರಣಗಳಿಗೆ ಸಂಬಂಧಿಸಿ 15 ದಿನಗಳಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ನಿರ್ಣಯಿಸಲಾಗುವುದು ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದರು.

Advertisement

ರಾಜಿ-ಸಂಧಾನ ಪ್ರಕರಣಗಳಿಗೆ ಸಂಬಂಧಿಸಿ ಸರಕಾರದ ಉನ್ನತ ಅಧಿಕಾರಿಗಳು ಹಾಗೂ ಕಾನೂನು ತಜ್ಞರೊಂದಿಗೆ ಸೇರಿ 15 ದಿನಗಳಲ್ಲಿ ಮಾರ್ಗದರ್ಶಿ ಸೂತ್ರ ಅನುಸರಿಸಲಾಗುವುದು, ರಾಜ್ಯದ ಜಿಲ್ಲಾ, ತಾಲೂಕು ಮತ್ತು ಇತರ ನ್ಯಾಯಾಲಯಗಳಲ್ಲಿ ಹೈಕೋರ್ಟ್‌ವರೆಗೆ ಪ್ರಸ್ತುತ 21.4 ಲಕ್ಷ ಪ್ರಕರಣಗಳು ವಿಚಾರಣೆಯ ಹಂತದಲ್ಲಿವೆ. ಕೆಳ ಹಂತದ ನ್ಯಾಯಾಲಯದಲ್ಲಿ 18.9 ಲಕ್ಷ ಪ್ರಕರಣಗಳಿದ್ದರೆ, 2.50 ಲಕ್ಷ ಪ್ರಕರಣಗಳು ಹೈಕೋರ್ಟ್‌ನಲ್ಲಿವೆ. 1,626 ಪ್ರಕರಣಗಳು 20 ರಿಂದ 30 ವರ್ಷ ಹಳೆಯದ್ದಾಗಿದ್ದರೆ, 30 ವರ್ಷಕ್ಕಿಂತ ಹೆಚ್ಚು ಹಳೆಯ ಪ್ರಕರಣಗಳು 172 ಇವೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಅಡ್ವೊಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಸಭೆಯಲ್ಲಿ ಉಪಸ್ಥಿತರಿದ್ದರು.

ಸರಕಾರಕ್ಕೆ ಸೋಲು
ಐದಾರು ವರ್ಷಗಳಲ್ಲಿ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಶೇ.75ರಷ್ಟು ಪ್ರಕರಣಗಳಲ್ಲಿ ಸರಕಾರದ ವಿರುದ್ಧ ಆದೇಶಗಳಾಗಿವೆ. ಕ್ರಿಮಿನಲ್‌ ಪ್ರಕರಣಗಳಲ್ಲಿ ಶೇ. 95ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಸರಕಾರ ಸೋಲು ಅನುಭವಿಸಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ. ಸರಕಾರಿ ಮೇಲ್ಮನವಿಗಳಸಂಖ್ಯೆ ಗಣನೀಯವಾಗಿ ಹೆಚ್ಚಳಗೊಂಡು ವೆಚ್ಚ ಹೆಚ್ಚಾಗಿದೆ. ಇದನ್ನು ಗಮನಿಸಿ ರಾಜ್ಯದ ನ್ಯಾಯಾಲಯಗಳು ಮತ್ತು ಶಾಸನಬದ್ಧ ನ್ಯಾಯಾಧಿಕರಣಗಳ ಮುಂದೆ ಸರಕಾರಿ ವ್ಯಾಜ್ಯಗಳು ನಡೆಸುವ ಕುರಿತಂತೆ ನಿಯಮಗಳು, ಆದೇಶಗಳು, ಅಧಿಸೂಚನೆಗಳು, ಸುತ್ತೋಲೆಗಳು ಮುಂತಾದ ದಿಕ್ಸೂಚಿ ರಹಿತ ನಿರ್ದೇಶನಗಳನ್ನು ಈ ಕಾನೂನಿನ ಮೂಲಕ ಬದಲಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next