Advertisement

ನಮ್ಮದು ನುಡಿದಂತೆ ನಡೆದ ಸರ್ಕಾರ

11:14 AM Feb 19, 2018 | Team Udayavani |

ಮಸ್ಕಿ: ರಾಜ್ಯದ ಜನತೆಗೆ ನಾವು ನೀಡಿದ್ದ 165 ಭರವಸೆಗಳನ್ನೂ ಈಡೇರಿಸಿದ್ದು, ನಮ್ಮದು ನುಡಿದಂತೆ ನಡೆದ ಸರಕಾರವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರವಿವಾರ ಪಟ್ಟಣದ ಪೊಲೀಸ್‌ ಠಾಣೆ ಪಕ್ಕದ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ನೂತನ ತಾಲೂಕು ಕೇಂದ್ರ ಘೋಷಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

Advertisement

ಅಧಿಕಾರ ಎನ್ನುವುದು ಜನರ ಸೇವೆಗೆ ದೊರಕಿರುವ ಅವಕಾಶವೆಂದು ನಾನು ಭಾವಿಸಿದ್ದೇನೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರ ಈಗಾಗಲೇ 12,000 ಕೋಟಿ ರೂ. ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದೀಗ ಮಸ್ಕಿ ತಾಲೂಕು ಕೇಂದ್ರ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ 540 ಕೋ.ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ಬಿಜೆಪಿಯವರು ಜನ ಪರಿವರ್ತನಾ ಯಾತ್ರೆ ಮಾಡಿದ್ದಾರೆ. ಆದರೆ ನಿಜವಾಗಿ ಪರಿವರ್ತನೆ ಆಗಬೇಕಾಗಿರುವುದು ಮಾಜಿ ಮುಖ್ಯಮಂತ್ರಿ ಯಡಿಯುರಪ್ಪ, ಶೋಭಾ ಕರಂದ್ಲಾಜೆ, ಜಗದೀಶ ಶೆಟ್ಟರ್‌, ಅಮಿತ್‌ ಶಾ ಇತರರು. ರಾಜ್ಯ ಸರಕಾರದ ವಿರುದ್ಧ ಟೀಕೆ ಮಾಡುವುದಕ್ಕೆ ಬಿಜೆಪಿಗೆ ಯಾವುದೇ ವಿಷಯಗಳಿಲ್ಲದ್ದರಿಂದ ಕೋಮು ಭಾವನೆ ಕೆರಳಿಸಿ ಜನರ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಮೊದಲೂ ಬಿಜೆಪಿಯವರು ಪರಿವರ್ತನೆ ಆಗಬೇಕಿದೆ ಎಂದು ಹೇಳಿದರು.

ರಾಜ್ಯ ಸರಕಾರ ರಾಜ್ಯದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅನ್ನಭಾಗ್ಯ, ಕ್ಷೀರಭಾಗ್ಯ,
ಅನಿಲ ಭಾಗ್ಯ, ಕೃಷಿ ಭಾಗ್ಯ, ಶಾದಿ ಭಾಗ್ಯ, ಮಾತೃಪೂರ್ಣ ಭಾಗ್ಯ, ರೈತರ ಬೆಳಕು, ಇಂದಿರಾ ಕ್ಯಾಂಟೀನ್‌ ಮುಂತಾದ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷ್ಣಾ ನಿಗಮದಿಂದ 750 ಕೋ.ರೂ. ವೆಚ್ಚದಲ್ಲಿ 0.95 ಕಿ.ಮೀ ಕಾಲುವೆ ಆಧುನೀಕರಣ ಮಾಡಲಾಗುವುದು. ರಾಜ್ಯದ 30 ಲಕ್ಷ ಪಲಾನುಭವಿಗಳಿಗೆ ಅನಿಲ ಭಾಗ್ಯ ಯೋಜನೆಯ ಮೂಲಕ ಕಿಟ್‌ ಹಾಗೂ ಸಿಲಿಂಡರ್‌ ನೀಡಲಾಗುವುದು.

ಸ್ತ್ರೀ-ಶಕ್ತಿ ಗುಂಪುಗಳ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುತ್ತಿದೆ. ಕುರಿಗಾಹಿಗಳಿಗೆ ನೀಡಿದ ಮಧ್ಯಂತರ ಸಾಲ ಮನ್ನಾ ಮಾಡಲಾಗಿದೆ. ರೈತರ ಬೆಳಕು ಯೋಜನೆಯಡಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ 1 ಲಕ್ಷ ಸಾಲ ಮನ್ನಾ ಮಾಡಲಾಗುವುದು. ರಾಜ್ಯದ 70 ಲಕ್ಷ ಒಣ ಬೇಸಾಯ ರೈತರಿಗೆ 1 ಹೆಕ್ಟೇರ್‌ಗೆ 5ರಿಂದ 10 ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು. ಇದಕ್ಕಾಗಿ ಬಜೆಟ್‌ನಲ್ಲಿ 3,500 ಕೋಟಿ ರೂ. ಮೀಸಲಿಡಲಾಗಿದೆ ಎಂದು ಹೇಳಿದರು.

Advertisement

ಅನ್ನಭಾಗ್ಯ ಯೋಜನೆ ಸೌಲಭ್ಯವನ್ನು ರಾಜ್ಯದ 3.80 ಲಕ್ಷ ಜನ ಪಡೆಯುತ್ತಿದ್ದು, ತನ್ಮೂಲಕ ಹಸಿವು ಮುಕ್ತ ರಾಜ್ಯ ಮಾಡುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇರಿಸಲಾಗಿದೆ. 3.58 ಲಕ್ಷ ಜನ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡಲಾಗುತ್ತಿದೆ.
ದೇಶದಲ್ಲಿಯೇ ಈ ಯೋಜನೆಯನ್ನು ಜಾರಿ ಮಾಡಿದ ಏಕೈಕ ಸರಕಾರ ರಾಜ್ಯ ಕಾಂಗ್ರೆಸ್‌ ಸರ್ಕಾರ ಎಂದರು. ರಾಜ್ಯದಲ್ಲಿ ಮೊದಲ ಬಾರಿಗೆ ಆರೋಗ್ಯ ಭಾಗ್ಯ ಯೋಜನೆ ಮೂಲಕ 1.43 ಲಕ್ಷ ಕುಟುಂಬಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಎಂದರು.

ರಾಜ್ಯದ ಜನತೆಗೆ ಸುಳು ಭರವಸೆಗಳನ್ನು ಸರಕಾರ ನೀಡಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್‌ ಸಜ್ಜನ, ಸರಳ ವ್ಯಕ್ತಿ. ಮಾತು ಕಡಿಮೆ ಕೆಲಸ ಜಾಸ್ತಿ. ಮಸ್ಕಿ ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ವಿನಂತಿಸಿದರು.

ರಾಯಚೂರು ಸಂಸದ ಬಿ.ವಿ.ನಾಯಕ, ಶಾಸಕರಾದ ಹಂಪನಗೌಡ ಬಾದರ್ಲಿ, ಹಂಪಯ್ಯ ನಾಯಕ, ವಿಧಾನ ಪರಿಷತ್‌ ಸದಸ್ಯರಾದ ಎನ್‌.ಎಸ್‌. ಬೋಸರಾಜು, ಶರಣಪ್ಪ ಮಟ್ಟೂರು, ಬಸವರಾಜ ಪಾಟೀಲ್‌ ಇಟಗಿ, ಮಾಜಿ ಸಚಿವ
ಅಮರೇಗೌಡ ಬಯ್ನಾಪುರ, ಡಾ|ಪುಷ್ಪಾವತಿ, ಮಾನ್ವಿ ತಾಪಂ ಅಧ್ಯಕ್ಷೆ ಶರಣಮ್ಮ ಮುದಿಗೌಡ, ಚಂದ್ರಶೇಖರ್‌
ಪಾಟೀಲ್‌, ಮೀನಾಕ್ಷಿ, ಜಿಲ್ಲಾ ಧಿಕಾರಿ ಡಾ| ಗೌತಮ್‌ ಬಗಾದಿ ಮುಂತಾದವರು ಉಪಸ್ಥಿತರಿದ್ದರು. ಸಾವಿರಾರು ಜನ ಭಾಗವಹಿಸಿದ್ದರು.

ಕೃಷ್ಣಾ ಬಲದಂಡೆ 5ಎ 
ಯೋಜನೆ ಜಾರಿಗೆ ಮನವಿ ಶಾಸಕ ಪ್ರತಾಪಗೌಡ ಪಾಟೀಲ್‌ ಮಾತನಾಡಿ, 1,590 ಕೋಟಿ ರೂ. ವೆಚ್ಚದಲ್ಲಿ ನಂದವಾಡಗಿ ಏತ ನೀರಾವರಿ ಯೋಜನೆಯಡಿ 50 ಸಾವಿರ ಹೆಕ್ಟೇರ್‌ ಜಮೀನು ನೀರಾವರಿ ಸೌಲಭ್ಯ ಪಡೆಯಲಿದೆ. 7500 ಎಕರೆಗೆ ನೀರು ಒದಗಿಸುವ ಮಸ್ಕಿ ನಾಲಾ ಯೋಜನೆಯ ಕಾಲುವೆಗಳು ಶಿಥಿಲಗೊಂಡಿದ್ದು ಕಾಲುವೆಗಳ ಆಧುನೀಕರಣವಾಗಬೇಕಾಗಿದೆ ಎಂದ ಅವರು, ಈ ಭಾಗದ ಕೃಷ್ಣಾ ಬಲದಂಡೆ 5ಎ ಯೋಜನೆ ಜಾರಿಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿನಂತಿಸಿದರು.

ಜೆಡಿಎಸ್‌ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ತಾವು ಅಧಿ ಕಾರಕ್ಕೆ ಬಂದಲ್ಲಿ 52 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡುತ್ತಿದ್ದಾರೆ. ಆದರೆ ಅವರು ಅಧಿಕಾರಕ್ಕೆ ಬರುವುದಿಲ್ಲ ಅದಕ್ಕಾಗಿ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ.
 ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next