Advertisement

ಯಶಸ್ವಿನಿ ಯೋಜನೆ ಕತ್ತು ಹಿಸುಕಲು ಹೊರಟ ಸಿದ್ದು ಸರ್ಕಾರ

12:40 PM May 26, 2017 | Team Udayavani |

ಮೈಸೂರು: ಯೂನಿವರ್ಸಲ್‌ ಹೆಲ್ತ್‌ ಸ್ಕೀಂ ಜತೆಗೆ ಯಶಸ್ವಿನಿ ಯೋಜನೆ ವಿಲೀನ ಮಾಡುವ ಮೂಲಕ ಸಿದ್ದರಾಮಯ್ಯ ಸರ್ಕಾರ ಯಶಸ್ವಿನಿ ಯೋಜನೆಯ ಕತ್ತು ಹಿಸುಕಲು ಹೊರಟಿದೆ ಎಂದು ಮಾಜಿ ಸಂಸದ ಎಚ್‌.ವಿಶ್ವನಾಥ್‌ ಆರೋಪಿಸಿದರು.

Advertisement

ಅಂತರಸಂತೆ ಪ್ರಕಾಶನ ಮತ್ತು ಕನ್ನಡಿಗರ ಸಹಕಾರ ಜ್ಯೋತಿ ಪತ್ರಿಕೆ ಜಂಟಿ ಆಶ್ರಯದಲ್ಲಿ ಭಾರತದ ಸಹಕಾರ ಚಳವಳಿ ಪಿತಾಮಹಾ ಸಿದ್ಧನಗೌಡ ಪಾಟೀಲರ ಜನ್ಮ ದಿನಾಚರಣೆ, ಸಹಕಾರಿ ನೇತಾರ ಕಂಠೀರವ ನರಸಿಂಹರಾಜ ಒಡೆಯರ್‌ ಪುಸ್ತಕ ಬಿಡುಗಡೆ ಹಾಗೂ ಕನ್ನಡಿಗರ ಸಹಕಾರ ಜ್ಯೋತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಬಡ ಜನರಿಗೆ ವೆಚ್ಚದಾಯಕವಾದ ಶಸ್ತ್ರಚಿಕಿತ್ಸೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತಾವು ಸಹಕಾರ ಸಚಿವರಾಗಿದ್ದಾಗ ಜಾರಿಗೆ ತಂದ ಯಶಸ್ವಿನಿ ಯೋಜನೆ ಯೂನಿವರ್ಸಲ್‌ ಹೆಲ್ತ್‌ ಸ್ಕೀಂಜತೆಗೆ ವಿಲೀನ ಮಾಡಲು ಸರ್ಕಾರ ಮುಂದಾಗಿದ್ದು, ಈ ಸಂಬಂಧ ಸಚಿವ ಸಂಪುಟದ ಟಿಪ್ಪಣಿಯೂ ಸಿದ್ಧಗೊಂಡಿದೆ.

ಬೇರೆ ಬೇರೆ ಆರೋಗ್ಯ ಯೋಜನೆಗಳನ್ನು ಯಶಸ್ವಿನಿಯೊಳಗೆ ತರಲಿ, ಅದನ್ನು ಬಿಟ್ಟು ಯಶಸ್ವಿನಿ ಯೋಜನೆಯ ಕತ್ತು ಹಿಸುಕಬೇಡಿ ಎಂದರು. ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಾಗಿಲು ಮುಚ್ಚಿಸುತ್ತಾ ಸಾಹುಕಾರಿ ಸಕ್ಕರೆ ಕಾರ್ಖಾನೆಗಳಿಗೆ ಬೆಂಬಲ ಕೊಡುತ್ತಿರುವ ಸಿದ್ದರಾಮಯ್ಯ ಸರ್ಕಾರ, ಸಹಕಾರಿ ವಲಯದ ಕತ್ತು ಹಿಸುಕುತ್ತಿದೆ ಎಂದು ಹೇಳಿದರು.

ರೈತರ ಸಾಲಮನ್ನಾ ಮಾಡಿ: ರಾಜ್ಯದಲ್ಲಿ ತೀವ್ರ ಬರಗಾಲ ಇರುವುದರಿಂದ ರೈತರ ಆತ್ಮಹತ್ಯೆ ಸರಣಿ ಮುಂದುವರಿದಿದೆ. ಹೀಗಾಗಿ ರಾಜ್ಯಸರ್ಕಾರ ಸಹಕಾರಿ ಕ್ಷೇತ್ರದಲ್ಲಿನ ರೈತರ ಕನಿಷ್ಠ 1 ಲಕ್ಷ ರೂಪಾಯಿವರೆಗಿನ ಸಾಲವನ್ನಾದರೂ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಸಹಕಾರಿ ಕ್ಷೇತ್ರದಿಂದ ರಾಜ್ಯದ ರೈತರಿಗೆ 11 ಸಾವಿರ ಕೋಟಿ ರೂ. ಸಾಲ ನೀಡಲಾಗಿದೆ. ಕನಿಷ್ಠ 1 ಲಕ್ಷ ರೂ. ವರೆಗಿನ ಸಾಲಮನ್ನಾ ಮಾಡಿದರೆ 4500 ಕೋಟಿ ಆಗಬಹುದು. ರಾಜ್ಯಸರ್ಕಾರಕ್ಕೆ ಇದೇನು ಹೊರೆಯಾಗುವುದಿಲ್ಲ ಎಂದರು.

Advertisement

ಸಂಬಳಕ್ಕೆ 21 ಸಾವಿರ ಕೋಟಿ, ಪಿಂಚಣಿಗೆ 11 ಸಾವಿರ ಕೋಟಿ, ಅನುದಾನಗಳಿಗೆ 18 ಸಾವಿರ ಕೋಟಿ, ನಷ್ಟದಲ್ಲೇ ಇರುವ ನಿಗಮ ಮಂಡಳಿಗೆ ಅನುದಾನ ನೀಡಿಕೆ ಹಾಗೂ ಶಾಸಕರು-ವಿಧಾನಪರಿಷತ್‌ ಸದಸ್ಯರುಗಳಿಗೆ ಕೊಡಲಾಗುತ್ತಿರುವ 650 ಕೋಟಿ ಅನುದಾನದಲ್ಲಿನ ಸ್ವಲ್ಪ ಪಾಲನ್ನು ಈಕಡೆಗೆ ತಿರುಗಿಸಿದರೆ ರೈತರ ಸಾಲಮನ್ನಾ ಮಾಡುವುದು ದೊಡ್ಡ ವಿಚಾರವಾಗುವುದಿಲ್ಲ.

ಸರ್ಕಾರ ಮೊದಲು ಸಹಕಾರಿ ಸಾಲ ಮನ್ನಾ ಮಾಡಿ ನಂತರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಿ ಎಂದು ತಿಳಿಸಿದರು. ಸಹಕಾರ ಸಂಘಗಳಲ್ಲಿ ಶೇ.50 ಮೀಸಲಾತಿ ಜಾರಿಗೆ ತರುವ ಸಂಬಂಧ ತಮ್ಮ ಅವಧಿಯಲ್ಲೇ ಸಚಿವ ಸಂಪುಟ ಸಭೆಯಲ್ಲಿ ಟಿಪ್ಪಣಿ ಮಂಡಿಸಿದಾಗ ಬಹುಪಾಲು ಸಚಿವರು ವಿರೋಧ ವ್ಯಕ್ತಪಡಿಸಿ ಕೆ.ಎಚ್‌.ರಂಗನಾಥ್‌ ಅಧ್ಯಕ್ಷತೆಯಲ್ಲಿ ಉಪ ಸಮಿತಿ ರಚಿಸಿ ತುಳಿದು ಹಾಕಿದರು ಎಂದು ವಿಷಾದಿಸಿದರು. 

ಜತೆಗೆ ಸಿದ್ಧನಗೌಡನ ಪಾಟೀಲರ ಹೆಸರಲ್ಲಿ ಒಂದು ಲಕ್ಷ ನಗದು ಹಾಗೂ 10 ಗ್ರಾಂ ಚಿನ್ನದ ಪದಕದೊಂದಿಗೆ 2004ರಲ್ಲಿ ಆರಂಭಿಸಿದ ಪ್ರಶಸ್ತಿಯನ್ನು ನಂತರ ಬಂದ ಸರ್ಕಾರಗಳು ತುಳಿದು ಹಾಕಿ, ಅದೀಗ ಸಹಕಾರ ರತ್ನ ಪ್ರಶಸ್ತಿಯಾಗಿ 50 ಸಾವಿರ ನಗದು ಬಹುಮಾನಕ್ಕೆ ಬಂದು ನಿಂತಿದೆ ಎಂದು ಬೇಸರ ವ್ಯಕ್ತ ಪಡಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಮಿತಿಮೀರಿದ ರಾಜಕೀಯ ಹಸ್ತಕ್ಷೇಪದಿಂದ ಇಂದು ಸಹಕಾರ ಕ್ಷೇತ್ರ ಉಳಿಸಲು ಆಂದೋಲನ ಮಾಡಬೇಕಾದ ಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ತಾವು ಸಹಕಾರ ಸಚಿವನಾಗಿದ್ದಾಗ ಸಿದ್ಧನಗೌಡ ಪಾಟೀಲರ ಹೆಸರಲ್ಲಿ ಸಹಕಾರ ವಿಶ್ವವಿದ್ಯಾನಿಲಯ ಸ್ಥಾಪಿಸಲು, ಅಂದಿನ ಹಣಕಾಸು ಸಚಿವ ಬಿ.ಎಸ್‌.ಯಡಿಯೂರಪ್ಪರಿಂದ 5 ಕೋಟಿ ರೂಗೆ ಮಂಜೂರಾತಿಯನ್ನೂ ಕೊಡಿಸಿದ್ದೆ, ಆದರೆ ಅದಿನ್ನು ಕಾರ್ಯಗತವಾಗಲಿಲ್ಲ ಎಂದು ವಿಷಾದಿಸಿದರು.

ಸರ್ಕಾರಗಳು ಸಹಕಾರ ಕ್ಷೇತ್ರಕ್ಕೆ ಪೂರಕವಾಗುವಂತೆ ಕಾನೂನಿಗೆ ತಿದ್ದುಪಡಿ ತರುತ್ತಿಲ್ಲ. ಜತೆಗೆ ಸಹಕಾರ ಸಂಘಗಳ ನಿರ್ದೇಶಕರಲ್ಲಿ ಹಿಂದಿನವರಂತೆ ಪ್ರಾಮಾಣಿಕತೆಯೂ ಕಾಣುತ್ತಿಲ್ಲ ಎಂದರು. ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಚ್‌.ವಿ.ರಾಜೀವ್‌ ಕಾರ್ಯಕ್ರಮ ಉದ್ಘಾಟಿಸಿದರು. ಪೊ›.ಸಿ.ಕೆ.ರೇಣುಕಾರ್ಯ ಪುಸ್ತಕ ಬಿಡುಗಡೆ ಮಾಡಿದರು. ಪತ್ರಕರ್ತ ಈಚನೂರು ಕುಮಾರ್‌, ವಕೀಲ ಟಿ.ನಾಗರಾಜು, ಈರೇಶ್‌ ನಗರ್ಲೆ ಹಾಜರಿದ್ದರು. ಎಂ.ಮಂಜುನಾಥ್‌ ಬಮ್ಮನಕಟ್ಟಿರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next