Advertisement

ರೈತರ ಹೊಲಕ್ಕೆ ಬಂತು ಸರ್ಕಾರ

06:59 PM Feb 24, 2021 | Nagendra Trasi |

ಮುದ್ದೇಬಿಹಾಳ: ಮಿಶ್ರ ಬೆಳೆ, ಸಮಗ್ರ ಕೃಷಿ ಪದ್ಧತಿ ರೈತರನ್ನು ಸಾಲದ ಹೊರೆಯಿಂದ ತಪ್ಪಿಸುತ್ತದೆ. ಇದಕ್ಕಾಗಿ ನಮಗೆ ಸಮಗ್ರ ಕೃಷಿ ನೀತಿ ಅವಶ್ಯಕತೆ ಇದೆ. ನಮಗೆ ಇಸ್ರೇಲ್‌ ಮಾದರಿ ಕೃಷಿ ಸಂಸ್ಕೃತಿ ಬೇಡ. ಕೋಲಾರ, ವಿಜಯಪುರ ಜಿಲ್ಲೆಯ ಸಮಗ್ರ ಮಾದರಿ ಕೃಷಿ ಸಂಸ್ಕೃತಿ ಬೇಕು. ಎಲ್ಲರೂ ಸಮಗ್ರ ಕೃಷಿ ಪದ್ಧತಿಯತ್ತ ಒಲವು ಬೆಳೆಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

Advertisement

ಬಸರಕೋಡ ಗ್ರಾಮದ ಪ್ರಗತಿಪರ ರೈತ ಪವಾಡೆಪ್ಪ ವಡ್ಡರ ಅವರ ಸಾವಯವ ತೋಟದಲ್ಲಿ ರೈತರೊಂದಿಗೊಂದು ದಿನದ ಹಿನ್ನೆಲೆ ನಡೆದ ಕ್ಷೇತ್ರ ಭೇಟಿ ನಂತರ ಪ್ರಗತಿಪರ ರೈತರನ್ನು ಸನ್ಮಾನಿಸಿ ಅವರು ಮಾತನಾಡಿದರು. ನ. 14ರಂದು ಚಾಲನೆಗೊಂಡಿರುವ ರೈತರೊಂದಿಗೊಂದು ದಿನ ಕಾರ್ಯಕ್ರಮ ಯಶಸ್ವಿಯತ್ತ ಸಾಗುತ್ತಿದೆ. ಸರ್ಕಾರವನ್ನೇ ರೈತರ ಹೊಲಕ್ಕೆ ತರುವ ಯೋಜನೆ ಇದಾಗಿದೆ.

ಕ್ಷೇತ್ರ ಭೇಟಿಯಲ್ಲಿ ಜನಮೆಚ್ಚುಗೆ ಪಡೆದುಕೊಂಡ ರೈತರ ಪ್ರಸ್ತಾಪವನ್ನು ರಾಜ್ಯವ್ಯಾಪಿ ರೈತರ ಮುಂದಿಡುತ್ತೇನೆ. ಮುಂದಿನ ದಿನಗಳಲ್ಲಿ ರೈತರೇ ಬ್ಯಾಂಕ್‌ಗಳಿಗೆ ಸಾಲ ಕೊಡುವಂತ ಪರಿಸ್ಥಿತಿಗೆ ಏರಬೇಕು ಅನ್ನೋದು ನಮ್ಮ ಸರ್ಕಾರದ ಅಪೇಕ್ಷೆಯಾಗಿದೆ ಎಂದರು. ಪಾವಡೆಪ್ಪ 10 ಕುರಿ ಸಾಕಿ ವರ್ಷಕ್ಕೆ 2 ಲಕ್ಷ ಆದಾಯ ಪಡೆಯುತ್ತಿದ್ದಾನೆ. ಕೋಳಿ, ಆಕಳು, ದನ ಇವೆ. ಗೋಮೂತ್ರ ಸಂಗ್ರಹಿಸಿ ಬೇರುಗಳಿಗೆ ಬಿಡುತ್ತಿದ್ದಾನೆ. ತರಕಾರಿ, ಹಣ್ಣು ಬೆಳೆದಿದ್ದಾನೆ. ಇದು ನಿಜವಾದ ರೈತರು ಮಾಡುವ ಕೆಲಸ. ಪ್ರತಿಯೊಬ್ಬ ರೈತ ಪಾವಡೆಪ್ಪನ ರೀತಿಯಲ್ಲಿ ಬದಲಾಗಬೇಕು ಎಂದು ಕಿವಿಮಾತು ಹೇಳಿದರು.

ಈ ವೇಳೆ ಸರ್ಕಾರವೇ ತನ್ನ ಹೊಲಕ್ಕೆ ಬಂದಿದ್ದರಿಂದ ಭಾವುಕರಾಗಿ ಕಣ್ಣೀರು ಸುರಿಸುತ್ತಲೇ ಮಾತನಾಡಿದ ರೈತ ಪಾವಡೆಪ್ಪ ವಡ್ಡರ, ನಮ್ಮ ಭಾಗದಲ್ಲಿ ಬಹಳಷ್ಟು ಜಮೀನು ಜವುಗು ಬಿದ್ದಿವೆ. ನಾನು ಹಿಂದೆ ಬಹಳಷ್ಟು ಲಾಸ್‌ ಆಗಿದ್ದೇನೆ. ಕೆರೆ ತುಂಬಿಸಿದ್ದರೂ ಅದರ ಪ್ರಯೋಜನ ಮೇಲ್ಭಾಗದವರಿಗೆ ದೊರಕುತ್ತಿಲ್ಲ. ಕೆರೆ ಹಿಂದಿರುವ ರೈತರಿಗೂ ನೀರು ದೊರಕುವಂತೆ ಮಾಡಬೇಕು. ನನ್ನ ಹೊಲಕ್ಕೆ ಸರ್ಕಾರವೇ ಬಂದಿರುವುದು ನನಗೆ ಬಹಳಷ್ಟು ಪ್ರೇರಣೆ ನೀಡಿದಂತಾಗಿದೆ ಎಂದರು.

ಈ ವೇಳೆ ಮಾತನಾಡಿದ ಕರ್ನಾಟಕ ಆಹಾರ ನಿಗಮದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಪ್ರಧಾನಿ ನರೇಂದ್ರ ಮೋದಿಯವರು ಮತ್ಸ ಸಂಪದ ಯೋಜನೆ ಜಾರಿಗೊಳಿಸಿದ್ದಾರೆ. ಈ ತಾಲೂಕಲ್ಲಿ ಅಂದಾಜು 10000 ಎಕರೆ ಜವುಗು ಭೂಮಿ ಇದೆ. ಇದನ್ನು ಹೋಗಲಾಡಿಸಲು ಮೀನುಗಾರಿಕೆಗೆ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿ ಈ ಬಗ್ಗೆ ಆದೇಶ ಮಾಡಿದ್ದಾರೆ. ರೈತರು ಇಂಥ ಜಮೀನಿನಲ್ಲಿ ಹೊಂಡ ತೆಗೆದು ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ವೇಳೆ ಪ್ರಗತಿಪರ ರೈತರಾದ ಹನುಮಂತ ವಡ್ಡರ, ಶಾಂತಮ್ಮ ವಡ್ಡರ, ಪರಶುರಾಮ ವಡ್ಡರ, ರೇಖಾ ವಡ್ಡರ, ಪಾವಡೆಪ್ಪ ವಡ್ಡರ, ವಿಜಯಲಕ್ಷ್ಮೀ ವಡ್ಡರ ದಂಪತಿಗಳಿಗೆ ಹೂಮಾಲೆ ಹಾಕಿ ಸನ್ಮಾನಿಸುವ ಮೂಲಕ ಸಚಿವರು ಪ್ರೋತ್ಸಾಹ ನೀಡಿದರು.

Advertisement

ಕ್ಷೇತ್ರ ಪರಿಶೀಲನೆ: ಇದಕ್ಕೂ ಮುನ್ನ ಪಾವಡೆಪ್ಪ ಅವರ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಹೊಲದಲ್ಲಿ ಗೋಮಾತೆಯನ್ನು ಸಚಿವದ್ವಯರು, ಶಾಸಕ ನಡಹಳ್ಳಿ ಜಂಟಿಯಾಗಿ ಪೂಜಿಸಿದರು. ನಾಟಿ ಕೋಳಿ ಸಾಕಾಣಿಕೆ, ದೇಶಿ ಆಡುಗಳ ಘಟಕಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಶೇಂಗಾ ಬೆಳೆಯಲ್ಲಿ ತುಂತುರು ನೀರಾವರಿ ಘಟಕಕ್ಕೆ ಚಾಲನೆ ನೀಡಿದರು.

ದನಕರುಗಳಿಗೆ ಖನಿಜ ಮಿಶ್ರಣ ತಿನ್ನಿಸಿದರು. ಕೊಟ್ಟಿಗೆ ಗೊಬ್ಬರ ಘಟಕಕ್ಕೆ ಡಿ ಕಂಪೋಜರ್‌ ಸಿಂಪಡಿಸಿದರು. ಜಲಸಸ್ಯೆ ಅಜೋಲ್ಲಾ ಘಟಕ ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು. ಎರೆಹುಳು ಕೃಷಿ ಘಟಕಕ್ಕೆ ನೀರುಣಿಸಿದರು. ಜೀವಾಮೃತ ಬೆಳೆಸಿ ಬೆಳೆದ ಬಾಳೆಯ ಗೊನೆ ಕತ್ತರಿಸಿ ಒಂದೆರಡು ಬಾಳೆಹಣ್ಣನ್ನು ತಿಂದು ಅದರ ರುಚಿಗೆ ಮಾರುಹೋದರು. ಯಾಂತ್ರಿಕೃತ ಕಾಯಿಪಲ್ಯೆ ಸಸಿಗಳನ್ನು ನೆಟ್ಟರು. ಸ್ವಂತ ಮಾರುಕಟ್ಟೆ ಕಂಡುಕೊಳ್ಳಲು ರೈತರೇ ಆವಿಷ್ಕರಿಸಿದ ದ್ವಿಚಕ್ರ ವಾಹನ ಟ್ರಾಲಿಯನ್ನು ವೀಕ್ಷಿಸಿದರು. ಈ ಸಂದರ್ಭ 200 ರೂ. ನೀಡಿ ಪಪ್ಪಾಯಿ ಖರೀದಿಸಿ ರೈತನನ್ನು ಸಚಿವರು ಪ್ರೋತ್ಸಾಹಿಸಿದರು.

ಸಿದ್ದು ಮೇಟಿ ಹೊಲಕ್ಕೆ ಭೇಟಿ: ಪಾವಡೆಪ್ಪ ಅವರ ಹೊಲಕ್ಕೆ ಭೇಟಿ ನೀಡಿದ ನಂತರ ರೂಢಗಿ ರಸ್ತೆಯಲ್ಲಿರುವ ಪ್ರಗತಿಪರ ಯುವ ರೈತ ಸಿದ್ದು ಮೇಟಿ ಅವರ ಹೊಲಕ್ಕೂ ಸಚಿವರು ಭೇಟಿ ನೀಡಿದರು. ಅವರ ಹೊಲದಲ್ಲಿ ಯಾಂತ್ರೀಕೃತ ಯಂತ್ರದಿಂದ ಗೋಧಿ  ಕೊಯ್ಲು ಮಾಡುವುದನ್ನು, ಕಬ್ಬು ಕಟಾವಿನ ನಂತರ ರವದಿಯನ್ನು ಯಾಂತ್ರೀಕೃತ ಯಂತ್ರದಿಂದ ಸೂಡು ಕಟ್ಟುವುದನ್ನು ವೀಕ್ಷಿಸಿ ಆಧುನಿಕ ತಂತ್ರಜ್ಞಾನದ ಬಳಕೆಯನ್ನು ಅರಿತುಕೊಂಡರು.

ಕಬ್ಬು ಕಟಾವಿನ ನಂತರ ರವದಿ ಸುಡುವುದರಿಂದ ಕಾರ್ಬನ್‌ ಡೈ ಆಕ್ಸೈಡ್‌ ಪ್ರಮಾಣ ವಾತಾವರಣದಲ್ಲಿ ಹೆಚ್ಚಾಗುತ್ತದೆ ಎನ್ನುವ ಮಾಹಿತಿ ಪಡೆದುಕೊಂಡರು.

ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳ
ಕೃಷಿ ಸಚಿವ ಬಿ.ಸಿ. ಪಾಟೀಲ ನಿಜ ಜೀವನದಲ್ಲಿ ಪೊಲೀಸ್‌ ಅ ಧಿಕಾರಿಯಾಗಿ, ನಂತರ ಚಲನಚಿತ್ರದ ನಾಯಕ ನಟರಾಗಿ ಜನಾಕರ್ಷಣೆ ಹೊಂದಿದ್ದರು. ಹೀಗಾಗಿ ಅವರನ್ನು ಅವರ ಅಭಿಮಾನಿಗಳು ಕೌರವ ಪಾಟೀಲ ಎಂದೇ ಕರೆಯುತ್ತಾರೆ. ಮಂಗಳವಾರ ಈ ಭಾಗದಲ್ಲಿ ರೈತರೊಂದಿಗೊಂದು ದಿನ, ಕ್ಷೇತ್ರ ಭೇಟಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಅನೇಕರು ಮುಗಿಬಿದ್ದಿದ್ದರು. ಮಾಧ್ಯಮದ ಕೆಲವರೂ ಇದಕ್ಕೆ ಹೊರತಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next