Advertisement

ನೆಲವ ಫ‌ಲವತ್ತಾಗಿಸುವ ಗುರಿ ಸ್ವಾಗತಾರ್ಹ ನಿರ್ಧಾರ

12:06 AM Sep 11, 2019 | mahesh |

ಬಂಜರು ಭೂಮಿಯನ್ನು ಫ‌ಲವತ್ತಾಗಿಸುವ ಭಾರತದ ಗುರಿಯನ್ನು ಹೆಚ್ಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಬಂಜರು ತಡೆಗೆ ವಿಶ್ವಸಂಸ್ಥೆಯ ಸಮಿತಿಯ (ಯುಎನ್‌ಸಿಸಿಡಿ) 14 ದೇಶಗಳ ಸದಸ್ಯರನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಪ್ರಧಾನಿ ಮೋದಿಯವರು, ಸದ್ಯ 2.1 ಲಕ್ಷ ಹೆಕ್ಟೇರ್‌ ಭೂಮಿಯನ್ನು ಫ‌ಲವತ್ತಾಗಿಸುವ ಗುರಿಯಿದ್ದು, 2030ರ ವೇಳೆಗೆ 2.6 ಲಕ್ಷ ಹೆಕ್ಟೇರ್‌ ಭೂಮಿಯನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

Advertisement

ಪರಿಯಾವರಣ ರಕ್ಷಣೆಯ ವಿಚಾರದಲ್ಲಿ ಪ್ರಧಾನಮಂತ್ರಿಯವರ ಸಂಕಲ್ಪವು ಶುಭ ಸಂಕೇತ. ಈ ಸಂಕಲ್ಪವು ಸರ್ಕಾರದ ನೀತಿಗಳಲ್ಲಿ ಇನ್ನಷ್ಟು ಪ್ರಖರ ರೂಪದಲ್ಲಿ ಕಾಣಿಸಿಕೊಳ್ಳಲಿ ಎನ್ನುವುದೇ ಎಲ್ಲರ ನಿರೀಕ್ಷೆ. ಬಂಜರು ಭೂಮಿಯನ್ನು ಫ‌ಲವತ್ತಾಗಿಸುವುದು ಇಡೀ ಜಗತ್ತನ್ನೇ ಕಾಡುತ್ತಿರುವ ಬಹುದೊಡ್ಡ ಸವಾಲು. ಬಂಜರು ಭೂಮಿಯ ಹೆಚ್ಚಳವನ್ನು ಈಗ ಪ್ರಾಕೃತಿಕ ವಿಪತ್ತು ಎಂದೇ ನೋಡಲಾಗುತ್ತದೆ.

ಸಾಮಾನ್ಯವಾಗಿ ಆರ್ಥಿಕ ಗತಿವಿಧಿಗಳ ಕುರಿತು ಚರ್ಚೆ ನಡೆಯುವಾಗ ಮತ್ತು ಅಂಕಿ-ಅಂಶದ ಆಧಾರದ ಮೇಲೆ ಬೆಳವಣಿಗೆ/ ವಿಕಾಸದ ವೇಗವನ್ನು ಅಂದಾಜು ಹಾಕುವಾಗ, ಭೂಮಿಯು ಬಂಜರಾಗುವುದು ಮತ್ತು ತತ್ಪರಿಣಾಮವಾಗಿ ಉಂಟಾಗುವ ಸಮಸ್ಯೆಗಳನ್ನು ಮರೆಯಲಾಗು ತ್ತದೆ. ಆದರೆ, ಸತ್ಯವೇನೆಂದರೆ ಧಾನ್ಯದ ಉತ್ಪಾದನೆಯಿಂದ ಹಿಡಿದು, ನೀರು ಮತ್ತು ಮರಗಿಡಗಳ ಸಂರಕ್ಷಣೆಯು ಕೂಡ ಆರ್ಥಿಕ ಚಕ್ರದ ಜತೆಗೆ ಅವಿನಾಭಾವ ನಂಟು ಹೊಂದಿದೆ. ಈ ಕಾರಣಕ್ಕಾಗಿಯೇ, ದೇಶದ ಆರ್ಥಿಕ ಶ್ರೇಯೋಭಿವೃದ್ಧಿಯ ಮಾತನಾಡುವಾಗ ಬಂಜರು ನೆಲದ ಸಮಸ್ಯೆಯೂ ಚರ್ಚೆಯಾಗಲೇಬೇಕು.

ಪ್ರಧಾನಿ ಮೋದಿಯವರ ಘೋಷಣೆಯಂತೆ ಪ್ರಯತ್ನಗಳು ಯಶಸ್ವಿಯಾಗಿ ಸಾಗಲೇಬೇಕಿದೆ. ಇದು ದೇಶದಲ್ಲಿ ಭೂಮಿಯ ಉತ್ಪಾದಕತೆಯ ದೃಷ್ಟಿಯಿಂದಷ್ಟೇ ಅಲ್ಲದೇ ಹವಾಮಾನ ಬದಲಾವಣೆ, ಜೈವಿಕ ವೈವಿಧ್ಯತೆ ಎದುರಿಸುತ್ತಿರುವ ಅಪಾಯ ಮತ್ತು ಮಣ್ಣಿನ ಸವೆತದಂಥ ಪ್ರಮುಖ ಸಮಸ್ಯೆಗಳನ್ನು ಎದುರಿಸುವ ವಿಚಾರದಲ್ಲೂ ಪ್ರಮುಖ ಪಾತ್ರ ವಹಿಸಬಲ್ಲದು. ಮತ್ತೂಂದೆಡೆ ಪ್ರಮುಖ ಸಮಸ್ಯೆಯೇನೆಂದರೆ ಕಳೆದ ಕೆಲವು ವರ್ಷಗಳಿಂದ ವಿಪರೀತವಾಗುತ್ತಿರುವ ಪ್ಲಾಸ್ಟಿಕ್‌ ಬಳಕೆಯೂ ಒಳ್ಳೆಯ ಮಣ್ಣನ್ನೂ ಅಜಮಾಸು ಬಂಜರಾಗಿಸುತ್ತಿದೆ. ಈ ವಿಷಯವಾಗಿಯೂ ಸಮ್ಮೇಳನದಲ್ಲಿ ಪ್ರಧಾನಮಂತ್ರಿಗಳು ಚಿಂತೆ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ವಿರುದ್ಧದ ಸಮರವೂ ಮುಖ್ಯವಾಗುತ್ತದೆ.

ಸುಮಾರು ಎರಡು ವರ್ಷಗಳ ಹಿಂದೆ ಬಂದ ಒಂದು ಅಧ್ಯಯನ ವರದಿಯ ಪ್ರಕಾರ ಭಾರತದ ಅಜಮಾಸು 30 ಪ್ರತಿಶತ ಜಮೀನು ಹಾಳಾಗುವ ಅಥವಾ ಬಂಜರಾಗುವ ಹಂತದಲ್ಲಿದೆ. ಅಂದರೆ ಈ ವಿಚಾರದಲ್ಲಿ ಈಗಲೇ ತ್ವರಿತ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ಮುಂದೆ ಇದೇ ವಿಷಯ ದೇಶಕ್ಕೆ ಬಹುದೊಡ್ಡ ಸಂಕಟವಾಗಿ ಮಾರ್ಪಡುತ್ತದೆ. ದೇಶಾದ್ಯಂತ ಅರಣ್ಯ ಪ್ರದೇಶಗಳ ಮಹತ್ವವನ್ನು ಕಡೆಗಣಿಸಿ ಅಭಿವೃದ್ಧಿಯ ಹೆಸರಲ್ಲಿ ನಡೆಯುತ್ತಿರುವ ಮರಗಳ ಮಾರಣಹೋಮ ನಿಲ್ಲಲೇಬೇಕಿದೆ. ವೇಗದ ನಗರೀಕರಣದಿಂದಾಗಿ ನಗರಗಳ ಸುತ್ತಮುತ್ತಲಿನ ಕೃಷಿ ಭೂಮಿಗಳೂ ಈಗ ಕಾಂಕ್ರೀಟ್ ಕಾಡುಗಳಾಗುತ್ತಿವೆ. ಹಲವೆಡೆ, ಹೊಸ ಕಾಲನಿಗಳನ್ನು ಸೃಷ್ಟಿಸುವುದಕ್ಕಾಗಿ ಕೆರೆಗಳನ್ನು ಮುಚ್ಚಿಹಾಕಲಾಗುತ್ತಿದೆ. ಇದಕ್ಕೆ ಬೆಂಗಳೂರಿಗಿಂತ ಮತ್ತೂಂದು ಉದಾಹರಣೆ ಬೇಕಿಲ್ಲ.

Advertisement

ಭಾರತ ನಿಜಕ್ಕೂ ಬಂಜರು ಭೂಮಿಯ ವಿಸ್ತರಣೆಯನ್ನು ತಡೆಯುವ ವಿಚಾರದಲ್ಲಿ ಪಣತೊಟ್ಟಿದೆ ಎಂದರೆ ಮೊದಲು ನಿರ್ಮಾಣ ಕ್ಷೇತ್ರವನ್ನು ನಿಯಂತ್ರಿಸಲೇಬೇಕಿದೆ. ಆದರೆ ಈ ಕೆಲಸ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಾಗುವಂಥದ್ದಲ್ಲ, ಅಭಿವೃದ್ಧಿಯೆಡೆಗಿನ ಸಮಾಜದ ದೃಷ್ಟಿಕೋನದಲ್ಲೂ ಬದಲಾವಣೆಯಾದಾಗ ಮಾತ್ರ ಇದು ಸಾಧ್ಯವಾಗುತ್ತದೆ. ನೆಲವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯೂ ಹೌದು.

Advertisement

Udayavani is now on Telegram. Click here to join our channel and stay updated with the latest news.

Next