Advertisement

ಜೆಡಿಎಸ್‌ ಗೆಲ್ಲಿಸುವುದೇ ಗುರಿ: ಗೀತಾ

05:51 PM May 05, 2018 | |

ತೀರ್ಥಹಳ್ಳಿ: ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಮತದಾರರಿಗೂ ಬಂಗಾರಪ್ಪನವರಿಗೂ ಅವಿನಾಭಾವ ಸಂಬಂಧವಿದೆ. ಇಲ್ಲಿನ ಮತದಾರರು ಬಂಗಾರಪ್ಪನವರನ್ನು ಎಂದೂ ಮರೆತಿಲ್ಲ. ಈ ಬಾರಿ ಬಂಗಾರಪ್ಪನವರ ಆಶೀರ್ವಾದ ಮತ್ತು ನೆರಳಿನಲ್ಲಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕಾಗಿರುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ಜೆಡಿಎಸ್‌ ನಾಯಕಿ ಗೀತಾ ಶಿವರಾಜ್‌ ಕುಮಾರ್‌ ಹೇಳಿದರು.

Advertisement

ತಾಲೂಕಿನ ದೆಮ್ಲಾಪುರ, ಕೋಣಂದೂರು, ದೇವಂಗಿ, ಕಟ್ಟೆಹಕ್ಕಲು, ಮುಂತಾದ ಕಡೆ ಜೆಡಿಎಸ್‌ ಅಭ್ಯರ್ಥಿ ಆರ್‌.ಎಂ.ಮಂಜುನಾಥ ಗೌಡರ ಪರವಾಗಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಈ ಬಾರಿ ಜೆಡಿಎಸ್‌ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯಲು ಮಲೆನಾಡಿನ ಮತದಾರರು ಸ್ಪಂದಿಸಬೇಕಾಗಿದೆ. ಮಾಜಿ ಪ್ರಧಾನಿ ದೇವೇಗೌಡರ ಕನಸಿನಂತೆ ಮತ್ತೆ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು. ತಂದೆ ಬಂಗಾರಪ್ಪನವರು ಮಲೆನಾಡಿನ ಮತದಾರರ ಮೇಲೆ ಅಪಾರ ಗೌರವ ಹೊಂದಿದ್ದರು.

ಬಂಗಾರಪ್ಪನವರ ಕೊನೆಯ ಆಸೆ ಮಲೆನಾಡು ಭಾಗದಲ್ಲಿ ಜೆಡಿಎಸ್‌ ಪಕ್ಷವನ್ನು ಬಲಿಷ್ಟವಾಗಿ ಕಟ್ಟುವಂತೆ ಮಾಡಬೇಕೆಂದಿದ್ದರು. ಆ ಕೆಲಸವನ್ನು ಮಧು ಬಂಗಾರಪ್ಪ ಮುಂದುವರಿಸಿಕೊಂಡು ಬಂದಿದ್ದಾರೆ. ಆರ್‌.ಎಂ. ಮಂಜುನಾಥ ಗೌಡರ ಸಹಕಾರಿ ಕ್ಷೇತ್ರದ ಸಾಧನೆ ಈ ಬಾರಿ ಜೆಡಿಎಸ್‌ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.

ಜೆಡಿಎಸ್‌ ಅಭ್ಯರ್ಥಿ ಆರ್‌.ಎಂ. ಮಂಜುನಾಥ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಹತ್ತು ಹಲವು ಸಮಸ್ಯೆಗಳಿವೆ. ಹಿಂದೆ ಶಾಸಕರಾದವರು ಕೇವಲ ಪ್ರಾಮಾಣಿಕರೆಂದು ಹೇಳಿಕೊಂಡು ಕಾಲಹರಣ ಮಡಿದ್ದಾರೆ. ಮಲೆನಾಡಿನ ಅಡಕೆ ಬೆಳೆಗಾರರಲ್ಲಿ ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದರು. ತಾಲೂಕು ಜೆಡಿಎಸ್‌ ಅಧ್ಯಕ್ಷ ಆರ್‌. ಮದನ್‌, ಮಹಿಳಾ ಅಧ್ಯಕ್ಷೆ ವಿನಂತಿ ಕರ್ಕಿ, ಪ್ರಚಾರ ಸಮಿತಿಯ ಡಾ| ಸುಂದರೇಶ್‌, ಎಂ. ರಾಮಚಂದ್ರ, ಕಟ್ಟೆಹಕ್ಲು ಕಿರಣ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next