Advertisement

ಜಿಲ್ಲಾದ್ಯಂತ ಜಾತ್ರೆಗಳ ವೈಭವ, ಅಗ್ನಿ ಕೊಂಡೋತ್ಸವ

06:08 PM Apr 23, 2019 | Suhan S |

ತಿಪಟೂರು: ನಗರದ ನಾಡದೇವತೆಗಳಲ್ಲೊಂದಾದ ತಾಲೂಕಿನ ಕಸಬಾ ಹೋಬಳಿ ಬಿದರೆಗುಡಿ ಶ್ರೀ ಬಿದರಮ್ಮದೇವಿ ಜಾತ್ರಾ ಮಹೋತ್ಸವ 40ಕ್ಕೂ ಹೆಚ್ಚು ಗ್ರಾಮಗಳ ಸಾವಿ ರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

Advertisement

ವಿಶೇಷ ಪೂಜೆ: ಜಾತ್ರೆ ಅಂಗವಾಗಿ ಶ್ರೀಅಮ್ಮನವರಿಗೆ ಆರತಿ, ಕನ್ನಡ ಕಳಸ, ಬಾಯಿ ಬೀಗಸೇವೆ, ಉಯ್ನಾಲೋತ್ಸವ, ಶ್ರೀಚಿಕ್ಕಜ್ಜಿಯವರಿಗೆ ಆರತಿಬಾನ ನಡೆಯಿತು. ಮೂಲದೇವತೆ ಬಿದರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಶ್ರೀದೇವಿಯ ಉತ್ಸವ ನಡೆಯಿತು. ಸಿಡಿ ಉತ್ಸವ ಜಾತ್ರೆ ವಿಶೇಷವಾಗಿದ್ದು ಸುಮಾರು 50 ಅಡಿ ಎತ್ತರವಿರುವ ಸಿಡಿ ಕಂಬವನ್ನು ಮಾವು, ಬೇವು, ಬಾಳೆಕಂದು, ವಿವಿಧ ರೀತಿಯ ಫ‌ಲಪುಷ್ಪ, ಬಾಳೆಹಣ್ಣು, ಆಟಿಕೆ ಸಾಮಾನು, ಹೊಂಬಾಳೆಯಿಂದ ಅಲಂಕರಿಸಲಾಗಿತ್ತು. ಸಿಡಿ ಕಂಬಕ್ಕೆ ದೇವರ ಮಕ್ಕಳನ್ನು ಕಟ್ಟಿ ಸಿಡಿ ಉತ್ಸವವನ್ನು ಅದ್ಧೂರಿಯಾಗಿ ನೆರವೇರಿಸಲಾಯಿತು.

ತೇರನೆಳೆದ ಭಕ್ತರು: ಭಾನುವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ಧೂರಿಯಾಗಿ ನಡೆಯಿತು. ಭಕ್ತರು ಭಾಗವಹಿಸಿ ತಮ್ಮ ಹರಕೆ ತೀರಿಸಿಕೊಂಡರು. ಬೆಂಕಿಯುಂಡೆಯಂತಹ ಬಿಸಿಲಿನಲ್ಲೂ ಭಕ್ತರು ಖುಷಿಯಿಂದ, ಭಯಭಕ್ತಿಯಿಂದ ಭಾಗವಹಿಸಿ ತೇರು ಎಳೆದು ಕೃತಾರ್ಥರಾದರು. ಸುಮಾರು ನಲವತ್ತಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ಭಾಗವಹಿಸಿ ಶ್ರೀದೇವಿ ಕೃಪೆಗೆ ಪಾತ್ರರಾದರು.

ತಿಪಟೂರು ತಾಲೂಕಿನ ಹಾಲ್ಕುರಿಕೆ ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ಮತ್ತು ಶ್ರೀ ಪ್ಲೇಗಿನಮ್ಮ ದೇವಿಯ ಬನ್ನಿಮರ (ಈಚಲು ಮುಳ್ಳಿನ ಮರ) ಹತ್ತುವ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.

ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ: ಜಾತ್ರೆ ಧ್ವಜಾರೋಹಣ ಕಂಕಣಧಾರಣೆಯೊಂದಿಗೆ ಪ್ರಾರಂಭವಾಗಿ ಮದುವಣಗಿತ್ತಿ ಶಾಸ್ತ್ರ ಸೇರಿದಂತೆ ವಿಶೇಷ ಪೂಜೆಗಳು ಸಾಂಗವಾಗಿ ನೆರವೇರಿದವು. ಶ್ರೀ ಪ್ಲೇಗಿನಮ್ಮ ದೇವಿಗೆ ಆರತಿಬಾನ ಮಾಡಿ ಗ್ರಾಮದ ಸುತ್ತಮುತ್ತಲ ಸಾವಿರಾರು ಭಕ್ತರು ಎಡೆ ಸಮರ್ಪಿಸಿದರು. ನಂತರ ಕಳಶ ಸ್ಥಾಪನೆ, ಗಂಗಾಸ್ನಾನ ನಡೆಯಿತು. ಬಣ್ಣ ಬಣ್ಣದ ವಸ್ತ್ರಗಳು ಹಾಗೂ ವಿವಿಧ ಹೂಗಳಿಂದ ಶೃಂಗರಿಸಲಾಗಿದ್ದ ಶ್ರೀದೇವಿ ಮಹಾರಥವನ್ನು ಭಕ್ತರು ಎಳೆಯುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು. ಅಲ್ಲದೇ, ಬಾಳೆಹಣ್ಣು, ಹೂ ಎಸೆದು ತಮ್ಮ ಹರಕೆ ತೀರಿಸಿದರು.

Advertisement

ವಿಶೇಷತೆ: ಯುಗಾದಿ ನಂತರ ಬರುವ ಈ ಜಾತ್ರೆ ಶ್ರೀದೇವಿಯ ಅಪ್ಪಣೆ ಮೇರೆಗೆ ನಡೆಯುತ್ತದೆ. ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಾಂಪ್ರದಾಯಿಕ ಜಾತ್ರೆ, ಶ್ರೀದೇವಿಯ ಬನ್ನಿಮರ ಹತ್ತುವ ಕಾರ್ಯಕ್ರಮ ಪವಾಡದ ರೀತಿ ನಡೆಯುತ್ತದೆ. ಜಾತ್ರೆ ಆರಂಭದಿಂದಲೂ ಕಠಿಣ ವ್ರತಾಚರಣೆಯಲ್ಲಿರುವ ಅರ್ಚಕರ ಮೇಲೆ ಶ್ರೀಕೆಂಪಮ್ಮದೇವಿ ಮತ್ತು ಶ್ರೀ ಪ್ಲೇಗಿನಮ್ಮದೇವಿ ಆವಾಹನೆಗೊಂಡು ಕಾರ್ಕೋಟಕ ಮುಳ್ಳಿನಿಂದ ಕೂಡಿದ ಈಚಲು ಮರವನ್ನುಏರುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟುತ್ತದೆ. ಸುತ್ತಮುತ್ತಲ ಸಾವಿರಾರು ಸಂಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಜಾತ್ರೆಯನ್ನು ಕಣ್ತುಂಬಿಕೊಂಡು ಶ್ರೀದೇವಿ ಕೃಪೆಗೆ ಪಾತ್ರರಾದರು..ವಿಜೃಂಭಣೆಯಿಂದ ಜರುಗಿದ ಕೆಂಪಮ್ಮದೇವಿ ಬನ್ನಿಮರ ಜಾತ್ರೆ.

ಬಿ.ಕೆ.ಹಳ್ಳಿಯಲ್ಲಿ ಶ್ರೀ ರಾಮ ಪಟ್ಟಾಭಿಷೇಕ:

ಪಾವಗಡ ತಾಲೂಕಿನ ಬಿ.ಕೆ.ಹಳ್ಳಿಯ ರಾಮ ದೇವಸ್ಥಾನದಲ್ಲಿ ಅಖಂಡ ರಾಮಭಜನೆ, ಸೀತಾರಾಮಕಲ್ಯಾಣ ಮಹೋತ್ಸವ ಮತ್ತು ಶ್ರೀನಿವಾಸ ಕಲ್ಯಾಣ ಮಹೋತ್ಸವ ವೈಭವದಿಂದ ನೂರಾರು ಭಕ್ತರ ಸಮ್ಮಖದಲ್ಲಿ ನೆರವೇರಿತು.

ಭಾನುವಾರ ಚೈತ್ರ ಬಹಳ ಬಿದಿಗೆ ಸೂರ್ಯೋದಯ ನಂತರ ಮಹಾಗಣಪತಿ ಪೂಜೆ, ಗಂಗಾಪೂಜೆ ನಡೆಸಿ ಶ್ರೀ ರಾಮಪಟ್ಟಾಭಿಷೇಕ ಮಹೋತ್ಸವ ಹಾಗೂ ಅನ್ನಸಂತರ್ಪಣೆ ಹಾಗೂ ರಾತ್ರಿ ಉತ್ಸವ ನಡೆಯಿತು. ನಾಗಲಮಡಿಕೆ ಜಿಪಂ ಸದಸ್ಯ ಚನ್ನಮಲ್ಲಯ್ಯ ಭೇಟಿ ನೀಡಿ ವಿಷೇಷ ಪೂಜೆ ಸಲ್ಲಿಸಿದರು.

ಬಿ.ಕೆ.ಹಳ್ಳಿ ಗ್ರಾಮಸ್ಥರು ಈ ಹಿಂದಿನಿಂದ ಒಟ್ಟಾಗಿ ಶ್ರೀರಾಮ ಪಟ್ಟಾಭಿಷೇಕಮಹೋತ್ಸವ ಅಚರಿಸಿಕೊಂಡು ಬರುತ್ತಿದ್ದರು. 23 ಮಂಗಳವಾರ ನವರತ್ನಗಳು ಎಂಬ ನಾಟಕವನ್ನು ಅಭಿನಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಈ ವೇಳೆ ಅರ್ಚಕರಾದ ಕೃಷ್ಣಮೂರ್ತಿ, ಮುಖಂಡರಾದ ರಾಜರೆಡ್ಡಿ, ತಾಪಂ ಮಾಜಿ ಸದಸ್ಯರಾದ ಮಲ್ಲಯ್ಯ, ಮಾಜಿ ಸದಸ್ಯರಾದ ನಾಗ ಭೂಷಣ್‌, ಹನುಮಂತರಾಯಪ್ಪ, ಗೋಪಾಲಪ್ಪ, ಮೈಲಾರಪ್ಪ, ವಿಎಸ್‌ಎಸ್‌ಎನ್‌ ಕಾರ್ಯದರ್ಶಿ ಸುಬ್ರಮಣಿ, ಮೂಡಲಗಿರಿಯಪ್ಪ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next