Advertisement

ಮೇಧಾವಿ ಮಂತ್ರಿ

10:04 AM Dec 20, 2019 | mahesh |

ರಾಜ ಧೀರಸೇನ ಅನಾರೋಗ್ಯ ಪೀಡಿತನಾಗಿ ಹಾಸಿಗೆ ಹಿಡಿದಿದ್ದ. ಅವನಿಗೆ ಇಬ್ಬರು ರಾಣಿಯರು, ಹಿರಿಯವಳು ಸೂರ್ಯವತಿ, ಕಿರಿಯವಳು ಚಂದ್ರವತಿ. ಸೂರ್ಯವತಿಯ ಹೊಟ್ಟೆಯಲ್ಲಿ ಸೂರ್ಯಸೇನ ಎಂಬ ಮಗ, ಚಂದ್ರವತಿಯ ಹೊಟ್ಟೆಯಲ್ಲಿ ಚಂದ್ರಸೇನ ಎಂಬ ಮಗ ಜನಿಸಿದ್ದರು. ಇವರಿಬ್ಬರೂ ಮಹಾರಾಜ ಧೀರಸೇನನಿಗೆ ಪ್ರೀತಿ ಪಾತ್ರ ಸುಪುತ್ರರಾಗಿದ್ದರು. ದುರದೃಷ್ಟವೆಂದರೆ ಇವರಿಬ್ಬರೂ ಅಂಗವಿಕಲರು. ಹಿರಿಯ ಮಗ ಸೂರ್ಯಸೇನ ಹುಟ್ಟು ಕುರುಡ. ಅವನಿಗೆ ಎರಡು ಕಣ್ಣುಗಳೂ ಕಾಣುವುದಿಲ್ಲ. ಕಿರಿಯ ಮಗ ಕುಂಟನಾಗಿದ್ದ. ಸಾವಿನ ದಿನಗಳನ್ನು ಎಣಿಸುತ್ತಿದ್ದ ಮಹಾರಾಜ ಧೀರಸೇನನಿಗೆ ತಾನು ಸಾಯುತ್ತೇನೆಂಬುದರ ಬಗ್ಗೆ ಒಂದು ಚೂರೂ ಚಿಂತೆ ಇರಲಿಲ್ಲ. ಆದರೆ ತನ್ನ ಉತ್ತರಾಧಿಕಾರಿಗಳಾಗಿ ರಾಜ್ಯವನ್ನು ಆಳಬೇಕಾಗಿರುವ ತನ್ನ ಮಕ್ಕಳ ಪರಿಸ್ಥಿತಿ ನೋಡಿ ಅವನು ಚಿಂತೆಗೀಡಾಗಿದ್ದ.

Advertisement

ಧೀರಸೇನನು ಪ್ರೀತಿ ಮತ್ತು ದುಃಖದಿಂದ ಮಕ್ಕಳಿಬ್ಬರ ತಲೆ ನೇವರಿಸುತ್ತಾ ಹೇಳಿದ “ಮಕ್ಕಳೇ ನೀವಿಬ್ಬರೂ ಅಣ್ಣತಮ್ಮಂದಿರು. ರಾಮಲಕ್ಷ್ಮಣರಂತೆ ಇರಬೇಕು. ಕಣ್ಣಿಲ್ಲದ ನಿನ್ನ ಅಣ್ಣ ಸೂರ್ಯಸೇನನಿಗೆ ನೀನೇ ಕಣ್ಣಾಗಿರಬೇಕು. ಕಾಲಿಲ್ಲದ ನಿನ್ನ ತಮ್ಮ ಚಂದ್ರಸೇನನಿಗೆ ನೀನೇ ಕಾಲುಗಳಾಗಬೇಕು. ಒಬ್ಬರಿಗೊಬ್ಬರು ಕಣ್ಣು-ಕಾಲುಗಳಾಗಿ ಪ್ರಜಾ ಪಾಲಕರಾಗಿ ಈ ರಾಜ್ಯವನ್ನು ಕಾಪಾಡಬೇಕು. ನಿಮ್ಮನ್ನು ಮೇಧಾವಿ ಮಂತ್ರಿಯೊಬ್ಬನ ಸುಪರ್ದಿಯಲ್ಲಿ ಬಿಟ್ಟು ಹೋಗುತ್ತೇನೆ. ಅದೇ ನಿಮಗೆ ಕೊಡುವ ಮಹಾ ಕಾಣಿಕೆ’ ಎಂದು ಮಕ್ಕಳಿಬ್ಬರಿಗೂ ಧೈರ್ಯತುಂಬಿದ. ಮಾರನೇ ದಿನವೇ ಮೇಧಾವಿ ಮಂತ್ರಿ ಬೇಕಾಗಿದ್ದಾರೆ ಎಂದು ರಾಜ್ಯದಲ್ಲಿ ಡಂಗುರ ಸಾರಲಾಯಿತು. ರಾಜ ಅವರಿಗೆ ಪರೀಕ್ಷೆ ವಿಧಿಸಿದ “ಇಲ್ಲೊಂದು ಕತ್ತಲೆ ಕೋಣೆಯಿದೆ. ಯಾವ ವಸ್ತುವಿನಿಂದಾದರೂ ಸರಿಯೇ, ಹತ್ತು ನಿಮಿಷಗಳಲ್ಲಿ ಆ ಕೋಣೆಯನ್ನು ತುಂಬಿಸಬೇಕು. ಈ ಸವಾಲನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದವರಿಗೆ ಮಂತ್ರಿ ಸ್ಥಾನ ದೊರೆಯುವುದು.’ ಎಂದ.

ಸಂದರ್ಶನಕ್ಕೆ ಬಂದಿದ್ದವರೆಲ್ಲ “ಇದೊಂದು ಹುಚ್ಚು ಪರೀಕ್ಷೆ. ಇಷ್ಟು ದೊಡ್ಡ ಕತ್ತಲೆಯ ಕೋಣೆಯನ್ನು ಯಾವುದೇ ವಸ್ತುವಿನಿಂದ ಹತ್ತು ನಿಮಿಷಗಳಲ್ಲಿ ತುಂಬಿಸುವುದು ಅಸಾಧ್ಯ’ ಎಂದು ತಮ್ಮಲ್ಲೇ ಮಾತಾಡಿಕೊಂಡರು. ಅವರಲ್ಲಿ ಒಬ್ಬ ಮಾತ್ರ ಮುಂದೆ ಬಂದು “ನಾನು ಸವಾಲನ್ನು ಸ್ವೀಕರಿಸುತ್ತೇನೆ. ನನಗೆ ಹತ್ತು ನಿಮಿಷ ಬೇಡ ಎರಡು ಮೂರು ಕ್ಷಣಗಳು ಸಾಕು’ ಎಂದ. ಅಲ್ಲಿದ್ದವರೆಲ್ಲಾ ಆಶ್ಚರ್ಯಚಕಿತರಾಗಿ ಅವನತ್ತ ನೋಡಿದರು. ಅವನು ಕತ್ತಲೆಯ ಕೋಣೆಯ ಮಧ್ಯದಲ್ಲಿ ಒಂದು ದೀಪವನ್ನು ಇಟ್ಟು ಬೆಂಕಿ ಹಚ್ಚಿದ. ಒಂದು ಕ್ಷಣದಲ್ಲಿ ಇಡೀ ಕೋಣೆ ಬೆಳಕಿನಿಂದ ತುಂಬಿಕೊಂಡಿತು. ಅವನ ಬುದ್ದಿವಂತಿಕೆಯನ್ನು ಮೆಚ್ಚಿದ ಮಹಾರಾಜ ಧೀರಸೇನ ಅವನಿಗೆ ಮಂತ್ರಿ ಪಟ್ಟ ನೀಡಿದ.

– ಬನ್ನೂರು ರಾಜ

Advertisement

Udayavani is now on Telegram. Click here to join our channel and stay updated with the latest news.

Next