Advertisement

ಮನಸೆಳೆದ ಗರುಡ ದಸರಾ ಉತ್ಸವ

12:51 PM Sep 25, 2017 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯ ಮಾಲ್‌ಗ‌ಳಲ್ಲೂ ಈಗ ದಸರಾ ಸಂಭ್ರಮ. ಮದುವಣಗಿತ್ತಿಯಂತೆ ಸಿಂಗಾರಗೊಂಡ ಮಾಲ್‌ಗ‌ಳು, ಮೈಸೂರು ದಸರಾ ವೈಭವವನ್ನು ಕಟ್ಟಿಕೊಡುತ್ತಿವೆ. ವರ್ಷದ ಹಲವು ದಿನಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಮಿಂದೇಳುತ್ತಿದ್ದ ಮಾಲ್‌ಗ‌ಳು ಇದೀಗ ದೇಶಿಯ ಶೈಲಿಗೆ ಒಗ್ಗಿಕೊಳ್ಳುತ್ತಿರುವುದು ಮತ್ತೂಂದು ವಿಶೇಷ.

Advertisement

ಅದರಲ್ಲೂ ಅಶೋಕ ನಗರ ರಸ್ತೆಯಲ್ಲಿರುವ ಗರುಡ ಮಾಲ್‌ನಲ್ಲಂತೂ ನಗರ ಸಂಸ್ಕೃತಿಗೆ ಒಗ್ಗಿಕೊಂಡಿರುವ ಜನರಿಗೆ ಐತಿಹಾಸಿಕ ದಸರಾ ಉತ್ಸವವನ್ನು  ಕಟ್ಟಿಕೊಂಡುವ ಸ್ತಬ್ಧಚಿತ್ರವೊಂದು ಅನಾವರಣಗೊಂಡಿದ್ದು, ಕಣ್ಮನ ಸೆಳೆಯುತ್ತಿದೆ.  ಬಹು ದೂರದಿಂದಲೇ ಜನರನ್ನು ತನ್ನತ್ತ ಆಕರ್ಷಿಸುವ ಈ ಸ್ತಬ್ಧ ಚಿತ್ರಕ್ಕೆ ಮನಸೋತ ಮಂದಿ, ಸೆಲ್ಫಿ ಕ್ಲಿಕ್ಕಿಸಿಕೊಂಡು ಆನಂದಿಸುತ್ತಿದ್ದುದು ಕಂಡುಬಂತು. ಸೂರ್ಯ ಮುಳುಗುತ್ತಿದ್ದಂತೆ ವಿದ್ಯುತ್‌ ದೀಪಾಲಂಕಾರದ ಮೆರಗು ಮಾಲ್‌ಗೆ ಮತ್ತಷ್ಟು ಕಳೆ ನೀಡಿತ್ತು.

ಹೀಗಾಗಿ ನವೋಲ್ಲಾಸಗೊಂಡ ಜನರು ನಾಮುಂದು, ತಾಮುಂದು ಎಂದು ಸ್ತಬ್ಧ ಚಿತ್ರದ ಬಳಿ ಬಂದು ತಮ್ಮ ಮೊಬೈಲ್‌ನಲ್ಲಿ ಕೌಟಂಬದೊಂದಿಗೆ ಚಿತ್ರ ಸೆರೆಹಿಡಿದುಕೊಂಡರು. ಪುಟಾಣಿ ಮಕ್ಕಳು ಕೂಡ ಸ್ತಬ್ಧ ಚಿತ್ರದ ಮೇಲೆ ಕುಳಿತು ಆನಂದಿಸಿದರು. ಪ್ರತಿ ವರ್ಷ ಗರುಡ ಮಾಲ್‌ ಆಡಳಿತ ಮಂಡಳಿ ವಿಭಿನ್ನ ರೀತಿಯ ಆಲೋಚನೆಯೊಂದಿಗೆ ದಸರಾ ಹಬ್ಬಕ್ಕಾಗಿ ಸಿದ್ಧವಾಗುತ್ತದೆ. ಈ ವರ್ಷ ಕೂಡ ವಿಭಿನ್ನವಾದ ಚಿಂತನೆಯೊಂದಿಗೆ ದಸರಾ ವೈಭವದ ಕುರಿತ ಸ್ತಬ್ಧ ಚಿತ್ರವನ್ನು ಅಣಿಗೊಳಿಸಿದೆ.

ದಸರಾ ನೆನಪು: ಯಾಂತ್ರಿಕ ಬದುಕಿನಲ್ಲಿ ಕಳೆದು ಹೋಗುತ್ತಿರುವ ನಗರದ ಜನತೆ ಐತಿಹಾಸಿಕ ದಸರಾವನ್ನು ಮರೆಯುತ್ತಿದ್ದಾರೆ. ಹೀಗಾಗಿ ಮತ್ತೆ ದಸರಾ ಹಬ್ಬವನ್ನು ನೆನಪಿಸಬೇಕಾಗಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡೇ ಖ್ಯಾತ ಕಲಾ ವಿನ್ಯಾಸಕ ಅರುಣ್‌ ಸಾಗರ್‌ ಅವರ ನೇತೃತ್ವದಲ್ಲಿ ದಸರಾವನ್ನು ನೆನಪಿಸುವ ಸ್ತಬ್ಧಚಿತ್ರವನ್ನು  ಸಿದ್ಧಪಡಿಸಲಾಗಿದ್ದು, ಇದನ್ನು ನೋಡಿದ ಜನ ಮೈಸೂರು ದಸರಾವನ್ನು ನೆನಪಿಸಿಕೊಳ್ಳುತ್ತಾರೆ ಎಂದು ಗರುಡ  ಮಾಲ್‌ನ ಅಸಿಸ್ಟೆಂಟ್‌ ಮ್ಯಾನೇಜರ್‌ ಚೇತನ ಹೇಳುತ್ತಾರೆ.

ದಸರಾ ಉತ್ಸವ ಮುಗಿಯುವವರೆಗೂ ಈ ಸ್ತಬ್ಧಚಿತ್ರ ಇರಲಿದೆ. ಗಡಿಬಿಡಿಯ ಬದುಕಿನಲ್ಲಿ ಜೀವನ ಕಳೆಯುತ್ತಿರುವ ನಗರ ಜನತೆ ನಮ್ಮ ಹಳೆಯ ಸಂಪ್ರದಾಯವನ್ನು ಮರೆಯುತ್ತಿದ್ದಾರೆ. ದಸರಾ ಗೊಂಬೆ ಕೂರಿಸುವ ಪ್ರವೃತ್ತಿಯಿಂದ ಹಿಂದೆ ಸರಿಯುತ್ತಿದ್ದಾರೆ. ಹೀಗಾಗಿ ದಸರಾ ವೇಳೆ ಗೊಂಬೆ ಕೂರಿಸುವವರ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಹೀಗಾಗಿ ಗತಕಾಲದ ವೈಭವವನ್ನು ನೆನಪಿಸುವ ನಿಟ್ಟಿನಲ್ಲಿ ಗರುಡ ಮಾಲ್‌ ಆಡಳಿತ ಮಂಡಳಿ ಹೆಜ್ಜೆ ಇರಿಸಿದೆ.

Advertisement

ತಾಜಾ ಆಹಾರ ಮೇಳ: ಹಾಗೇ ಗರುಡ ಮಾಲ್‌ ಬಳಿ ತಾಜಾ ಆಹಾರ ಮೇಳ ಆಯೋಜಿಸಿದ್ದು, ಇದು ಕೂಡ ಜನಾಕರ್ಷಣೆಯ ಕೇಂದ್ರವಾಗಿದೆ. ತಮ್ಮ ಮನೆಯೊಳಗೆ ಕೈ ತೋಟವನ್ನು ಮಾಡಿ ತರಕಾರಿ ಬೆಳುವ ಚಿತ್ರಣವೂ ಇಲ್ಲಿದೆ. ಟೊಮ್ಯಾಟೋ, ಮೂಲಂಗಿ, ಬದನೆಕಾಯಿ, ಮೆಣಸಿನಕಾಯಿ, ಕೋಸು ಸೇರಿದಂತೆ ಇನ್ನಿತರ ಕೈ ತೋಟದ ಕಾಯಿಪಲ್ಯಗಳ ಸಂಪೂರ್ಣ ಚಿತ್ರಣ ಇಲ್ಲಿ ದೊರೆಯಲಿದ್ದು, ಕೊಳ್ಳುವಿಕೆಗೂ ಅವಕಾಶ ಇದೆ.

ತಾಜಾ ತರಕಾರಿಗಳನ್ನೇ ಸೇವಿಸಿ ಎಂಬ ಸಂದೇಶದೊಂದಿಗೆ ಈ ಮೇಳ ಆರಂಭಗೊಂಡಿದ್ದು, ಬಿಸಿಲಿಗೆ ಹದವಾಗಿ ಒಣಗಿಸಿ ತಯಾರಿಸಿರುವ ಪಾಲಕ್‌, ಚಿಕೋ, ಪೈನಾಪಲ್‌, ಬಿಟ್ರೂಟ್‌ ಚಿಪ್ಸ್‌ ಮತ್ತು ಬೆಟ್ಟದ ನಲ್ಲಿಕಾಯಿ ಕ್ಯಾಂಡಿ ಮೇಳದ ಪ್ರಧಾನ ಆಕರ್ಷಣೆಯಾಗಿದೆ. ಪರಿಶುದ್ಧ  ತೆಂಗಿನ ಎಣ್ಣೆ, ಸೇರಿದಂತೆ ಇನ್ನಿತರ‌  ತೈಲಗಳು ಇಲ್ಲಿ ದೊರಕಲಿವೆ. ಶುಕ್ರವಾರದಿಂದಲೇ ಈ ಆಹಾರ ಮೇಳದಲ್ಲಿ ಒಂದೇ ಸೂರಿನಡಿ ವಿಭಿನ್ನ ಶೈಲಿಯ ಆಹಾರಗಳು ದೊರೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next