Advertisement

ಕಾಡು ಕಣಿವೆಗೆ ಬೇಕಿದೆ ಕಡ್ಡಾಯ ಕೃಷಿ ನೀತಿ

11:45 AM May 28, 2019 | Sriram |

ಮಲೆನಾಡಿನ ಅಜ್ಜಂದಿರು ಸಿಕ್ಕಾಗೆಲ್ಲ ಕೃಷಿ ಬದುಕಿನ ಹಳೆಯ ಕಥೆ ಕೇಳುತ್ತಿರುತ್ತೇನೆ. ಈಗ 170 ವರ್ಷಗಳ ಹಿಂದೆ ಕರಾವಳಿಗೂ ಕಣಿವೆ, ಬೆಟ್ಟಗಳಲ್ಲಿ ಅತ್ತ ಮಲೆನಾಡಿಗೂ ಯಾವ ರಸ್ತೆ ಇರಲಿಲ್ಲ. ಕಾಲುದಾರಿಯಲ್ಲಿ ತಲೆಹೊರೆ, ಹೇರೆತ್ತುಗಳ ಮೂಲಕ ಸಂಪರ್ಕ ನಡೆದಿತ್ತು. ಪಶ್ಚಿಮದ ಬಿಸಿಲುತಾಗದ ತಾಮು ಹುಡುಕಿ ಕಾಗದಾಳಿ ಮಣ್ಣಿನಲ್ಲಿ ಅಡಿಕೆ ಬೆಳೆಯಲಾಗುತ್ತಿತ್ತು. ಬಾಳೆ, ಕಾಳು ಮೆಣಸು, ತೆಂಗು, ಏಲಕ್ಕಿ ಮುಖ್ಯ ಬೆಳೆ. ಹಳ್ಳಿ ಹುಡುಕಿ ಬರುವ ವ್ಯಾಪಾರಿಗಳು ಮಳೆಗಾಲಕ್ಕೆ ಮುನ್ನ ಅಡಿಕೆ ಖರೀದಿಸಿದರೆ ಪುಣ್ಯ. ಕೃಷಿಕರಿಗೆ ಮನೆಯಂಗಳದಲ್ಲಿ ದೈವ ದರ್ಶನ ಯೋಗ. ಬಟ್ಟೆ, ಎಣ್ಣೆಡಬ್ಬಿ, ದ್ವಿದಳ ಧಾನ್ಯ ನೀಡಿ ಅಡಿಕೆ ಒಯ್ಯುತ್ತಿದ್ದರು. ಎರಡು ಎಕರೆ ಅಡಿಕೆ ತೋಟಿಗರ ಕೈಯಲ್ಲಿ ನೂರು ರೂಪಾಯಿ ನೋಟು ಕಾಣುವುದು ದುಸ್ತರ. ಹಣ ಕೇಳಿದರೆ ‘ ಅದೆಂಥ ಒರೆ¤ ಹುಟ್ಟುತೀದಾ?’ ಎಂದು ಬೈಯ್ಯುತ್ತಿದ್ದರು. ಕಾಡಿನಲ್ಲೆಲ್ಲ ಒರತೆ ಜಲವಿರುತ್ತಿದ್ದ ಆ ಕಾಲದಲ್ಲಿ ವ್ಯಾಪಾರಿಗಳ ಪ್ರಶ್ನೆ ಜನಕ್ಕೆ ನಾಟುತ್ತಿತ್ತು.

Advertisement

ಅಡಿಕೆ ಯಾರೂ ಕೇಳುವವರಿಲ್ಲ. ವ್ಯಾಪಾರಿ ಹೇಗಾದರೂ ಒಯ್ದರೆ ಸಾಕೆಂದು ವಸ್ತು ನಿಮಯಕ್ಕೆ ನೀಡಬೇಕಿತ್ತು. 1930-32 ರ ಸಮಯದಲ್ಲಿ ಮಣಕ್ಕೆ ಹನ್ನೆರಡರಿಂದ ಹದಿಮೂರು ರೂಪಾಯಿದ್ದ ಅಡಿಕೆಯ ಧಾರಣೆ ಎರಡೂವರೆ ರೂಪಾಯಿಗೆ ಕುಸಿಯಿತು. ಅಬ್ಬರದ ಮಳೆಯಿಂದ ಕೊಳೆ ರೋಗದ ಸಮಸ್ಯೆ. ಕಣಿವೆ ಹಳ್ಳಿಯ ಜನ ಹಲಸಿನಕಾಯಿ, ಬಾಳೇಕಾಯಿ, ಗಡ್ಡೆಗೆಣಸು ತಿಂದು ಬದುಕಿದ ದಾಖಲೆಗಳಿವೆ. ಹೊಳೆ-ಹಳ್ಳಗಳಿರುವ ಇಲ್ಲಿ ರಸ್ತೆಗಳಾಗಿ ಚಕ್ಕಡಿ ಓಡಾಟದ ಮಾರ್ಗ ನಿರ್ಮಾಣವಾಗಿದ್ದು ಘಟ್ಟದ ಬಹುದೊಡ್ಡ ಸಾಧನೆ. ಸಹಕಾರಿ ಸಂಘಗಳು ಅಭಿವೃದ್ಧಿಯಾಗಿ ವ್ಯಾಪಾರಿಗಳಿಂದ ರೈತರ ಶೋಷಣೆ ನಿವಾರಣೆಯಾಗಲು ಹರಸಾಹಸ ನಡೆದಿದೆ. ರಸ್ತೆ ಅನುಕೂಲತೆ ಪಡೆದ ಹಳ್ಳಿಗರು ಕೃಷಿ ಉತ್ಪನ್ನವನ್ನು ಮಾರುಕಟ್ಟೆಗೆ ಸಾಗಿಸುವ ಅನುಕೂಲತೆ ಗಮನಿಸಿದ ಸರ್ವೆ ಸೆಟ್ಲಮೆಂಟ್‌ ಅಧಿಕಾರಿಗಳು ಭೂಕಂದಾಯ ಹೆಚ್ಚಿಸುತ್ತಾರೆ.

ಕಾಡು ಕಣಿವೆಯ ಕೃಷಿ ನೀತಿಯ ಬಗ್ಗೆ ಹೇಳುವ ಪೂರ್ವದಲ್ಲಿ ಕೃಷಿ ಕಾಲದ ಸಂಕಷ್ಟದ ಇನ್ನೊಂದು ಘಟನೆ ಹೇಳಬೇಕು. ಎರಡು ಹೊತ್ತು ಊಟ ಮಾಡುವ ಕುಟುಂಬಗಳು ಆಗ ಕಡಿಮೆ. ತೊಳ್ಳಿಕಲ್ಲು ( ಭತ್ತ ಒಡೆಯುವ ಸಾಧನ) ಇದ್ದವರು ಬಹಳ ಅನುಕೂಲಸ್ಥರು. ವರ್ಷಕ್ಕೊಂದು ವಸ್ತ್ರ ಖರೀದಿಗೂ ತತ್ವಾರ. ಅನಾರೋಗ್ಯ ಎದುರಾದರೆ ಚಿಕಿತ್ಸೆ, ಔಷಧವಿಲ್ಲ. ಆಯುಷ್ಯವಿದ್ದರೆ ಬದುಕಬೇಕು. ಅವಿಭಕ್ತ ಕುಟುಂಬದ ಸದಸ್ಯರ ಅವಿರತ ದುಡಿಮೆಯ ಮೂಲಕ ಬೇಸಾಯ ನಡೆದು ಕುಟುಂಬ ಅನ್ನ ಕಾಣಬೇಕು. ಇಂದಿಗೆ ನೂರು ವರ್ಷದ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಬ್ರಾಹ್ಮಣ ಅಡಿಕೆ ಕೃಷಿಕರೊಬ್ಬರು ತುರ್ತು ಸಂಕಷ್ಟದಿಂದ ಬಚಾವಾಗಲು ಮನೆ ಪಕ್ಕದ ಶ್ರೀಮಂತರಿಂದ 150 ರೂಪಾಯಿ ಸಾಲ ಪಡೆದರು. ಸಾಲ ತೀರಿಸಲು ಸಾಹುಕಾರರ ಭೂಮಿಯಲ್ಲಿ ದಿನವೂ ದುಡಿಯುವ ಒಪ್ಪಂದವಿತ್ತು. ದಿನ ಬೆಳಗಾದರೆ ಮನೆಯ ಎರಡು, ಮೂರು ಜನ ಸಾಲ ತೀರಿಸಲು ಗೇಯುತ್ತಿದ್ದರು. ಹತ್ತು ವರ್ಷ ದುಡಿದರೂ ಸಾಲಕ್ಕೆ ಬಡ್ಡಿ ಬೆಳೆಯುತ್ತ ಚುಕ್ತಾ ಆಗಲಿಲ್ಲ. ಕಟ್ಟಕಡೆಗೆ ಹಿರಿಯರೊಬ್ಬರ ಪಂಚಾಯ್ತಿಯಲ್ಲಿ ಋಣ ಮುಕ್ತರಾಗಬೇಕಾಯ್ತು.

ಹಗಲು ಬೇರೆಯವರ ಮನೆಯಲ್ಲಿ ದುಡಿದವರಿಗೆ ರಾತ್ರಿ ವಿಶ್ರಾಂತಿ ಇಲ್ಲ. ನದಿಯಂಚಿನ ಬಿದಿರು, ಮುಂಡಿಗೆ ಸಸ್ಯ ಕಡಿದು ಕಾಡು ಭೂಮಿಯನ್ನು ಕೃಷಿಗೆ ಒಗ್ಗಿಸಲು ಶ್ರಮಿಸಿದರು. ತಮ್ಮ ಭೂಮಿ ಇದ್ದರೆ ಬದುಕು ಬಂಗಾರವಾಗುತ್ತದೆಂಬ ಕನಸು. ರಾತ್ರಿ ಮರಕ್ಕೆ ಬೆಂಕಿ ಹಾಕಿಕೊಂಡು ಆ ಬೆಳಕಿನಲ್ಲಿ ಮಧ್ಯರಾತ್ರಿಯವರೆಗೂ ಕೆಲಸ ನಿರ್ವಹಿಸಿದರಂತೆ. ಗುದ್ದಲಿ(ಸಲಿಕೆ)ಯಿಂದ ನೆಲ ಅಗೆದು ಬೆತ್ತದ ಬುಟ್ಟಿಯಲ್ಲಿ ಮಣ್ಣು ಹೊತ್ತು ಒಂದು ಎಕರೆ ನೆಲ ಸಮತಟ್ಟುಗೊಳಿಸಿದರು. ಊಟಕ್ಕೆ ಭತ್ತ, ಒಂದೆರಡು ತೆಂಗಿನ ಮರ, ಒಂದಿಷ್ಟು ಅಡಿಕೆ ಬೆಳೆಸುವ ಪ್ರಯತ್ನ ಆರಂಭಿಸಿದರು. ಇದಾದ 20 ವರ್ಷದ ಬಳಿಕ ಎರಡು ಎಕರೆ ತೋಟದ ಯಜಮಾನರಾದರು. ಒಮ್ಮೆ ಜೀವನ ಸಂಗ್ರಾಮದ ಕಥನ ಹೇಳುತ್ತಿದ್ದ ಹಿರಿಯರು ಅವರ ಹೊಟ್ಟೆಯ ಸುತ್ತ ಗಾಯದ ಗುರುತು ತೋರಿಸಿದರು. ಚಿಕ್ಕಂದಿನಲ್ಲಿ ಬೇರೆಯವರ ಮನೆಯಲ್ಲಿ ಕೂಲಿ ಮಾಡುವಾಗ ಮಾಣಿ ಜಾಸ್ತಿ ಊಟ ಮಾಡುತ್ತಾನೆಂದು, ಆ ಮನೆಯ ಯಜಮಾನರು ಇವರ ಹೊಟ್ಟೆಗೆ ಹಗ್ಗ ಬಿಗಿದಿಟ್ಟಿದ್ದರು. ಹಗ್ಗದ ಗುರುತು ಅಜ್ಜ ಸಾಯುವವರೆಗೂ ಹೊಟ್ಟೆಯ ಸುತ್ತ ಬಡತನದ ಬವಣೆಯ ಸಾಕ್ಷ್ಯದಂತಿತ್ತು. ಬಡತನದ ಕಾಲದ ಕಷ್ಟ ಅನುಭವಿಸಿದ ಇವರು ತೋಟದಲ್ಲಿ ಎಲ್ಲ ಸಸ್ಯಗಳಿರಬೇಕೆಂದು ಮಾವು, ಹಲಸು, ಚಿಕ್ಕು, ಚಕ್ಕೋತ, ದಡ್ಲಿ, ಲಿಂಬು, ಜಂಬುನೇರಳೆ, ಗೇರು ಮುಂತಾದ ಸಸ್ಯ ಬೆಳೆಸಿದ್ದರು. ಖುಷಿಯಲ್ಲಿ ಫ‌ಲ ಉಣ್ಣುತ್ತಿದ್ದರು. ಅಡಿಕೆಗೆ ಬೆಲೆ ಬಂದು ಭತ್ತದ ಗದ್ದೆಗಳು ತೋಟವಾಗುವಾಗ ಗದ್ದೆಯನ್ನು ತೋಟವಾಗಿಸಲು ಸುತಾರಾಂ ಒಪ್ಪಲಿಲ್ಲ.

ಗುದ್ದಲಿಯಿಂದ ಮಣ್ಣು ಅಗೆದು ಬುಟ್ಟಿಯಲ್ಲಿ ಹೊತ್ತು ಸಾಗಿಸಿದ ಶ್ರಮ ದುಡಿಮೆಯ ಅಗತ್ಯ ಈಗಿಲ್ಲ. ಜೆಸಿಬಿ/ಹಿತಾಚಿ ಯಂತ್ರಗಳು ಅಂದು ಹತ್ತು ವರ್ಷದಲ್ಲಿ ಮನುಷ್ಯ ಮಾಡುತ್ತಿದ್ದ ಕೆಲಸವನ್ನು ಒಂದು ದಿನಕ್ಕೆ ಮುಗಿಸುತ್ತಿವೆ. ಗುಡ್ಡ ಸಮತಟ್ಟುಗೊಳಿಸಿ, ನೀರು ಹರಿಯುವ ಕಾಲುವೆಯ ದಿಕ್ಕು ಬದಲಿಸಿ ನೆಲದ ಸ್ವರೂಪ ಬದಲಿಸುತ್ತಿವೆ. ಸದಾ ತಂಪಾಗಿರುವ ಕಾಗದಾಳಿ ಮಣ್ಣು ಅಡಿಕೆಗೆ ಪ್ರಶಸ್ತ. ನೀರಾವರಿ ಅನುಕೂಲತೆ ಇಲ್ಲದ ನೂರು ವರ್ಷಗಳ ಹಿಂದೆ ನಮ್ಮ ಹಿರಿಯರು ಇಂಥ ಮಣ್ಣಿರುವ ಕಣಿವೆಯ ನೆಲೆ ಗುರುತಿಸಿ ತೋಟ ಎಬ್ಬಿಸಿದ್ದಾರೆ. ಎಂಥ ಬರದಲ್ಲೂ ಒಣಗದ ಕಾಗದಾಳಿ ತೋಟಗಳನ್ನು ಮಲೆನಾಡಿನಲ್ಲಿ ನೋಡಬಹುದು. ಗುಡ್ಡದ ಮಸಾರಿ ಮಣ್ಣಿನಲ್ಲಿ ನೀರಾವರಿ ವ್ಯವಸ್ಥೆ ಮಾಡಿದರೆ ಐದು ವರ್ಷಕ್ಕೆ ಅಡಿಕೆ ಫ‌ಲ ನೀಡುತ್ತದೆಂದು 70 ರ ದಶಕದ ಬಳಿಕ ಮಲೆನಾಡು ಬೆಳೆಗೆ ಹೊಸ ನೆಲೆ ಗುರುತಿಸಿದೆ. ಗುಡ್ಡದ ಭೂಮಿ ಸಮತಟ್ಟುಗೊಳಿಸಿ ನೀರಾವರಿ ಮೂಲಕ ಹೊಸ ತೋಟಗಳು ಬೆಳೆದಿವೆ. ಕಾಫೀ, ರಬ್ಬರ್‌, ತೆಂಗು, ಗೇರು ಮುಂತಾದ ಮರ ಬೆಳೆಗಳು ಗುಡ್ಡದಲ್ಲಿ ವಿಸ್ತರಿಸಿವೆ.

Advertisement

ನದಿ ಕೊಳ್ಳದ ಕಾಡು ಕತ್ತರಿಸಿ ಲಾವಂಚ ಬೆಳೆಯುವುದು, ಅಡಿಕೆ ತೋಟ ವಿಸ್ತರಿಸುವ ಯತ್ನಗಳು ಅಮೂಲ್ಯ ಕಾಡುಗಳನ್ನು ನುಂಗಿವೆ. ಅರೆಮಲೆನಾಡಿನ ಜೋಳ, ಶುಂಠಿ, ಅನಾನಸ್‌ ಬೆಳೆಗಳು ಭೂಮಿ ಸ್ವರೂಪ ಬದಲಿಸಿವೆ. ಕಾಡು ಸುಟ್ಟು ಕೃಷಿ ಮಾಡುವ ಕಾಲದ ಕುಮರಿ ಬೇಸಾಯದಂತೆ ಕೃತ್ಯ ನಡೆದಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ 2012-16 ರ ಸಮಯದಲ್ಲಿ ಸುಮಾರು ಒಂದು ಲಕ್ಷ ಎಕರೆ ಅರಣ್ಯ ಇದಕ್ಕೆ ಬಲಿಯಾದ ವರದಿಗಳಿವೆ. ಆಳದ ಕೊಳವೆ ಬಾವಿ ಕೊರೆಸುತ್ತ ನೀರಾವರಿ ವಿಸ್ತರಿಸುತ್ತ ಕೃಷಿ ಸಾಮ್ರಾಜ್ಯ ಕಟ್ಟುವ ಪೈಪೋಟಿಯಲ್ಲಿ ಮಲೆನಾಡಿಗೆ ಬಹುದೊಡ್ಡ ಆಘಾತ ತಗಲಿದೆ. ಕಾಡಿನ ಉತ್ಪನ್ನಗಳ ಮೇಲೆ ಬದುಕು ಕಟ್ಟಿದ ಸಿದ್ದಿ, ಕುಣಬಿ, ಗೌಳಿ, ಮಲೆಕುಡಿಯ ಮುಂತಾದ ವನವಾಸಿಗಳ ಪಾರಂಪರಿಕ ಕೃಷಿ ಪರಿಸರ ಸ್ನೇಹಿ. ಇಲ್ಲಿ ಜೋಳ, ಶುಂಠಿಗಳ ಏಕ ಬೆಳೆ ಬಹುದೊಡ್ಡ ಆಘಾತ ನೀಡಿವೆ. ಮಳೆ ಕೊರತೆ, ಒಣಗುತ್ತಿರುವ ನದಿ, ಕುಸಿಯುತ್ತಿರುವ ಅಂತರ್ಜಲ, ಏರುತ್ತಿರುವ ಉಷ್ಣತೆ ಗಮನಿಸಿ ಇಲ್ಲಿನ ಕೃಷಿ ಸ್ವರೂಪ ಬದಲಿಸುವ ತುರ್ತು ಅಗತ್ಯವಿದೆ. ಅರಣ್ಯ ನೆಲೆಯ ಬೇಸಾಯದಲ್ಲಿ ಸಸ್ಯ ವೈವಿಧ್ಯದ ಆಧ್ಯತೆ ಇದ್ದರೆ ಅದು ಪರಿಸರದ ಜೊತೆಗಿನ ದಾರಿಯಾಗುತ್ತದೆ. ಜೋಳ, ಶುಂಠಿ, ಅನಾನಸ್‌ ತುಂಬಿದ ನೆಲೆಯಲ್ಲಿ ಎಕರೆಗೆ ಕನಿಷ್ಠ 25-30 ಅರಣ್ಯ ಫ‌ಲ ವೃಕ್ಷಗಳನ್ನು ಬೆಳೆಸುವುದು ತುರ್ತು ಚಿಕಿತ್ಸೆಯಾಗುತ್ತದೆ. ಕಾಡುಮಾವು, ಹಲಸು, ನೇರಳೆ, ಸಳ್ಳೆ, ಅಂಟುವಾಳ, ವಾಟೆ, ಮುರುಗಲು, ಬಿದಿರು ಮುಂತಾದ ಸಸ್ಯ ಬೆಳೆಸಬಹುದು. ಅರಣ್ಯ ಅತಿಕ್ರಮಣದ ಅಪರಾಧ ಪ್ರಜ್ಞೆಗೆ ಪ್ರಾಯಶ್ಚಿತವಾಗಿ ಮರ ಬೆಳೆಸಲು ಎಲ್ಲರೂ ಮನಸ್ಸು ಮಾಡಬೇಕು. ಮಳೆಗಾಲದ ಆರಂಭದಲ್ಲಿ ಭೂಮಿ ಉಳುಮೆ ಮಾಡಿ ಮರಗಳಿಗೆ ಬೆಂಕಿ ಹಾಕುವ ಕೈಗಳನ್ನು ಸಸಿ ನೆಡಲು ಪ್ರೇರೆಪಿಸುವುದು ಸುಲಭವಲ್ಲ. ಆದರೆ,
ಇಂಥ ಪ್ರಯತ್ನಗಳು ಶುರುವಾಗದಿದ್ದರೆ ಮಲೆನಾಡಿನ ಕೃಷಿ ಪರಿಸರ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.

ಅರಣ್ಯದಲ್ಲಿ ನೆಡುತೋಪು ಬೆಳೆಸಿ ಮರ ಕಡಿದು ಲಾಭ ಗಳಿಸುವ, ಏಕ ಜಾತಿಯ ಬೆಳೆ ಬೆಳೆದು ಕೃಷಿಯಲ್ಲಿ ಕಾಸು ಹುಡುಕುವ ಪ್ರಯತ್ನಗಳನ್ನು ಸುಮಾರು 200 ವರ್ಷಗಳಿಂದ ಮಾಡುತ್ತಿದ್ದೇವೆ. ನದಿ, ಕೆರೆಗಳು ಹಾಳಾಗಲು ನಮ್ಮ ಈ ಕೃತ್ಯವೇ ಕಾರಣವಾಗಿದೆ. ಕಡಿದಾದ ಬೆಟ್ಟದಲ್ಲಿ ಶೇ. 70 ರಷ್ಟಾದರೂ ಕಾಡಿದ್ದರೆ ಪರಿಸರ ಚೆನ್ನಾಗಿರುತ್ತದೆ. ಈಗಾಗಲೇ ಕಾಡು ಕಬಳಿಸಿದ ನಾವು ನೈಸರ್ಗಿಕ ಅರಣ್ಯಗಳ ಮರುನಿರ್ಮಾಣವನ್ನು ನಮ್ಮ ಕೃಷಿ ಭೂಮಿಯಲ್ಲಿ ಮಾಡಲು ಸಾಧ್ಯವಿಲ್ಲ. ಆದರೆ, ಅರಣ್ಯಭೂಮಿ ಸಸ್ಯಾವರಣದ ಬಟ್ಟೆ ಹೊದ್ದಿರುವಾಗ ಅದೇ ಪರಿಸರದ ನಮ್ಮ ಕೃಷಿ ಭೂಮಿ ಬಾನಿಗೆ ಬಾಯೆ¤ರೆದು ಬೆತ್ತಲಾಗಿರುವುದು ಸರಿಯಲ್ಲ. ಹೀಗಾಗಿ ಮರ ಪ್ರೀತಿಸುವ ಕೃಷಿ ನೀತಿ ರೂಪಿಸಬೇಕು. ಇದು ಸರಕಾರದ ಹೇರಿಕೆಯಾಗುವುದಕ್ಕಿಂತ ಪಶ್ಚಿಮ ಘಟ್ಟ ಪರಿಸರದಲ್ಲಿ ಬದುಕುವ ನಮ್ಮ ನೀತಿಸಂಹಿತೆಯಾಗಬೇಕು.

ಮುಂದಿನ ಭಾಗ- ಅರಣ್ಯ ನರ್ಸರಿಗಳಲ್ಲಿ ಖಷಿಯ ಸೆಲೆ

-ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next