Advertisement

ಸಿಬಂದಿ ಕೊರತೆಯಿಂದ ಅರಣ್ಯ ಇಲಾಖೆ ಪರದಾಟ

12:49 AM Jan 18, 2023 | Team Udayavani |

ಬೆಂಗಳೂರು: ವೈವಿಧ್ಯ ಮಯ ಸಸ್ಯ ಪ್ರಭೇದ ಹೊಂದಿರುವ ಕರ್ನಾಟಕದ ಅರಣ್ಯ ಸಂಪತ್ತನ್ನು ಸಂರಕ್ಷಿಸಲು ಅರಣ್ಯ ಇಲಾಖೆಗೆ ಸಿಬಂದಿ ಕೊರತೆ ಎದುರಾಗಿದೆ. ರಾಜ್ಯದ ಅರಣ್ಯ ಇಲಾಖೆಯಲ್ಲಿ ಬರೊಬ್ಬರಿ 4,562 ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಬಿದ್ದಿವೆ.

Advertisement

ಹೌದು, ಶ್ರೀಗಂದಧ ಗುಡಿ ಎಂದೇ ವಿಶ್ವಭೂಪಟದಲ್ಲಿ ಗುರುತಿಸಿ ಕೊಂಡಿರುವ ಕರುನಾಡಿನ ಅರಣ್ಯ ಸಂಪತ್ತು ನಿರ್ವಹಣೆಗೆ ಅಗತ್ಯ ಸಿಬಂದಿ ಇಲ್ಲದೇ ಪರದಾಡುವ ಸ್ಥಿತಿ ಎದುರಾಗಿದೆ. ಇಲಾಖೆಯಲ್ಲಿನ ಸಿಬಂದಿ ಕೊರತೆಯು ವಿವಿಧ ಮೂಲಗಳಿಂದ ವನ್ಯಜೀವಿ ಮತ್ತು ಅರಣ್ಯ ಸಂಪತ್ತು ನಾಶಕ್ಕೆ ಕಾರಣವಾ ಗಿದೆ. ಕಾಡನ್ನು ಕಾಳಜಿಯಿಂದ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿ ರುವ 731 ಅರಣ್ಯ ರಕ್ಷಕ (ಫಾರೆಸ್ಟ್‌ ಗಾರ್ಡ್‌) ಹುದ್ದೆಗಳು ಕಳೆದ 3 ವರ್ಷಗಳಿಂದ ಭರ್ತಿಯಾಗಿಲ್ಲ.

ಕಾಡುಗಳಿಗೆ ಮಾರಕವಾಗುವ ಯಾವುದೇ ಪ್ರಕರಣ ನಡೆದರೂ ಅದನ್ನು ಪರಿಹರಿಸಲೆಂದೇ ಸೃಷ್ಟಿಸಿರುವ 403 ಅರಣ್ಯ ವೀಕ್ಷಕರ ಕೊರತೆಯಿದೆ. ಅರಣ್ಯ ಇಲಾಖೆಯ ಸಂಪೂರ್ಣ ಹೊಣೆ ಹೊತ್ತಿರುವ 52 ಐಎಫ್ಎಸ್‌ ಕುರ್ಚಿಗಳು ಖಾಲಿ ಇವೆ. ಉಪ ವಲಯ ಅರಣ್ಯಾಧಿಕಾರಿ 133, ರಾಜ್ಯ ಅರಣ್ಯ ಸೇವೆಯಲ್ಲಿ 78, ವಲಯ ಅರಣ್ಯ ಅಧಿಕಾರಿ 96, ಮಾವುತರು 42, ಆನೆ ಕಾವಡಿಗ 66 ಹಾಗೂ 108 ಚಾಲಕ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ. ಕಾಡಂಚಿನಲ್ಲಿ ಕಾರ್ಯಾಚರಣೆ ನಡೆಸುವ 1,751ಕ್ಕೂ ಅಧಿಕ ಸಿಬಂದಿಯ ಅಗತ್ಯವಿದೆ. ಇನ್ನು ಇಲಾಖೆಯ ಮಂತ್ರಿ ಮಂಡಲದಲ್ಲಿ 753 ಹುದ್ದೆಗಳಿಗೆ ನೇಮಕಾತಿ ಭಾಗ್ಯ ದೊರೆತಿಲ್ಲ. ಒಟ್ಟಾರೆ ಅರಣ್ಯ ಇಲಾಖೆಗೆ ಮಂಜೂರಾಗಿರುವ 12,320 ಹುದ್ದೆಗಳ ಪೈಕಿ ಬಾಕಿ ಇರುವ 4,562 ಹುದ್ದೆಗೆ ತುರ್ತಾಗಿ ಸಿಬಂದಿ ನೇಮಿಸುವ ಅಗತ್ಯತೆ ಉದ್ಬವಿಸಿದೆ. ಮತ್ತೂಂದೆಡೆ ಅರಣ್ಯ ಇಲಾಖೆಗೆ ಸಿಬಂದಿ ನೇಮಿಸಿದ ಬೆನ್ನಲ್ಲೇ ಅವರಿಗೆ ತರಬೇತಿ ನೀಡಲಾಗುತ್ತದೆ. ರಾಜ್ಯದಲ್ಲಿ ಅರಣ್ಯ ಸಿಬಂದಿಗೆ ತರಬೇತಿ ನೀಡುವ ಕೇಂದ್ರದ ಕೊರತೆಯೂ ಇದೆ.

ಶೇ. 60ರಷ್ಟು ಭಾಗ
ಪಶ್ಚಿಮ ಘಟ್ಟದ ಪಾಲು
ಕರ್ನಾಟಕವು 1,91,791 ಚದರ ಕಿ.ಮೀ. ಭೂಭಾಗ ಹೊಂದಿದ್ದು, ಈ ಪೈಕಿ 38,724 ಚ.ಕಿ.ಮೀ. ಅರಣ್ಯ ಪ್ರದೇಶಗಳಿವೆ. ರಾಜ್ಯದ ಶೇ.60ರಷ್ಟು ಅರಣ್ಯಗಳು ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿವೆ. ಉಳಿದ ಕಾಡುಗಳು ಪೂರ್ವ ಬಯಲು ಪ್ರದೇಶದಲ್ಲಿವೆ. ಇವು ವ್ಯಾಪ್ತಿಯಲ್ಲಿ ಸೀಮಿತವಾಗಿದ್ದರೂ ಔಷಧೀಯ ಸಸ್ಯ ಪ್ರಭೇದಗಳ ವೈವಿಧ್ಯತೆ ಹೊಂದಿವೆ. ಈ ವರೆಗೆ ಕರ್ನಾಟಕದಲ್ಲಿ ಸುಮಾರು 4,700 ಪ್ರಭೇದದ ಹೂ ಬಿಡುವ ಸಸ್ಯ ಗುರುತಿಸಲಾಗಿದೆ. ಇನ್ನು ರಾಜ್ಯದ ಜೀವನಾಡಿಯಾಗಿರುವ ಎಲ್ಲಾ ನದಿಗಳು ಪಶ್ಚಿಮಘಟ್ಟಗಳ ಕಾಡುಗಳಲ್ಲಿ ಉಗಮವಾಗುತ್ತವೆ. ಕರ್ನಾಟಕ ಅರಣ್ಯಗಳು ವನ್ಯಜೀವಿಗಳಿಂದಾಗಿ ಸಮೃದ್ಧವಾ ಗಿದ್ದು, ಭಾರತದ ಶೇ.25ರಷ್ಟು ಆನೆ ಸಂತತಿ ಹಾಗೂ ಶೇ. 18 ರಷ್ಟು ಹುಲಿ ಸಂತತಿ ಹೊಂದಿದೆ. 5 ರಾಷ್ಟ್ರೀಯ ಉದ್ಯಾನವನಗಳು, 30 ವನ್ಯಜೀವಿ ಅಭಯಾರಣ್ಯಗಳು ಹಾಗೂ 16 ಸಂರಕ್ಷಿತ ಮೀಸಲುಗಳನ್ನು ಒಳಗೊಂಡಂತೆ ರಾಜ್ಯದ ಶೇ. 25 ಅರಣ್ಯ ಪ್ರದೇಶ ವನ್ಯಜೀವಿ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ.

ಸಿಬಂದಿ ಕೊರತೆಯಿಂದ ತೊಡಕೇನು?
ಅರಣ್ಯ ಸಿಬಂದಿ ಕೊರತೆಯು ಟಿಂಬರ್‌ ಮಾಫಿಯಾ, ಕಾಡು ಪ್ರಾಣಿಗಳ ಬೇಟೆಗಾರರಿಗೆ ವರದಾನವಾದರೆ, ಸೂಕ್ತ ನಿರ್ವಹಣೆ ಇಲ್ಲದೇ ಕೆಲ ಕಾಡುಗಳು ಅವಸಾನದ ಅಂಚಿನತ್ತ ಸಾಗುತ್ತಿವೆ. ರಾಜ್ಯದ ದಟ್ಟ ಅಡವಿಯಲ್ಲಿರುವ ಬೆಲೆ ಬಾಳುವ ಶ್ರೀಗಂಧ, ರಕ್ತಚಂದನ, ತೇಗ, ಹೊನ್ನೆ, ಬೀಟೆ ಸೇರಿದಂತೆ ಸಂಪದ್ಭರಿತ ಮರಗಳು ಮಾಯವಾಗುತ್ತಿವೆ. ಕಾಡಂಚಿನ ಸಾವಿರಾರು ಎಕರೆ ಪ್ರದೇಶಗಳು ಈಗಾಗಲೇ ಒತ್ತುವರಿಯಾಗಿವೆ. ಜತೆಗೆ, ಕಾಡ್ಗಿಚ್ಚು, ಕಾಡು ಪ್ರಾಣಿಗಳ ಬೇಟೆಗಳ ನಿಯಂತ್ರಣ, ಸೂಕ್ಷ್ಮ ಅರಣ್ಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಅರಣ್ಯ ಇಲಾಖೆ ವಿಫ‌ಲವಾಗಿದೆ.

Advertisement

ಅರಣ್ಯ ಇಲಾಖೆಯ ಖಾಲಿ ಇರುವ ಅಗತ್ಯ ಹುದ್ದೆ ಭರ್ತಿ ಮಾಡುವ ನಿಟ್ಟಿನಲ್ಲಿ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ಕೆಲವು ಸಿಬಂದಿ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಸಿಬಂದಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
– ಜಾವೆದ್‌ ಅಖ್ತರ್‌, ಅಪರ ಮುಖ್ಯ ಕಾರ್ಯದರ್ಶಿ (ಅರಣ್ಯ), ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ

– ಅವಿನಾಶ್‌ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next