Advertisement

ಮಹಾ ಮಳೆಗೆ ಪ್ರವಾಹ

10:18 AM Aug 03, 2019 | Suhan S |

ಮಹಾಲಿಂಗಪುರ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹಿರಣ್ಯಕೇಶಿ ನದಿಯಿಂದ 19 ಸಾವಿರ ಕ್ಯೂಸೆಕ್‌ ನೀರು ದುಪದಾಳ ಜಲಾಶಯ ಮಾರ್ಗವಾಗಿ ಘಟಪ್ರಭಾ ನದಿಗೆ ಮತ್ತು ಹಿಡಕಲ್ ಜಲಾಶಯದಿಂದ ಬಿಟ್ಟ 2 ಸಾವಿರ ಕ್ಯೂಸೆಕ್‌ ನೀರು ಸೇರಿ ಭಾರಿ ಪ್ರಮಾಣದಲ್ಲಿ ಘಟಪ್ರಭಾ ನೀರು ಹರಿದು ಬರುತ್ತಿರುವುದರಿಂದ ರಬಕವಿ-ಬನಹಟ್ಟಿ ತಾಲೂಕಿನ ಢವಳೇಶ್ವರ, ನಂದಗಾಂವ, ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ, ಜಾಲಿಬೇರಿ ಹಾಗೂ ಮುಧೋಳ ಕೆಳಭಾಗದಲ್ಲಿರುವ ಸೇತುವೆಗಳು ಜಲಾವೃತವಾಗಿವೆ.

Advertisement

ಗುರುವಾರ ಮಧ್ಯಾಹ್ನದವರೆಗೆ ಘಟಪ್ರಭಾ ನದಿಗೆ ಬರುವ ನೀರಿನ ಪ್ರಮಾಣ ಹೆಚ್ಚಾಗಿತ್ತು. ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಸಂಜೆವರೆಗೆ ನದಿಗೆ ಹರಿದು ಬರುವ ನೀರಿನ ಪ್ರಮಾಣದಲ್ಲಿ ಯಾವುದೇ ರೀತಿಯಲ್ಲೂ ಏರಿಕೆ ಕಂಡುಬಂದಿಲ್ಲ. ಎರಡು ದಿನಗಳಿಂದ ಢವಳೇಶ್ವರ ಸೇತುವೆ ಮತ್ತು ನಾಲ್ಕು ದಿನಗಳಿಂದ ನಂದಗಾಂವ-ಅವರಾದಿ, ಅಕ್ಕಿಮರಡಿ-ಮಿರ್ಜಿ ಸೇತುವೆಗಳು ಜಲಾವೃತವಾಗಿವೆ. ಇದರಿಂದಾಗಿ ನೆರೆಯ ಬೆಳಗಾವಿ ಜಿಲ್ಲೆಯ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಉಭಯ ಸೇತುವೆಗಳ ಮೇಲೆ ಸುಮಾರು 10ರಿಂದ 12 ಅಡಿಗಳಷ್ಟು ನೀರು ಹರಿಯುತ್ತಿದೆ. ಅಲ್ಲದೇ ಉಭಯ ಸೇತುವೆಗಳ ಹತ್ತಿರ ನದಿಯ ಗಾತ್ರ ಚಿಕ್ಕದಾಗಿರುವುದರಿಂದ ಅಕ್ಕಪಕ್ಕದ ಹೊಲಗಳಿಗೂ ನದಿಯ ನೀರು ನುಗ್ಗಿದೆ.

ಸೂಚನಾ ಫಲಕಗಳ ಅಳವಡಿಕೆ: ಘಟಪ್ರಭಾ ನದಿಯು ಅಪಾಯಮಟ್ಟದಲ್ಲಿ ಹರಿಯುತ್ತಿರುವದರಿಂದ ಜಲಾವೃತವಾಗಿರುವ ಢವಳೇಶ್ವರ ಮತ್ತು ನಂದಗಾಂವ ಸೇತುವೆಗಳ ಹತ್ತಿರ ತಾಲೂಕಾಡಳಿತದಿಂದ ಪ್ರವೇಶ ನಿಷೇಧಿಸಿರುವ ಸೂಚನಾ ಫಲಕಗಳನ್ನು ಶುಕ್ರವಾರ ಅಳವಡಿಸಿದ್ದಾರೆ.

ಅಧಿಕಾರಿಗಳ ನೇಮಕ: ಪ್ರವಾಹ ಪರಿಸ್ಥಿತಿ ಎದುರಿಸುವ ಸಲುವಾಗಿ ಢವಳೇಶ್ವರ, ನಂದಗಂವ ಮತ್ತು ಮಳಲಿ ಗ್ರಾಮಗಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೋರಡ್ಡಿ (9742437714), ಮಲ್ಲಾಪೂರ ಪಿ.ಜಿ., ಮಿರ್ಜಿ, ಒಂಟಗೋಡಿ, ಚನ್ನಾಳ ಗ್ರಾಮಗಳಿಗೆ ಲೋಕೋಪಯೋಗಿ ಇಲಾಖೆಯ ಪಿ.ಎಚ್.ಗಾಯಕವಾಡ (9448036182) ಅವರನ್ನು ನೇಮಿಸಲಾಗಿದೆ. ಜೊತೆಗೆ ಗ್ರಾಮ ಪಂಚಾಯತಿ ಸಿಬ್ಬಂದಿ, ಕಂದಾಯ ಇಲಾಖೆ, ಪೊಲೀಸ್‌, ಕೃಷಿ, ಆರೋಗ್ಯ, ಪಶು, ಅಗ್ನಿ ಶಾಮಕ ಇಲಾಖೆಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಸದರಿ ತಂಡವು ಪ್ರವಾಹದ ಮುಂಜಾಗ್ರತಾ ಕ್ರಮ ಕೈಗೊಳ್ಳಲಿದೆ. ಈ ಕುರಿತು ತುರ್ತು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಇಲ್ಲಿ ದಿನದ 24 ಗಂಟೆ ಸಿಬ್ಬಂದಿ ಸಂಖ್ಯೆ 08350-280051 ರಲ್ಲಿ ಇರುತ್ತಾರೆ ಎಂದು ಮುಧೋಳ ತಹಶೀಲ್ದಾರ್‌ ಸಂಜಯ ಇಂಗಳೆ ಪತ್ರಿಕೆಗೆ ತಿಳಿಸಿದ್ದಾರೆ.

ಜಮಖಂಡಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮಖಂಡಿ ತಾಲೂಕಿನಲ್ಲಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ. ತಾಲೂಕಾಡಳಿತ ನದಿ ತೀರದ ಗ್ರಾಮಗಳ ಗ್ರಾಮಸ್ಥರಿಗೆ ತುಂಬಿದ ನದಿ ತೀರಕ್ಕೆ ಹೋಗದಂತೆ ಡಂಗುರದ ಮೂಲಕ ಎಚ್ಚರಿಕೆ ನೀಡಿದೆ.

Advertisement

ಕಳೆದೊಂದು ವಾರದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಇದರಿಂದ ನದಿ ದಡದ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಕೃಷ್ಣೆ ಮೈದುಂಬಿಕೊಂಡಿದ್ದನ್ನು ವಿಕ್ಷೀಸಿದ ತಾಲೂಕಾಡಳಿತ ರಕ್ಷಣಾ ಕಾರ್ಯದ ಸಿದ್ಧತೆ ನಡೆಸುತ್ತಿದೆ. ಮಹಾರಾಷ್ಟ್ರ ರಾಜ್ಯಕ್ಕೆ ಸಂಪರ್ಕ ಸೇತುವೆ ಕುಡಚಿಯ ಸೇತುವೆ ಮೇಲೆ 10 ಅಡಿ ನೀರು ನಿಂತಿದ್ದರಿಂದ ಮಹಾರಾಷ್ಟ್ರಕ್ಕೆ ತೆರಳುವ ಜಮಖಂಡಿ-ಅಥಣಿ ತಾಲೂಕಿನ ಪ್ರಯಾಣಿಕರಿಗೆ ತೊಂದರೆಯಾಗಿದ್ದು, ಹಿಪ್ಪರಗಿ ಬ್ಯಾರೇಜ್‌ ಮುಖಾಂತರ ಮಹಾರಾಷ್ಟ್ರಕ್ಕೆ ಸಂಚಾರ ಆರಂಭಗೊಂಡಿದೆ.

ಪ್ರವಾಹ ಭೀತಿ ಮುನ್ನಚ್ಚರಿಕೆ ಕ್ರಮವಾಗಿ ರಕ್ಷಣಾ ಬೋಟ್‌ಗಳನ್ನು, ಹಾವುಹಿಡಿ ಯುವ ತಂಡ, ಉತ್ತರ ಕನ್ನಡ-ಕಾರವಾರ ಜಿಲ್ಲೆಗಳಿಂದ ಈಜುಗಾರರನ್ನು ಕರೆಯಿಸಲಾಗಿದೆ. ತಾಲೂಕಿನ ಮುತ್ತೂರು-ಕಂಕನವಾಡಿ ಗ್ರಾಮಗಳು ಪ್ರವಾಹಕ್ಕೆ ಬೇಗ ತುತ್ತಾಗುವ ಸಾಧ್ಯತೆ ಇದ್ದು, ಮುತ್ತೂರು-ತುಬಚಿ ಗ್ರಾಮಗಳ ಮಧ್ಯದ ರಸ್ತೆ ಸಂಪೂರ್ಣ ಮುಳುಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಗ್ರಾಮಸ್ಥರ ಸಂಚಾರಕ್ಕೆ ಅನುಕೂಲವಾಗುವಂತೆ ವಿಶೇಷ ಬೋಟ್‌ಗಳನ್ನು ನೀಡಲಾಗಿದ್ದು, ಬೋಟ್ ಚಾಲನೆಗೆ ಸಾಕಷ್ಟು ಪ್ರಮಾಣದ ಸೀಮೆಎಣ್ಣೆ ನೀಡಲಾಗಿದೆ. ತಾಲೂಕಿನ ಯಾವ ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಯಾವುದೇ ತೊಂದರೆಯಾಗಿಲ್ಲ. ಗ್ರಾಮದ ಜನತೆಗೆ ನದಿ ತೀರದಲ್ಲಿ ಬಟ್ಟೆ ತೊಳೆಯುವುದಾಗಲೀ, ಮಕ್ಕಳನ್ನು ನದಿ ಕಡೆ ಬಿಡುವುದಾಗಲಿ ಮಾಡಬಾರದು ಎಂದು ಪ್ರಕಟಣೆ ನೀಡಲಾಗಿದೆ. ಶುದ್ದ ಕುಡಿವ ನೀರನ್ನು ಬಳಸುವಂತೆ ಸೂಚಿಸಲಾಗಿದೆ. ಈಗಾಗಲೇ ತಾಲೂಕಿನ 27 ನೋಡೆಲ್ ಹಿರಿಯ ಅಧಿಕಾರಿಗಳನ್ನು ನೇಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next