Advertisement

ಬಾನಾಡಿಯಲ್ಲಿ ಹಾರಾಡಿದ ತಿರಂಗಾ ಧ್ವಜ

01:18 PM Aug 16, 2018 | Team Udayavani |

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ 72ನೇ ಸ್ವಾತಂತ್ರ್ಯಾ ದಿನವನ್ನು ಬುಧವಾರ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಭಾರತಾಂಬೆಗೆ ಗೌರವ ಸಲ್ಲಿಸಲಾಯಿತು.

Advertisement

ನಗರದ ಪೊಲೀಸ್‌ ಡಿಎಆರ್‌ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಧ್ವಜಾರೋಹಣ ನೆರವೇರಿಸಿದರು. ನಂತರ ಪದಾತಿ ದಳ, ಸ್ಕೌಟ್ಸ್‌, ಗೈಡ್ಸ್‌ ಮತ್ತು ವಿವಿಧ ಶಾಲಾ ಕಾಲೇಜುಗಳ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು.

ನಂತರ ಮಾತನಾಡಿದ ಸಚಿವರು, ಸ್ವಾತಂತ್ರ್ಯಾ ದಿನಾಚರಣೆಯೂ ಒಂದು ಹಬ್ಬದಂತೆ. ಅದನ್ನು ಶ್ರದ್ಧೆಯಿಂದ ಆಚರಿಸುವ ಮೂಲಕ ಸ್ವಾತಂತ್ರ್ಯಾಕ್ಕಾಗಿ ಹೋರಾಡಿ ಮಡಿದ ಸೇನಾನಿಗಳಿಗೆ ನಮನ ಸಲ್ಲಿಸಬೇಕು. ನಮಗೆ ಸಿಕ್ಕ ಸ್ವಾತಂತ್ರ್ಯಾವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಆದರೆ, ಇಂದು ಸ್ವಾತಂತ್ರ್ಯಾ ಎಂದರೆ ಸ್ವೇಚ್ಛಾಚಾರ ಎಂಬ ಭಾವನೆ ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ದೇಶಕ್ಕೆ ಯುವ ಸಮಾಜದ ಅಗತ್ಯ ಹೆಚ್ಚಾಗಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಿಸಲು ಸಾಧ್ಯ. ನಮಗೆ ಅತಂತ್ರ ದೇಶದ ಕಲ್ಪನೆಯಿಲ್ಲ. ಹೀಗಾಗಿ ನಮಗೆ ಸಿಕ್ಕ ಸ್ವಾತಂತ್ರ್ಯಾವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.

ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸಿ 49 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ, ಇದೊಂದೇ ಶಾಶ್ವತ ಪರಿಹಾರವಲ್ಲ. ಅದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ಮುಂದಾಗಿದೆ. ಶೂನ್ಯ ಬಂಡವಾಳ ಕೃಷಿ, ಇಸ್ರೇಲ್‌ ಮಾದರಿ ಕೃಷಿ ಅಳವಡಿಕೆಗೆ ಚಿಂತನೆ ನಡೆಸಿದೆ. ಅಲ್ಲದೇ, ಕೃಷಿ ತಜ್ಞರೊಡನೆ ಚಿಂತಿಸಿ ಕ್ರಮಕ್ಕೆ ಮುಂದಾಗಲಾಗುತ್ತಿದೆ. ರೈತರನ್ನು ಸ್ವಾವಲಂಬಿ ಮಾಡುವ ಇಚ್ಛಾಶಕ್ತಿ ಹೊಂದಿದೆ ಎಂದರು.

Advertisement

ಕಡ್ಡಾಯ ಶಿಕ್ಷಣದ ಜತೆಗೆ ಗುಣಮಟ್ಟದ ಶಿಕ್ಷಣಕ್ಕೂ ಆದ್ಯತೆ ನೀಡಬೇಕಿದೆ. ಮಕ್ಕಳಿಗೆ ಸಂಸ್ಕಾರದ ಜತೆಗೆ ಶಿಕ್ಷಣವನ್ನೂ
ನೀಡಬೇಕಿದೆ. ಅದರ ಜತೆಗೆ ಪರಿಸರ ಸಂರಕ್ಷಣೆಗಾಗಿ ಸರ್ಕಾರವು ಹಸಿರು ಕರ್ನಾಟಕ ಯೋಜನೆ ಜಾರಿಗೆ ತಂದಿದ್ದು, ಇಂದಿನಿಂದಲೇ ಜಾರಿಗೊಳಿಸಲಾಗುವುದು. ರಾಜ್ಯವನ್ನು ಗುಡಿಸಲು ಮುಕ್ತ ಮಾಡಲು ವಸತಿ ರಹಿತರಿಗೆ ಮನೆ ನಿರ್ಮಿಸಲಾಗುತ್ತಿದೆ. ಪಶುಸಂಗೋಪನಾ ಇಲಾಖೆಯ ವಿಭಾಗೀಯ ಕಚೇರಿ ರಾಯಚೂರಿನಲ್ಲಿ ಶೀಘ್ರದಲ್ಲಿ ಕಾರ್ಯಾರಾಂಭಗೊಳ್ಳಲಿದೆ ಎಂದು ಹೇಳಿದರು.

ನಗರ ಶಾಸಕ ಡಾ| ಶಿವರಾಜ ಪಾಟೀಲ, ಸಂಸದ ಬಿ.ವಿ. ನಾಯಕ, ವಿಧಾನ ಪರಿಷತ್‌ ಸದಸ್ಯ ಎನ್‌.ಎಸ್‌. ಬೋಸರಾಜ, ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌, ಜಿಪಂ ಸಿಇಒ ನಲಿನ್‌ ಅತುಲ್‌, ಎಸ್‌ಪಿ ಡಿ.ಕಿಶೋರಬಾಬು, ಎಡಿಸಿ ಗೋವಿಂದರೆಡ್ಡಿ ಸೇರಿ ಇತರರು ಪಾಲ್ಗೊಂಡಿದ್ದರು.

ಮಕ್ಕಳ ನೃತ್ಯಕ್ಕೆ ಜನ ಫಿದಾ ನಗರದ ಎಸ್‌ಪಿ ಕಚೇರಿ ಆವರಣದಲ್ಲಿ 72ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ವಿವಿಧ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ನೆರೆದವರನ್ನು ರಂಜಿಸಿದರು. ಸುಮಾರು 200ಕ್ಕೂ ಅಧಿಕ ಮಕ್ಕಳು ಏಕಕಾಲಕ್ಕೆ ನೃತ್ಯ ಪ್ರದರ್ಶಿಸಿದರು. ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕರಾಟೆ ಪ್ರದರ್ಶನದ ವಿವಿಧ ಸಾಹಸಗಳನ್ನು ಮಾಡಿ ಗಮನ ಸೆಳೆದರು. ಧ್ವಜಾರೋಹಣ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಾನಾ ಶಾಲೆಗಳ ವಿದ್ಯಾರ್ಥಿಗಳು ವಿವಿಧ ದೇಶಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿದರು. ಮಕ್ಕಳ ವಿವಿಧ ದೇಶಭಕ್ತರ ವೇಷ ಧರಿಸಿ ಗಮನ ಸೆಳೆದರು.

Advertisement

Udayavani is now on Telegram. Click here to join our channel and stay updated with the latest news.

Next