ಕಾರವಾರ: ರಾಮನ ವಿಗ್ರಹಕ್ಕೆ ಮೊದಲ ಪೂಜೆ ಬ್ರಾಹ್ಮಣರಿಂದ ಆಗಬೇಕು, ಅದು ನಮ್ಮ ಸಂಪ್ರದಾಯ ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಮಾಂಕಾಳು ವೈದ್ಯ ಕಾರವಾರದಲ್ಲಿ ಹೇಳಿದರು.
ಮಾಧ್ಯಮಗಳ ಜೊತೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು ಬಿಜೆಪಿ ಪ್ರತಿಯೊಂದರಲ್ಲೂ ರಾಜಕೀಯ ಮಾಡುತ್ತದೆ. ರಾಮನ ವಿಷಯದಲ್ಲೂ ಅದು ರಾಜಕೀಯ ಮಾಡುತ್ತದೆ. ನಾವು ಜನರ ಬಡತನ ಹೋಗಲಾಡಿಸಲು ರಾಜಕೀಯ ಮಾಡುತ್ತೇವೆ. ರಾಮ ಎಲ್ಲರಿಗೂ ಸೇರಿದವನು. ಬಿಜೆಪಿಯವರ ಕ್ಷುಲ್ಲಕತನವನ್ನು ರಾಮನೇ ನೋಡಿಕೊಳ್ಳುತ್ತಾನೆ ಎಂದರು.
ನಾನು ಸಹ ಆಯೋಧ್ಯೆಗೆ ಹೋಗುವೆ. ಹೇಗೂ ವಿಮಾನ ನಿಲ್ದಾಣವಾಗಿದೆ. ಟಿಕೆಟ್ ಸಿಕ್ಕರೆ ಜ.22ಕ್ಕೆ ಹೋಗುವೆ ಎಂದರು.
ನಾನು ಕಾಂಗ್ರೆಸ್ ಮನುಷ್ಯ. ರಾಮಮಂದಿರ ನಿರ್ಮಾಣಕ್ಕೆ ನಾನು ಹಣ ಕೊಟ್ಟಿದ್ದೇನೆ. ರಾಮ ಎಲ್ಲರಿಗೂ ಸೇರಿದವ. ನಮ್ಮ ಹೈಕಮಾಂಡ್ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹೈಕಮಾಂಡ್ ಸಹ ಆಯೋಧ್ಯಗೆ ಹೋಗಬಹುದು. ನಾನು ಜ.22 ಕ್ಕೆ ಆಗದಿದ್ದರೂ ಮುಂದಿನ ದಿನಗಳಲ್ಲಿ ಹೋಗಿ ಬರುವೆ. ದೇವರ ಭಕ್ತಿ ವೈಯಕ್ತಿಕ ನೆಲೆಯದ್ದು ಎಂದರು.
ಆಯೋಧ್ಯೆ ಬಾಬರಿ ಮಸೀದಿ ಕೆಡವಿದವರನ್ನು ಬಂಧಿಸಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ವೈದ್ಯ, ಕೋರ್ಟ್ ಮಾರ್ಗದರ್ಶನದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಅಪಾರಾಧ ಎಷ್ಟೇ ಹಳೆಯದಾಗಿರಲಿ, ಅವರನ್ನು ಹಾಗೆ ಬಿಡಲು ಸಾಧ್ಯವಾ? ಕಾನೂನು ಪ್ರಕಾರ ಪೊಲೀಸರು ಕ್ರಮ ತೆಗೆದುಕೊಂಡಿರುತ್ತಾರೆ. ಇದರಲ್ಲೂ ಬಿಜೆಪಿಗರು ರಾಜಕೀಯ ಹುಡುಕುತ್ತಾರೆ ಎಂದರು.