Advertisement

‌Festival: ಮಣ್ಣಲ್ಲಿ ಅರಳಿದ ಜೋಡೆತ್ತುಗಳ ಹಬ್ಬ

03:20 PM Jul 15, 2024 | Kavyashree |

ನಮ್ಮ ಭಾರತ ಹಲವು ವೈವಿಧ್ಯಮಯ ಸಾಂಪ್ರದಾಯ, ಹಬ್ಬಗಳನ್ನು ಹೊಂದಿರುವ ದೇಶ. ಅದರಲ್ಲೂ ನಮ್ಮ ಈ ಕರುನಾಡಿನಲ್ಲಿ ಪ್ರಕೃತಿ ಪೂಜೆಗೆ ವಿಶೇಷ ಮಹತ್ವವಿದೆ. ಕಲ್ಲು ಮಣ್ಣು, ಗಿಡ, ಮರಗಳ ಪೂಜೆ ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯ. ಅವುಗಳಲ್ಲಿ ದೈವತ್ವವನ್ನು ಕಂಡು ಆರಾಧಿಸಲಾಗುತ್ತದೆ. ಮಣ್ಣನ್ನೇ ನಂಬಿ ಮಣ್ಣಿನಿಂದ ಬದುಕು ಎನ್ನುವ ರೈತ ಮಣ್ಣಿನ ಮಗನಾಗಿ ಬದುಕುವನು. ಮಣ್ಣು-ರೈತ-ಎತ್ತುಗಳ ನಡುವೆ ಅವಿನಾಭಾವ ಸಂಬಂಧವಿದೆ ಎಂದರೆ ತಪ್ಪಾಗಲಾರದು.

Advertisement

ಉತ್ತರ ಕರ್ನಾಟಕದಲ್ಲಿ ಮಣ್ಣೆತ್ತಿನ ಹಬ್ಬದಾಚರಣೆ ಬಲು ಜೋರು. ಮಣ್ಣಿನ ಮಕ್ಕಳೊಂದಿಗೆ ಎತ್ತುಗಳನ್ನು ಬೆಸೆದ ಈ ಹಬ್ಬ ನಮ್ಮ ನಾಡಿನ ಪ್ರಮುಖ ಹಬ್ಬಗಳಲ್ಲಿ ಒಂದು. ಕಾರಹುಣ್ಣಿಮೆ ಹಬ್ಬಗಳನ್ನು ಕರಕೊಂಡ ಮತ್ತು ಬರತದ ಹುಣ್ಣಿಮೆ ಅಂತ ಹೇಳುವ ವಾಡಿಕೆ. ಅಂದು ಮುತೈದೆಯರು ಅಶ್ವತ್ಥ ಮರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಹಬ್ಬಗಳು ಪ್ರಾರಂಭ ಆಗುತ್ತದೆ. ಅನಂತರ ಬರುವ ಅಮವಾಸ್ಯೆಯೇ ಮಣ್ಣೆತ್ತಿನ ಅಮವಾಸ್ಯೆ. ಹೆಸರೇ ಸೂಚಿಸುವಂತೆ ಮಣ್ಣಿನ ಎತ್ತುಗಳ ಪೂಜೆ ಮಾಡುವುದು.

ಈ ಹಬ್ಬವು ಮಣ್ಣಿನ ಪ್ರತಿಮೆಗಳ ಪೂಜೆ. ಎತ್ತುಗಳಿಂದ ಪ್ರಾರಂಭವಾಗುವುದು. ವರ್ಷಪೂರ್ತಿ ರೈತನ ಏಳ್ಗೆಗಾಗಿ ದುಡಿಯುವ ಎತ್ತುಗಳು ಅವನ ಎರಡು ಕಣ್ಣುಗಳಿದ್ದಂತೆ. ರೈತನ ಹೆಗಲಿಗೆ ಹೆಗಲಾಗಿ ದುಡಿಯುವ ಎತ್ತುಗಳನ್ನು ಪೂಜಿಸುವ ವಿಶೇಷ ಹಬ್ಬ ಮಣ್ಣೆತ್ತಿನ ಅಮವಾಸ್ಯೆ. ಎತ್ತುಗಳನ್ನು ಭಕ್ತಿಯಿಂದ ಬಸವಣ್ಣ ಎಂದು ಕರೆಯುವರು, ಮಣ್ಣಿನಲ್ಲಿ ಎತ್ತುಗಳನ್ನು ಮಾಡಿ, ರೈತರಾದಿಯಾಗಿ ಸಾಮಾನ್ಯರೆಲ್ಲರೂ ಪೂಜಿಸಿ ಗೌರವ ಸೂಚಿಸುವ ಸಂಪ್ರದಾಯ ಇದು. ಜೇಡಿ ಮಣ್ಣು ಇಲ್ಲ ಹೊಲದಿಂದ ಮಣ್ಣು ತಂದು ಜೋಡೆತ್ತುಗಳನ್ನು ಮನೆಯಲ್ಲೇ ತಯಾರಿಸುವರು.

ನಾವು ಚಿಕ್ಕವರಿದ್ದಾಗ ಶಾಲೆ ಬಿಟ್ಟ ಕೂಡಲೆ ಗೆಳತಿಯರೆಲ್ಲ ಕೂಡಿ ಕೆರೆಗೆ ಹೋಗಿ ಮಣ್ಣು ತರುವ ಸಂಭ್ರಮದ ಹೇಳುತೀರದು, ಅನಂತರ ಅವನ್ನು ಹಿರಿಯರ ಸಹಾಯದಿಂದ ಜೋಡಿ ಎತ್ತು ಮಾಡುವುದು ಅದಕ್ಕೊಂದು ದೋಣಿ/ಗ್ವಾದನಿ ಮಾಡುವುದು. ಯಾರು ಮಾಡಿರುವ ಎತ್ತು ಚಂದ ಎಂದು ಗೆಳತಿಯರ ಮನೆಗೆಲ್ಲ ಹೋಗಿ ನೋಡಿಕೊಂಡು ಬರುವುದು ಹೀಗೆ ನಮ್ಮ ದಿನಗಳು ಸಾಗುತ್ತಿತ್ತು. ಅಮವಾಸ್ಯೆಯ ಅನಂತರದ ನಾಲ್ಕು ಮಂಗಳವಾರದವರೆಗೂ ಜೋಡೆತ್ತು ತಂದು ಪೂಜೆ ಮಾಡುವುದು ಸಂಪ್ರದಾಯ. ಆದರೀಗ ಅಮವಾಸ್ಯೆಗೆ ತಂದ ಎತ್ತುಗಳನ್ನೇ ಪ್ರತಿವಾರವೂ ಪೂಜಿಸುತ್ತಿರುವುದನ್ನು ಕಾಣುತ್ತೇವೆ. ಸವತಿ ಬೀಜ, ಪರಡಿ, ಗೌಲಿಯಿಂದ ಮಾಡಿದ ಹುಗ್ಗಿ ನೈವೇದ್ಯ ಮಾಡುವರು.

Advertisement

ಸಕಾಲದಲ್ಲಿ ಮಳೆ ಬೆಳೆ ಆಗಲಿ ಎಂದು ಪ್ರಾರ್ಥಿಸುವರು, ನಾಗರ ಪಂಚಮಿಯ ಅನಂತರ ನಾಗಪ್ಪನೊಟ್ಟಿಗೆ ಬಸವಣ್ಣನನ್ನು ಹೊಲದಲ್ಲಿ ಇಟ್ಟು ಬರುವರು. ಈತ್ತೀಚೆಗೆ ಮಾರ್ಕೆಟ್‌ನಲ್ಲಿ ನಿಂತ ಬಸವಣ್ಣ, ಕುಂತ ಬಸವಣ್ಣ, ಪ್ಲಾಸ್ಟರ್‌ ಆಫ್ ಪ್ಯಾರಿಸ್‌ನಲ್ಲಿ ಮಾಡಿದ್ದು, ಬಣ್ಣ ಹಾಕಿದ್ದು, ಹಾಕದೇ ಇರುವುದು ಇನ್ನು ಹೊಳೆಯುವ ಬಣ್ಣಗಳಿಂದ ಮಾಡಿದ ಬಸವಣ್ಣ/ಎತ್ತುಗಳು, ಹೀಗೆ ನಾನಾ ಬಣ್ಣದ ಬಸವಣ್ಣಗಳು ಖರೀದಿಗೆ ದೊರೆಯುತ್ತವೆ. ಪ್ರಸ್ತುತ ಈ ಆಚರಣೆಗಳು ಹಳ್ಳಿಗಳಿಗೆ ಮಾತ್ರ ಸೀಮಿತವಾದಂತಿದೆ. ಪಟ್ಟಣಗಳಲ್ಲಿ ಕೆಲವರು ಆಚರಿಸಿದರೂ, ಮಹಾ ನಗರಗಳ ಮಕ್ಕಳಿಗೆ ಈ ಹಬ್ಬಗಳ ಕುರಿತು ಮಾಹಿತಿಯೇ ಇರದಿರುವುದು ಬೇಜಾರಿನ ಸಂಗತಿ. ನಾವು ಈ ವರ್ಷದ ಮಣ್ಣೆತ್ತಿನ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿರುವುದು ಸಂತಸ ತಂದಿದೆ.

-ಲಕ್ಷ್ಮೀ ಬಾಗಲಕೋಟಿ

ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next