Advertisement

ಯೇನೆಕಲ್ಲಿನ ಜನಸ್ನೇಹಿ ಆರ್ಥಿಕ ಕೇಂದ್ರಕ್ಕೀಗ ಸ್ಥಳಾಂತರ ಭೀತಿ!

04:47 PM Jan 22, 2018 | |

ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಯೇನೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ ಸಿಂಡಿಕೇಟ್‌ ಬ್ಯಾಂಕ್‌ ಶಾಖೆಯನ್ನು ಸ್ಥಳಾಂತರಿಸುವ ನಿರ್ಧಾರವನ್ನು ಆಡಳಿತ ಮಂಡಳಿ ಕೈಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಜನಸ್ನೇಹಿ ಆರ್ಥಿಕ ಕೇಂದ್ರವೊಂದು ಸ್ಥಳಾಂತರದ ಭೀತಿ ಎದುರಿಸುತ್ತಿದೆ.

Advertisement

ಗ್ರಾಮೀಣ ಪ್ರದೇಶ ಯೇನೆಕಲ್ಲಿನಲ್ಲಿ 1984ರಲ್ಲಿ ಸಿಂಡಿಕೇಟ್‌ ಬ್ಯಾಂಕ್‌ ಶಾಖೆ ಆರಂಭವಾಗಿತ್ತು. ನಿರಂತರ 33 ವರ್ಷ ಇಲ್ಲಿ ಸ್ಥಳೀಯರಿಗೆ ಉತ್ತಮ ಸೇವೆಯನ್ನೂ ಒದಗಿಸಿದೆ. ಕೃಷಿ ಅವಲಂಬಿತರು ಸಹಿತ ಪರಿಸರದ 10400ಕ್ಕೂ ಹೆಚ್ಚು ಕುಟುಂಬಗಳ ಆರ್ಥಿಕ ವ್ಯವಹಾರಕ್ಕೆ ಇದರಿಂದ ಸಾಕಷ್ಟು ಅನುಕೂಲವಾಗುತ್ತಿತ್ತು. ಸರಕಾರದ ಹಲವು ಯೋಜನೆಗಳ ಫ‌ಲಾನುಭವಿಗಳೂ ಇಲ್ಲಿ ಗ್ರಾಹಕರಾಗಿದ್ದಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ನೋಂದಾಯಿತ ಕುಟುಂಬಗಳ ನಗದು ವ್ಯವಹಾರ ಮತ್ತು ಡಿಜಟಲೀಕರಣದ ಕೇಂದ್ರವಾಗಿ ಇದು ಕರ್ತವ್ಯ ನಿರ್ವಹಿಸುತ್ತಿದೆ.

ಈ ಶಾಖೆಯನ್ನು ಸ್ಥಳಾಂತರಿಸಲು ಬ್ಯಾಂಕ್‌ ಆಡಳಿತ ಮಂಡಳಿ ನಿರ್ಧರಿಸಿರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಲಭಿಸಿದ್ದು, ಅಸಮಾಧಾನ ವ್ಯಕ್ತಪಡಿಸಿದ್ದಾರೆ. 33 ವರ್ಷಗಳಿಂದ ಸೇವೆ ನೀಡುತ್ತಿರುವ ಶಾಖೆಯನ್ನು ಗ್ರಾಮದಲ್ಲೇ ಉಳಿಸಿಕೊಳ್ಳುವುದಕ್ಕಾಗಿ ಪ್ರಯತ್ನಿಸಲೂ ನಿರ್ಧರಿಸಿದ್ದಾರೆ.

ಗ್ರಾ.ಪಂ. ನಿರ್ಣಯ
ಸುಬ್ರಹ್ಮಣ್ಯ ಗ್ರಾ.ಪಂ. ವ್ಯಾಪ್ತಿಯ ಯೇನೆಕಲ್ಲು ಗ್ರಾಮದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ ಆರ್ಥಿಕ ಶಾಖೆಯನ್ನು ಬೇರೆ ಕಡೆಗೆ ಸ್ಥಳಾಂತರಿಸದಂತೆ ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂಬಂಧ ಬ್ಯಾಂಕ್‌ ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ ಗ್ರಾಮಸ್ಥರು ಮನವಿಯನ್ನೂ ಮಾಡಿದ್ದಾರೆ.

ಪ್ರಸ್ತಾವವಿದೆ, ಆದರೆ ಅಂತಿಮವಲ್ಲ
ಯೇನೆಕಲ್ಲಿನಲ್ಲಿ ಕಾರ್ಯಾಚರಿಸುತ್ತಿರುವ ಕಚೇರಿ ನಿರೀಕ್ಷಿತ ಆರ್ಥಿಕ ಚಟುವಟಿಕೆ ಹೊಂದಿರದ ಕಾರಣ ಪಕ್ಕದ ಸುಬ್ರಹ್ಮಣ್ಯ ನಗರಕ್ಕೆ ಸ್ಥಳಾಂತರಿಸುವ ಪ್ರಸ್ತಾವ ಇಲಾಖೆ ಮುಂದಿದೆ. ಈ ಕುರಿತು ಶಾಖೆಗೆ ಸುತ್ತೋಲೆ ಹೊರಡಿಸಲಾಗಿದೆ. ಆದರೆ, ಇದೇ ಅಂತಿಮವಲ್ಲ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ‘ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

Advertisement

ಗ್ರಾಮೀಣ ಭಾಗಕ್ಕೆ ಸರಕಾರಿ ಸವಲತ್ತುಗಳು ಬರುವುದೇ ವಿರಳ. ಇರುವ ಏಕೈಕ ರಾಷ್ಟ್ರೀಯ ಬ್ಯಾಂಕ್‌ ಸೌಕರ್ಯವನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಒಂದು ಬಾರಿ ನಾವು ಈಗ ಒಪ್ಪಿ ಸ್ಥಳಾಂತರಕ್ಕೆ ಅವಕಾಶ ಕೊಟ್ಟಲ್ಲಿ ಮತ್ತೆ ಈ ಸೇವೆಯನ್ನು ವಾಪಸ್‌ ಪಡೆಯಲು ಸಾಧ್ಯವಿಲ್ಲ ಎಂದಿರುವ ಗ್ರಾಮಸ್ಥರು, ಬ್ಯಾಂಕ್‌ ಶಾಖೆ ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.

ಕಿತ್ತುಕೊಂಡರೆ ಹೇಗೆ?
ಸರಕಾರ ಗ್ರಾಮೀಣ ಭಾಗಕ್ಕೆ ಡಿಜಿಟಲ್‌ ವ್ಯವಸ್ಥೆ ವಿಸ್ತರಿಸಲು ಹಲವು ಯೋಜನೆಗಳ ಘೋಷಣೆ ಮಾಡುತ್ತಿದೆ. ಈ ಮೂಲಕ ಗ್ರಾಮಾಭಿವೃದ್ಧಿ ಕನಸು ಕಾಣುತ್ತಿದೆ. ಮತ್ತೂಂದೆಡೆ ಗ್ರಾಮೀಣ ಭಾಗದಲ್ಲಿ ಕಾರ್ಯಾಚರಿಸುತ್ತಿರುವ ಜನಸ್ನೇಹಿ ವ್ಯವಸ್ಥೆಗಳಿಗೆ ಕತ್ತರಿ ಹಾಕುತ್ತಿದೆ. ಗ್ರಾಮೀಣ ಜನತೆಗೆ ಮತ್ತಷ್ಟು ಸವಲತ್ತು ನೀಡುವುದರ ಬದಲು ಇದ್ದುದನ್ನೇ ಕಿತ್ತುಕೊಂಡರೆ ಗ್ರಾಮೀಣಾಭಿವೃದ್ಧಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಸ್ಥಳೀಯರದ್ದು.

ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ
ಸುದೀರ್ಘ‌ ಅವಧಿ ಸೇವೆ ನೀಡುತ್ತಿದ್ದ ರಾಷ್ಟ್ರೀಯ ಬ್ಯಾಂಕ್‌ ಶಾಖೆಯನ್ನು ಬೇರೆಡೆಗೆ ಸ್ಥಳಾಂತರಿಸದಂತೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತೇವೆ. ಅದಕ್ಕೂ ಮನ್ನಣೆ ನೀಡದಿದ್ದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸುತ್ತೇವೆ.
ಭವಾನಿಶಂಕರ ಪೂಂಬಾಡಿ,
   ಗ್ರಾ.ಪಂ. ಸದಸ್ಯ, ಯೇನೆಕಲ್ಲು

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next