Advertisement

ಮಾಧ್ಯಮ ತಂಡದ ಪರಿಸರ ಪ್ರೇಮ

10:13 AM Jul 14, 2017 | Team Udayavani |

ಮಂಗಳೂರಿನ ಪ್ರಸ್‌ ಕ್ಲಬ್‌ ಮತ್ತು ವೃತ್ತಿನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಯಂದು ವಿಶಿಷ್ಟ ಮತ್ತು ವಿನೂತನವಾದ ಒಂದು ಮಾದರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಪತ್ರಿಕೆಗಳನ್ನು ಕತ್ತರಿಸಿ ಅಂಟಿಸಿ ಕೊಲಾಜ್‌ ಕಲಾಕೃತಿಯನ್ನಾಗಿ ಮಾಡಿ ಅದರಲ್ಲಿ ದಕ್ಷಿಣ ಭಾರತಕ್ಕೆ ಭದ್ರತಾ ಗೋಡೆಯಾಗಿರುವ ಪಶ್ಚಿಮ ಘಟ್ಟದ ಗಿರಿಕಣಿವೆ, ಕಾನನ, ಝರಿಗಳನ್ನು ರಚಿಸಿ ಪರಿಸರ ಸಂದೇಶವನ್ನು ಪಸರಿಸಲಾಯಿತು. ಪತ್ರಿಕೆಯ ಮಹತ್ವ ಮತ್ತು ಅಗತ್ಯ ಆ ಮೂಲಕ ಅಭಿವ್ಯಕ್ತಗೊಂಡು, ಪತ್ರಿಕೆಯು ಓದಿದ ಅನಂತರ ನಗಣ್ಯ ವಸ್ತುವಲ್ಲ; ಆ ಪೇಪರ್‌ ಹಾಳೆಗಳಿಗೂ ಜೀವ ತುಂಬಿ ಹಸಿರು ಪರಿಸರ ವನ್ನು ಶೋಭಿಸಬಹುದು ಎನ್ನುವ ಸಂದೇಶವು ಈ ಕೊಲಾಜ್‌ ಕಲಾಕೃತಿಯಲ್ಲಿ ಸ್ಪಷ್ಟವಾಗಿತ್ತು. 15 ಪತ್ರಿಕೆಗಳ ಕಪ್ಪು ಬಿಳುಪು ಮತ್ತು ಬಣ್ಣದ ಪುಟಗಳನ್ನು ಕಲಾಕೃತಿಯ ವಸ್ತು ವಿಚಾರಕ್ಕೆ ಅನುಗುಣವಾಗುವಂತೆ ಕತ್ತರಿಸಿ ಅಂಟಿಸಿ 16 ಅಡಿ ಅಗಲ, 3 ಅಡಿ ಎತ್ತರದ ಕಲಾಕೃತಿಯನ್ನು ರಚಿಸಲಾಗಿತ್ತು. ಪಶ್ಚಿಮ ಘಟ್ಟದ ಮೋಡಗಳಿಗೆ ಕಪ್ಪು ಬಿಳುಪು ಹಾಳೆಗಳನ್ನು ಕತ್ತರಿಸಿ ಜೋಡಿಸಿದರೆ; ಗಿರಿ, ಝರಿ, ಕಾನನ ಪ್ರದೇಶಗಳನ್ನು ಬಣ್ಣದ ಹಾಳೆಗಳ ಮೂಲಕ ವಿನ್ಯಾಸಗೊಳಿಸಲಾಗಿತ್ತು. ಹಸಿರು ಕಾನನ ಹಾಗೂ ಬೆಟ್ಟದಂಚಿನ ಹಾಸು ಹುಲ್ಲಿಗೆ ಹಳದಿ ಹಾಗೂ ಹಸಿರು ಬಣ್ಣಗಳನ್ನು ಜೋಡಿಸಿ ಕಣಿವೆ ಪ್ರದೇಶಗಳಿಗೆ ಕಂದು, ನೀಲಿ ಬಣ್ಣಗಳ ಪ್ರತಿಗಳನ್ನು ಅಂಟಿಸಿದುದರಿಂದ ಪಶ್ಚಿಮ ಘಟ್ಟದ ಅತೀ ಸೂಕ್ಷ್ಮ ಜೀವ ವೈವಿದ್ಯ ತಾಣಗಳು ಕಡು ತಿಳಿ ಬಣ್ಣಗಳ ಹೊಂದಾಣಿಕೆಯೊಂದಿಗೆ ಗೋಚರಿಸುತ್ತಿದ್ದವು.

Advertisement

ಕಲಾವಿದರಾದ ತಾರಾನಾಥ ಕೈರಂಗಳ, ಸುಧೀರ್‌ ಕಾವೂರು, ವಿಕ್ರಮ್‌ ಶೆಟ್ಟಿ, ಈರಣ್ಣ ತಿಪ್ಪಣ್ಣವರ್‌, ಶೈಲೇಶ್‌ ಕೋಟ್ಯಾನ್‌, ಪ್ರಿಯಾಂಕಾ ಈ ಕೊಲಾಜ್‌ ಕಲಾಕೃತಿಯನ್ನು ರಚಿಸಿದರು. ಕೊಲಾಜ್‌ನಲ್ಲಿ ವಿಶೇಷ ಪರಿಣತಿ ಹೊಂದಿರುವ ತಾರಾನಾಥ್‌ ಕೈರಂಗಳ ಅವರ “ಕೊಲಾಜ್‌ ಚಿತ್ರ ಪಯಣ’ ಎಂಬ ಶಾಲಾ ಮಕ್ಕಳ ಕೊಲಾಜ್‌ ಚಿತ್ರ ಪ್ರದರ್ಶನವನ್ನು ಇಲ್ಲಿ ಸ್ಮರಿಸಬಹುದಾಗಿದೆ. ಪ್ರಸ್‌ ಕ್ಲಬ್‌ ಹಾಗೂ ಮಂಗಳೂರಿನ ವೃತ್ತಿನಿರತ ಪತ್ರಕರ್ತರ ಸಂಘವು ಪತ್ರಿಕಾ ದಿನಾಚರಣೆಗೆ ಪೂರಕವಾಗುವಂತೆ ಹಾಗೂ ಪತ್ರಿಕೆಗಳ ಅಗತ್ಯವನ್ನು ಸಾರುವಂತೆ ಆಯೋಜಿಸಿದ್ದ ಈ ಕಾರ್ಯಕ್ರಮವು ಅರ್ಥಗರ್ಭಿತವಾಗಿತ್ತು. ಜತೆಗೆ ಕಾಗದವನ್ನು ಮರುಬಳಕೆ ಮಾಡುವಂತಹ, ನಿಸರ್ಗದ ಉಳಿವಿನ ಅಗತ್ಯವನ್ನು ಸಾರುವಂತಹ ಸಂದೇಶವೂ ಈ ಕೊಲಾಜ್‌ ಕಲಾಕೃತಿಯಲ್ಲಿ ಅಡಕವಾಗಿತ್ತು. ಹಳೆಯ ದಿನಪತ್ರಿಕೆಗಳಿಗೆ ಹೊಸಜೀವ ನೀಡುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿದೆ. 

ದಿನೇಶ್‌ ಹೊಳ್ಳ

Advertisement

Udayavani is now on Telegram. Click here to join our channel and stay updated with the latest news.

Next