Advertisement

ಸಾವಯವ ಬೇಸಾಯ ಸಮಗ್ರ ಆದಾಯ

02:26 PM Jan 15, 2018 | |

ಬಹುಬೆಳೆಗಳನ್ನು ಬೆಳೆದರೆ, ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿದರೆ, ಪ್ರತಿ ತಿಂಗಳೂ ಸಾಫ್ಟ್ವೇರ್‌ ಎಂಜಿನಿಯರ್‌ಗಳಷ್ಟೇ ಸಂಪಾದನೆ ಮಾಡಬಹುದು ಎಂಬುದಕ್ಕೆ ಇಲ್ಲಿ ಸಾಕ್ಷಿಯಿದೆ…

Advertisement

  ಒಂದೇ ಬೆಳೆಯನ್ನು ಬೆಳೆಯುವ ಬದಲು ಬಹು ಬೆಳೆಗಳನ್ನು ಬೆಳೆದರೆ ಕೃಷಿಯಲ್ಲೂ ತಿಂಗಳಿಗೆ ಸಾಫ್ಟ್ವೇರ್‌ ಇಂಜಿನಿಯರ್‌ಗಳು ಪಡೆಯುವಷ್ಟೇ ಆದಾಯವನ್ನು ಗಳಿಸಬಹುದು. ಈ ಮಾತಿಗೆ ಚಿಕ್ಕಮಗಳೂರು ಜಿಲ್ಲೆಯ ಎನ್‌. ಆರ್‌. ಪುರ ತಾಲೂಕಿನ ಹಾತೂರು ಗ್ರಾಮದ ರಾಘವೇಂದ್ರರೇ ಉದಾಹರಣೆ.

   ಇವರದು ಐದು ಎಕರೆ ಜಮೀನು. ತಂದೆ ಕುಟ್ಟಿ ಪೂಜಾರಿಯವರೊಂದಿಗೆ ಸೇರಿ ಅಡಿಕೆ, ಕಾಫಿ, ತೆಂಗನ್ನು ಬೆಳೆಯುತ್ತಿದ್ದರು. ಇವುಗಳಿಂದ ವರ್ಷದಲ್ಲೊಂದು ಬಾರಿಯಷ್ಟೇ ಆದಾಯ ಕೈಸೇರುತ್ತಿತ್ತು. ಅಡಿಕೆಗೆ ಬೇಡಿಕೆಯಿದ್ದಾಗ ತೆಂಗನ್ನು ಕೇಳುವವರೆ ಇರುತ್ತಿರಲಿಲ್ಲ. ಒಂದು ವೇಳೆ ಅವೆರಡಕ್ಕೂ ಉತ್ತಮ ಬೆಲೆ ದೊರೆತರೆ ಕಾಫಿ ಯಾರಿಗೂ ಬೇಡವಾಗಿರುತ್ತಿತ್ತು ! ಇದು ಪ್ರತಿ ವರ್ಷವೂ ಇವರು ಎದುರಿಸುತ್ತಿದ್ದ ಸಮಸ್ಯೆ. ಬಹು ಬೆಳೆಗಳನ್ನು ಬೆಳೆಯಬೇಕೆಂಬ ಬಯಕೆಯಿದ್ದರೂ ಅವುಗಳ ಕುರಿತು ಮಾಹಿತಿ ಇರಲಿಲ್ಲ. 2011ರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಘಗಳು ಆರಂಭವಾದವು. ಇವರು “ಸಿದ್ಧೇಶ್ವರ’ ಪ್ರಗತಿಬಂಧು ತಂಡವನ್ನು ಸೇರಿಕೊಂಡರು. ಸಮಗ್ರ ಕೃಷಿಗಳ ಬಗ್ಗೆ ಮಾಹಿತಿ ಪಡೆದು ಅವುಗಳನ್ನು ಸಾವಯವದಲ್ಲಿ ಮಾಡುವ ನಿರ್ಧಾರಕ್ಕೆ ಬಂದರು. ದಿನಬಳಕೆಯ ಪ್ರತಿಯೊಂದನ್ನೂ ಮನೆಯಲ್ಲೇ ಬೆಳೆಯಬೇಕೆಂಬ ನಿಟ್ಟಿನಲ್ಲಿ ಕೃಷಿ ಮಾಡದೆ ಹಾಗೇ ಬಿಟ್ಟಿದ್ದ ಜಮೀನಿನಲ್ಲಿ ಶ್ರೀ ಪದ್ಧತಿ ಭತ್ತವನ್ನು ಬೆಳೆದರು. ಸಾಮಾನ್ಯ ತಳಿಬಿತ್ತಿದಾಗ ಹದಿನಾರು ಕ್ವಿಂಟಾಲ್‌ ದೊರೆಯುತ್ತಿದ್ದ ಇಳುವರಿ, ಶ್ರೀ ಪದ್ಧತಿಯಿಂದಾಗಿ ಇಪ್ಪತ್ತ ಮೂರು ಕ್ವಿಂಟಾಲ್‌ ದೊರೆಯಿತು. ಕೃಷಿಯಲ್ಲಿ ಹೆಚ್ಚಿನ ಅರಿವು ಪಡೆಯುವ ಆಸೆಯಿಂದ ಕೇರಳ, ಬೈಲಹೊಂಗಲ, ಧಾರವಾಡದ ರೈತರ ಮನೆಗಳಿಗೆ ಅಧ್ಯಯನ ಪ್ರವಾಸ ಕೈಗೊಂಡರು. ಉಜಿರೆಯ ರತ್ನಮಾನಸದಲ್ಲಿ ಮಿಶ್ರ ತರಕಾರಿ ಬೆಳೆಯುವುದನ್ನು ಕಂಡು ಟೊಮೆಟೊ, ಶುಂಠಿ, ಸುವರ್ಣಗಡ್ಡೆ, ಸೌತೆ, ಮೆಣಸು, ಅರಶಿನ, ಕ್ಯಾರೆಟ್‌, ಮೂಲಂಗಿ, ಆಲೂಗಡ್ಡೆ, ಬೀನ್ಸ್‌, ಅರಿವೆಸೊಪ್ಪು, ಈರುಳ್ಳಿ, ಕೊತ್ತಂಬರಿಸೊಪ್ಪು, ಕ್ಯಾಬೇಜ್‌ ಹೀಗೆ ಎಲ್ಲಾ ತರಕಾರಿಗಳನ್ನು ಬೆಳೆದರು. ಗೊಬ್ಬರಕ್ಕಾಗಿ ಅಂಗಡಿಗೆ ತೆರಳುವ ಬದಲು ಹೈನುಗಾರಿಕೆಯನ್ನು ಆರಂಭಿಸಿದರು.  ದನಗಳಿಗೆ ಮೇವಿಗಾಗಿ ಅಜೋಳ, ಹಸಿರುಲ್ಲು, ಡಯಾಂಚ (ಹಸಿರೆಲೆಗೊಬ್ಬರ)ವನ್ನು ಬೆಳೆದರು. ಕೇವಲ ಕೊಟ್ಟಿಗೆ ಗೊಬ್ಬರವನ್ನು ನೀಡುವ ಬದಲು ಎಂಟು ಎರೆಹುಳು ತೊಟ್ಟಿಯನ್ನು, ಸಾವಯವ ಜೀವಾಮೃತ, ಕೋಳಿಗೊಬ್ಬರ, ಕುರಿಗೊಬ್ಬರವನ್ನು ತಯಾರಿಸಿದರು.

   ಇವರ ತೋಟದಲ್ಲಿ ಈಗ ಎಲ್ಲವೂ ಇದೆ. ಅಂಗಡಿಯಿಂದ ಧಾನ್ಯವೊಂದನ್ನು ಹೊರತುಪಡಿಸಿ ಬೇರ್ಯಾವುದನ್ನೂ ಇವರು ಖರೀದಿಸುವುದಿಲ್ಲ. ತರಕಾರಿಗಳು ಮನೆಬಳಕೆಯಾಗಿ ಉಳಿಯುತ್ತವೆ. ಅವುಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ಕಳೆದ ವರ್ಷ ಒಟ್ಟು ಮೂರು ಲಕ್ಷ ರೂಪಾಯಿ ಉಳಿತಾಯವಾಗಿದೆಯಂತೆ. 

   ಗೊಬ್ಬರ ನೀಡುವ, ನೀರುಹಾಯಿಸುವ, ಕಟಾವು ಮಾಡುವ ಕೆಲಸಗಳಲ್ಲಿ ಮಗ, ತಂದೆ, ತಾಯಿ, ಮಕ್ಕಳು ಜೊತೆ ಸೇರಿ ದುಡಿಯುತ್ತಾರೆ. ಬಹುಬೆಳೆಗಳಿಂದ ಬಂದ ಆದಾಯದಿಂದ ಸುಂದರ ಮನೆಯೊಂದನ್ನು ನಿರ್ಮಿಸಿದ್ದಾರೆ. ಕೂಲಿಯಾಳುಗಳ ಸಮಸ್ಯೆಗೆ ಮುಕ್ತಿ ಎಂಬಂತೆ ಟಿಲ್ಲರ್‌, ಕಳೆತೆಗೆಯುವ, ಔಷಧಿ ಸಿಂಪಡಿಸುವ ಯಂತ್ರಗಳನ್ನು ಖರೀದಿಸಿದ್ದಾರೆ. ನೀರಿಗಾಗಿ ಬೋರ್‌ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಕೃಷಿಗೆ ಪೂರಕವಾಗಿ ಕೋಳಿಗಳನ್ನು ಸಾಕಿಕೊಂಡಿದ್ದಾರೆ. ಗೋಬರ್‌ಗ್ಯಾಸ್‌, ಸೋಲಾರ್‌ ಹೀಗೆ ಎಲ್ಲವೂ ಇಲ್ಲಿವೆ. ವರ್ಷದ ಎಲ್ಲಾ ಮಾಸದಲ್ಲೂ ಒಂದಿಲ್ಲೊಂದು ತರಕಾರಿಗಳ ನಾಟಿ ಆಗುತ್ತಿರುತ್ತದೆ. ಸಾವಯವ ಪದ್ಧತಿ ಕೃಷಿ ಅನುಸರಿಸುತ್ತಿರುವುದರಿಂದ ರೋಗಗಳು ಬಾಧಿಸುತ್ತಿಲ್ಲ. ಒಣಗಿದ ತರಕಾರಿ ಗಿಡಗಳು, ಎಲೆಗಳನ್ನು ಸಗಣಿಯೊಂದಿಗೆ ಸೇರಿಸಿ ಗೊಬ್ಬರ ತಯಾರಿಸಲಾಗುತ್ತದೆ. ಇಲ್ಲಿನ ಹೆಚ್ಚಿನ ಕೆಲಸಗಳು ಯೋಜನೆಯ ಸಂಘದ ಶ್ರಮನಿಮಯದ ಮೂಲಕ ನಡೆಯುತ್ತಿರುವುದರಿಂದ ಖರ್ಚು ಕೂಡಾ ತುಂಬಾ ಕಡಿಮೆ.

Advertisement

 ಮಾಹಿತಿಗೆ -9449968205. (ರಾತ್ರಿ 6 ರಿಂದ 7 ಗಂಟೆಯವರೆಗೆ).

ಚಂದ್ರಹಾಸ ಚಾರ್ಮಾಡಿ

Advertisement

Udayavani is now on Telegram. Click here to join our channel and stay updated with the latest news.

Next