Advertisement

ಮೂರ್ತಿವೆತ್ತ ಶಿವ; ಚಾರಿತ್ರಿಕ ಶಿವದೇಗುಲಗಳ ಕತೆ

06:09 PM Feb 20, 2020 | Lakshmi GovindaRaj |

ಕರ್ನಾಟಕದ ವಾಸ್ತುಶಿಲ್ಪದ ಕೊಡುಗೆಯಲ್ಲಿ ಶೈವ ದೇಗುಲಗಳ ಪಾತ್ರ ಗಣನೀಯ. ಕದಂಬರ ಕಾಲದಿಂದಲೂ ಹಲವು ಶೈವ ಗುಡಿಗಳು ನಮ್ಮ ನಾಡಿನಲ್ಲಿ ನಿರ್ಮಾಣಗೊಂಡಿದ್ದು, ಅವುಗಳಲ್ಲಿ ಶಿವನನ್ನು ಲಿಂಗ ರೂಪದಲ್ಲಿ ಆರಾಧಿಸುವುದೇ ಹೆಚ್ಚು. ಹೊರಭಿತ್ತಿಗಳಲ್ಲಿ ಮಾತ್ರವೇ ಶಿವನ ಶಿಲ್ಪಗಳನ್ನು ಅಲಂಕಾರಕ್ಕಾಗಿ ಕೆತ್ತಲಾಗಿದೆ. ಆದರೆ, ಎಲ್ಲೋ ಅಪರೂಪ ಎನ್ನುವಂತೆ ಗರ್ಭಗುಡಿಯಲ್ಲಿಯೇ ಮೂರ್ತಿವೆತ್ತ ಶಿವ ನಿಂತಿದ್ದಾನೆ. ಶಿವರಾತ್ರಿ (ಫೆ.21) ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ, ಅಂಥ ಮೂರ್ತಿಗಳಿರುವ ಚಾರಿತ್ರಿಕ ಶಿವದೇಗುಲಗಳ ಕತೆ ಇಲ್ಲಿದೆ…

Advertisement

1. ಕನವಳ್ಳಿ ನಟರಾಜ, ಹಾವೇರಿ: ಮೂಲತಃ ರಾಷ್ಟ್ರಕೂಟರ ಕಾಲದ ಮೂರ್ತಿಗೆ ತದ ನಂತರ ಕಾಲದಲ್ಲಿ ದೇಗುಲ ನಿರ್ಮಾಣವಾಗಿದೆ. ಗರ್ಭಗುಡಿಯಲ್ಲಿ ಶಿವನ ತಾಂಡವೇಶ್ವರ ಮೂರ್ತಿ ಸ್ವರೂಪವಾದ ನಟರಾಜನ‌ 7 ಅಡಿ ಎತ್ತರದ ಸುಂದರ ವಿಗ್ರಹವಿದೆ. ಮೂರ್ತಿ ಅಪಸ್ಮಾರ ಪುರುಷನ ಮೇಲೆ ನಿಂತಿರುವಂತೆ ಕೆತ್ತಲಾಗಿದ್ದು, 8 ಕೈಗಳಿವೆ. ತ್ರಿಶೂಲ, ಬಾಣ, ಕತ್ತಿ, ಅಕ್ಷರಮಾಲ, ಡಮರುಗ, ಬಾಣ, ಗುರಾಣಿ ಹಾಗೂ ಕಟ್ಟಾಂಗಗಳನ್ನು ಆತ ಹಿಡಿದ್ದಿದಾನೆ. ಮೂರ್ತಿಯ ಪ್ರಭಾವಳಿಯಲ್ಲಿ ಅಷ್ಟದಿಕಾಲಕರ ಕೆತ್ತನೆಗಳಿವೆ. ಕಿವಿಯಲ್ಲಿನ ಕುಂಡಲ, ಕೊರಳಲ್ಲಿನ ಕಂಠೀಹಾರ, ಉಪವೀತ, ಯಜ್ಞೊàಪವೀತ, ಕಾಲಿನ ಕಡಗಗಳು ಮೂರ್ತಿಗೆ ಭೂಷಣ ತಂದಿವೆ.

2. ಗೌರಿಪುರ ಗೌರಿಶಂಕರ, ಚಿತ್ರದುರ್ಗ: ಕರ್ನಾಟಕದಲ್ಲಿ ದೊರೆತ ಅಪರೂಪದ ಶಿವನ ಶಿಲ್ಪಗಳಲ್ಲಿ ಇದೂ ಒಂದು. ಚಳ್ಳಕೆರೆ ಸಮೀಪದ ಪರಶುರಾಮಪುರದ ಬಳಿ ಇರುವ ಈ ದೇವಾಲಯದ ಸ್ಥಳದಲ್ಲಿ ಪಾಂಡವರು ಅಜ್ಞಾತವಾಸದ ಸಂದರ್ಭದಲ್ಲಿ ಗಜಗೌರಿ ವ್ರತ ಆಚರಿಸಿದ್ದರು ಎನ್ನಲಾಗುತ್ತದೆ. 16ನೇ ಶತಮಾನದಲ್ಲಿ ನಿರ್ಮಾಣವಾದ ಈ ದೇಗುಲದ ಗರ್ಭಗುಡಿಯಲ್ಲಿ ಸುಮಾರು 5 ಆಡಿ ಎತ್ತರದ ಸುಂದರ ಗೌರಿಶಂಕರ ಮೂರ್ತಿ ಇದೆ. ಪಾರ್ವತಿಯನ್ನು ತನ್ನ ಕಾಲಿನ ಮೇಲೆ ಕೂರಿಸಿಕೊಂಡಿರುವ ಶಿವ, ಇಲ್ಲಿ ಚತುಭುìಜ. ಕೊಡಲಿ, ಚಿಗರೆ ಹಿಡಿದಿದ್ದು, ಕೆಳಭಾಗದ ಬಲಗೈ ಅಭಯ ಹಸ್ತವಾಗಿಸಿ, ಇನ್ನೊಂದು ಕೈನಲ್ಲಿ ಪಾರ್ವತಿಯನ್ನು ಬಳಸಿದ್ದಾನೆ.

3. ಕಳ್ಳಿಹಾಳ್‌ ಸಹದೇವೇಶ್ವರ, ಹಾವೇರಿ: ಕನವಳ್ಳಿ ದೇವಾಲಯದಿಂದ ಅನತಿ ದೂರದಲ್ಲಿ ಈ ದೇವಾಲಯವಿದೆ. ಇಲ್ಲಿಗೆ ಕಲ್ಯಾಣ ಚಾಲುಕ್ಯ ಜಯಸಿಂಹನ ಕಾಲದಲ್ಲಿ ಆತನ ಪತ್ನಿ ಭೂ ದತ್ತಿ ನೀಡಿದ ಉಲ್ಲೇಖ ಇದ್ದು, ಆತನ ತಮ್ಮ ಇದನ್ನು ಪೂರ್ಣಗೊಳಿಸಿದರು. ಇಲ್ಲಿನ ಗರ್ಭಗುಡಿಯಲ್ಲಿ ನಿಂತ ಭಂಗಿಯಲ್ಲಿರುವ ಶಿವ- ಪಾರ್ವತಿಯರ ಶಿಲ್ಪ ಗಮನ ಸೆಳೆಯುತ್ತದೆ.

4. ಲಕ್ಷ್ಮೇಶ್ವರ ಸೋಮೇಶ್ವರ, ಗದಗ: 11ನೇ ಶತಮಾನದಲ್ಲಿ ಲಕ್ಷರಸ ಈ ದೇಗುಲವನ್ನು ನಿರ್ಮಿಸಿದ. ಗರ್ಭಗುಡಿಯಲ್ಲಿ ನಂದಿಯ ಮೇಲೆ ಕುಳಿತ ಶಿವ- ಪಾರ್ವತಿಯ ಮೂರ್ತಿ ಇದೆ. ಬಾಗಿಲುವಾಡ ಸುಂದರವಾಗಿ ಅಲಂಕೃತವಾಗಿದ್ದು, ಜಾಲಾಂದ್ರಗಳಿವೆ. ಮಾಘ ಶುದ್ಧ ಬಹುಳದಂದು ಇಲ್ಲಿ ಶಿವಲಿಂಗದ ಮೇಲೆ ಸೂರ್ಯನ ಕಿರಣ ಬೀಳುತ್ತದೆ. ಈ ದೇವಾಲಯದ ಸಂಕೀರ್ಣದಲ್ಲಿ ಬಾಳೇಶ್ವರ ಮತ್ತು ಲಕ್ಷ್ಮೇಶ್ವರ ದೇವಾಲಯಗಳಿವೆ. ಗದಗದಿಂದ 30 ಕಿ.ಮೀ. ದೂರದಲ್ಲಿದೆ.

Advertisement

5. ಗುಡೇಕೋಟೆ ಶಿವ- ಪಾರ್ವತಿ, ಬಳ್ಳಾರಿ: ಪಾಳೇಗಾರರ ಕಾಲದಲ್ಲಿ ನಿರ್ಮಾಣವಾದ ಈ ದೇಗುಲವನ್ನು ಬಾಣಾಸುರ ನಿರ್ಮಿಸಿದ. ಶಿವನ ಕೈಯಲ್ಲಿ ತ್ರಿಶೂಲ ಇದ್ದು, ಪಾರ್ವತಿ- ಶಿವ ಪರಸ್ಪರ ಬಳಸಿರುವಂತೆ ಇದೆ. ದೇವಾಲಯದಲ್ಲಿ ಗರ್ಭಗುಡಿ, ಅಂತರಾಳ, ಸಭಾಮಂಟಪ ಮತ್ತು ಮುಖಮಂಟಪ ಇದೆ. ಎದುರಿನಲ್ಲಿ ನಂದಿ ಸೆಳೆಯುತ್ತಾನೆ. ಇಲ್ಲಿನ ಗಣೇಶ ಮತ್ತು ದುರ್ಗಮ್ಮನ ವಿಗ್ರಹಗಳೂ ಅಷ್ಟೇ ಸುಂದರ. ಈ ದೇವಾಲಯವು ಕೂಡ್ಲಿಗಿ ತಾಲೂಕಿನಲ್ಲಿದ್ದು, ಮೊಳಕಾಲ್ಮೂರಿಗೆ ಸಮೀಪವಿದೆ.

6. ಚಂದ್ರಮೌಳೇಶ್ವರ, ಚನ್ನರಾಯಪಟ್ಟಣ: 1673ರಲ್ಲಿ ಈ ದೇವಾಲಯವನ್ನು ಚನ್ನರಾಯಪಟ್ಟಣದ ಪಾಳೇಗಾರನಾದ ದೊಡ್ಡಯ್ಯನ ಪುತ್ರ ಕುಮಾರ ಬಸವಯ್ಯ ನಿರ್ಮಿಸಿದ್ದಾರೆ. ಇಲ್ಲಿ ಶಿವನ ಮೂರ್ತಿಯನ್ನು (ಚಂದ್ರಶೇಖರ ಮೂರ್ತಿಯ ಸ್ವರೂಪ) ಪೂಜಿಸಿವುದು ವಿಶೇಷ. ಶಿವನ 25 ಲೀಲಾ ಮೂರ್ತಿಗಳಲ್ಲಿ ಇದು ಒಂದು. ಮಾಘ ಶುದ್ದ ಹುಣ್ಣಿಮೆಯಂದು ಇಲ್ಲಿ ಬ್ರಹ್ಮರಥೋತ್ಸವ ನಡೆಯುವುದು ವಿಷೇಷ. ಶಿವನ ಪಕ್ಕದಲ್ಲಿ ಬೇಡರ ಕಣ್ಣಪ್ಪನ ಮೂರ್ತಿ ಇದೆ. ಈ ದೇವಾಲಯ ಚನ್ನರಾಯಪಟ್ಟಣದಲ್ಲಿದೆ.

*ಶ್ರೀನಿವಾಸಮೂರ್ತಿ ಎನ್.ಎಸ್

Advertisement

Udayavani is now on Telegram. Click here to join our channel and stay updated with the latest news.

Next