Advertisement

ಬಿಎಸ್‌ವೈ ವಿರುದ್ಧ ಷಡ್ಯಂತ್ರ ಯತ್ನಕ್ಕೆ ಕಿಡಿ

11:02 PM Oct 22, 2019 | Team Udayavani |

ಹುಬ್ಬಳ್ಳಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ನಡೆಸಿದರೆ ಅಥವಾ ಅವರನ್ನು ಕೆಳಗಿಳಿಸಲು ಯತ್ನಗಳು ನಡೆದರೆ ವೀರಶೈವ-ಲಿಂಗಾಯತ ಸಮಾಜ ಸುಮ್ಮನಿರದು… ಹೀಗೆಂದು ಸಮಾಜದ ಮಠಾಧೀಶರು ಒಕ್ಕೊರಲಿನ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.

Advertisement

ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿಯೇ ಷಡ್ಯಂತ್ರ ನಡೆಯುತ್ತಿದ್ದು, ಡಿಸೆಂಬರ್‌ ನಂತರದಲ್ಲಿ ಮಹತ್ತರ ಬದಲಾವಣೆಗೆ ಯತ್ನಗಳು ನಡೆಯಲಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಶಿವಯೋಗ ಮಂದಿರದಲ್ಲಿ ಇತ್ತೀಚೆಗೆ ನಡೆದ ಗೌಪ್ಯ ಸಭೆಯಲ್ಲಿ ಮಠಾಧೀಶರು, ಯಡಿಯೂರಪ್ಪ ವಿರುದ್ಧ ನಡೆಯುತ್ತಿದೆ ಎನ್ನಲಾಗುವ ಷಡ್ಯಂತ್ರ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಹಿಡಿಯುವಂತಾಗುವ ನಿಟ್ಟಿನಲ್ಲಿ ವೀರಶೈವ-ಲಿಂಗಾಯತ ಸಮಾಜದ ಪಾತ್ರ, ಕೊಡುಗೆ ಅಪಾರವಾಗಿದೆ. ಇದು ಸಾಧ್ಯವಾಗಿರುವುದು ಯಡಿಯೂರಪ್ಪ ಅವರ ಕಾರಣ ದಿಂದ. ಸಮುದಾಯ ಅವರನ್ನು ಸಮಾಜದ ನಾಯಕ ಎಂದು ಒಪ್ಪಿಕೊಂಡಿದೆ. ಹೀಗಾಗಿ ಅವರ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದರೆ ಸಮಾಜ ಸುಮ್ಮನೆ ಕೂಡುವುದಿಲ್ಲ. ಅಗತ್ಯ ಬಿದ್ದರೆ ಬೀದಿಗಿಳಿಯಲು ಸಹ ಸಿದ್ಧ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು ಎಂದು ಹೇಳಲಾಗಿದೆ.

ಶ್ರೀಶೈಲ ಜಗದ್ಗುರುಗಳು, ಶಿವಯೋಗ ಮಂದಿರದ ಅಧ್ಯಕ್ಷರು ಸೇರಿ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಮಠಾಧೀಶರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ವೀರಶೈವ-ಲಿಂಗಾಯತ ಸಮಾಜದ ಅಭಿವೃದ್ಧಿ ವಿಚಾರದ ಜತೆಗೆ, ಯಡಿ ಯೂ ರಪ್ಪ ವಿರುದ್ಧ ನಡೆ ಯುತ್ತಿದೆ ಎನ್ನಲಾಗುವ ಷಡ್ಯಂತ್ರ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಿಗೆ ಬಿಜೆಪಿ ಶಿಸ್ತು ಸಮಿತಿ ನೋಟಿಸ್‌ ನೀಡಿದ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು ಎಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಕಂಡು ಬಂದ ಪ್ರವಾಹ ಸ್ಥಿತಿಯಿಂದ ತೊಂದರೆಗೊಳಗಾದ ಜನರ ನೋವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೇಂದ್ರದಿಂದ ಹೆಚ್ಚಿನ ಪರಿಹಾರ ತರುವ ವಿಷಯವಾಗಿ ರಾಜ್ಯ ಪ್ರತಿನಿಧಿಸುವ ಸಂಸದರು-ಸಚಿವರ ಬಗ್ಗೆ ಯತ್ನಾಳ ಅವರು ಹೇಳಿಕೆ ನೀಡಿದ್ದಾರೆ. ಇದು ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಹೇಳಿಕೆ ನೀಡಿದ್ದಾಗಿದ್ದು, ಇದಕ್ಕಾಗಿ ಕಾರಣ ಕೇಳಿ ಅವರಿಗೆ ನೋಟಿಸ್‌ ನೀಡಿದ್ದು ಸರಿಯಲ್ಲ. ಸಮಾಜದ ಮತ್ತೂಬ್ಬ ನಾಯಕನನ್ನು ಹತ್ತಿಕ್ಕುವ ಯತ್ನವೂ ಇದಾಗಿದೆ. ಇಂತಹ ವಿಷಯಗಳ ಕುರಿತು ಮಠಗಳು ಸಮಾಜದವರಿಗೆ ಸಂಘಟಿತ ಧ್ವನಿ ಮೊಳಗಿಸಲು ಕರೆ ನೀಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.

Advertisement

ಹೈಕಮಾಂಡ್‌ ಹಿಂದೇಟು?: ಉಪಚುನಾವಣೆ ಬಳಿಕ ಹೆಚ್ಚು ಸ್ಥಾನ ಪಡೆದು ಪಕ್ಷ ಸ್ಪಷ್ಟ ಬಹುಮತ ಗಳಿಸಿದರೆ ರಾಜ್ಯ ಸರಕಾರದಲ್ಲಿ ಮಹತ್ವದ ಬದಲಾವಣೆಗೆ ಚಿಂತನೆಗಳು ಬಿಜೆಪಿ ವಲಯದಲ್ಲಿ ಚರ್ಚಿತವಾಗುತ್ತಿವೆ. ಮಹಾರಾಷ್ಟ್ರದಲ್ಲಿ ಮರಾಠೇತರ, ರಾಜಸ್ಥಾನದಲ್ಲಿ ಪಟೇಲ್‌ರಲ್ಲದ ಹಾಗೂ ಜಾರ್ಖಂಡ್‌ನ‌ಲ್ಲಿ ಆದಿವಾಸಿ ಅಲ್ಲದವರನ್ನು..ಹೀಗೆ ಸಂಬಂಧಪಟ್ಟ ರಾಜ್ಯಗಳ ಪ್ರಮುಖ ಸಮುದಾಯಕ್ಕೆ ಸೇರದವರನ್ನು ಮುಖ್ಯಮಂತ್ರಿ ಹಾಗೂ ಪ್ರಮುಖ ಸ್ಥಾನದಲ್ಲಿ ಕೂಡಿಸಿ ಬಿಜೆಪಿ ಯಶಸ್ವಿಯಾಗಿದೆ. ಕರ್ನಾಟಕದಲ್ಲೂ ಅಂತಹ ಪ್ರಯೋಗವನ್ನು ಏಕೆ ಮಾಡಬಾರದು ಎಂಬ ಚಿಂತನೆಯಲ್ಲಿದೆ ಎಂದು ಹೇಳಲಾಗುತ್ತಿದೆ.

ನಾಯಕತ್ವ ಬದಲಾವಣೆ ಸುಲಭವಲ್ಲ: ಇತರ ರಾಜ್ಯಗಳ ರಾಜಕೀಯ ಸ್ಥಿತಿಗೂ, ಕರ್ನಾಟಕದ ರಾಜಕೀಯ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಕರ್ನಾಟಕದಲ್ಲಿ ವೀರಶೈವ-ಲಿಂಗಾಯತ ಸಮಾಜ ಬಿಜೆಪಿಯನ್ನು ಬೆಂಬಲಿಸುತ್ತಿರುವುದು ಯಡಿಯೂರಪ್ಪ ಕಾರಣಕ್ಕೆ. ಅವರನ್ನು ಕಡೆಗಣಿಸಿದರೆ ಸಮುದಾಯ ಪಕ್ಷದ ವಿರುದ್ಧ ತಿರುಗಿ ಬೀಳಬಹುದು ಎಂಬ ಆತಂಕ ಬಿಜೆಪಿ ಹೈಕಮಾಂಡ್‌ನ್ನು ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಈಗಿನ ಹಂತದಲ್ಲಿ ನಾಯಕತ್ವ ಬದಲಾವಣೆ ತಿಳಿದಷ್ಟು ಸುಲಭವಂತೂ ಅಲ್ಲವೇ ಅಲ್ಲ ಎಂಬುದು ಪಕ್ಷದ ಬಹುತೇಕರ ಅಭಿಪ್ರಾಯ.

* ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next