Advertisement

ಆರ್ಥಿಕ ಹಿಂಜರಿತ ತುರ್ತು ಕ್ರಮ ಅಗತ್ಯ

01:43 AM Aug 16, 2019 | mahesh |

ದೇಶದ ವಾಹನ ಉದ್ಯಮ ತೀವ್ರ ಬಿಕ್ಕಟ್ಟಿನಲ್ಲಿದೆ. ಭಾರತೀಯ ವಾಹನ ಉತ್ಪಾದಕರ ಒಕ್ಕೂಟ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳು ಈ ಉದ್ಯಮದ ನಿರಾಶಾದಾಯಕ ಚಿತ್ರಣವನ್ನು ತೆರೆದಿಟ್ಟಿದೆ. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಜುಲೈ ತಿಂಗಳಲ್ಲಿ ವಾಹನಗಳ ಮಾರಾಟ ಶೇ. 35 ಕುಸಿತವಾಗಿದೆ. ಕಳೆದೆರಡು ದಶಕಗಳಲ್ಲಿ ಕಂಡಿರುವ ಮಹಾಕುಸಿತವಿದು. 2000ನೇ ಇಸವಿಯಲ್ಲೂ ವಾಹನ ಉದ್ಯಮ ಇದೇ ರೀತಿಯ ಬಿಕ್ಕಟ್ಟಿಗೆ ಸಿಲುಕಿತ್ತು. ಆದರೆ ಆ ಸಂದರ್ಭದಲ್ಲಿ ಸರಕಾರ ಜಾರಿಗೆ ತಂದ ಕೆಲವು ಕ್ಷಿಪ್ರ ಕ್ರಮಗಳಿಂದ ಚೇತರಿಸಿಕೊಂಡಿದ್ದ ಉದ್ಯಮ ಅನಂತರ ಜಾಗತಿಕ ಆರ್ಥಿಕ ಕುಸಿತದ ಸಂದರ್ಭದಲ್ಲೂ ಹೆಚ್ಚಿನ ಹಾನಿಗೊಳಗಾಗಿರಲಿಲ್ಲ. ಆದರೆ ಈ ಸಲ ಪರಿಸ್ಥಿತಿ ಇದಕ್ಕಿಂತಲೂ ಭೀಕರವಾಗಿದೆ. ವಾಹನ ಉದ್ಯಮವೊಂದರಲ್ಲೇ ಸುಮಾರು 2.30 ಲಕ್ಷ ಉದ್ಯೋಗಗಳು ನಷ್ಟವಾಗಿವೆ. ಮಾರುತಿ ಸೇರಿದಂತೆ ಕೆಲವು ಕಂಪೆನಿಗಳು ಕೆಲವು ನಿರ್ದಿಷ್ಟ ಮೋಡೆಲ್ ಕಾರುಗಳ ಉತ್ಪಾದನೆಯನ್ನು ರದ್ದುಗೊಳಿಸಿವೆ. ಲೋಎಂಡ್‌ ಹಾಗೂ ಹೈಎಂಡ್‌ ಹೀಗೆ ಎರಡೂ ಮಾದರಿಯ ಕಾರುಗಳ ಮಾರಾಟವೂ ಕುಸಿದಿದೆ ಎನ್ನುತ್ತಿದೆ ಒಕ್ಕೂಟ ವರದಿ.

Advertisement

ಕೃಷಿ ಮತ್ತು ರಿಯಲ್ ಎಸ್ಟೇಟ್ ಬಳಿಕ ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಕೊಡುವುದು ವಾಹನ ಉದ್ಯಮ. ನೇರ ಮತ್ತು ಪರೋಕ್ಷವಾಗಿ ಹಲವು ಲಕ್ಷ ಮಂದಿ ಈ ಉದ್ಯಮವನ್ನು ಅವಲಂಬಿಸಿದ್ದು, ವಾಹನ ಉದ್ಯಮದ ಕುಸಿತ ವಾದರೆ ಅದರ ಬಿಸಿ ಎಲ್ಲರಿಗೂ ತಟ್ಟುತ್ತದೆ. ವಾಹನ ಉದ್ಯಮ ಎಂದಲ್ಲ ಇತರ ಎಲ್ಲ ಔದ್ಯೋಗಿಕ ವಲಯಗಳು ಆರ್ಥಿಕ ಹಿಂಜರಿತದ ಪರಿಣಾಮಕ್ಕೊಳಗಾಗಿವೆ. ಮನೆಗಳು ಮಾರಾಟವಾಗದೆ ರಿಯಲ್ ಎಸ್ಟೇಟ್ ಉದ್ಯಮ ಕುಸಿಯುತ್ತಿದೆ. ಕಳೆದ ಕೆಲವು ತಿಂಗಳಿಂದೀಚೆಗೆ ಮಾರಾಟ ಮತ್ತು ಖರೀದಿ ವ್ಯವಹಾರ ದಾಖಲೆ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಜಿಡಿಪಿ ಅಭಿವೃದ್ಧಿ ದರ 6.8ಕ್ಕೆ ಕುಸಿದಿದೆ, ಇದರೊಂದಿಗೆ ರಫ್ತು ಪ್ರಮಾಣ ಕಡಿಮೆಯಾಗಿದ್ದು, ನಿರುದ್ಯೋಗ ಸತತವಾಗಿ ಏರುತ್ತಿದೆ. ಈ ಅಂಕಿ ಅಂಶಗಳೆಲ್ಲ ಆರ್ಥಿಕತೆಯ ಬಗ್ಗೆ ಕಳವಳಕಾರಿ ಚಿತ್ರಣವನ್ನು ನೀಡುತ್ತಿವೆ. ಪ್ರಸ್ತುತ ಜಾಗತಿಕ ಆರ್ಥಿಕತೆಯೂ ಹಿಂಜರಿತದಲ್ಲಿದ್ದು, ಇದರ ಪರಿಣಾಮ ವಾಹನ ಉದ್ಯಮವನ್ನು ತಟ್ಟುತ್ತಿದೆ ಎನ್ನಲಾಗುತ್ತಿದೆ. ಇದು ಒಂದು ಕಾರಣವಾಗಿದ್ದರೂ ಇದುವೇ ಕಾರಣವಲ್ಲ. ದೇಶದ ಆರ್ಥಿಕತೆ ಹೆಚ್ಚು ಔಪಚಾರಿಕವಾಗಿದ್ದು ಇದರ ಜೊತೆಗೆ ಬ್ಯಾಂಕ್‌ಗಳು ಎದುರಿಸುತ್ತಿರುವ ಸಂಕಷ್ಟ, ಕೃಷಿ ಕ್ಷೇತ್ರದ ಬಿಕ್ಕಟ್ಟು ಹೀಗೆ ಇನ್ನಿತರ ಹಲವು ಕಾರಣಗಳು ಇವೆ. ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮದ‌ಲ್ಲಾಗಿರುವ ಹಿಂಜರಿತವೂ ವಾಹನ ಉದ್ಯಮದ ವ್ಯವಹಾರವನ್ನು ಬಾಧಿಸುತ್ತಿದೆ. ಜಿಎಸ್‌ಟಿ ಅನುಷ್ಠಾನದ ಬಳಿಕ ತೆರಿಗೆ ವ್ಯಾಪ್ತಿ ಹೆಚ್ಚು ಪಾರದರ್ಶಕವಾಗಿದೆ. ಆದರೆ ಇದರಿಂದ ಅನೌಪಚಾರಿಕವಾದ ಹಣದ ಚಲಾವಣೆ ಕಡಿಮೆಯಾಗಿದೆ. ಉದಾಹರಣೆಗೆ-ರಿಯಲ್ ಎಸ್ಟೇಟ್ ಮಾಡುವ ಸಣ್ಣ ಮಟ್ಟದ ಉದ್ಯಮಿಯೊಬ್ಬ ವರ್ಷದಲ್ಲಿ ಐದು ಮನೆಗಳನ್ನು ಮಾರಿದರೆ ಕನಿಷ್ಠ ಎಂದರೂ ಶೇ. 25ರಷ್ಟು ತೆರಿಗೆ ತಪ್ಪಿಸುತ್ತಿದ್ದ. ಈ ಶೇ. 25 ಹೊಸ ಕಾರು ಖರೀದಿ ಅಥವಾ ಇನ್ನಿತರ ಐಷರಾಮಿ ವಸ್ತುಗಳ ಖರೀದಿಗೆ ಖರ್ಚಾಗುತ್ತಿತ್ತು. ಆದರೆ ಈಗ ಜಿಎಸ್‌ಟಿ, ನೋಟು ಅಮಾನ್ಯೀಕರಣದಂಥ ಸುಧಾರಣಾ ಕ್ರಮಗಳು ಮತ್ತು RERA ದಂಥ ಕಠಿಣ ಕಾನೂನುಗಳಿಂದಾಗಿ ಎಲ್ಲ ವಹಿವಾಟುಗಳಲ್ಲಿ ಬಹುತೇಕ ಪಾರದರ್ಶಕತೆ ಬಂದಿದ್ದು, ಅನೌಪಚಾರಿಕ ವ್ಯವಹಾರ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಹಜವಾಗಿಯೇ ಕಾರು ಸೇರಿದಂತೆ ಗ್ರಾಹಕ ಉತ್ಪನ್ನಗಳ ಬೇಡಿಕೆ ಕುಸಿದಿದೆ.

ಅನೌಪಚಾರಿಕ ವಹಿವಾಟಿನ ಪ್ರಮಾಣವನ್ನು ಅಂಕಿಅಂಶಗಳ ಸಮೇತ ನಿರೂಪಿಸುವುದು ಅಸಾಧ್ಯ ಕೆಲಸ. ಈ ಮಾದರಿಯ ವಹಿವಾಟುಗಳು ಬಹುತೇಕ ನಗದು ರೂಪದಲ್ಲಿ ನಡೆಯುತ್ತವೆ. ದೊಡ್ಡ ಮೊತ್ತದ ವಹಿವಾಟು ಗಳನ್ನು ನಗದುರಹಿತಗೊಳಿಸಿರುವುದರಿಂದ ಹಣದ ವರ್ಗಾವಣೆಯ ಮಾಹಿತಿಗಳೆಲ್ಲ ಸಂಗ್ರಹವಾಗುತ್ತಿದೆ. ಅನೌಪಚಾರಿಕ ವಹಿವಾಟು ನಡೆಸುವವರು ಈ ರಿಸ್ಕ್ ತೆಗೆದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಹೀಗೆ ಹಣದ ಓಡಾಟ ಕಡಿಮೆಯಾಗಿರುವುದು ಕೂಡಾ ಒಟ್ಟಾರೆ ಕೈಗಾರಿಕೋದ್ಯಮದಲ್ಲಿ ಕುಸಿತ ಕಾಣಲು ಕಾರಣ. ಬೇಡಿಕೆ ಕುಸಿತದಿಂದ ಕಂಗಾಲಾಗಿರುವ ಉದ್ಯಮಿಗಳು ಈಗಾಗಲೇ ಸರಕಾರದ ಬಾಗಿಲು ಬಡಿದಿದ್ದಾರೆ. ಸರಕಾರ ಉದ್ಯಮವನ್ನು ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ಉತ್ತೇಜಕ ಪ್ಯಾಕೇಜ್‌ ಘೋಷಿಸಬೇಕೆನ್ನುವುದು ಅವರ ಬೇಡಿಕೆ. ಆದರೆ 1 ಲಕ್ಷ ಕೋಟಿ ರೂ ಪ್ಯಾಕೇಜ್‌ ಘೋಷಣೆಯನ್ನು ಈಡೇರಿಸುವುದು ಸುಲಭವೂ ಅಲ್ಲ, ಸಾಧುವೂ ಅಲ್ಲ. ಹೀಗೆ ಪ್ಯಾಕೇಜ್‌ಗಳನ್ನು ಘೋಷಿಸಿದರೆ ನಾಳೆ ಇನ್ನೊಂದು ಉದ್ಯಮ ವಲಯವೂ ಇದೇ ರೀತಿಯ ಬೇಡಿಕೆ ಇಡಬಹುದು. ಇದರ ಬದಲಾಗಿ ಬೇಡಿಕೆ ಮತ್ತು ರಫ್ತು ಹೆಚ್ಚಾಗುವಂಥ ನೀತಿ ರೂಪಣೆಗಳಿಗೆ ಹೆಚ್ಚಿನ ಗಮನ ಹರಿಸಬೇಕು. ಜನರ ಕೈಯಲ್ಲಿ ಹಣ ಓಡಾಡುವಂಥ ಆರ್ಥಿಕ ವಾತಾವರಣ ಸೃಷ್ಟಿಯಾಗಬೇಕು. ವಾಹನ ಉದ್ಯಮ ಮಾತ್ರವಲ್ಲದೆ ಸಂಕಷ್ಟ ಎದುರಿಸುತ್ತಿರುವ ಎಲ್ಲಾ ಉದ್ಯಮಗಳನ್ನು ಮೇಲೆತ್ತುವ ಹೊಣೆ ಸರಕಾರದ ಮೇಲಿದೆ.

Advertisement

Udayavani is now on Telegram. Click here to join our channel and stay updated with the latest news.

Next