Advertisement

ಪ್ರಬಂಧ: ಬಾಂಬ್‌

07:37 PM Nov 23, 2019 | mahesh |

ಸುಮಾರು 20 ವರ್ಷಗಳ ಹಿಂದೆ ತಂಗಿಯ ಮದುವೆಗೆಂದು ಬೆಂಗಳೂರಿನಿಂದ ತಂದ ಒಂದೆರೆಡು ರೇಷ್ಮೆ ಸೀರೆಗಳನ್ನು ಬದಲಿಸಿ ಮತ್ತಷ್ಟು ಸೀರೆಗಳನ್ನು ತರಲೆಂದು, ಮನೆಯಲ್ಲಿ ಎಲ್ಲರೂ ಮದುವೆಯ ಕೆಲಸಗಳಲ್ಲಿ ಬ್ಯುಸಿಯಾದ್ದರಿಂದ ನಾನು ನನ್ನ 7 ವರ್ಷದ ಮಗನನ್ನು ಜೊತೆಯಲ್ಲಿ ಕರೆದುಕೊಂಡು ಹೋದೆ. ಸೀರೆಗಳ ಖರೀದಿ ನಂತರ ಒಂದು ಸೂಟ್‌ಕೇಸ್‌ ಮತ್ತೆರಡು ಬ್ಯಾಗುಗಳೊಂದಿಗೆ ಚಿಕ್ಕಪೇಟೆಯಿಂದ ಮೆಜೆಸ್ಟಿಕ್‌ಗೆ ಹೊರಟೆವು. ಆಟೋಗಾಗಿ ಕಾದೆವು. ಚಿಕ್ಕಪೇಟೆಯಿಂದ ಮೆಜೆಸ್ಟಿಕ್‌ ಎಂದರೆ ಯಾವ ಆಟೋದವರೂ ಬರುವುದಿರಲಿ, ಉತ್ತರವನ್ನೇ ಕೊಡದೆ ರೊಂಯ್ಯನೆ ಮುಂದೆ ಹೋಗುತ್ತಿದ್ದರು. ನನಗೋ ಅನುಮಾನ ಶುರುವಾಯ್ತು- ನಾನೇನು ಹರಿಶ್ಚಂದ್ರ ಘಾಟ್‌ಗೆ ಕರೆದೆನೇ ಎನಿಸಿ. ಸುಮಾರು ಹೊತ್ತು ಕಾದು ಹೇಗೂ ಹತ್ತಿರವಾದ್ದರಿಂದ ನಡೆದೇ ಹೋಗೋಣವೆಂದು ತೀರ್ಮಾನಿಸಿ ನಾನು ಒಂದು ಬ್ಯಾಗ್‌ ಮತ್ತೂಂದು ಸೂಟ್‌ಕೇಸ್‌ ಹಿಡಿದು ಸಣ್ಣದೊಂದು ಬ್ಯಾಗನ್ನು ನನ್ನ ಮಗನಿಗೆ ಕೊಟ್ಟು ನಡೆದುಕೊಂಡು ಬರುತ್ತಿರುವಾಗ ನನ್ನ ಚಪ್ಪಲಿ ಕಿತ್ತು ಹೋಗಬೇಕೇ? ಸರಿಯಾಗಿ ಆಗ ಮೆಜೆಸ್ಟಿಕ್‌ನಲ್ಲಿದ್ದೆವು. ಕತ್ತಲಾಗುವುದರೊಳಗೆ ಊರಿಗೆ ವಾಪಸ್‌ ಬರಬೇಕಿತ್ತು, ಇನ್ನು ಚಪ್ಪಲಿ ತೆಗೆದುಕೊಳ್ಳಲು ಅಂಗಡಿ ಹುಡುಕಿ ಹೋಗಲು ಸಮಯ ಇಲ್ಲದ ಕಾರಣ ಅಲ್ಲೇ ಫ‌ುಟ್‌ಪಾತ್‌ನಲ್ಲಿ ತೆಗೆದುಕೊಳ್ಳಲು ನಿಂತೆ.

Advertisement

ನೀವು ಗಮನಿಸಿರಬಹುದು, ಫ‌ುಟ್‌ಪಾತ್‌ ವ್ಯಾಪಾರಿಗಳು ಒಂದು ವೈರಿನ ಮಂಚ ಅಥವಾ ಸ್ಟ್ಯಾಂಡಿನ ಮೇಲೆ ಪ್ಲಾಸ್ಟಿಕ್‌ ಶೀಟ್‌ ಹಾಕಿ ಅದರ ಮೇಲೆ ಮಾರಾಟದ ವಸ್ತುಗಳನ್ನಿಟ್ಟು ಮಾರುತ್ತಿರುತ್ತಾರೆ. ಇಲ್ಲಿ ಕೂಡ ಹಾಗೇ ಒಂದು ವೈರಿನ ಮಂಚದ ಮೇಲೆ ಪ್ಲಾಸ್ಟಿಕ್‌ ಶೀಟ್‌ ಹಾಕಿ ಚಪ್ಪಲಿಗಳನ್ನು ಜೋಡಿಸಿದ್ದರು. ತುಂಬಾ ತುರ್ತಾಗಿ ಬೇಕಾದ್ದರಿಂದ ಅಲ್ಲೇ ಕೊಳ್ಳಲು ಕೈಲಿದ್ದ ಒಂದು ಸೂಟ್‌ಕೇಸ್‌ ಒಂದು ಬ್ಯಾಗ್‌ ಕೆಳಗಿಟ್ಟೆ. ಚಪ್ಪಲಿ ಖರೀದಿಸಿ ಹಾಕಿಕೊಂಡು ಆತನಿಗೆ ಹಣ ಕೊಟ್ಟು ಎರಡು ಬ್ಯಾಗ್‌ಗಳನ್ನು ಒಂದೊಂದು ಕೈಯಲ್ಲಿ ಹಿಡಿದು ಹೊರಟೆ. ಇನ್ನೇನು ಬಸ್‌ಸ್ಟಾಂಡ್‌ ಕಡೆಗೆ ತಲುಪಬೇಕು ಆಗ ನನಗೆ ಇದ್ದಕ್ಕಿದ್ದಂತೆ ಕೈಯಲ್ಲಿದ್ದ ಬ್ಯಾಗಿನ ಭಾರದಲ್ಲಿ ಏನೋ ವ್ಯತ್ಯಾಸವಾದಂತೆನಿಸಿ ನೋಡಿಕೊಂಡರೆ, ಕೈಯಲ್ಲಿರುವುದು ಎರಡೇ ಬ್ಯಾಗ್‌ಗಳು ಒಂದು ನಾನು ಹಿಡಿದಿದ್ದು, ಮತ್ತೂಂದು ನನ್ನ ಮಗನ ಕೈಯಲ್ಲಿದ್ದ ಹಗುರವಾದ ಬ್ಯಾಗ್‌ ಮಾತ್ರ. ಓಹ್‌! ದೇವರೇ ನಾನು ಹಿಡಿದಿದ್ದ ಇನ್ನೊಂದು ಸೂಟ್ಕೇಸ್‌ ಇಲ್ಲ ಬರೇ ಎರಡು ಬ್ಯಾಗ್‌ಗಳು ಮಾತ್ರ ಇವೆ ಎಂದು ಗಾಬರಿಯಾದೆ. ನನ್ನ ಪುಟ್ಟ ಮಗನನ್ನ “”ಪಾಪಣ್ಣಿ , ಏನಾಯ್ತು, ಬ್ಯಾಗ್‌ ಎಲ್ಲಿ ಬಿಟ್ಟೆವು?” ಎಂದಾಗ ನನ್ನ ಗಾಬರಿಯನ್ನು ಕಂಡು ಅವನೋ ಚಿಕ್ಕ ಹುಡುಗ ಅಳಲೇ ಆರಂಭಿಸಿದ. ಒಂದು ಕ್ಷಣ ಯೋಚಿಸಿದೆ- ಚಪ್ಪಲಿ ಕಿತ್ತುಹೋದಾಗ ಸಹ ಬ್ಯಾಗ್‌ ನನ್ನ ಕೈಯಲ್ಲಿದ್ದುದು ನೆನಪಾಯ್ತು. ಅಂದರೆ ಚಪ್ಪಲಿ ಕೊಳ್ಳುವ ಕಡೆಯೇ ಬಿಟ್ಟಿರಬಹುದೆಂಬ ಅನುಮಾನವಾಯಿತು. ಥಟ್ಟನೆ ನನಗೆ ಚಪ್ಪಲಿ ಕೊಳ್ಳುವಾಗ ಚಪ್ಪಲಿ ಜೋಡಿಸಿದ್ದ ಕಡೆ ನೆಲದ ಮೇಲೆ ಇಟ್ಟಿದ್ದು ನೆನಪಾಗಿ ಒಂದೇ ಉಸುರಿಗೆ ಧಡಧಡನೆ ಓಡಿದೆ.

ನಿಜ ಹೇಳಬೇಕೆಂದರೆ, ಸಾವಿರಾರು ಮಂದಿ ಓಡಾಡುವ ಆ ಜಾಗದಲ್ಲಿ ಅದೂ ಮೆಜೆಸ್ಟಿಕ್‌ನಲ್ಲಿ! ಅಕಸ್ಮಾತ್‌ ಮನುಷ್ಯರೇ ಮರೆತು ನಿಂತರೆ ಮಾಯವಾಗುವಂಥ ಜಾಗ ಅದು! ಇನ್ನು ನನ್ನ ಸೂಟ್‌ಕೇಸ್‌ ಸಿಗುವುದೇ ಎಂಬ ಭಯದಲ್ಲಿ ಜೀವ ಹೊಡೆದುಕೊಳ್ಳಲು ಶುರುವಾಯಿತು.

ಭಗವಂತ! ಏನು ಮಾಡುವುದು ಎಂದು ಊರ ದೇವರನ್ನೆಲ್ಲ ನೆನೆದೆ. ಏಕೆಂದರೆ ಇಲ್ಲಿಗೆ 20 ವರ್ಷಗಳ ಹಿಂದೆ 8 ರೇಷ್ಮೆ ಸೀರೆಗಳ ಬೆಲೆ ಕಡಿಮೆಯೇನಲ್ಲ. ಆ ಸೂಟ್‌ಕೇ ಸ್‌ ನಲ್ಲಿದ್ದ ಸೀರೆಗಳ ಬೆಲೆ ರೂ. 50 ಸಾವಿರಗಳಿಗಿಂತಲೂ ಅಧಿಕವಿತ್ತು. ಅಂದು ಸುಮಾರು 50 ಸಾವಿರಗಳನ್ನು ಭರಿಸಿವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ನನ್ನ ಅನುಮಾನ ನಿಜವಾಯ್ತು. ಅಬ್ಟಾ! ಚಪ್ಪಲಿ ಜೋಡಿಸಿದ್ದ ಟೇಬಲಿಗೆ ಹಾಕಿದ್ದ ಪ್ಲಾಸ್ಟಿಕ್‌ ಶೀಟ್‌ನ ಕೆಳಗೆ ಮರೆಯಾಗಿ ಕುಳಿತಿತ್ತು ನನ್ನ ಸೂಟ್‌ಕೇಸ್‌. ಸೂಟ್‌ಕೇಸ್‌ ಕಣ್ಣಿಗೆ ಬಿದ್ದದ್ದೇ ತಡ ಕಳೆದುಹೋದ ಜೀವ ಮತ್ತೆ ಬಂದಂತಾಯ್ತು. ನಾನು ಹೋಗಿ ಆ ಅಂಗಡಿಯ ಮುಂದೆ ನಿಂತೆ. ಪ್ಲಾಸ್ಟಿಕ್‌ ಶೀಟ್‌ ಮರೆಮಾಚಿದ್ದ ನನ್ನ ಕಪ್ಪು ಬಣ್ಣದ ಸೂಟ್‌ಕೇ ಸನ್ನು ಪ್ಲಾಸ್ಟಿಕ್‌ ಸರಿಸಿ ಥಟ್ಟನೆ ಕೈಗೆತ್ತಿಕೊಂಡು ಒಂದು ನಿಟ್ಟುಸಿರು ಬಿಟ್ಟೆ!

ಅಬ್ಟಾ! ನಾನಿಟ್ಟ ಸೂಟ್‌ಕೇ ಸನ್ನು ಚಪ್ಪಲಿ ಸ್ಟ್ಯಾಂಡ್‌ ಮೇಲೆ ಹಾಸಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್‌ ಹಾಳೆ ತುಸು ಮರೆಮಾಡಿತ್ತು. ಆದ ಕಾರಣ ಯಾರ ಕಣ್ಣಿಗೂ ಬೀಳದೆ ನನ್ನನ್ನುಳಿಸಿತ್ತು. ಅಂಗಡಿ ಹುಡುಗ, “”ಏನ್‌ ಮೇಡಂ” ಎಂದ ಕೂಡಲೇ ವಿವರಿಸಿದೆ. ಆತನಿಗೆ ಅದು ಕಂಡಿಲ್ಲ. ಪಕ್ಕದ ಅಂಗಡಿಯವ ಹೀಗೆಂದ, “”ನಿಮ್ದು ಪುಣ್ಯ ಮೇಡಂ, ಯಾರಿಗೇನು ಕಂಡಿಲ್ಲ, ಯಾರಾದ್ರು ಗಿರಾಕಿಗೆ ಕಾಣಿದ್ರೆ ತಕ್ಕೊಂಡೋಗ್ಬಿಡ್ತಿದ್ರು. ನಾನು ನೋಡ್ದೆ ಆದ್ರೆ ಯಾರಾದ್ರೂ ಬಾಂಬ್‌ ಗೀಂಬ್‌ ಮಡಗ್ಬಿಟ್ಟವ್ರೇನೋ ಅಂತ ಸುಮ್ಕಾಗ್ಬಿಟ್ಟೆ ” ಎಂದ.

Advertisement

“”ದೇವರೇ ಅಂತೂ ನೀನಿದ್ದೀಯಾ” ಎಂದು ಸೂಟ್ಕೇಸ್‌ ಕೈಗೆತ್ತಿಕೊಂಡು ಅಂಗಡಿಯಾತನಿಗೆ, “”ನೋಡಿ ಮರೆತು ಬಿಟ್ಟು ಹೋಗಿದ್ದೆ ಸದ್ಯ. ಯಾರ ಕಣ್ಣಿಗೂ ಬೀಳದ ಕಾರಣ ಸಿಕ್ಕಿತು” ಎಂದು ಪಕ್ಕದ ಅಂಗಡಿಯವನಿಗೆ ಕೂಡ ಥ್ಯಾಂಕ್ಸ್‌ ಹೇಳಿದೆ. ಆತ, “”ಮೇಡಂ ನನ್ಗೆ ಅಲ್ಲ, ನೀವು ಬಾಂಬ್‌ಗ ಥ್ಯಾಂಕ್ಸ್‌ ಹೇಳ್ಬೇಕು” ಅಂದ. “”ಯಾಕೆ?” ಅಂದೆ. “”ಯಾಕಂದ್ರೆ ಬಾಂಬ್‌ ಇರತ್ತೆ ಅಂತ ಹೆದರೊಡಿ ಯಾರೂ ಮುಟ್ಟಿಲ್ಲ. ಇಲ್ಲಾಂದ್ರೆ ಒಂದ್‌ ನಿಮಿಷದಲ್ಲಿ ಮಾಯ ಆಗಿºಡ್ತಿತ್ತು. ಅದೂ ಬಾಂಬ್‌ದು ದಯಾ! ನಿಮ್ಗೆ ವರ ಆಗಿºಡು¤ ನೋಡಿ” ಅಂದ. “”ಹೌದಾ…” ಎನ್ನುತ್ತ ನಾನು ನಿಟ್ಟುಸಿರು ಬಿಟ್ಟೆ. ಅಬ್ಟಾ! ದೇವರೇ ಹೆತ್ತವರ ಪುಣ್ಯ ಎಂದುಕೊಂಡು ಮಗನ ಕೈಗೆ ಪುಟ್ಟ ಬ್ಯಾಗ್‌ ಕೊಟ್ಟು ಸೂಟ್‌ಕೇಸ್‌ ಮತ್ತೆ ಮತ್ತೂಂದು ಬ್ಯಾಗನ್ನು ಬಸ್ಸಿನಲ್ಲಿ ಕೂಡ ತೊಡೆಯ ಮೇಲೆ ಇಟ್ಟುಕೊಂಡು ಬಂದೆ. ಮನೆ ತಲುಪಿದಾಗ ಎಲ್ಲರಿಗೂ ಸೀರೆ ನೋಡುವ ಕುತೂಹಲವಾದರೆ ನನಗೋ ಕಳೆದು ಹೋಗಿದ್ದ ಸೀರೆಗಳ ಸೂಟ್‌ಕೇಸ್‌ ಕಥೆಯ ಫ‌ಜೀತಿಯನ್ನು ಅವರಿಗೆಲ್ಲ ಹೇಳುವ ಆತುರ. ತತ್‌ಕ್ಷಣ ನನ್ನ ಪುಟ್ಟ ಮಗ ಮತ್ತೆ “”ಸೂಟ್‌ಕೇಸ್‌ ಮತ್ತೆ ಸೀರೆ ಎಲ್ಲ ಕಳುª ಹೋಗಿತ್ತು” ಎಂದಾಗ ಎಲ್ಲರಿಗೂ ಗಾಬರಿ. ನಾನು ಎಲ್ಲವನ್ನೂ ವಿವರಿಸಿ ಹೇಳಿದಾಗ, ಎಲ್ಲರೂ “”ಅಬ್ಟಾ! ಯಾರಾದ್ರೂ ಹೊತ್ಕೊಂಡು ಹೋಗಿದ್ರೆ ಏನ್‌ ಕಥೆ. ಸದ್ಯ ಸಿಕ್ತಲ್ಲ . ಅಮ್ಮಾ ತಾಯಿ, ಅದೇನೋ ಇರಲಿ, ನಿನ್ನ ಮರೆವಿನಲ್ಲಿ ಮಗನನ್ನು ಎಲ್ಲೂ ಕಳೆದು ಬಂದಿಲ್ಲವಲ್ಲ ಪುಣ್ಯ” ಎಂದರು. ಆ ಘಟನೆ ಸಂಭವಿಸಿದ ಸಮಯದಲ್ಲಿ ಎಲ್ಲೆಲ್ಲೋ ಕೆಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಬಾಂಬ್‌ ಇಟ್ಟ ಉದಾಹರಣೆಗಳಿದ್ದು ನನ್ನ ಸೂಟ್‌ಕೇಸ್‌ ಮುಟ್ಟಲು, ಎತ್ತಿಕೊಂಡು ಹೋಗಲು ಯಾರಿಗೂ ಧೈರ್ಯವಿಲ್ಲದುದೇ ಕಾರಣವೆಂಬುದು ಸತ್ಯ ಸಂಗತಿ. ಆದ್ದರಿಂದ ಸೂಟ್‌ಕೇಸ್‌ ಸಿಕ್ಕಿದ್ದು ನನ್ನ ಹೆತ್ತವರ ಪುಣ್ಯ ಎಂದುಕೊಂಡೆ. ಅಂತೂ ಜನರಲ್ಲಿದ್ದ ಬಾಂಬ್‌ ಎಂಬ ಭಯ, ಭೀತಿ ನಮ್ಮ ಮನೆಯ ಮದುವೆಯ ರೇಷ್ಮೆ ಸೀರೆಗಳನ್ನು ಉಳಿಸಿಕೊಟ್ಟಿದ್ದಂತೂ ಸತ್ಯ.

ರಾಜೇಶ್ವರಿ ಹುಲ್ಲೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next