Advertisement

ಇ-ಕೆವೈಸಿ ಪ್ರಕ್ರಿಯೆ ಮಾರ್ಚ್‌ವರೆಗೆ ವಿಸ್ತರಣೆ

09:49 PM Jan 08, 2020 | mahesh |

ಕಾರ್ಕಳ: ಪಡಿತರ ಚೀಟಿಯಲ್ಲಿನ ಗ್ರಾಹಕರನ್ನು ಗುರುತಿಸುವ ಇ-ಕೆವೈಸಿ (ನೋ ಯುವರ್‌ ಕಸ್ಟಮರ್‌) ಪ್ರಕ್ರಿಯೆಗೆ ನಾನಾ ಅಡ್ಡಿ ಆತಂಕಗಳು ಬಂದ ಹಿನ್ನೆಲೆಯಲ್ಲಿ ಅಂತಿಮ ಗಡುವನ್ನು ಮಾ.31ರವರೆಗೆ ಕಲ್ಪಿಸಲಾಗಿದೆ.

Advertisement

ಈ ಮೊದಲು ಜ.10ರಂದು ಇ-ಕೆವೈಸಿ ಅಪ್ಡೆàಟ್‌ಗೆ ಅಂತಿಮ ದಿನ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆ ಘೋಷಿಸಿದ ಹಿನ್ನೆಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ನಿತ್ಯ ಪಡಿತರ ಚೀಟಿದಾರರ ಸರತಿ ಸಾಲು ಇತ್ತು. ಇ-ಕೆವೈಸಿ ಮಾಡದಿದ್ದರೆ ಪಡಿತರ ಲಭಿಸುವುದಿಲ್ಲ ಎಂದು ಜನತೆ ಆತಂಕಗೊಂಡಿದ್ದು ಅಪ್ಡೆಟ್‌ಗೆ ಸಾಲುಗಟ್ಟಿ ಆಗಮಿಸಿದ್ದರು.

ಕೈ ಕೊಟ್ಟ ಸರ್ವರ್‌
ಕಾರ್ಕಳ, ಹೆಬ್ರಿ ತಾಲೂಕು ಸೇರಿದಂತೆ ರಾಜ್ಯಾದ್ಯಂತ ಅಪ್ಡೆàಟ್‌ಗೆ ಇದ್ದ ಸರ್ವರ್‌ ಸಮಸ್ಯೆಯಿಂದಾಗಿ ಪ್ರಕ್ರಿಯೆ ನಿಧಾನಗೊಂಡಿತ್ತು. ಜತೆಗೆ ಹೆಚ್ಚಿನ ಕಡೆಗಳಲ್ಲಿ ಪ್ರಕ್ರಿಯೆ ಸುಗಮವಾಗಿ ಆಗದ್ದರಿಂದ ಜನರಿಗೆ ಆತಂಕವಿತ್ತು. ಇದರೊಂದಿಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ನೀಡುವುದು ಮತ್ತು ಅಪ್ಡೆàಟ್‌ ಮಾಡುವುದು ಒಟ್ಟಿಗೆ ಆಗಬೇಕಾದ್ದರಿಂದ ಪ್ರಕ್ರಿಯೆ ನಿಧಾನಗೊಳ್ಳಲು ಕಾರಣವಾಗಿತ್ತು.

ಪರದಾಟ-ಅಲೆದಾಟ
ನ್ಯಾಯಬೆಲೆ ಅಂಗಡಿಯಲ್ಲಿ ಜ. 1ರಿಂದ 5ರವರೆಗೆ ನಿತ್ಯ ಕ್ಯೂ ಕಂಡುಬಂದಿತ್ತು. ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ಥಂಬ್‌ ನೀಡಲು ಹೋಗುತ್ತಿರುವುದರಿಂದ ಎಲ್ಲ ಸದಸ್ಯರು ತಮ್ಮ ಎಂದಿನ ಕಾರ್ಯಚಟುವಟಿಕೆ ಸ್ಥಗಿತಗೊಳಿಸಬೇಕಾಗಿದೆ. ಎಲ್ಲರೂ ಒಟ್ಟಾಗಿ ಹೋಗಿ ಅಲ್ಲಿ ಕ್ಯೂ ನಿಂತರೂ ತಮ್ಮ ಕಾರ್ಯವಾಗುವ ಖಾತ್ರಿಯಿಲ್ಲ. ಇದರಿಂದ ಮತ್ತೂಂದು ದಿನ ತೆರಳುವ ಅನಿವಾರ್ಯತೆ ಇದೆ. ಇದರಿಂದ ಜನಸಾಮಾನ್ಯರ ಪಾಡು ಹೇಳತೀರದಾಗಿದೆ.

ಇಲಾಖೆ ಸ್ಪಷ್ಟನೆ
ಇ-ಕೆವೈಸಿ ಅಪ್ಡೆಟ್‌ ಆಗದಿದ್ದರೆ ಪಡಿತರ ಸಿಗುವ ಬಗ್ಗೆ ಊಹಾಪೋಹಗಳು ಎದ್ದಿದ್ದು ಜನರು ಆತಂಕಗೊಳ್ಳಲು ಕಾರಣವಾಗಿತ್ತು. ಆದರೆ ಇ-ಕೆವೈಸಿ ನೀಡದಿದ್ದಲ್ಲಿ ಪಡಿತರ ಪಡೆಯಲು ಅನರ್ಹರಾಗುತ್ತಾರೆಯೇ ಹೊರತು ಸದಸ್ಯತ್ವ ರದ್ದಾಗದು ಎಂದು ಇಲಾಖೆ ಹೇಳಿದೆ. ಕೆಲವೊಂದು ಪಡಿತರ ಚೀಟಿಗಳಲ್ಲಿ ನಿಧನ ಹೊಂದಿದವರ ಹೆಸರು ಡಿಲೀಟ್‌ ಆಗದೇ ಉಳಿದಿದೆ. ಬಿಪಿಎಲ್‌ ಅಲ್ಲದವರ ಹೆಸರೂ ಪಟ್ಟಿಯಲ್ಲಿದೆ. ರಾಜ್ಯದಲ್ಲಿ ಹತ್ತಾರು ಕೋಟಿ ರೂ. ಮೌಲ್ಯದ ಪಡಿತರ ಸಾಮಗ್ರಿ ಗ್ರಾಹಕರಲ್ಲದವರ ಪಾಲಾಗುವುದನ್ನು ನಿಯಂತ್ರಿಸುವ ಉದ್ದೇಶದಿಂದ ಆಹಾರ ನಾಗರಿಕ ಸರಬರಾಜು ಇಲಾಖೆ ಇ-ಕೆವೈಸಿ ಜಾರಿಗೊಳಿಸಿದೆ. ಈ ಮೂಲಕ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿ ಗ್ರಾಹಕರ ಬೆರಳಚ್ಚು ಪಡೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ.

Advertisement

ಶೇ.54ರಷ್ಟು ಅಪ್ಡೆಟ್‌ ಬಾಕಿ
ಕಾರ್ಕಳ, ಹೆಬ್ರಿಯಲ್ಲಿ ಈ ವರೆಗೆ ಶೇ.46ರಷ್ಟು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.54ರಷ್ಟು ಮಾತ್ರ ಬಾಕಿ ಉಳಿದಿದೆ. ಸೇವಾ ಸಿಂಧು ಕಚೇರಿಯಲ್ಲೂ ಕುಟುಂಬದ ಒಬ್ಬ ಸದಸ್ಯ ಆಹಾರ ಇಲಾಖೆ ವೆಬ್‌ಸೈಟ್‌ನಲ್ಲಿ ಬೆರಳಚ್ಚು ನೀಡಿದಾಗ ಉಳಿದ ಸದಸ್ಯರ ಮೊಬೈಲ್‌ ನಂಬರ್‌ ಆಧಾರ್‌ ಕಾರ್ಡ್‌ ನಲ್ಲಿ ದಾಖಲಾಗಿದ್ದರೆ, ಅವರಿಗೆ ಒ.ಟಿ.ಪಿ. ಲಭಿಸುವುದು. ಅದನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿದರೆ ಇ- ಕೆವೈಸಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣವಾಗಲಿದೆ.

ಅವಧಿ ವಿಸ್ತರಣೆ
ಸರ್ವರ್‌ ಅಪ್‌ಡೇಟ್‌ ಆಗುತ್ತಿದ್ದ ಹಿನ್ನೆಲೆಯಲ್ಲಿ ಜ. 5ರಿಂದ 7ರವರೆಗೆ ಇ-ಕೆವೈಸಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಇಲಾಖೆ ಮಾ. 31ರವರೆಗೆ ಆಧಾರ್‌ ಜೋಡಣೆಗಾಗಿ ಅವಧಿ ವಿಸ್ತರಿಸಿದೆ. ಹೀಗಾಗಿ ಪಡಿತರ ಚೀಟಿದಾರರು ಯಾವುದೇ ಆತಂಕ ಗೊಂದಲ ಪಡಬೇಕಾಗಿಲ್ಲ.
-ಆಶಾ, ಆಹಾರ ನಿರೀಕ್ಷಕರು, ತಾಲೂಕು ಕಚೇರಿ-ಕಾರ್ಕಳ

ಮೂರು ದಿನ ಅಲೆದಾಡಿದೆ
ಥಂಬ್‌ ನೀಡುವ ಉದ್ದೇಶದಿಂದ ಮಿಯ್ನಾರು ನ್ಯಾಯಬೆಲೆ ಅಂಗಡಿಗೆ ನಿರಂತರವಾಗಿ ಮೂರು ದಿನ ಅಲೆದಾಡಿದೆ. ಯಾವಾಗಲೂ ಅಲ್ಲಿನ ಸಿಬಂದಿ ಸರ್ವರ್‌ ಸಮಸ್ಯೆ ಎಂದು ಹೇಳಿದ್ದಾರೆ. ಮೂರು ದಿನದ ಸಂಬಳ ನಷ್ಟವಾಯಿತೇ ವಿನಃ ನನಗೆ ಯಾವೊಂದು ಪ್ರಯೋಜನವಾಗಿಲ್ಲ.
-ಜಯರಾಮ, ಮಿಯ್ನಾರು

ಸಾಲು ನೋಡಿಯೇ ವಾಪಸಾದೆ
ಶನಿವಾರ ಬೆಳಗ್ಗೆ ನ್ಯಾಯಬೆಲೆ ಅಂಗಡಿ ಎದುರು ಕಂಡುಬಂದ ಸರತಿ ಸಾಲು ನೋಡಿ ವಾಪಸಾದೆ. ಪ್ರತಿದಿನವೂ ಇದೇ ಪರಿಸ್ಥಿತಿ. ಇ-ಕೆವೈಸಿ ಗೊಂದಲ ನಿವಾರಿಸಿ, ಜನರಲ್ಲಿರುವ ಆತಂಕ ದೂರ ಮಾಡುವಲ್ಲಿ ಸಂಬಂಧಪಟ್ಟ ಇಲಾಖೆ ಮುಂದಾಗಬೇಕು.
-ಜಗದೀಶ್‌ ಪೂಜಾರಿ, ಕುಂಟಾಡಿ

Advertisement

Udayavani is now on Telegram. Click here to join our channel and stay updated with the latest news.

Next