Advertisement

ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ಕನ

07:45 PM Oct 10, 2019 | mahesh |

ಸಂಬಂಧಗಳನ್ನು ಸ್ವಚ್ಛವಾಗಿಟ್ಟುಕೊಂಡಷ್ಟು ಬದುಕು ಸಂತೋಷವಾಗುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಗಳು ಸಾಂಸಾರಿಕ ಸಂಬಂಧಗಳನ್ನು ರೂಪಿಸುತ್ತವೆ ವಿನಹ ಪ್ರಚಲಿತ ಫ್ಯಾಷನ್‌ ಲೋಕದ ಅತಿ ಆಸೆಯ ಜೀವನ ಕ್ರಮಗಳಲ್ಲ ಎನ್ನುವುದು ಸುಮನಸಾ ಕೊಡವೂರು ಪ್ರಸ್ತುತ ಪಡಿಸಿದ ತುಳು ಸಾಂಸಾರಿಕ ಹಾಸ್ಯಮಯ ಕನ ನಾಟಕದ ಆಶಯ.

Advertisement

ಪ್ರತಿಯೋರ್ವರಿಗೂ ಬದುಕು ಒಂದು ಸುಂದರ ಅವಕಾಶ. ದೈನಂದಿನ ಏರಿಳಿತಗಳಿಗೆ ಹೊಂದಿಕೊಂಡು ಜೀವಿಸಿದಾಗ ಅದ್ಭುತವಾದ ಅನುಭವ ಪ್ರಾಪ್ತಿಯಾಗುತ್ತದೆ. ಇಂತಹ ಅನುಭವಗಳು ಮನುಷ್ಯನನ್ನು ಒಳ್ಳೆಯವನನ್ನಾಗಿಸಿ ಆಂತರಿಕ ಮತ್ತು ಬಾಹ್ಯವಾಗಿ ಎತ್ತರಕ್ಕೆ ಬೆಳೆಸುತ್ತದೆ. ಈ ರೀತಿ ಒಳ್ಳೆಯತನವನ್ನೆ ಬದುಕಿನ ಮೂಲವಾಗಿಸಿಕೊಂಡ ಕನಕ ಎಂಬವನ ಸಾಂಸಾರಿಕ ನೆಲೆಗಟ್ಟು ಕಥೆಯ ವಸ್ತು. ಸಮಾಜಮುಖೀಯೂ, ಸ್ವಾಭಿಮಾನಿಯೂ ಆದ ಪತ್ರಕರ್ತ ಕನಕ ರಕ್ತಸಂಬಂಧಕ್ಕೆ ಆದ್ಯತೆ ನೀಡುತ್ತಾ ಸಹೋದರತ್ವದ ವಾತ್ಸಲ್ಯದಿಂದ ಉನ್ನತಿಯ ಕನಸುಗಳನ್ನು ಕಾಣುತ್ತಾನೆ.

ಪರಿವರ್ತನೆಯ ಕಾಲಘಟ್ಟದಲ್ಲಿ ಗುರುಹಿರಿಯರ ಸಕಾರಾತ್ಮಕ ಚಿಂತನೆಗಳನ್ನು ಬಹುತೇಕ ಕಿರಿಯರು ನಕಾರಾತ್ಮಕವಾಗಿ ಸ್ವೀಕರಿಸಿದಾಗ ಸೌಹಾರ್ದ ಸಂಬಂಧಗಳು ಕವಲೊಡೆಯುತ್ತದೆ. ಯಾವತ್ತೂ ಆಸೆ ಆಕಾಂಕ್ಷೆಗಳು ಸಹಜ ಸಂಸ್ಕಾರವನ್ನು ಮೀರಿದಾಗ ದಡ ತಲುಪಿದಾಕ್ಷಣ ದೋಣಿಯನ್ನು ಮರೆತು ಬಿಡುವ ವ್ಯಕ್ತಿತ್ವವಾಗಿಬಿಡುತ್ತದೆ. ಸಭ್ಯ ಸಂಗತಿಗಳಲ್ಲಿರುವ ಸಂತಸ ಮರೆತು ಮನಸ್ಸು ವಿಲಕ್ಷಣ ಸಂಭ್ರಮಕ್ಕೆ ಹಾತೊರೆಯುತ್ತದೆ.

ದೀಪವೊಂದು ಬೆಳಗಬೇಕಾದರೆ ಅದಕ್ಕೋಸ್ಕರ ಉರಿದ ಬತ್ತಿ, ಸವೆದ ಎಣ್ಣೆ, ಒದಗಿದ ಹಣತೆಯ ಸಹಕಾರವು ಅಮೂಲ್ಯವಾದದ್ದು. ಆದರೆ ಈ ಸಹಕಾರ ಸ್ವಾರ್ಥವಿಲ್ಲದ ತ್ಯಾಗದಿಂದ ದೀಪದ ಕನಸನ್ನು ಕಂಡಿರುತ್ತದೆ ವಿನಹ ಅದು ಬೆಂಕಿಯಾಗಿ ಸುಖ, ನಿಷ್ಠೆಯನ್ನು ಸುಡಬೇಕೆಂದು ಖಂಡಿತಾ ಬಯಸುವುದಿಲ್ಲ.

ಬಹಳಷ್ಟು ಅರ್ಥಗರ್ಭಿತ ಕಥಾಹಂದರವಿರುವ ಮತ್ತು ಇವತ್ತಿನ ದಿನಮಾನಕ್ಕೆ ತುಂಬ ಹತ್ತಿರವೆನಿಸುವ ನಾಟಕವಾಗಿ ಕನ ರೂಪುಗೊಂಡಿದೆ. ಹಿರಿತನದ ಆಶಯಗಳನ್ನು ಮರೆಯದಿರುವ ಸಮಾಜ ನಿರ್ಮಾಣವಾಗಬೇಕೆನ್ನುವ ಈ ಕಥೆಯನ್ನು ಆರು ಬಾರಿ ದಿ| ರತ್ನವರ್ಮ ಹೆಗ್ಗಡೆ ಶ್ರೇಷ್ಠ ನಾಟಕ ಪ್ರಶಸ್ತಿ ಪುರಸ್ಕೃತ ರವಿಕುಮಾರ್‌ ಕಡೆಕಾರ್‌ರವರು ಉತ್ತಮ ಸಂದೇಶಗಳಾಧರಿತ ಸಂಭಾಷಣೆಯಲ್ಲಿ ಬರೆದಿದ್ದಾರೆ.

Advertisement

ಇಡೀ ನಾಟಕದಲ್ಲಿ ಯಾವುದೇ ಅಶ್ಲೀಲ ಪದಗಳಿಲ್ಲದ ಹಾಸ್ಯ ಸನ್ನಿವೇಶಗಳಿದ್ದು ಅದನ್ನು ನಿರೂಪಿಸಿದ ರೀತಿ ಮೆಚ್ಚುವಂತದ್ದು. ಹರೀಶ್‌ ಕಲ್ಯಾಣಪುರ, ವಿನಯ್‌ ಕಲ್ಮಾಡಿ, ಜೀವನ್‌ ಕುಮಾರ್‌, ಮಾ| ಮುರುಗೇಶ್‌ ಅವರ ನೈಜ ಶೈಲಿಯ ಹಾಸ್ಯಾಭಿನಯವಿದೆ. ಪ್ರಮುಖ ಪಾತ್ರವಾದ ಕನಕನಾಗಿ ಪ್ರಬುದ್ಧ ರಂಗನಟ ಯೋಗೀಶ್‌ ಕೊಳಲಗಿರಿ ಅಭಿನಯಿಸಿದ್ದು, ಸಮಾಜ ಮತ್ತು ಕೌಟುಂಬಿಕ ಕಾಳಜಿಯ ಜೀವಂತಿಕೆ ಎದ್ದು ಕಾಣುತ್ತದೆ. ಸಂದರ್ಭಕ್ಕೆ ತಕ್ಕುದಾದ ಬೆಳಕಿನ ಸಂಯೋಜನೆಯನ್ನು ನಿಖೀಲ್‌ ಕೊಡವೂರು ಮಾಡಿದ್ದು, ನಿರ್ದೇಶನದೊಂದಿಗೆ ಸಂಗೀತ ನಿರ್ವಹಣೆಯನ್ನು ಮಾಡಿದ ಚಂದ್ರಕಾಂತ್‌ ಕಲ್ಮಾಡಿಯವರ ಪ್ರತಿಭೆ ಶಹಬ್ಟಾಸ್‌ ಎನ್ನುವಂತದ್ದು. ಗಾಯಕ ನವೀನ್‌ ಚಂದ್ರ ಕೊಪ್ಪ ಸ್ವರದಲ್ಲಿ ಸುಶ್ರಾವ್ಯ ಗೀತೆಗಳಿದ್ದು, ಸಂಗೀತ ನಿರ್ದೇಶಕ ಶರತ್‌ ಉಚ್ಚಿಲ ಸಂಯೋಜನೆಯಲ್ಲಿ ನಿರ್ಮಾಣಗೊಂಡಿದೆ.

ಜಯರಾಮ್‌ ನೀಲಾವರ

Advertisement

Udayavani is now on Telegram. Click here to join our channel and stay updated with the latest news.

Next