Advertisement

ಚರಂಡಿಗಳ ಹೂಳೆತ್ತುವ ಕಾಮಗಾರಿ ಆರಂಭ

08:52 AM May 11, 2019 | mahesh |

ನಗರ: ಪ್ರತಿ ವರ್ಷ ಮಳೆಗಾಲದ ಸಿದ್ಧತೆಗೆ ಸಂಬಂಧಿಸಿದಂತೆ ನಿಧಾನವಾಗಿ ಎಚ್ಚೆತ್ತುಕೊಳ್ಳುವ ನಗರಸಭೆ ಈ ಬಾರಿ ನೀತಿ ಸಂಹಿತೆ ಹಾಗೂ ಅಧಿಕಾರಿಗಳ ಆಡಳಿತದ ಮಧ್ಯೆಯೂ ಒಂದಷ್ಟು ದಿನಗಳ ಮುಂಚಿತವಾಗಿಯೇ ಕಾಮಗಾರಿ ಆರಂಭಿಸಿದೆ.

Advertisement

ಮಳೆಗಾಲದಲ್ಲಿ ಹೆಚ್ಚಿನ ತೊಂದರೆಗಳಿಗೆ ಕಾರಣವಾಗುವ ರಾಜ ಕಾಳುವೆ, ಚರಂಡಿ, ತೋಡುಗಳ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿರುವ ನಗರಸಭೆ ಈ ನಿಟ್ಟಿನಲ್ಲಿ 30 ಲಕ್ಷ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಗುತ್ತಿಗೆ ನೀಡಿದ್ದು, ಗುತ್ತಿಗೆದಾರರ ಮೂಲಕ ಕಾಮಗಾರಿ ಆರಂಭವಾಗಿದೆ.

ಅನುದಾನ ಹಂಚಿಕೆ
ನಗರಸಭೆ ವ್ಯಾಪ್ತಿಯ ಎಲ್ಲ 31 ವಾರ್ಡ್‌ಗಳಲ್ಲಿ ಸಣ್ಣ ಚರಂಡಿಗಳ ಹೂಳೆತ್ತಿ ಸರಾಗವಾಗಿ ನೀರು ಹರಿಯುವಂತೆ ಮಾಡಲು 20 ಲಕ್ಷ ರೂ. ನಿಗದಿಪಡಿಸಲಾಗಿದೆ. 31 ವಾರ್ಡ್‌ಗಳನ್ನು 4 ಪ್ಯಾಕೇಜ್‌ಗಳಂತೆ ವಿಂಗಡಿಸಿ ತಲಾ 5 ಲಕ್ಷ ರೂ.ನಂತೆ ಹಂಚಿಕೆ ಮಾಡಲಾಗಿದೆ. ಶ್ರೀ ಮಹಾಲಿಂಗೇಶ್ವರ ದೇವಾಲಯದ ಸುತ್ತಲೂ ಹರಿಯುವ ಬಿದಿರಹಳ್ಳ, ಕೆನರಾ ಬ್ಯಾಂಕ್‌ ಹಿಂಬದಿಯಲ್ಲಿ ಹರಿಯುವ ತೋಡು ನಗರದಲ್ಲಿ ಹರಿಯುವ ಪ್ರಮುಖ ರಾಜಕಾಲುವೆಯಾಗಿದ್ದು ಇದರ ಹೂಳೆತ್ತುವ ಕಾರ್ಯಕ್ಕೆ ಪ್ರತ್ಯೇಕ 10 ಲಕ್ಷ ರೂ. ನಿಗದಿಪಡಿಸಿ ಸ್ವಚ್ಛತಾ ಕಾರ್ಯವನ್ನು ನಡೆಸಲಾಗಿದೆ.

ಶಾಶ್ವತ ಪರಿಹಾರ
ದರ್ಬೆ ಸಮೀಪದ ಅಂಕಲ್ ಸ್ವೀಟ್ಸ್‌ ಅಂಗಡಿಯ ಬಳಿ ಚರಂಡಿಯಲ್ಲಿ ಪ್ರತಿ ವರ್ಷವೂ ಕಲುಷಿತ ನೀರು ಬ್ಲಾಕ್‌ ಆಗುವ, ಈ ಭಾಗದ ನಿವಾಸಿಗಳು ದೂರು ನೀಡುವ ಪ್ರಕ್ರಿಯೆ ನಡೆಯುತ್ತಿತ್ತು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮರ್ಪಕ ಮೋರಿ ಅಳವಡಿಸಿ ಕಾಂಕ್ರೀಟ್‌ಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಗರೋತ್ಥಾನ ಯೋಜನೆಯ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದ್ದು, ಈ ಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ವಾಹನಗಳನ್ನು ರಸ್ತೆ ಬದಿ ನಿಲ್ಲಿಸದಂತೆ ನಿಗಾ ವಹಿಸಲಾಗಿದೆ.

ಡಿಸಿಗೆ ಪ್ರಸ್ತಾವನೆ
ಮಳೆಗಾಲದ ಆರಂಭದಲ್ಲಿ ಸೊಳ್ಳೆ ಉತ್ಪತ್ತಿಯ ಮೂಲಕ ರೋಗಗಳು ಬಾಧಿಸದಂತೆ ಫಾಗಿಂಗ್‌ ನಡೆಸಲು ಸಿಬಂದಿಯನ್ನು ಸಿದ್ಧಗೊಳಿಸಲಾಗಿದೆ. ನಗರಸಭೆ ಆಡಳಿತದಲ್ಲಿ ಈಗಾಗಲೇ ಒಂದು ಫಾಗಿಂಗ್‌ ಮೆಶಿನ್‌ ಇದ್ದು, ಇನ್ನೊಂದು ಮೆಶಿನ್‌ಗೆ ನಗರಸಭಾ ಆಡಳಿತಾಧಿಕಾರಿ ಯಾಗಿರುವ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜತೆಗೆ ಮರ ಕಟ್ಟಿಂಗ್‌ ಮೆಶಿನ್‌ಗೂ ಪ್ರಸ್ತಾವನೆ ನೀಡಲಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸೇತುವೆ ವಿಸ್ತರಣೆಗೆ ಮನವಿ
ನಗರಸಭಾ ವ್ಯಾಪ್ತಿಯ ಎಪಿಎಂಸಿ ರಸ್ತೆ ಭಾಗದಲ್ಲಿ ತೋಡಿನಲ್ಲಿ ನೀರು ನಿಂತು ಮನೆಗಳಿಗೆ ನುಗ್ಗುವ ವಿಚಾರ ಪ್ರತಿ ವರ್ಷವೂ ಮುಂದುವರೆಯುತ್ತಿದ್ದು, ಈ ನಿಟ್ಟಿನಲ್ಲಿ ಬ್ರಿಡ್ಜ್ ಮತ್ತು ಮೋರಿಯನ್ನು ದೊಡ್ಡದು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಮಂಜೂರಾತಿ ಆಗಿಲ್ಲ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರ ಕಂಟ್ರೋಲ್ ರೂಂ
ಮಳೆಗಾಲದಲ್ಲಿ ಚರಂಡಿಗಳಲ್ಲಿ ನೀರಿನ ಹರಿವಿಗೆ ಸಮಸ್ಯೆಯಾಗದಂತೆ ಎಲ್ಲಾ ವಾರ್ಡ್‌ಗಳ ಸಣ್ಣ ಚರಂಡಿಗಳು, ನಗರದಲ್ಲಿ ಹರಿಯುವ ಕಾಲುವೆಯ ಹೂಳೆತ್ತುವ ಕಾಮಗಾರಿ ಈಗಾಗಲೇ ನಡೆಯುತ್ತಿದೆ. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾದರೂ ಮಾಹಿತಿ ನೀಡುವ ನಿಟ್ಟಿನಲ್ಲಿ ನಗರಸಭೆಯಲ್ಲಿ ಪ್ರತ್ಯೇಕವಾಗಿ ವಾರದೊಳಗೆ ಕಂಟ್ರೋಲ್ ರೂಂ ತೆರೆಯಲಾಗುತ್ತದೆ.
– ಅರುಣ್‌ ಕುಮಾರ್‌ ಪ್ರಭಾರ ಪೌರಾಯುಕ್ತರು, ನಗರಸಭೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next