Advertisement

ಜೋಡಿ ಕೊಲೆ: ಇಬ್ಬರ ಅಪರಾಧ ಸಾಬೀತು

12:42 PM Feb 23, 2017 | Team Udayavani |

ಪುತ್ತೂರು: ಕೋಡಿಂಬಾಳ ಗ್ರಾಮದ ಉಂಡಿಲದಲ್ಲಿ ನಾಲ್ಕೂವರೆ ವರ್ಷಗಳ‌ ಹಿಂದೆ ದಂಪತಿಯನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳು ಅಪರಾಧಿ ಎಂದು ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ 
ಮತ್ತು ಸತ್ರ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ. ಆರೋಪಿಗಳಿಗೆ ಫೆ. 25ರಂದು ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲಿದೆ.

Advertisement

ಸೋಮವಾರ ಪೇಟೆ ತಾಲೂಕಿನ ಮಹಮ್ಮದ್‌ ರಫೀಕ್‌ ಅಲಿಯಾಸ್‌ ರಫೀಕ್‌ ಮತ್ತು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ನುರಿಯಾಳು ನಿವಾಸಿ ಮಹಮ್ಮದ್‌ ಕಮಲುದ್ದೀನ್‌ ಯಾನೆ ಸೈದು ಕೊಲೆ ಪ್ರಕರಣದ ಅಪರಾಧಿಗಳು. ಕೋಡಿಂಬಾಳ ಉಂಡಿಲ ನಿವಾಸಿಗಳಾದ ಬೇಬಿ ಥಾಮಸ್‌ (58) ಮತ್ತು ಅವರ ಪತ್ನಿ ಮೇರಿ ಥಾಮಸ್‌ (45) ಕೊಲೆಯಾದ ದಂಪತಿಗಳು.

ಘಟನೆ ವಿವರ
2012ರ  ಸೆ. 25ರಂದು ರಾತ್ರಿ 12 ಗಂಟೆಯ ಸಮಯದಲ್ಲಿ ಈ ಇಬ್ಬರು ಆರೋಪಿಗಳು ಉಂಡಿಲದ ಬೇಬಿ ಥಾಮಸ್‌ ಅವರ ಮನೆ ಮುಂಭಾಗಕ್ಕೆ ಬಂದು ಬೈಕ್‌ ಹಾಳಾಗಿದ್ದು, ಅಲ್ಲಿಂದ ಒಂದೂವರೆ ಕಿ.ಮೀ. ದೂರದಲ್ಲಿನ ಆರೋಪಿಯ ಪತ್ನಿಯ ಮನೆಗೆ ಹೋಗಬೇಕಾಗಿರುವುದಾಗಿ ಅವರು ಬೇಬಿ ಥಾಮಸ್‌ ಅವರ ಬಳಿ ಹೇಳಿದ್ದರು. ಆರೋಪಿಗಳು ತೆರಳಬೇಕಾದ ಸ್ಥಳ ಪರಿಚಯವಿದ್ದ ಕಾರಣ, ಬೇಬಿ ಥಾಮಸ್‌ ಅವರು ತನ್ನ ಇಂಡಿಕಾ ಕಾರಿನಲ್ಲಿ ಈ ಇಬ್ಬರನ್ನು ಕರೆದುಕೊಂಡು ಹೋಗಿದ್ದರು. ಬೊಳ್ಳೂರು ಕ್ರಾಸ್‌ ಸಮೀಪ ತಲುಪಿದಾಗ ಆರೋಪಿಗಳು ಕಾರು ನಿಲ್ಲಿಸುವಂತೆ ಸೂಚಿಸಿದ್ದರು.

ಈ ವೇಳೆ ಹಿಂಬದಿ ಆಸನದಲ್ಲಿ ಮಹಮ್ಮದ್‌ ರಫೀಕ್‌  ಬೇಬಿ ಥಾಮಸ್‌ ಅವರಿಗೆ ಚೂರಿಯಿಂದ ಇರಿದಿದ್ದಾನೆ. ಅನಂತರ ಬೇಬಿ ಥಾಮಸ್‌ ಅವರ ಎರಡು ಕೈಗಳನ್ನು ಹಿಂದಕ್ಕೆ ಎಳೆದು ಬಿಗಿಯಾಗಿ ಹಿಡಿದ ವೇಳೆ ಮುಂಭಾಗದ ಸೀಟಿನಲ್ಲಿದ್ದ ಇನ್ನೋರ್ವ ಆರೋಪಿ ಕಮಾಲುದ್ದಿನ್‌ ಕುತ್ತಿಗೆಗೆ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ.

ಅನಂತರ ಮೃತದೇಹವನ್ನು ಆರೋಪಿಗಳು ಬೇಬಿ ಥಾಮಸ್‌ ಅವರ ಮನೆಗೆ ತಂದಿದ್ದರು. ಈ ವೇಳೆ ಆರೋಪಿಗಳು ಮನೆ ಬಾಗಿಲು ಒಳಹೊಕ್ಕಿ ಬೇಬಿ ಥಾಮಸ್‌ ಅವರ ಪತ್ನಿ ಮೇರಿ ಥಾಮಸ್‌ ಅವರ ಕುತ್ತಿಗೆ ಇರಿದು ಕೊಲೆ ಮಾಡಿದ್ದಾರೆ.
ಬಳಿಕ ಮೃತದೇಹವನ್ನು ಮನೆಯೊಳಗೆ ಇರಿಸಿದ್ದರು. ಆರೋಪಿಗಳು ಬೇಬಿ ಥಾಮಸ್‌ ಅವರ ಕುತ್ತಿಗೆಯಲ್ಲಿದ್ದ 90,800 ರೂ. ಮೌಲ್ಯದ ಚೈನ್‌, ಮೇರಿ ಥಾಮಸ್‌ ಅವರ ಬೆಂಡೋಲೆೆ, ಮನೆಯ ಕಪಾಟಿನಲ್ಲಿದ್ದ ನಗದು, ಮೊಬೈಲ್‌ ಅನ್ನು ಎಗರಿಸಿ ಪರಾರಿ ಆಗಿದ್ದರು.

Advertisement

ಪ್ರಕರಣವನ್ನು ಕೈಗೆತ್ತಿಕೊಂಡ ಕಡಬ ಠಾಣಾ ಪೊಲೀಸರು ಒಂದು ತಿಂಗಳ ಅನಂತರ ಆರೋಪಿಗಳು ಕೊಲೆಯಾದ ಮನೆಯಿಂದ ಕದ್ದೊಯ್ದ ಮೊಬೈಲ್‌ ಸಂಖ್ಯೆಯನ್ನು ಭೇದಿಸಿ ಈ ಇಬ್ಬರು ಆರೋಪಿಗಳನ್ನು ಮಡಿಕೇರಿ ಸಮೀಪ ಬಂಧಿಸಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಸಾಕ್ಷé ವಿಚಾರಣೆಯ ಸಂದರ್ಭ ಆರೋಪಿಗಳು ದರೋಡೆಗೈದ ಚಿನ್ನಾಭರಣವನ್ನು ಸೋಮವಾರ ಪೇಟೆಯಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದು ಈ ಇಬ್ಬರ ಮೇಲಿನ ಆರೋಪ ದೃಢಪಟ್ಟಿದೆ.  ಬುಧವಾರ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಂ. ರಾಮಚಂದ್ರ ಅವರ ನ್ಯಾಯಪೀಠ ಆರೋಪಿಗಳಿಬ್ಬರು ಅಪರಾಧಿಗಳು ಎಂದು ತೀರ್ಪು ನೀಡಿದೆ. 

ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಎಂ. ಉದಯಕುಮಾರ್‌ ಅವರು ವಾದ ಮಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next