Advertisement

ಸಮ್ಮಿಶ್ರ ಸರ್ಕಾರದಲ್ಲಿ ಜಿಲ್ಲೆ ಅಭಿವೃದ್ಧಿಯಾಗಿಲ್ಲ

12:29 PM Aug 25, 2019 | Team Udayavani |

ಹಾಸನ: ಸಮ್ಮಿಶ್ರ ಸರ್ಕಾರದ 14 ತಿಂಗಳ ಆಡಳಿತಾವಧಿಯಲ್ಲಿ ಜೆಡಿಎಸ್‌ ಮುಖಂಡರ ಅಭಿವೃದ್ಧಿಯಾಯಿತೇ ಹೊರತು ಹಾಸನ ಜಿಲ್ಲೆಯ ಅಭಿವೃದ್ಧಿಯಾಗಲಿಲ್ಲ ಎಂದು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಆರೋಪಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ, ವಿಧಾನಪರಿಷತ್‌ ಸದಸ್ಯ ಎಂ.ಎ. ಗೋಪಾಲಸ್ವಾಮಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಾವಗಲ್ ಮಂಜುನಾಥ್‌, ಮಾಜಿ ಶಾಸಕ ಸಿ.ಎಸ್‌.ಪುಟ್ಟೇಗೌಡ, ಮುಖಂಡ ಬಾಗೂರು ಮಂಜೇಗೌಡ ಮಾತನಾಡಿ, ಕಳೆದ 14 ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಜೆಡಿಎಸ್‌ ಆಡಳಿತವಿತ್ತೇ ಹೊರತು ಕಾಂಗ್ರೆಸ್‌ನ ಪಾಲಿರಲಿಲ್ಲ. ಕಾಂಗ್ರೆಸ್‌ ಕಾರ್ಯಕರ್ತರಿಗೆ ನೋವು ಕೊಡುವುದು ತಪ್ಪಿರಲಿಲ್ಲ. ಸಮ್ಮಿಶ್ರ ಸರ್ಕಾರವಿದ್ದುದರಿಂದ ನಾವೆಲ್ಲಾ ಬಾಯಿ ಮುಚ್ಚಿಕೊಂಡಿದ್ದೆವು. ಆದರೆ ಈಗ ಮಾತನಾಡುವ ಸ್ವಾತಂತ್ರ್ಯ ಸಿಕ್ಕಿದೆ ಎಂದರು.

ಏತ ನೀರಾವರಿ ನಿರ್ಲಕ್ಷ್ಯ: ಚನ್ನರಾಯಪಟ್ಟಣ ತಾಲೂಕಿನಲ್ಲಿ ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ಸಮ್ಮಿಶ್ರ ಸರ್ಕಾರದಲ್ಲಿ ಆಗುತ್ತದೆಂಬ ನಿರೀಕ್ಷೆಯಿತ್ತು. ಆದರೆ ಆ ನಿಟ್ಟಿನಲ್ಲಿ ನಿರೀಕ್ಷಿತ ಕೆಲಸ ಆಗಲೇ ಇಲ್ಲ. ನುಗ್ಗೇಹಳ್ಳಿ, ಹಿರೀಸಾವೆ, ಕಾಚೇನಹಳ್ಳಿ ಏತ ನೀರಾ ವರಿಯ 2 ಮತ್ತು 3 ನೇ ಹಂತದ ಯೋಜನೆಗಳು ಆಗಲಿಲ್ಲ. 2ನೇ ಹಂತದ ಕಾಚೇನಹಳ್ಳಿ ಏತ ನೀರಾವರಿ ಯೋಜನೆ ಶೇ. 90ರಷ್ಟು ಮುಗಿ ದಿದ್ದರೂ ಶೇ.10ರಷ್ಟು ಕಾಮಗಾರಿ ನಡೆಸದಂತೆ ಎಚ್.ಡಿ.ರೇವಣ್ಣ ತಡೆ ಹಿಡಿದಿದ್ದಾರೆ. 3ನೇ ಹಂತದ ಯೋಜನೆ ಮಂಜೂರಾಗಿಲ್ಲ ಎಂದರು.

ತೋಟಿ ಗ್ರಾಮದ ಬಳಿ ಏತ ನೀರಾವರಿ ಯೋಜನೆ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೇ ಮಂಜೂರಾಗಿತ್ತು ಎಂದರು.

ಪ್ರಗತಿ ಕಾಣದ ಎತ್ತಿನ ಹೊಳೆ ಯೋಜನೆ: ಎತ್ತಿನಹೊಳೆ ಯೋಜನೆಯಿಂದ ಹಾಸನ ಜಿಲ್ಲೆಯ ಬೇಲೂರು ಮತ್ತು ಅರಸೀಕೆರೆ ತಾಲೂಕಿಗೆ ನೀರು ಹರಿಯಲಿದೆ. ಆದರೆ 14 ತಿಂಗಳಲ್ಲಿ ಈ ಮಹತ್ವದ ಯೋಜನೆಯ ಪ್ರಗತಿ ಆಗಲೇ ಇಲ್ಲ. ಈ ಯೋಜನೆಯ ಪ್ರಗತಿಯ ಪರಿಶೀಲನೆಗೆ ಒಂದು ಸಭೆಯೂ ನಡೆಯಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್‌ ಆರೋಪಿಸಿದರು.

Advertisement

ಜಿಪಂಗೆ ಅನುದಾನ ಶೂನ್ಯ: ಹಾಸನ ಜಿಲ್ಲಾ ಪಂಚಾಯಿತಿಗೂ ಸಮ್ಮಿಶ್ರ ಸರ್ಕಾರದಲ್ಲಿ ವಿಶೇಷ ಅನುದಾನ ಬರಲಿಲ್ಲ ಎಂದು ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಆರೋಪಿಸಿದರು.

ಸಿದ್ದರಾಮಯ್ಯ ಮಾತು ಸತ್ಯ: ಮಾಜಿ ಮುಖ್ಯಮಂತ್ರಿ ಸಿದ್ದರಾಯಮಯ್ಯ ಅವರು ದೇವೇಗೌಡರು ಮತ್ತು ಎಚ್‌ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿರುವುದು ಶೇ.100ರಷ್ಟು ಸತ್ಯ. ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಮಾಡಿರುವ ಆರೋಪಗಳು ಶೋಭೆ ತರುವಂತದ್ದಲ್ಲ. ಸಿದ್ದರಾಮಯ್ಯ ಬದ್ಧತೆ ಇರುವ ರಾಜಕಾರಣಿ ಎಂದು ಕಾಂಗ್ರೆಸ್‌ ಮುಖಂಡರು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next