Advertisement

ಮತ್ತೆ ಬಂದ ಶಿಷ್ಯ ದೀಪಕ್‌

10:08 AM Mar 14, 2020 | mahesh |

“ನಾನಿಲ್ಲಿ ಖುಷಿಗಿಂತ ದುಃಖ ಅನುಭವಿಸಿದ್ದೇ ಹೆಚ್ಚು. ನಾನು ದುರಹಂಕಾರಿಯಲ್ಲ. ನಾನು ಹೀರೋ ಅಲ್ಲ. ಕಲಾವಿದನಷ್ಟೇ. ನನ್ನ ನೋವನ್ನು ಎಲ್ಲರಿಗೂ ತಲುಪಿಸಿ. ನನ್ನ ಬಗ್ಗೆ ಹಬ್ಬುವ ಎಲ್ಲಾ ಮಾತುಗಳು ಸುಳ್ಳು…’

Advertisement

– ಇದು ದೀಪಕ್‌ ಮಾತು. ದೀಪಕ್‌ ಅಂದಾಕ್ಷಣ ಥಟ್ಟನೆ ನೆನಪಾಗೋದು ಕಷ್ಟ. “ಶಿಷ್ಯ’ ದೀಪಕ್‌ ಅಂದಾಗ, ಓ ಅವರಾ ಅನ್ನೋ ಉದ್ಘಾರ ಬರುತ್ತೆ. ಅದೇ “ಶಿಷ್ಯ’ ದೀಪಕ್‌ ಹೀಗೆ ಹೇಳಿಕೊಂಡರು. ಅಂದಹಾಗೆ, ಅವರು ಹೀಗೆ ಹೇಳ್ಳೋಕೆ ಕಾರಣ. ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇಲ್ಲಿಗೆ ಒಂದೂವರೆ ದಶಕ ಕಳೆದಿದೆ. 14 ವರ್ಷ ಕಳೆದು ಈಗ 15 ನೇ ವರ್ಷಕ್ಕೆ ಹೆಜ್ಜೆ ಇಡುತ್ತಿರುವ ಅವರು, ಆ ಕುರಿತು ತಮ್ಮ ಸಿನಿಪಯಣದ ಸಿಹಿ-ಕಹಿ ಅನುಭವ ಹಂಚಿಕೊಂಡರು. ಅಂದು ಮಾತಿಗಿಳಿದ “ಶಿಷ್ಯ’ ದೀಪಕ್‌, ಹೇಳಿದ್ದಿಷ್ಟು. “ನಾನು ಬಹಳ ಗ್ಯಾಪ್‌ ಬಳಿಕ ಪುನಃ ತೆರೆ ಮೇಲೆ ಬರುತ್ತಿದ್ದೇನೆ. ಇದು ನನ್ನ 15 ನೇ ವರ್ಷದ ಪಯಣ. ಇಷ್ಟು ವರ್ಷದ ಜರ್ನಿಯಲ್ಲಿ ನಾನು ಖುಷಿಗಿಂತ ದುಃಖ ಅನುಭವಿಸಿದ್ದೇ ಹೆಚ್ಚು. ಸಾಕಷ್ಟು ಏಳು-ಬೀಳು ಕಂಡಿದ್ದೇನೆ. ನನ್ನ ಸೋಲು-ಗೆಲುವಿನಲ್ಲಿ ಜೊತೆಗಿದ್ದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಬಗ್ಗೆ ಸಾಕಷ್ಟು ತಪ್ಪು ಮಾಹಿತಿ ಹರಿದಾಡಿವೆ. ಅದೆಲ್ಲವೂ ಶುದ್ಧ ಸುಳ್ಳು. ನಾನು ದುರಹಂಕಾರಿ ಅಲ್ಲ. ಕಥೆಯಲ್ಲಿ ಮೂಗು ತೂರಿಸಲ್ಲ. ಸೆಟ್‌ಗೆ ಲೇಟ್‌ ಆಗಿ ಬರಲ್ಲ. ಯಾರೋ ಹೇಳಿದ್ದನ್ನು ಕೇಳಿಕೊಂಡು, ಅದು ಇನ್ನಷ್ಟು ಜನರಿಗೆ ಹರಿಯುತ್ತಿದೆ. ನಾನಿಲ್ಲಿ ಹೀರೋ ಆಗಬೇಕು ಅಂತ ಬಂದವನಲ್ಲ. ಕಲಾವಿದ ಆಗಬೇಕಷ್ಟೇ. ನನಗೆ ಸಿನಿಮಾ ಅನ್ನೋದು ಪ್ಯಾಷನ್‌. ಎಷ್ಟೋ ಜನ ಮೂರು ವರ್ಷಕ್ಕೆ ಒಂದು ಸಿನ್ಮಾ ಮಾಡಿದರೆ, ಗುರುತಿಸೋದು ಹೇಗೆ ಅಂತಾರೆ. ನಿಜವಾಗಿಯೂ ನನಗೆ ಸಿನಿಮಾ ದುಡಿಮೆ ಅಲ್ಲವೇ ಅಲ್ಲ. ಅದೊಂದು ಪ್ರೀತಿಯಷ್ಟೇ. ಹಾಗಾಗಿ, ಇಷ್ಟು ವರ್ಷದ ಕಹಿ ಅನುಭವಗಳೆಲ್ಲವನ್ನೂ ಗಂಟುಗಟ್ಟಿ ಇಟ್ಟಿದ್ದೇನೆ. ಈಗ ಹೊಸ ಇನ್ನಿಂಗ್ಸ್‌ ಶುರು ಮಾಡಿದ್ದೇನೆ. ಇನ್ನು ಮುಂದೆ ಹೀರೋ ಆಗಿ ಕಾಣಿಸಿಕೊಳ್ಳಲ್ಲ. ನೆಗೆಟಿವ್‌ ಶೇಡ್‌ನ‌ಲ್ಲಿ ಎಂಟ್ರಿಯಾಗುತ್ತಿದ್ದೇನೆ’ ಎಂದು ಹೇಳಿಕೊಂಡರು ದೀಪಕ್‌.

ಸದ್ಯಕ್ಕೆ “ಜೋಗಿ’ ಪ್ರೇಮ್‌ ನಿರ್ದೇಶನದ “ಏಕ್‌ ಲವ್‌ ಯಾ’ ಚಿತ್ರದಲ್ಲಿ ರೆಬೆಲ್‌ ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು, ಪ್ರಜ್ವಲ್‌ ದೇವರಾಜ್‌ ಅಭಿನಯದ “ವೀರಂ’ ಚಿತ್ರದಲ್ಲೂ ನಾನು ಮೇಜರ್‌ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಎರಡು ಸಿನಿಮಾಗಳು ನನ್ನ ದೊಡ್ಡ ಹೆಜ್ಜೆಗಳಾಗುತ್ತವೆ ಎಂದು ನಂಬಿದ್ದೇನೆ. ಪುನಃ ನನ್ನ ಜರ್ನಿಗೆ ಈ ಎರಡು ಚಿತ್ರಗಳು ಸಾಥ್‌ ಕೊಟ್ಟಿವೆ. ಅವಕಾಶ ಕೊಟ್ಟ ಪ್ರೇಮ್‌ ಸರ್‌ಗೂ ಹಾಗು “ವೀರಂ’ ಚಿತ್ರತಂಡಕ್ಕೂ ಥ್ಯಾಂಕ್ಸ್‌’ ಎಂದರು ದೀಪಕ್‌.

ಅಂದು ಅಷ್ಟು ವರ್ಷ ಸಿನಿಪಯಣಕ್ಕೆ ಸಾಥ್‌ ಕೊಟ್ಟ, ಅಭಿನಯಿಸಲು ಅವಕಾಶ ಕೊಟ್ಟ ನಿರ್ದೇಶಕ, ನಿರ್ಮಾಪಕರನ್ನು ದೀಪಕ್‌ ಗೌರವಿಸಿದರು. ಮೊದಲ ಸಿನಿಮಾ ಮೂಲಕ ಅವಕಾಶ ಕೊಟ್ಟ ಭಾ.ಮ.ಹರೀಶ್‌, ಭಾ.ಮ.ಗಿರೀಶ್‌ ಹಾಗು ಕುಮಾರ್‌, ವಿಜಯಕುಮಾರ್‌, ಶಶಿಧರ್‌ ಕೆ.ಎಂ. ಮೊದಲ ಚಿತ್ರದ ಹಿರಿಯ ಪ್ರಚಾರಕರ್ತರಾದ ವಿಜಯಕುಮಾರ್‌, ನಾಗೇಂದ್ರ ಹಾಗು ಹಿರಿಯ ಛಾಯಾಗ್ರಾಹಕರಾದ ಕೆ.ಎನ್‌.ನಾಗೇಶ್‌ಕುಮಾರ್‌ ಅವರನ್ನು ಇದೇ ವೇಳೆ ಸನ್ಮಾನಿಸಿದರು ದೀಪಕ್‌. ಗೌರವ ಸ್ವೀಕರಿಸಿದ ಪ್ರತಿಯೊಬ್ಬರೂ, ದೀಪಕ್‌ ಅವರ ಎರಡನೇ ಇನ್ನಿಂಗ್ಸ್‌ ತುಂಬಾ ಅದ್ಭುತವಾಗಿರಲಿ ಎಂದು ಶುಭ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next