Advertisement

ಕೊಟ್ಟಷ್ಟು ಹಣದಲ್ಲೇ ವಜ್ರಮಹೋತ್ಸವ ಮಾಡ್ತೇವೆ

10:39 AM Oct 17, 2017 | Team Udayavani |

ವಿಧಾನಸೌಧಕ್ಕೆ 60 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವಜ್ರಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಹೆಸರಿನಲ್ಲಿ ದುಂದು ವೆಚ್ಚ ಮಾಡಲಾಗುತ್ತಿದೆ ಎಂಬ ಮಾತುಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ರಾಜ್ಯದಲ್ಲಿ ಅಕಾಲಿಕ ಮಳೆಯಿಂದ ಅತಿವೃಷ್ಠಿ ಹೆಚ್ಚಾಗಿ ಸಾಮಾನ್ಯ ಜನರು ಸಂಕಷ್ಟದಲ್ಲಿರುವಾಗ ಅದ್ಧೂರಿ ಕಾರ್ಯಕ್ರಮ ನಡೆಸಿ ಶಾಸಕರಿಗೆ ಬಂಗಾರದ ಉಡುಗೊರೆ ಕೊಡುವ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರೊಂದಿಗೆ ನೇರಾ ನೇರ ಮಾತಿಗಿಳಿದಾಗ

Advertisement

ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚ ಮಾಡ್ತಿದೀರಿ?
ಎರಡು ದಿನದ ಈ ಕಾರ್ಯಕ್ರಮ ನಡೆಸುವ ಕುರಿತಂತೆ ನಾವು ಸಭೆ ಕರೆದಿದ್ದು, ಅಂದು ನಾನು, ವಿಧಾನ ಪರಿಷತ್‌ ಸಭಾಪತಿ, ಕಾನೂನು ಸಚಿವರು, ಡಿಪಿಎಆರ್‌, ಪಿಡಬ್ಲುಡಿ, ಹಣಕಾಸು ಇಲಾಖೆ ಕಾರ್ಯದರ್ಶಿಗಳು ಹಾಗೂ ನಗರ ಪೊಲಿಸ್‌ ಆಯುಕ್ತ ಸುನಿಲ್‌ ಕುಮಾರ್‌, ಹೆಚ್ಚುವರಿ ಪೊಲಿಸ್‌ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಹಾಗೂ ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಎಲ್ಲರೂ ಸೇರಿ ಕಾರ್ಯಕ್ರಮದ ಖರ್ಚು ವೆಚ್ಚ ಸಿದ್ಧ‌ಪಡಿಸಿದ್ದು, 26 ಕೋಟಿ ವೆಚ್ಚವಾಗಲಿದೆ ಎಂದು ನಿರ್ಧರಿಸಿ ಆರ್ಥಿಕ ಇಲಾಖೆಗೆ ಕಳುಹಿಸಿಕೊಟ್ಟಿದ್ದೇವೆ. ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ನಮ್ಮ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಕಡಿಮೆಯೂ ಮಾಡಿಲ್ಲ. ತಿರಸ್ಕಾರವನ್ನೂ ಮಾಡಿಲ್ಲ. ಅವರು ಎಷ್ಟು ಹಣ ಕೊಡುತ್ತಾರೋ ಅಷ್ಟರಲ್ಲಿಯೇ ಮಾಡುತ್ತೇವೆ. ಎರಡು ಕೋಟಿ ಕೊಟ್ಟರೂ ಮಾಡುತ್ತೇವೆ. 20 ಕೋಟಿ ಕೊಟ್ಟರೂ ಮಾಡುತ್ತೇವೆ.   

ಖರ್ಚಿನ ಬಗ್ಗೆ ಸರಕಾರದ ಗಮನಕ್ಕೆ ತಂದಿಲ್ಲ ಅನ್ನೋ ಆರೋಪ ಇದೆಯಲ್ಲಾ? 
ವಜ್ರಮಹೋತ್ಸವ ಕಾರ್ಯಕ್ರಮದ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಆಗಬೇಕೆಂದು ಯಾವುದೇ ಕಾನೂನಿನಲ್ಲಿ ಇಲ್ಲ. ಇದು ಶಾಸಕಾಂಗದ ಕಾರ್ಯಕ್ರಮ. ಈ ಕಾರ್ಯಕ್ರಮದ ಬಗ್ಗೆ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿ ಗಮನಕ್ಕೆ ತಂದ ಮೇಲೆ ಸರಕಾರದ ಗಮನಕ್ಕೆ ತಂದ ಹಾಗೆ. ಈ ಕಾರ್ಯಕ್ರಮದ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಮಾಡುವ ಅಗತ್ಯವೂ ಇಲ್ಲ.   

ಕಾನೂನು ಸಚಿವರು ತಮ್ಮ ಗಮನಕ್ಕೆ ತಂದಿಲ್ಲ ಅಂತಾರೆ? 
ಈ ಕಾರ್ಯಕ್ರಮವನ್ನು ಸರಕಾರದ ಗಮನಕ್ಕೆ ತರಬೇಕೆಂದು ಎಲ್ಲಿ ಕಾನೂನಿದೆ ಅಂತ ಕಾನೂನು ಸಚಿವರನ್ನು ಕೇಳಿ, ತಮಗೆ ಏನು ಅಧಿಕಾರ ಇದೆ ಅಂತ ಬೇಕಾದ್ರೆ ಕಾನೂನು ಸಚಿವರು ಪತ್ರ ಬರೆಯಲಿ. ಅವರ ಪತ್ರಕ್ಕೆ ನಾನು ಉತ್ತರ ಕೊಡುತ್ತೇನೆ. ನಾನು ಅಲ್ಪಸ್ವಲ್ಪ ಕಾನೂನು ಓದಿದೀನಿ, ಅವರಷ್ಟು ಬುದ್ಧಿವಂತ ಅಲ್ಲದಿರಬಹುದು. ಹಿಂದೆ ನಾಲ್ಕು ಬಾರಿ ರಾಷ್ಟ್ರಪತಿಗಳು ಆಗಮಿಸಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಆವಾಗಲೂ ಯಾವುದೇ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಆಗಿಲ್ಲ. 

ಶಾಸಕರಿಗೆ ಚಿನ್ನದ ಉಡುಗೊರೆ ಕೊಡ್ತಿದೀರಂತೆ? 
ಶಾಸಕರಿಗೆ ಚಿನ್ನದ ಉಡುಗೊರೆ ಅಧಿಕಾರಿಗಳಿಗೆ ಬೆಳ್ಳಿ ಪಾತ್ರೆ ನೀಡುವ ಯಾವುದೇ ಪ್ರಸ್ತಾಪ ಇಲ್ಲ. ಅದು ಎಲ್ಲಿಂದ ಸುದ್ದಿ ಬಂತೋ ಗೊತ್ತಿಲ್ಲ. ಆದರೆ, ಎರಡು ದಿನದ ಕಾರ್ಯಕ್ರಮಕ್ಕೆ 26 ಕೋಟಿ ಅಗತ್ಯ ಇದೆ ಅಂತ ಸಮಿತಿಯಲ್ಲಿ ತೀರ್ಮಾನ ಮಾಡಿದ್ದೇವೆ. ಹಣಕಾಸು ಇಲಾಖೆ ಎಷ್ಟು ಕೊಡ್ತಾರೋ ಅಷ್ಟರಲ್ಲಿ ಮಾಡುತ್ತೇವೆ. ಇನ್ವೆಸ್ಟ್‌ ಕರ್ನಾಟಕ ಪ್ರೋಗ್ರಾಂಗೆ ಒಂದೇ ದಿನಕ್ಕೆ 54 ಕೋಟಿ ರೂಪಾಯಿ ವೆಚ್ಚ ಮಾಡಿದ್ದರು. ಹಿಂದೆ ಅಬ್ದುಲ್‌ ಕಲಾಂ ಬಂದಾಗ ಎಲ್ಲ ಶಾಸಕರಿಗೆ 50 ಸಾವಿರ ರೂಪಾಯಿಯ ಲ್ಯಾಪ್‌ಟಾಪ್‌ ಕೊಟ್ಟಿದ್ದರು. ಅದೂ ಒಂದೂವರೆ ಕೋಟಿ ರೂಪಾಯಿ ವೆಚ್ಚವಾಗಿತ್ತು. ಆಗ ಯಾರೂ ಪ್ರಶ್ನೆ ಮಾಡಲಿಲ್ಲ. ಈಗ  ಎಲ್ಲರೂ ಮಾಧ್ಯಮಗಳಿಗೆ ಮಾಹಿತಿ ನೀಡ್ತಿದಾರೆ.  

Advertisement

ಸರಕಾರ ಮತ್ತು ಸಚಿವಾಲಯದ ನಡುವೆ ಹೊಂದಾಣಿಕೆ ಕೊರತೆಯಾಗಿದೆಯಾ?
ಇದರಲ್ಲಿ ಹೊಂದಾಣಿಕೆಯ ಕೊರತೆ ಎಲ್ಲಿ ಇದೆ? ಎಲ್ಲವನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ಸಂಸದೀಯ ವ್ಯವಹಾರಗಳ ಸಚಿವರಿಗೆ ಮಾಹಿತಿ ನೀಡಬೇಕೆಂದೇನೂ ನಿಯಮ ಇಲ್ಲ. ಸಂಸದೀಯ ವ್ಯವಹಾರಗಳ ಸಚಿವರು ಅಧಿವೇಶನ ನಡೆದಾಗ ಸರಕಾರದ ಪರ ಉತ್ತರ ನೀಡುವುದಷ್ಟೇ ಅವರ ಕೆಲಸ. ಉಳಿದ ಸಚಿವರಂತೆ ಅವರೂ ಒಬ್ಬ ಸಚಿವರು, ಎಲ್ಲ ಸಚಿವರಿಗೂ ಮಾಹಿತಿ ನೀಡುವ ಅಗತ್ಯವಿಲ್ಲ. ನಮ್ಮದು ಸ್ವತಂತ್ರ ಇಲಾಖೆ. ನಮ್ಮ ಇಲಾಖೆ ಖರ್ಚು ವೆಚ್ಚ ನಾವೇ ನಿರ್ಧಾರ ಮಾಡುತ್ತೇವೆ. ಅದನ್ನು ಹಣಕಾಸು ಸಚಿವರ ಗಮನಕ್ಕೆ ತರುತ್ತೇವೆ. ಮುಖ್ಯಮಂತ್ರಿ ಹಣಕಾಸು ಸಚಿವರಾಗಿರುವುದರಿಂದ ಅವರ ಗಮನಕ್ಕೆ ತಂದಿದ್ದೇವೆ.  

ದುಂದು ವೆಚ್ಚದ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರಲ್ಲಾ? 
ಯಾರೂ ಆಕ್ಷೇಪ ವ್ಯಕ್ತಪಡಿಸುತ್ತಿಲ್ಲ. ಅವರಿಗೆ ಸರಿಯಾಗಿ ಮಾಹಿತಿ ಇಲ್ಲ. ಮಾಧ್ಯಮಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನೇ ನಂಬಿ ಅವರು ಮಾತನಾಡುತ್ತಿದ್ದಾರೆ.  

ಕೆಲವರು ಬಂಗಾರದ ಉಡುಗೊರೆ ಪಡೆಯೋದಿಲ್ಲ ಅಂತಿದಾರೆ? 
ನಾವು ಯಾರಿಗೂ ಬಂಗಾರದ ಉಡುಗೊರೆ ಕೊಡುವ ಪ್ರಸ್ತಾ ಪವನ್ನೇ ಮಾಡಿಲ್ಲ ಎಂದ ಮೇಲೆ ಅದನ್ನು ತೆಗೆದುಕೊಳ್ಳದೇ ಇರುವ ಪ್ರಸ್ತಾಪವೇ ಬರುವುದಿಲ್ಲ. ನಿಮಗೆ ಯಾರು ಸುಳ್ಳು ಸುದ್ದಿಗಳನ್ನು ನೀಡುತ್ತಾರೋ ಅವರನ್ನೇ ಹೋಗಿ ಕೇಳಿ.   

ನಿಮ್ಮ ವಿರುದ್ಧ‌ ಯಾರಾದರೂ ಕುತಂತ್ರ ನಡೆಸುತ್ತಿದ್ದಾರಾ?
ನಿಮಗೆ ಸುಳ್ಳು ಸುದ್ದಿ ಕೊಡುವವರು ಯಾರೋ ಅವರೇ ಅಂತಹ ಕೆಲಸ ಮಾಡುತ್ತಿರುತ್ತಾರೆ. ಇದರಲ್ಲಿ ಮುಚ್ಚಿಡು ವಂಥದ್ದೇನಿಲ್ಲ. ಖರ್ಚಿನ ಎಲ್ಲ ಲೆಕ್ಕವನ್ನೂ ಸಂಬಂಧಪಟ್ಟ ಇಲಾಖೆ ಕಾರ್ಯದರ್ಶಿಗಳ ಸಮ್ಮುಖದಲ್ಲಿಯೇ ತೀರ್ಮಾನ ಮಾಡಿದ್ದೇವೆ. ಇದರಲ್ಲಿ ನನ್ನ ವೈಯಕ್ತಿಕ ನಿರ್ಧಾರ ಏನೂ ಇಲ್ಲ. ನನ್ನ ವಿರುದ್ಧ ಯಾರು ಕುತಂತ್ರ ಮಾಡ್ತಿದ್ದಾರೆ ಅಂತ ಮಾಧ್ಯಮದವರು ಪತ್ತೆ ಹಚ್ಚಬೇಕು.  

ಅದ್ದೂರಿ ಕಾರ್ಯಕ್ರಮದ ಬದಲು ಏನಾದ್ರೂ ಸಕಾರಾತ್ಮಕ ಚರ್ಚೆ ಮಾಡಬಹುದಿತ್ತಲ್ಲಾ?
ನಾವೂ ಕನ್ನಡ ನಾಡು, ನುಡಿ, ಜಲ, ಭಾಷೆ ಕುರಿತು ಮೂರು ಗಂಟೆಗಳ ಕಾಲ ಚರ್ಚೆ ಮಾಡಬೇಕೆಂದು ತೀರ್ಮಾನ ಮಾಡಿದ್ದೆವು. ಆದರೆ, ಸರಕಾರ ವಿಧೇಯಕಗಳನ್ನು ತರುವು ದಾಗಿ ಹೇಳಿತು. ಅದನ್ನು ಇನ್ನೂ ನಮ್ಮ ಗಮನಕ್ಕೆ ತಂದಿಲ್ಲ. ನಾವು ನಾಡಿನ ಭಾಷೆ, ಜಲ ಸಂರಕ್ಷಣೆ ಕುರಿತು ಚರ್ಚಿಸಿ ಒಂದು ತೀರ್ಮಾನ ಮಾಡುತ್ತೇವೆ.  

ಈ ಅದ್ದೂರಿ ಕಾರ್ಯಕ್ರಮ ಮಾಡುವ ಮೂಲಕ ಜನರಿಗೆ ಏನು ಸಂದೇಶ ನೀಡುತ್ತೀರಿ?
ನೋಡ್ರಿ, ನಮ್ಮ ವಿಧಾನಸೌಧದಂತ ಕಟ್ಟಡ ಇಡೀ ವಿಶ್ವದ ಲ್ಲಿಯೇ ಇಲ್ಲ. ಲಂಡನ್‌ನಲ್ಲಿರುವ ಹೌಸ್‌ ಆಫ್ ಕಾಮನ್ಸ್‌, ಹೌಸ್‌ ಆಫ್ ಲಾರ್ಡ್ಸ್‌ ಎರಡನ್ನೂ ನಾನು ನೋಡಿದ್ದೇನೆ. ಇಂತಹ ಕಟ್ಟಡ ಎಲ್ಲಿಯೂ ಇಲ್ಲ. ಅಲ್ಲದೇ ಈ ಕಟ್ಟಡದ ವಜ್ರಮಹೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳನ್ನು ಕರೆಸುತ್ತಿದ್ದೇವೆ. ಇದರಲ್ಲಿ ನನ್ನ ವೈಯಕ್ತಿಕ ಹಿತಾಸಕ್ತಿ ಏನೂ ಇಲ್ಲ. ನಾಲ್ಕು ದುಡ್ಡು ಹೆಚ್ಚು ಹೋಗಬಹುದು. ಆದರೆ, ಕರ್ನಾಟಕದ ಗೌರವ ಕಾಪಾಡುವ ಕೆಲಸ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ರಾಜ್ಯದ ಗೌರವ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದ್ದೇವೆ.   

ಬೆಳಗಾವಿ ಸುವರ್ಣ ಸೌಧದ ಕಸ ಹೊಡೆಯೋರಿಗೆ ದುಡ್ಡು ಕೊಟ್ಟಿಲ್ಲ ಅನ್ನೋ ಆರೋಪ ಇದೆಯಲ್ಲಾ?
ಸುವರ್ಣ ಸೌಧ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿದೆ. ಹಿಂದಿನ ಎರಡು ತಿಂಗಳ ಬಾಕಿ, 80 ಲಕ್ಷ ವಿದ್ಯುತ್‌ ಬಿಲ್‌ ಬಾಕಿ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಮಾತ್ರ ನಾವು ನಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ. ಉಳಿದ ಸಂದರ್ಭದಲ್ಲಿ ಸರಕಾರವೇ ಅದನ್ನು ಮೇಲುಸ್ತುವಾರಿ ನೋಡಿಕೊಳ್ಳುತ್ತದೆ.

ಭವ್ಯತೆ ಸಾರಲು ಕಾರ್ಯಕ್ರಮ
ರಾಜ್ಯದ ಪ್ರತಿಷ್ಠಿತ ವಿಧಾನ ಸೌಧ ನಿರ್ಮಾಣವಾಗಿ 60 ವರ್ಷ ತುಂಬಿದೆ. ಇಂತಹ ಸಂದರ್ಭದಲ್ಲಿ ವಜ್ರಮಹೋತ್ಸವ ಮಾಡಬೇಕೆಂಬ ಆಲೋಚನೆ ಮಾಡಿದ್ದೇವೆ. ಈ ಮಹತ್ವದ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯನ್ನು ಕರೆಸಲು ತೀರ್ಮಾನಿಸಿದ್ದೇವೆ. ನಾವೇ ಸ್ವತಃ ಅವರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದೇವೆ. ಅವರೇ ನೀಡಿರುವ ಅಕ್ಟೋಬರ್‌ 25 ರಂದು ಜಂಟಿ ಅಧಿವೇಶನ ನಡೆಸಲು ತೀರ್ಮಾನ ಮಾಡಿದ್ದೇವೆ. ಈ ರೀತಿಯ ಕಟ್ಟಡ ದೇಶದಲ್ಲಿ ಎಲ್ಲಿಯೂ ಇಲ್ಲ. ಹೀಗಾಗಿ ಇಂತಹ ಸಂದರ್ಭದಲ್ಲಿ ಕಟ್ಟಡ ಭವ್ಯತೆಯನ್ನು ಸಾರಲು ಕಾರ್ಯಕ್ರಮ ನಡೆಸುತ್ತಿದ್ದೇವೆ.

ಸಂದರ್ಶನ ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next