Advertisement

ಇನ್ನೂ ಈಡೇರದ ಆಜ್ರಿ-ಬಡಬಾಳು ಸೇತುವೆ ಬೇಡಿಕೆ

11:01 PM Jul 19, 2019 | Sriram |

ಕುಂದಾಪುರ: ಆಜ್ರಿಯಿಂದ ಬಡಬಾಳುವಿಗೆ ಸಂಪರ್ಕಿಸಲು ಕುಬ್ಜಾ ನದಿಯನ್ನು ದಾಟಬೇಕಿದ್ದು, ಸಮರ್ಪಕ ಸೇತುವೆಯಿಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ.

Advertisement

ಇಲ್ಲಿನ ಜಡ್ಡಿಮೂಲೆ ಬಳಿ ಊರವರು ನಿರ್ಮಿಸಿದ ಕಾಲು ಸಂಕವೇ ಇಲ್ಲಿನ ನೂರಾರು ಮನೆಗಳಿಗೆ ಹೊಳೆ ದಾಟಲು ಆಸರೆಯಾಗಿದೆ. 20 ವರ್ಷಗಳ ಹಿಂದಿನಿಂದಲೂ ಇಲ್ಲಿ ಸೇತುವೆ ನಿರ್ಮಾಣದ ಬೇಡಿಕೆಯಿದ್ದರೂ ಸಂಬಂಧಿಸಿದ ಯಾವ ಅಧಿಕಾರಿ, ಇಲಾಖೆಗಳೂ ಇತ್ತ ಗಮನ ಹರಿಸಿಲ್ಲ. ಆದ್ದರಿಂದ ಪ್ರತಿ ವರ್ಷ ಊರವರೇ ತಾತ್ಕಾಲಿಕವಾಗಿ ನಿರ್ಮಿಸುವ ಕಾಲು ಸಂಕದಲ್ಲೇ ಜನರ ಸಂಕಷ್ಟದ ನಡಿಗೆ ಮುಂದುವರಿದಿದೆ.

ಆಜ್ರಿಯಿಂದ ಜಡ್ಡಿನಮೂಲೆ, ಯಡೂರು, ಯಡ್ನಾಡಿಯಾಗಿ ಬಡಬಾಳುವಿಗೆ ಕುಬಾj ನದಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. ಪ್ರತಿ ಬಾರಿ ಚುನಾವಣೆ ಬಂದಾಗ ಮಾತ್ರ ಸೇತುವೆ ಮಾಡಿ ಕೊಡುವ ಭರವಸೆ ಜನಪ್ರತಿನಿಧಿಗಳಿಂದ ಸಿಗುತ್ತಿದೆಯೇ ಹೊರತು, ಈ ಕನಸನ್ನು ಕಾರ್ಯರೂಪಕ್ಕೆ ತರುವಲ್ಲಿ ಯಾರೊಬ್ಬರೂ ಪ್ರಯತ್ನಿಸಿಲ್ಲ ಎಂಬುದು ಗ್ರಾಮರ್ಸತರ ಅಳಲು.

ಬಡಬಾಳುವಿನಲ್ಲಿ ಸೇತುವೆ ಇಲ್ಲದ ಕಾರಣ ಜಡ್ಡಿನಮೂಲೆ, ಯಡೂರು, ಕೇವರ್ಜಿ, ಕ್ಯಾಕೋಡು ಭಾಗದ ಜನರು ಆಜ್ರಿಗೆ ಬಂದು ಮುಖ್ಯ ಪೇಟೆ ಶಂಕರನಾರಾಯಣಕ್ಕೆ ತೆರಳಬೇಕಾದ ಪರಿಸ್ಥಿತಿ ಇದೆ. ಈ ಪ್ರಯಾಣ ಸುಮಾರು 5 ಕಿ.ಮೀ. ದೂರ ಹೆಚ್ಚುವರಿಯಾಗಿದ್ದರೂ, ಕ್ರಮಿಸಬೇಕಾದ ಅನಿವಾರ್ಯ ಇಲ್ಲಿನ ಜನರದ್ದು.

ಸಂಚಾರವೇ ಸ್ಥಗಿತ
ಆಜ್ರಿಯಿಂದ ಬಡಬಾಳು ಮಾರ್ಗ ಮಳೆಗಾಲದಲ್ಲಿ ಸಂಚಾರವೇ ಸ್ಥಗಿತಗೊಳಿಸಲಾಗುತ್ತದೆ. ಬೇಸಗೆಯಲ್ಲಿ ಕುಬಾj ನದಿಯಲ್ಲಿ ನೀರು ಕಡಿಮೆಯಾದ ಅನಂತರ ನದಿಯಲ್ಲೇ ತಾತ್ಕಾಲಿಕ ಮಾರ್ಗ ಮಾಡಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಮಳೆಗಾಲದಲ್ಲಿ ನದಿ ದಾಟಲು ಊರವರೆಲ್ಲ ಸೇರಿ ಪ್ರತಿ ವರ್ಷ ಕಾಲು ಸಂಕವನ್ನು ನಿರ್ಮಿಸಿ, ಅದರಲ್ಲಿಯೇ ಸಂಚರಿಸುತ್ತಾರೆ.

Advertisement

ಕೊಚ್ಚಿ ಹೋಗಿದ್ದ ಕಾಲು ಸಂಕ
3 ವರ್ಷಗಳ ಹಿಂದೊಮ್ಮೆ ಇದೇ ಜಡ್ಡಿಮೂಲೆಯಲ್ಲಿ ಊರವರು ನಿರ್ಮಿಸಿದ್ದ ತಾತ್ಕಾಲಿಕ ಕಾಲು ಸಂಕ ಭಾರೀ ಮಳೆಯಿಂದಾಗಿ ನೆರೆಗೆ ಕೊಚ್ಚಿಕೊಂಡು ಹೋಗಿತ್ತು. ಆ ಬಳಿಕ ಮಳೆಗಾಲ ಮುಗಿಯುವರೆಗೆ ಈ ದಾರಿಯಲ್ಲಿನ ಸಂಪರ್ಕವೇ ಕಡಿತಗೊಂಡಿತ್ತು.

ಇಲ್ಲಿಗೆ ಸೇತುವೆ ಬೇಡಿಕೆ ಕುರಿತಂತೆ ಎಲ್ಲ ಜನಪ್ರತಿನಿಧಿಗಳಿಗೂ ಮನವಿ ಕೊಟ್ಟಿದ್ದೇವೆ. ಚುನಾವಣೆ ಬಂದಾಗ ಸೇತುವೆ ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಾರೆ. ಆ ಬಳಿಕ ಮಾತ್ರ ಅದು ನನೆಗುದಿಗೆ ಬಿದ್ದಿರುತ್ತದೆ. ಪ್ರತಿ ಸಲವೂ ಇದೇ ಪುನರಾವರ್ತನೆಯಾಗುತ್ತಿದೆ ಎಂದು ಬಡಬಾಳು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಸಂಕಷ್ಟ
ಬಡಬಾಳು ಭಾಗದಿಂದ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜು, ಆಸುಪಾಸಿನ ಶಾಲಾ- ಕಾಲೇಜುಗಳಿಗೆ ಹೋಗುವ ಸುಮಾರು 25- 30 ಮಕ್ಕಳು ಇದೇ ಕಾಲ ಸಂಕದಲ್ಲಿ ಪ್ರತಿ ನಿತ್ಯ ತೆರಳಬೇಕಾಗಿದ್ದು, ಚಿಕ್ಕ ಮಕ್ಕಳು ಕೂಡ ಇರುವುದರಿಂದ ಅವರು ಹೊಳೆ ದಾಟುವಾಗ ನಿಗಾ ಇಡಬೇಕಾಗುತ್ತದೆ.

ಗಮನಕ್ಕೆ ಬಂದಿದೆ
ಆಜ್ರಿಯಿಂದ ಬಡಬಾಳುವಿಗೆ ಸಂಪರ್ಕಿಸುವ ಸೇತುವೆ ಬೇಡಿಕೆ ಕುರಿತು ಜನರು ನೀಡಿರುವ ಮನವಿ ಗಮನಕ್ಕೆ ಬಂದಿದೆ. ಅನುದಾನ ಮಂಜೂರಾತಿಗೆ ಸರ್ವ ಪ್ರಯತ್ನ ಮಾಡಲಾಗುವುದು.
-ಬಿ.ಎಂ. ಸುಕುಮಾರ ಶೆಟ್ಟಿ,
ಬೈಂದೂರು ಶಾಸಕರು

ಕಾಲು ಸಂಕಕ್ಕೆ ಅನುದಾನ
ಕಾಲು ಸಂಕಗಳಿಗೆ ಬೇಡಿಕೆಯಿದ್ದಲ್ಲಿ ತಾ.ಪಂ.ಗೆ ಪ್ರಸ್ತಾವನೆ ಕಳುಹಿಸಿ, ಅನುದಾನ ಪಡೆಯಬಹುದು. ಅದಕ್ಕೆ ಅವಕಾಶವಿದೆ. ಮುಂದಿನ ದಿನಗಳಲ್ಲಿ ಬಡಬಾಳುವಿನ ಕಾಲು ಸಂಕ ನಿರ್ಮಾಣ ಸಂಬಂಧ ಗಮನವಹಿಸಲಾಗುವುದು. ಸೇತುವೆಗೂ ಪ್ರಯತ್ನಿಸಲಾಗುವುದು.
-ದುರ್ಗಾದಾಸ್‌,
ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌,
ಲೋಕೋಪಯೋಗಿ ಇಲಾಖೆ ಕುಂದಾಪುರ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next