Advertisement
ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಎನ್ಡಿಎ ಮೈತ್ರಿಕೂಟ ಸಾಧಿಸಿರುವ ಬೃಹತ್ ಗೆಲುವು “ವಾಸ್ತವ ಸಂಗತಿ’ಯನ್ನು ಒತ್ತಿ ಹೇಳುತ್ತಿದೆ. ಹಿಂದೂ ಬಹುಸಂಖ್ಯಾತ ಭಾರತದಲ್ಲಿ ನೀವು “ಹಿಂದುಫೋಬಿಕ್'(ಹಿಂದುತ್ವ ಮತ್ತು ಹಿಂದುಗಳ ಬಗ್ಗೆ ಭಯ ಹರಡುವುದು) ಆಗಿದ್ದುಕೊಂಡು ಚುನಾವಣೆಯನ್ನು ಗೆಲ್ಲಲಾರಿರಿ ಎನ್ನುವುದೇ ಆ ಸಂಗತಿ. ಯಾವಾಗ ಈ ಪ್ರಕ್ರಿಯೆಯು ಹದ್ದುಮೀರುತ್ತದೋ ಆಗ ಹಿಂದೂಗಳ ಆಕ್ರೋಶ ಮತಗಳ ಮೂಲಕ ಹೊರಹೊಮ್ಮುತ್ತದೆ ಎನ್ನುವುದನ್ನು 2019ರ ಫಲಿತಾಂಶವು ತೋರಿಸುತ್ತಿದೆ.
Related Articles
Advertisement
ಇನ್ನು, ಈ ಚುನಾವಣೆಯು ಅನೇಕ ಕಟ್ಟುಕತೆಗಳಿಗೂ ಅಂತ್ಯ ಹಾಡಿದೆ. ಮೊದಲನೆಯದಾಗಿ, ದಕ್ಷಿಣ ಮತ್ತು ಪೂರ್ವ ರಾಜ್ಯಗಳು ಬಿಜೆಪಿಯನ್ನು ಹೊರಗಿಟ್ಟಿವೆ ಎನ್ನುವುದು ಈಗ ವಾಸ್ತವವಲ್ಲ. ದಕ್ಷಿಣ ರಾಜ್ಯಗಳ ವಿಚಾರಕ್ಕೆ ಬಂದರೆ ನರೇಂದ್ರ ಮೋದಿ ರಾಷ್ಟ್ರೀಯ ವೇದಿಕೆಗೆ ಬರುವುದಕ್ಕೂ ಅನೇಕ ವರ್ಷಗಳ ಮುನ್ನವೇ ಬಿಜೆಪಿಯು ಕರ್ನಾಟಕದಲ್ಲಿ ಅಧಿಕಾರ ನಡೆಸಿತ್ತು.
ಮೋದಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯು ಪೂರ್ವ ರಾಜ್ಯಗಳಲ್ಲಿ ಆಕ್ರಮಣಕಾರಿಯಾಗಿ ನೆಲೆ ವಿಸ್ತರಿಸಿಕೊಂಡಿತು. ಅನೇಕ ಈಶಾನ್ಯ ರಾಜ್ಯಗಳನ್ನು ತೆಕ್ಕೆಗೆ ತೆಗೆದುಕೊಂಡಿತು. ಈಗ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಗೆ ಮತ್ತು ಒಡಿಶಾದಲ್ಲಿ ನವೀನ್ ಪಟ್ನಾಯಕ್ರ ಬಿಜುಜನತಾದಳಕ್ಕೆ ಬಲಿಷ್ಠ ಪರ್ಯಾಯ ಶಕ್ತಿಯಾಗಿ ಬೆಳೆದುನಿಂತಿದೆ ಬಿಜೆಪಿ.
ಕೇರಳದಲ್ಲಿ ಎಡಪಕ್ಷದ ಸೋಲು, ಭವಿಷ್ಯದಲ್ಲಿ ಬಿಜೆಪಿ ಅಲ್ಲಿ ಬೆಳೆಯಲಿದೆ ಎನ್ನುವುದನ್ನು ಸೂಚಿಸುತ್ತಿದೆ. ಇನ್ನು, ಕೆಲವೇ ತಿಂಗಳ ಹಿಂದೆ ತೆಲಂಗಾಣ ವಿಧಾನಸಭೆಯಲ್ಲಿ ಟಿಆರ್ಎಸ್ ಎದುರು ಹೀನಾಯವಾಗಿ ಸೋತಿದ್ದ ಬಿಜೆಪಿ, ಈಗ ಲೋಕಸಭಾ ಚುನಾವಣೆಯಲ್ಲಿ ಆ ರಾಜ್ಯದಲ್ಲಿ ಸ್ಥಾನಗಳನ್ನು ಗಳಿಸಿದೆ. ಆ ಮೂಲಕ ದಕ್ಷಿಣದಲ್ಲೂ ಬಿಜೆಪಿಯ ಹೆಜ್ಜೆಗುರುತುಗಳು ಹಬ್ಬುತ್ತಿವೆ ಎನ್ನುವುದು ಸ್ಪಷ್ಟವಾಗುತ್ತಿದೆ.
ಎರಡನೆಯದಾಗಿ, ಎಡ ಪಕ್ಷವು ಈಗ ಐಡೆಂಟಿಟಿ ಕ್ರೈಸಿಸ್ ಅನುಭವಿಸುತ್ತಿವೆ. ಮೂರೂ ರಾಜ್ಯಗಳಲ್ಲೂ ಅದು ಹಿಂದೂ ಮತಗಳನ್ನು ಕ್ಷಿಪ್ರವಾಗಿ ಕಳೆದುಕೊಳ್ಳುತ್ತಿದೆ. ಒಂದು ವೇಳೆ ಅದೇನಾದರೂ ಗಟ್ಟಿಯಾಗಲು ಬಯಸುತ್ತದೆ ಎಂದಾದರೆ “ಹಿಂದೂಫೋಬಿಕ್’ ಪಾರ್ಟಿ ಆಗಿ ವರ್ತಿಸುವುದನ್ನು ನಿಲ್ಲಿಸಬೇಕು. ಸತ್ಯವೇನೆಂದರೆ, ಎಡ ಪಕ್ಷಗಳೇಕೆ ಪದೇ ಪದೇ ಬಹುಸಂಖ್ಯಾತ ಸಮುದಾಯಕ್ಕೆ ಕಿರಿಕಿರಿ ಉಂಟುಮಾಡುವಂಥ ನಿಲುವು ತಾಳುತ್ತವೋ ಅರ್ಥವಾಗದು (ಉದಾಹರಣೆಗೆ ಶಬರಿಮಲೆ ವಿಚಾರದಲ್ಲಿ ಅದು ವರ್ತಿಸಿದ ರೀತಿ). ಇದೊಂದು ರೀತಿಯಲ್ಲಿ ತಾನೇ ಕುಳಿತ ಕೊಂಬೆಯನ್ನೇ ಕಡಿದುಹಾಕಿದಂತೆ.
ಮೂರನೆಯದಾಗಿ ತದ್ವಿರುದ್ಧ ಸಿದ್ಧಾಂತವಿರುವ ಮೈತ್ರಿಕೂಟಗಳು ಒಂದು ಹಂತಕ್ಕಷ್ಟೇ ಕೆಲಸ ಮಾಡಬಲ್ಲವು. ಉದಾಹರಣೆಗೆ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಕರ್ನಾಟಕದಲ್ಲಿ ಮೋದಿ ವಿರೋಧಿ ಮಹಾಘಬಂಧನಕ್ಕೆ ಎದುರಾದ ಸೋಲು. ಇನ್ನೊಂದು ವಾಸ್ತವವೇನೆಂದರೆ, ಒಂದು ಮೈತ್ರಿಕೂಟವು ಜಾತಿ ರಾಜಕಾರಣ ಮಾಡುತ್ತಾ ನಿರ್ದಿಷ್ಟ ಜಾತಿ ಮತ್ತು ಸಮುದಾಯಗಳನ್ನು ಓಲೈಸಿದರೆ, ಅದಕ್ಕೆ ವಿರುದ್ಧವಾಗಿ ಇನ್ನೊಂದು ಜಾತಿ ಮತ್ತು ಸಮುದಾಯಗಳ ಮತದಾರರು ಕ್ರೋಡೀಕರಣವಾಗುತ್ತಾರೆ. ಉತ್ತರಪ್ರದೇಶದಲ್ಲಿನ ಎಸ್ಪಿ-ಬಿಎಸ್ಪಿ ಮೈತ್ರಿಕೂಟವು ದಲಿತ, ಮುಸ್ಲಿಂ, ಯಾದವ್ ಮತ್ತು ಜಾಟ್ಗಳನ್ನು ಗಮನದಲ್ಲಿಟ್ಟುಕೊಂಡು ಅಖಾಡಕ್ಕೆ ಇಳಿದರೆ, ಅದಕ್ಕೆ ವಿರುದ್ಧವಾಗಿ ಮೇಲ್ವರ್ಗ, ಯಾದವೇತರ ಒಬಿಸಿಗಳು ಮತ್ತು ಜಾಟೇತರ ದಲಿತರ ಮತಗಳೆಲ್ಲ ಕ್ರೋಡೀಕರಣಗೊಂಡವು. ಆ ಮತಗಳು ಅಭೂತಪೂರ್ವವಾಗಿ ಎನ್ಡಿಎದತ್ತ ಹರಿದುಹೋದವು.
ನಾಲ್ಕನೆಯದಾಗಿ, ಕಾಂಗ್ರೆಸ್ ರಾಜಕುಟುಂಬದ ಕಾಲ ಎಂದೋ ಮುಗಿದಿದೆ. ತನ್ನ ಸ್ವಂತ ಬಲದ ಮೇಲೆ ಹೆಚ್ಚುವರಿ ಮತಗಳನ್ನು ಸೆಳೆಯುವ ಶಕ್ತಿ ಆ ಪಕ್ಷಕ್ಕೆ ಈಗ ಉಳಿದಿಲ್ಲ. ಆದರೆ ಆಂಗ್ಲ ಮಾಧ್ಯಮಗಳು ಮತ್ತು ವಿರೋಧಪಕ್ಷಗಳು ಈ ಸತ್ಯವನ್ನು ರಾಹುಲ್ಗಾಂಧಿಗೆ ಹೇಳಲು ಬಯಸುತ್ತಿಲ್ಲ. 2014ರ ಸೋಲಿನ ನಂತರವೂ ಕಾಂಗ್ರೆಸ್ ತನ್ನ ಸ್ಥಿತಿಯನ್ನು ಸುಧಾರಿಸಿಕೊಳ್ಳಲಿಲ್ಲ. ಹೀಗಿರುವಾಗ ಆ ಪಕ್ಷ ಯಾವ ಕಾರಣಕ್ಕಾಗಿ ಗಾಂಧಿಗಳ ಅಡಿಯಲ್ಲಿ ಇರಬೇಕು?
ಐದನೆಯದಾಗಿ, ಭಾರತೀಯ ರಾಜಕಾರಣದಲ್ಲಿ “ರಾಷ್ಟ್ರೀಯತೆಯು’ ಒಂದು ಮುಖ್ಯ ಸಂಗತಿಯೇ ಅಲ್ಲ ಎಂದು ಅಲ್ಲಗಳೆಯುವುದು ದೊಡ್ಡ ತಪ್ಪು. ಜೆಎನ್ಯು ವಿಶ್ವವಿದ್ಯಾಲಯದ ತುಕೆxà ತುಕೆxà ಗ್ಯಾಂಗ್ಗಳಿಗೆ ಮತ್ತು ಅದರ ಮಾತುಗಳನ್ನು “ಅಭಿವ್ಯಕ್ತಿ ಸ್ವಾತಂತ್ರÂ’ ಎಂದು ಕರೆದ ಮೋದಿ ವಿರೋಧಿ ಮಾಧ್ಯಮಗಳು ಮತ್ತು ಪ್ರತಿರಕ್ಷಗಳಿಗೆ ಈ ಬಾರಿಯ ಚುನಾವಣೆ ಕನ್ನಡಿ ಹಿಡಿದಿದೆ. ವಿಶ್ವ ವೇದಿಕೆಯಲ್ಲಿ ಭಾರತವು ಉದಯಿಸುತ್ತಿದೆ. ಇಂಥ ಸಮಯದಲ್ಲಿ ವಾಕ್ ಸ್ವಾತಂತ್ರÂವನ್ನು ಈ ಮಟ್ಟಕ್ಕೆ ದುರ್ಬಳಕೆ ಮಾಡಿಕೊಳ್ಳುವುದನ್ನು ಯಾವ ಭಾರತೀಯರೂ ಇಷ್ಟಪಡುವುದಿಲ್ಲ.
ಆರನೆಯದಾಗಿ, ಬಿಜೆಪಿಯನ್ನು ಅಹಂಕಾರಿ ಪಕ್ಷವೆಂದು ಲೇಬಲ್ ಮಾಡಲಾಗಿದೆ. ಆದರೆ ಅಗತ್ಯ ಎದುರಾದಾಗ ಅದು ಅತ್ಯಂತ ವಿನಮ್ರವಾಗಿ ಮಿತ್ರಪಕ್ಷಗಳ ಮನವೊಲಿಸುತ್ತದೆ ಎನ್ನುವುದು ಸಾಬೀತಾಗಿದೆ. ತನ್ನ ಮಿತ್ರಪಕ್ಷಗಳು, ಮುಖ್ಯಯವಾಗಿ ಶಿವಸೇನೆಯು ಸ್ವಲ್ಪ ಧೂರ್ತವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಅರಿವಾಗುತ್ತಲೇ ಬಿಜೆಪಿಯು ಉದ್ಧವ್ ಠಾಕ್ರೆಯನ್ನು ಸಮಾಧಾನಗೊಳಿಸಿತು. ಇನ್ನು ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ರಾಮ್ವಿಲಾಸ್ ಪಾಸ್ವಾನ್ಗೆ ತುಸು ಹೆಚ್ಚೇ ಎನ್ನಿಸುವಷ್ಟು ಸ್ಥಾನಗಳನ್ನು ಬಿಟ್ಟುಕೊಟ್ಟಿತು. ಇದನ್ನು ಅನ್ಯ ಮೈತ್ರಿಕೂಟಗಳಿಗೆ ಹೋಲಿಸಿ ನೋಡಿ. ಹೇಗೆ ಮಾಯಾವತಿ ಮತ್ತು ಅಖೀಲೇಶ್ ಯಾದವ್ ಕಾಂಗ್ರೆಸ್ ಅನ್ನು ಮೂಲೆಗುಂಪು ಮಾಡಿದರೋ ಅನ್ನುವುದನ್ನು ಮತ್ತು ಅಧಿಕಾರ ಕಳೆದುಕೊಳ್ಳುವ ಭೀತಿಯ ನಡುವೆಯೂ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹೇಗೆ ಪರಸ್ಪರ ದುಸುಮುಸು ಮಾಡುತ್ತಿವೆ ಎನ್ನುವುದನ್ನು.
ಹೀಗಾಗಿ, ಒಂದು ಸಂಗತಿಯಂತೂ ಸ್ಪಷ್ಟ- ತನ್ನ ಮಿತ್ರಪಕ್ಷಗಳನ್ನು ಉತ್ತಮವಾಗಿ ನೋಡಿಕೊಳ್ಳುವ ವಿಚಾರದಲ್ಲಿ ಬಿಜೆಪಿಯು ಪ್ರತಿಪಕ್ಷಗಳಿಗಿಂತಲೂ ಬಹಳ ಮುಂದಿದೆ. ಈಗ ಭವಿಷ್ಯದ ವಿಚಾರಕ್ಕೆ ಬರುವುದಾದರೆ… 2022ರೊಳಗೆ ದೇಶದಿಂದ ಬಡತನ ತೊಲಗಿಸುವುದಾಗಿ ಭರವಸೆ ನೀಡಿರುವ ಬಿಜೆಪಿಗೆ ಕೆಲವು ಸಲಹೆಗಳಿವೆ-ಮೊದಲನೆಯದಾಗಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಮತ್ತು ಮೈತ್ರಿ ಸರ್ಕಾರಗಳೆಲ್ಲವೂ ಸಮಾನ ಆರ್ಥಿಕ ಕಾರ್ಯಕ್ರಮವೊಂದನ್ನು ಒಪ್ಪಿಕೊಳ್ಳುವಂತೆ ಮಾಡಬೇಕು. ಇದರಿಂದಾಗಿ ಕೇಂದ್ರ ಮತ್ತು ರಾಜ್ಯಗಳು ಸಮಾನ ಗುರಿಯನ್ನು ತಲುಪುವ ವಿಚಾರದಲ್ಲಿ ಸಮಾನ ಹೆಜ್ಜೆಗಳನ್ನು ಇಟ್ಟಂತೆ ಆಗುತ್ತದೆ. ಅಂದರೆ, ಕೇಂದ್ರದಲ್ಲಿ ಬಿಜೆಪಿಯೇ ಸಿಂಗಲ್ ಲಾರ್ಜೆಸ್ಟ್ ಪಾರ್ಟಿಯಾಗಿ ಹೊರಹೊಮ್ಮಿದ್ದರೂ, ಮೋದಿಯವರು ಮೈತ್ರಿಪಕ್ಷಗಳನ್ನು ಖುಷಿಯಾಗಿ ಇಡಬೇಕು. ಶಾಸನಗಳನ್ನು ರಾಜ್ಯಸಭೆಯ ಮೂಲಕ ಪಾಸುಮಾಡಿಸಲು ಮೈತ್ರಿ ಪಕ್ಷಗಳು ಅತ್ಯಗತ್ಯ. ಎರಡನೆಯದಾಗಿ, ಈ ಬಾರಿಯ ಆಡಳಿತದ ಮುಖ್ಯ ಗುರಿ ಆರ್ಥಿಕತೆಯ ಮೇಲೆ ಇರಬೇಕು. ಅಂದರೆ ಉದ್ಯೋಗ ಸೃಷ್ಟಿಯೇ ಮುಖ್ಯನೆಲೆಗೆ ಬರಬೇಕು. ಕೃಷಿ ಮಾರುಕಟ್ಟೆಗಳು, ಲೇಬರ್ ಮತ್ತು ಭೂ ವಲಯದಲ್ಲಿನ ಸುಧಾರಣೆಯೇ ಆದ್ಯತೆಯಾಗಬೇಕು. ಮೂರನೆಯದಾಗಿ, ಬಂಗಾಳ ಮತ್ತು ಒಡಿಶಾದಲ್ಲಿ ಒಳದಾರಿಗಳನ್ನು ರೂಪಿಸಿಕೊಂಡಿರುವ ಬಿಜೆಪಿಯು ಈಗ ದಕ್ಷಿಣ ಭಾರತದತ್ತ ಗಮನ ಹರಿಸಬೇಕು. ಅಂದರೆ ದಕ್ಷಿಣ ಭಾರತವನ್ನು, ಅದರಲ್ಲೂ ತಮಿಳುನಾಡನ್ನು ಅರ್ಥಮಾಡಿಕೊಳ್ಳುವ ರಾಜಕೀಯ ದೃಷ್ಟಿಕೋನದ ಮೇಲೆ ಅದು ಗಮನ ಕೊಡಬೇಕು. ಹಿಂದಿ ಭಾಷಿಕ ಪ್ರದೇಶಗಳಲ್ಲಿ ನಡೆಯುವ ಲಾಜಿಕ್ ಈ ಭಾಗಗಳಲ್ಲಿ ಪೂರ್ಣವಾಗಿ ಕೆಲಸ ಮಾಡುವುದಿಲ್ಲ. ಉತ್ತರ ಮತ್ತು ದಕ್ಷಿಣವನ್ನು ಬೆಸೆಯುವ ಉತ್ತಮ ಅವಕಾಶ ಬಿಜೆಪಿಗೆ ಇದೆ. ನಾಲ್ಕನೆಯದಾಗಿ, ಬಿಜೆಪಿಯು ಮುಸಲ್ಮಾನರತ್ತ ಹೋಗಬೇಕು, ಹಾಗೆಂದು ಕಾಂಗ್ರೆಸ್ನ ರೀತಿ ರಾಜಕೀಯ ಮಾಡಿ ಅಲ್ಲ. ಬದಲಾಗಿ, ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಪ್ರಾಮಾಣಿಕ ಸಹಾಯ ಮಾಡುವ ಮೂಲಕ ಮುಸಲ್ಮಾನರನ್ನು ತಲುಪಬೇಕು. ಹಾಗೆಂದು ಬಹುಸಂಖ್ಯಾತ ಪಾರ್ಟಿ ಆಗಿರುವ ಬಿಜೆಪಿಯು, ಅಲ್ಪಸಂಖ್ಯಾತರ ಓಲೈಕೆಗೆ ಇಳಿದು ಬಹುಸಂಖ್ಯಾತ ಸಮುದಾಯದ ಹಿತರಕ್ಷಣೆಯನ್ನು ಕಡೆಗಣಿಸಬಾರದು (ಹಾಗೆಂದು ಮುಸಲ್ಮಾನರಿಗೆ ಸಮಾನ ಸಹಾಯ, ಪ್ರತಿನಿಧಿತ್ವ ಸಿಗಬಾರದು ಎಂದೇನೂ ಅಲ್ಲ.). ಯಾವುದೇ ಸಮುದಾಯದ ಹಿತಾಸಕ್ತಿಗಳನ್ನೂ ಕಡೆಗಣಿಸದೇ, ಹಿಂದು ಮತ್ತು ಮುಸಲ್ಮಾನರ ನಡುವೆ ಸಂವಹನ ಸೇತುವೆಯನ್ನು ಕಟ್ಟುವ ವಿಷಯದಲ್ಲಿ ಬಿಜೆಪಿ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎನಿಸುತ್ತದೆ. ಬಹುಸಂಖ್ಯಾತರ ಹಿತಾಸಕ್ತಿಗಳನ್ನು ಬದಿಗೊತ್ತಿ, ಕೇವಲ ಮೈನಾರಿಟಿ ಪಾಲಿಟಿಕ್ಸ್ ಅನ್ನೇ ಮಾಡುತ್ತಿದ್ದ ಐಡಿಯಾವನ್ನು ಸೋಲಿಸುವ ಮೂಲಕ ಬಿಜೆಪಿಯು ಮೊದಲ ಯುದ್ಧವನ್ನು ಗೆದ್ದಿದೆ. ಅದೀಗ ಧಾರ್ಮಿಕ ಸಂವೇದನೆಗಳ ಆಧಾರದಲ್ಲಿ ಹೊಸ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತವನ್ನು ಅಭಿವೃದ್ಧಿಪಡಿಸಬೇಕು. ಲೂಟಿನ್ಸ್ ಬುದ್ಧಿಜೀವಿಗಳು ಪ್ರತಿಪಾದಿಸುವ “ಸೆಕ್ಯುಲರ್ ಇಂಡಿಯಾ’ ಎಂಬ ಹಳೆಯ ಪರಿಕಲ್ಪನೆಯು, ಹಿಂದೂ ಸಮುದಾಯವನ್ನು ಕೀಳುಗೈಯುವ ಆಧಾರದ ಮೇಲೆ ರಚಿತವಾಗಿದೆ. ಈ ಪರಿಕಲ್ಪನೆ ನಾಶವಾಗಬೇಕು. ಒಂದು ಕಾನ್ಫಿಡೆಂಟ್ ಆದ ಹಿಂದೂ ತಿರುಳಿನ ಸಹಾಯವಿಲ್ಲದೇ ನವ ಭಾರತ ಸೃಷ್ಟಿಯಾಗುವುದಿಲ್ಲ. ಇದೇ, 2019ರ ಚುನಾವಣೆಯ ಪ್ರಮುಖ ಸಂದೇಶ. (ಕೃಪೆ-ಸ್ವರಾಜ್ಯ) – ಆರ್.ಜಗನ್ನಾಥನ್