Advertisement

ಜನರನ್ನು ಜಲಾಂದೋಲನದತ್ತ ಪ್ರೇರೇಪಿಸಿದ ಸಾರ್ಥಕ ವರ್ಷಕ್ಕೆ ಸಾಕ್ಷಿಯಾದ ಸುದಿನ

09:59 AM Jan 01, 2020 | mahesh |

ಮಹಾನಗರ: ಪ್ರಸಕ್ತ ವರ್ಷ ಕೊನೆಯಾಗುತ್ತಿದ್ದಂತೆ ಹೊಸ ಹುರುಪು – ನಿರೀಕ್ಷೆಗಳೊಂದಿಗೆ ಹೊಸ ವರ್ಷಕ್ಕೆ ಅಣಿಯಾಗುತ್ತೇವೆ. ಹೊಸತನಕ್ಕೆ ಅಣಿಯಾಗುವ ಹೊತ್ತಿಗೆ ಹಳೆಯ ವರ್ಷದ ಕಾರ್ಯ ವೈಖರಿಯತ್ತ ಹಿಂದಿರುಗಿ ನೋಡಿದರೆ ಸಂತೃಪ್ತಿಯಿರಬೇಕು. ಆ ಸಂತೃಪ್ತಿ ಭಾವವೇ ಮುಂದಿನ ವರ್ಷದ ಉತ್ಸಾಹ, ನಿರೀಕ್ಷೆ ಹಾಗೂ ಬದ್ಧತೆಯನ್ನು ಇಮ್ಮಡಿಗೊಳಿಸುವುದಕ್ಕೆ ಸ್ಫೂರ್ತಿ.

Advertisement

ಈ ಸದಾಶಯದೊಂದಿಗೆ 2019ನೇ ವರ್ಷಕ್ಕೆ ವಿದಾಯ ಹೇಳುತ್ತ ಹೊಸ ಚೈತನ್ಯವನ್ನು ತುಂಬುವ ಮೂಲಕ 2020 ಎಲ್ಲರ ಬದುಕಿನಲ್ಲಿಯೂ ಯಶಸ್ಸಿನ ಮೆಟ್ಟಿಲುಗಳಾಗಲಿ. ಅದರಂತೆ, ಉದಯವಾಣಿಯ ಸುದಿನವು ಪ್ರಜ್ಞಾವಂತ ಮಂಗಳೂರು ನಗರ ನಾಗರಿಕರ ಜೀವನಾಡಿಯಾಗಿ ಇನ್ನಷ್ಟು ವಿನೂ ತನ ಪ್ರಯತ್ನಗಳೊಂದಿಗೆ ಓದುಗರ ಆಶಯ- ನಿರೀಕ್ಷೆಗಳಿಗೆ ಧ್ವನಿಯಾಗುವ ಭರವಸೆಯಡಿ ಹೊಸ ವರ್ಷವನ್ನು ಬರಮಾಡಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2019ರ ಆಂಭದಿಂದ ವರ್ಷಾಂತ್ಯದವರೆಗೆ ಜನರ ನಡುವಿನ ಸಂವೇದನ ಕೊಂಡಿಯಾಗಿ “ಸುದಿನ’ ಮಾಡಿದ ಕೆಲವೊಂದು ಪ್ರಯತ್ನ-ಜನಜಾಗೃತಿ ಅಭಿಯಾನಗಳನ್ನು ಮೆಲುಕು ಹಾಕುವ ಪ್ರಯತ್ನವಿದು.

ಮನೆಮನೆಗೆ ಮಳೆಕೊಯ್ಲು
ಮನೆ ಮನೆಗಳಲ್ಲಿಯೂ ಜಲ ಜಾಗೃತಿ ಮೂಡಬೇಕೆಂಬ ಕಳಕಳಿಯೊಂದಿಗೆ 2019 ಜೂ. 8ರಿಂದ “ಮನೆಮನೆಗೆ ಮಳೆಕೊಯ್ಲು’ ಅಭಿಯಾನವನ್ನು ಉದಯವಾಣಿ ಆರಂಭಿಸಿತ್ತು. ಅಭಿಯಾನ ಆರಂಭಿಸಿದ್ದಷ್ಟೇ ನಾವು. ಅದನ್ನು ಜಲಾಂದೋಲನವಾಗಿಸಿದ್ದು ನಮ್ಮ ಓದುಗರು. ಅಭಿಯಾನದಿಂದ ಪ್ರೇರಿ ತರಾಗಿ ಸುಮಾರು 400ಕ್ಕೂ ಹೆಚ್ಚು ಮನೆ, ಸಂಘ – ಸಂಸ್ಥೆಗಳಲ್ಲಿ ಮಳೆಕೊಯ್ಲು ಅಳವಡಿಕೆಗೆ ಕಾರಣವಾಗಿರುವುದು ನಮ್ಮ ಜಲ ಕಾಳಜಿಯ ಪಥದಲ್ಲಿ ಹೊಸ ಮೈಲಿಗಲ್ಲು. ಜನರ ಈ ಅಭೂತಪೂರ್ವ ಸ್ಪಂದನೆಯು ಅಭಿಯಾನವನ್ನು 100 ದಿನಗಳವರೆಗೆ ಯಶಸ್ವಿಯಾಗಿ ಮುಂದುವರಿಸಲು ಸಾಧ್ಯವಾಗಿತ್ತು.

ಈ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿ.ಪಂ., ಜಿಲ್ಲಾಡಳಿತ, ನಿರ್ಮಿತಿ ಕೇಂದ್ರ ಸಹಿತ ಸರಕಾರಿ ಆಡಳಿತ ವ್ಯವಸ್ಥೆಯೂ ಸಾಥ್‌ ಕೊಟ್ಟಿದ್ದು ಗಮನಾರ್ಹ. ಯಶೋಗಾಥೆಗಳನ್ನು ಪ್ರಕಟಿಸಿ ಇನ್ನೊಂದಷ್ಟು ಮಂದಿಗೆ ಪ್ರೇರಣೆ ಒದಗಿಸಿದ್ದೆವು. ಅಭಿಯಾನದಿಂದ ಸ್ಫೂರ್ತಿ ಪಡೆದು ಮಳೆಕೊಯ್ಲು ಅಳವಡಿಸಿದವರ ಬಗ್ಗೆ ಬರೆದು ಅವರನ್ನು ಹುರಿದುಂಬಿಸುವ ಕೆಲಸ ಮಾಡಿದ್ದೆವು. ಬಹುಶಃ ಮಳೆಕೊಯ್ಲು ಎಂದು ಆರಂಭಿಸಿದ ಅಭಿಯಾನವೊಂದು ಜಲಾಂದೋಲ ನವಾಗಿ ಮುಂದಿನ ಹಂತಕ್ಕೆ ಕಾಲಿಡಲು ಓದುಗರ ಸ್ಪಂದನೆಯೇ ಪ್ರೇರಣೆ.

ಮಳೆಕೊಯ್ಲು ಅಭಿಯಾನ ಆರಂಭಿಸಿದ ದಿನಗಳಿಂದ ಕೊನೆಯವರೆಗೂ ನಮ್ಮೊಂದಿಗೆ ಕೈಜೋಡಿಸಿದವರು ಸುರತ್ಕಲ್‌ನ ನಿರ್ಮಿತಿ ಕೇಂದ್ರದ ಯೋಜನ ನಿರ್ದೇಶಕ ರಾಜೇಂದ್ರ ಕಲ್ನಾವಿ ಮತ್ತು ತಂಡ. ಜೂ. 19ರಂದು ದ.ಕ. ಜಿ.ಪಂ. ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ “ಮಳೆ ಕೊಯ್ಲು’ ಕಾರ್ಯಾ ಗಾರದಲ್ಲಿ ಜಲ ತಜ್ಞ  ಶ್ರೀಪಡ್ರೆ ಅವರನ್ನು ಕರೆಸಿ ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗಿತ್ತು. ಕಾರ್ಯಾಗಾರದಲ್ಲಿ ನಿರ್ಮಿತಿ ಕೇಂದ್ರ ದವರು ನಡೆಸಿದ ಮಳೆಕೊಯ್ಲು ಪ್ರಾತ್ಯಕ್ಷಿಕೆ ನೋಡಿ ಜನ ತಮ್ಮ ಮನೆಯಲ್ಲೂ ಅಳವಡಿಸಲು ಮಾರ್ಗದರ್ಶನ ನೀಡಲು ಕೋರಿ 1,000ಕ್ಕೂ ಮಿಕ್ಕಿ ಮಂದಿ ನೋಂದಣಿ ಮಾಡಿದ್ದರು. ಬಹುತೇಕರ ಮನೆಯಲ್ಲಿ ಮಳೆಕೊಯ್ಲು ಅಳವಡಿಕೆ ಬಗ್ಗೆ ಪ್ರಾತ್ಯಕ್ಷಿಕೆ, ಅಳವಡಿಕೆಯೂ ನಡೆದಿದೆ.

Advertisement

ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯಲ್ಲಿ ವರ್ಷವಿಡೀ “ಜಲಬಂಧನ್‌’ ಯೋಜನೆ ಹಾಕಿಕೊಂಡಿರುವುದಾಗಿ ಬಿಷಪ್‌ ಡಾ| ಪೀಟರ್‌ ಪೌಲ್‌ ಸಲ್ಡಾನ ಪ್ರಕಟಿಸಿದ್ದರು. ಮುಂಡಾಜೆಯ ನೀರಿಂಗಿ ಸೋಣ ತಂಡವು ಒಂದಿಡೀ ಗ್ರಾಮವನ್ನು ದತ್ತು ತೆಗೆದುಕೊಂಡು ನೀರಿಂಗಿಸುವ ಕೆಲಸದಲ್ಲಿ ತೊಡಗಿ ದ್ದರೆ, ಬಿರ್‌ವೆರ್‌ ಕುಡ್ಲ ಸಂಘಟನೆಯು ವಾಮಂಜೂರಿನ ಸರಕಾರಿ ಶಾಲೆಯೊಂದರಲ್ಲಿ ಮಳೆ ಕೊಯ್ಲು ಅಳವಡಿ ಸಿಕೊಟ್ಟಿದೆ. ಕ್ರೆಡೈ ಸಂಸ್ಥೆಯು ಮುಂದೆ ನಿರ್ಮಾಣವಾಗುವ ಎಲ್ಲ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆಕೊಯ್ಲು ಕಡ್ಡಾಯ ಮಾಡುವುದನ್ನು ಸ್ವಯಂಸ್ಫೂರ್ತಿ ಯಿಂದ ಕೈಗೆತ್ತಿ ಕೊಂಡಿತ್ತು. ಮಂಗಳೂರು ಮಾತ್ರವಲ್ಲದೆ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಉಡುಪಿ ಮುಂತಾದಗಳಲ್ಲಿಯೂ ಅಭಿಯಾನಕ್ಕೆ ಸಿಕ್ಕ ಬೆಂಬಲ ದೊಡ್ಡದು. ಚರ್ಚ್‌ಗಳು, ಮಂದಿರಗಳು, ಲಯನ್ಸ್‌ ಕ್ಲಬ್‌, ಮಹಿಳಾ ಮಂಡಳಿಗಳು, ಶಾಲಾ- ಕಾಲೇಜು ಎಲ್ಲೆಡೆಯೂ ಜಲಜಾಗೃತಿಗಾಗಿ ಮಳೆ ಕೊಯ್ಲು ಕಾರ್ಯಾಗಾರ, ಮಳೆಕೊಯ್ಲು ಅಳವಡಿಕೆ ನಡೆದಿ  ರುವುದು ಗಮನಾರ್ಹ. ಹೀಗೆ ಮಳೆಕೊಯ್ಲು ಕನಸಿನ ಪಥದಲ್ಲಿ ಸಾಗಿದಾಗ ಸಿಗುವುದು ಯಶೋ ಗಾಥೆಗಳ ಸರದಿ. ಆ ಮೂಲಕ 2020ನೇ ವರ್ಷವು ಜನರ ಪಾಲಿಗೆ ನೀರಿನ ಅಭಾವ ಸೃಷ್ಟಿಸದ ವರ್ಷವಾಗಲಿ.

ನಗರದಲ್ಲಿ ಜುಲೈ ತಿಂಗಳಿನಲ್ಲಿ ಡೆಂಗ್ಯೂ ಹಾವಳಿ ಉಂಟಾದಾಗ ಸ್ವಚ್ಛತೆ ಮತ್ತು ಆರೋಗ್ಯ ಜಾಗೃತಿ ಬಗ್ಗೆ ಸುದಿನ “ಡೆಂಗ್ಯೂ ಎಚ್ಚರ ಎಚ್ಚರ’ ಎಂಬ ಅಭಿಯಾನ ಕೈಗೊಂಡಿತ್ತು. ಸುರತ್ಕಲ್‌: ಕೊಟ್ಟಾರಚೌಕಿಯಿಂದ ಸುರತ್ಕಲ್‌ವರೆಗೆ ಹೆದ್ದಾರಿ ದುರಸ್ತಿಗೆ ಸುದಿನ ಅಭಿಯಾನ ನಡೆಸಿ ರಸ್ತೆಯ ದುಃಸ್ಥಿತಿಯ ಬಗ್ಗೆ ಅಧಿಕಾರಿಗಳ ಗಮನ ಸೆಳೆಯುವ ಯತ್ನ ಮಾಡಿತ್ತು.

ಅಭಿವೃದ್ಧಿ ಪರ ಸಂವಾದ
ಚುನಾವಣೆ ಸಂದರ್ಭ, ಅಕಾಡೆಮಿಗಳ ನೂತನ ಸಾರಥ್ಯ ಪ್ರಕಟವಾದ ಬಳಿಕ ಮೂರು ಸಂವಾದಗಳನ್ನು ಈ ವರ್ಷದಲ್ಲಿ ಹಮ್ಮಿಕೊಂಡಿದ್ದೇವೆ. ಲೋಕಸಭಾ ಚುನಾವಣೆ ವೇಳೆ ಪ್ರಮುಖ ಪಕ್ಷಗಳ ಅಭ್ಯರ್ಥಿಗಳನ್ನು ಆಹ್ವಾನಿಸಿ ಜಿಲ್ಲೆಯ ಅಭಿವೃದ್ಧಿಗೆ ಅವರ ಚಿಂತನೆಗಳ ಬಗ್ಗೆ ಸಂವಾದ ನಡೆಸಲಾಗಿತ್ತು. ಪಾಲಿಕೆ ಚುನಾವಣೆ ವೇಳೆ ಪ್ರಮುಖ ಪಕ್ಷಗಳ ಮುಖಂಡರನ್ನು ಕಚೇರಿಗೆ ಆಹ್ವಾನಿಸಿ ನಗರ ಅಭಿವೃದ್ಧಿಯಲ್ಲಿ ಅವರ ಆದ್ಯತೆಗಳ ಬಗ್ಗೆ ಪ್ರಶ್ನಿಸಿ ಜನರ ಮುಂದಿಟ್ಟಿದ್ದೇವೆ. ಜನರ ನಿರೀಕ್ಷೆಗಳನ್ನು “ಜನರ ಪ್ರಣಾಳಿಕೆ’ಯಾಗಿ ಪ್ರಕಟಿಸುವುದರೊಂದಿಗೆ ಮುಖ್ಯ ಅಂಶಗಳನ್ನೊಳಗೊಂಡ ಪ್ರಣಾಳಿಕೆಯನ್ನು ಪಕ್ಷಗಳ ಮುಖಂಡರಿಗೆ ನೀಡಿದ್ದೆವು. ಕೆಲವು ಅಂಶಗಳು ಪಕ್ಷಗಳ ಪ್ರಣಾಳಿಕೆಯಲ್ಲಿಯೂ ನಮೂದಾಗಿತ್ತು. ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ, ಕೊಡವ ಸಾಹಿತ್ಯ ಅಕಾಡೆಮಿಗಳ ನೂತನ ಸಾರಥಿಗಳೊಂದಿಗೆ ಸಂವಾದ ಏರ್ಪಡಿಸಿ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಲೋಕದ ಅಭಿವೃದ್ಧಿಗೆ ಅವರ ಧ್ಯೇಯ, ಪರಿಕಲ್ಪನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗಿತ್ತು.

“ಸುದಿನ’ ಕಾಳಜಿ ಅಭಿಯಾನ
ಈ ವರ್ಷಾರಂಭದಿಂದ ವರ್ಷಾಂತ್ಯದವರೆಗೆ “ಸುದಿನ’ವು ಸಾಮಾಜಿಕ ಕಳಕಳಿಯೊಂದಿಗೆ ಅನೇಕ ಜನಪರ ಅಭಿಯಾನಗಳನ್ನು ನಡೆಸಿದೆ. ಚುನಾವಣೆಯಲ್ಲಿ ಮತದಾನದ ಮಹತ್ವ, ಮತದಾನದ ಅಗತ್ಯಗಳನ್ನು ಮತದಾರರಿಗೆ ಸಾರುವ ಉದ್ದೇಶದಿಂದ ಲೋಕಸಭಾ ಚುನಾವಣೆ ವೇಳೆ ದ.ಕ. ಜಿ.ಪಂ. ಸಹಯೋಗದೊಂದಿಗೆ “ಬಹುಮಾನ ಗೆಲ್ಲಿರಿ-ಮತದಾನ ಮಾಡಿರಿ’ ಎಂಬ ಆಶಯದೊಂದಿಗೆ ರಸಪ್ರಶ್ನೆ ಸ್ಪರ್ಧೆಯನ್ನು 15 ದಿನಗಳ ಕಾಲ ನಡೆಸಿದೆ. ಲೋಕಸಭಾ ಚುನಾವಣೆ ಮತ್ತು ಮಹಾನಗರ ಪಾಲಿಕೆ ಚುನಾವಣೆ ವೇಳೆ ಮತದಾನದ ಮಹತ್ವ ಕುರಿತು ಯುವ ಸಮುದಾಯದಿಂದ ಅಭಿಪ್ರಾಯ ಆಹ್ವಾನಿಸಿ ಪ್ರಕಟಿಸುವ ಮೂಲಕ ಯುವ ಸಮುದಾಯದ ಮುಖಾಂತರ ಇತರರಿಗೆ ಮತದಾನದ ಮಹತ್ವವನ್ನು ತಿಳಿಸುವ ಕೆಲಸ ಮಾಡಿದೆ. ಮಹಾನಗರ ಪಾಲಿಕೆ ಚುನಾವಣೆ ಸಂದರ್ಭ ಪಾಲಿಕೆ ವ್ಯಾಪ್ತಿಯ ಸಮಸ್ಯೆ, ಆಗಬೇಕಾದ ಕೆಲಸಗಳು, ಆದ ಅಭಿವೃದ್ಧಿ ಕಾಮಗಾರಿಗಳನ್ನು ಜನಪ್ರತಿನಿಧಿಗಳ ಮುಂದಿಡುವ ಪ್ರಯತ್ನ ಮಾಡಿದ್ದೇವೆ. ಚುನಾವಣೆ ಘೋಷಣೆಯಾದಂದಿನಿಂದ ಚುನಾವಣೆ ಮುಗಿದು ಫಲಿತಾಂಶ ಘೋಷಣೆಯಾಗುವವರೆಗೂ ಚುನಾವಣ ಸಂಬಂಧಿ ವಿಚಾರಗಳನ್ನು ಓದುಗರ ಮುಂದಿಡುವ ಪ್ರಯತ್ನ ಮಾಡಲಾಗಿದೆ. ಜನರ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮುಂದಿಡಬೇಕೆಂಬ ಉದ್ದೇಶದಿಂದ ಪ್ರತಿ ಬುಧವಾರ “ಜನದನಿ’ ಸರಣಿ ಮೂಲಕ ಸಮಸ್ಯೆ ಬಗ್ಗೆ ಪ್ರಕಟಿಸುತ್ತಾ ಬರಲಾಗಿದ್ದು, ಬಹುತೇಕ ಸಮಸ್ಯೆಗಳು ಇತ್ಯರ್ಥವಾಗಿವೆ. ಸಮಸ್ಯೆಗಳಿಗೆ ವೇದಿಕೆ ಒದಗಿಸಿ ಅದನ್ನು ನಿವಾರಿಸುವಲ್ಲಿ ಸುದಿನ ಮುಂದೆಯೂ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂಬ ವಿಶ್ವಾಸವನ್ನು ಓದುಗರ ಮುಂದಿಡುತ್ತಿದ್ದೇವೆ.

ಧನಾತ್ಮಕ ವರದಿ
ಒಬ್ಬರಿಂದ ಇನ್ನೊಬ್ಬರ ಜೀವನದ ಮೇಲೆ ಧನಾತ್ಮಕ ಪರಿಣಾಮ ಬೀರುವ ನಿಟ್ಟಿನಲ್ಲಿ ಸರಕಾರಿ ಶಾಲೆ, ಭಾರತೀಯ ಸೇನೆ ಹಾಗೂ ಕೃಷಿ ಕ್ಷೇತ್ರದ ಪಾಸಿಟಿವ್‌ ಲೇಖನಗಳನ್ನು ಪ್ರಕಟಿಸಲಾಗಿದೆ.
ಶತಮಾನ ದಾಟಿದ ಸರಕಾರಿ ಕನ್ನಡ ಶಾಲೆಗಳನ್ನು ಪರಿಚಯಿಸಬೇಕೆಂಬ ಉದ್ದೇಶದಿಂದ ನ.1ರ ಕರ್ನಾಟಕ ರಾಜ್ಯೋತ್ಸವ ದಿನದಿಂದ “ನಮ್ಮ ಶಾಲೆ ನಮ್ಮ ಹೆಮ್ಮೆ’ ಸರಣಿ ನಡೆಸಲಾಗಿತ್ತು. ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ದಕ್ಷಿಣ ಕನ್ನಡ ಜಿಲ್ಲೆಯವರನ್ನು ಪರಿಚಯಿಸುವ ನಿಟ್ಟಿನಲ್ಲಿ “ಸೈನಿಕರಿಗೆ ಸಲಾಂ’ ಸರಣಿಯನ್ನು 2018ರಲ್ಲಿ ಆರಂಭಿಸಿದ್ದು, 2019ರ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪುನರಾರಂಭಿಸಲಾಗಿತ್ತು. ಕೃಷಿಕರನ್ನು ಪ್ರೋತ್ಸಾಹಿಸಿ ಕೃಷಿ ಚಟುವಟಿಕೆಗಳತ್ತ ಜನರನ್ನು ಸೆಳೆಯಲು “ಕೃಷಿ ಕಥನ’ ಸರಣಿ ಆರಂಭಿಸಿ ಜಿಲ್ಲೆಯ ಕೃಷಿಕರನ್ನು ಜಿಲ್ಲೆಯ ಜನರಿಗೆ ತಲುಪಿಸುವ ಪ್ರಯತ್ನ ಮುಂದುವರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next