Advertisement

ಇತಿಹಾಸದ ಪುಟ ತೆರೆದಿಟ್ಟ ದಾರಾಷಿಕೋ 

06:00 AM Jul 13, 2018 | |

ದಿಲ್ಲಿಯ ಪಟ್ಟ ತನಗೆ ಸಿಗಬೇಕೆಂದು ಮುರಾದ್‌, ಷಹಶೂಜ ಹಾಗೂ ಔರಂಗಜೇಬ್‌ ಪಟ್ಟು ಹಿಡಿಯುತ್ತಾರೆ ಹಾಗೂ ದಾರಾಷಿಕೋ ಖಾಫಿರರ ಜತೆ ಸೇರಿದ್ದಾನೆಂದು ಆತ ಹಿಂದುಗಳನ್ನು ಬೆಂಬಲಿಸುತ್ತಾನೆಂದೂ ದೂರು ಹೇಳಿ ಆತನ ವಿರುದ್ಧ ಪಿತೂರಿ ನಡೆಸುತ್ತಾರೆ.

Advertisement

 ಕಾಲೇಜಿನ ಪಾಠ ಪ್ರವಚನದ ನಡುವೆ 25 ದಿನಗಳ ಕಾಲ ರಂಗಾಭ್ಯಾಸ ಮಾಡಿ ನಾಟಕ ಪ್ರದರ್ಶನ ನೀಡುವ ಪರಿಪಾಠ ಬೆಳೆಸಿಕೊಂಡವರು ಸುಬ್ರಹ್ಮಣ್ಯ ಕೆ.ಎಸ್‌.ಎಸ್‌.ಕಾಲೇಜಿನ ಕುಸುಮಸಾರಂಗದ ವಿದ್ಯಾರ್ಥಿಗಳು. ಕುಸುಮಸಾರಂಗ 25 ವರ್ಷಗಳಿಂದ ನಿರಂತರವಾಗಿ ರಂಗ ಚಟುವಟಿಕೆ ನಡೆಸುತ್ತಿದೆ. ಐ.ಕೆ ಬೊಳುವಾರು, ಮೋಹನ್‌ ಸೋನಾ, ಕೃಷ್ಣ ಗುತ್ತಿಗಾರು, ವೆಂಕಟರಮಣ ಐತಾಳ, ಜೀವನ್‌ರಾಮ್‌ ಸುಳ್ಯ, ಕೃಷ್ಣಮೂರ್ತಿ ನಾರ್ಣಕಜೆ, ವೀರೇಶ್‌ ದಾವಣಗೆರೆ, ಮೌನೇಶ್‌ ಬಡಿಗೇರ್‌, ಪ್ರವೀಣ್‌ ತಳೂರು, ದಿ.ನವೀನ್‌ ಎಡಮಂಗಲ, ಸುರೇಶ್‌ ಆನಗಳ್ಳಿ, ಪ್ರದೀಪ್‌ ಬಿ.ಇ. ಮೈಸೂರು, ಮಂಜುನಾಥ್‌ ಎನ್‌. ಬಡಿಗೇರ್‌, ವಿದ್ದು ಉಚ್ಚಿಲ, ವೈ.ಡಿ.ಬಾದಾಮಿ, ಗಣೇಶ್‌ ಎಂ. ಮುಂತಾದ ನಿರ್ದೇಶಕರು ಇದುವರೆಗೆ ರಂಗ ತರಬೇತಿ ಶಿಬಿರ ನೀಡಿ ನಾಟಕ ನಿರ್ದೇಶನ ಮಾಡಿದ್ದಾರೆ. 

ಸಿರಿ ಸಂಪಿಗೆ, ಕೆರೆಗೆ ಹಾರ, ಅಂಧಯುಗ, ಲೋಕ ಶಾಕುಂತಲ, ಸಾಹೇಬರು ಬರುತ್ತಾರೆ, ಚೋರ ಪುರಾಣ, ಸೂರ್ಯ ಶಿಕಾರಿ, ಅಗ್ನಿ ಮತ್ತು ಮಳೆ, ಮಹಾಮಾಯಿ, ಜಾಗತಿಕ ವೀರನ ಕಥೆ, ಘಾಸಿರಾಂ ಕೋತ್ವಾಲ್‌, ಪರಿತ್ಯಕ್ತ, ಸುಕಿಟೋರಿಮೆ ಎಂಬ ಕಥೆಗಾರ, ಮಹಾಮಾಯಿ, ತಲೆದಂಡ, ಜತೆಗಿರುವನು ಚಂದಿರ, ಹರಿಣಾಭಿಸರಣ, ಸನ್ಯಾಸಿ ಪರಕಾಯ ಪ್ರವೇಶ, ಮಲ್ಲಮ್ಮನ ಮನೆ ಹೋಟ್ಲು, ಚಿತ್ರಪಟ, ಇದಿತಾಯಿ, ಸೇವಂತಿ ಪ್ರಸಂಗ, ತುಕ್ರನ ಕನಸು, ಯುಯೂತ್ಸು, ಪಂಚವಟಿಯ ಮಾಯಾಮುಖಗಳು ನಾಟಕಗಳು ಕುಸುಮಸಾರಂಗ ಅರ್ಪಿಸಿದ 25 ಕಲಾಕುಸುಮಗಳಾಗಿವೆ. 


ಕುಸುಮಸಾರಂಗ ಪ್ರದರ್ಶಿಸಿದ ಚೋರಪುರಾಣ ನಾಟಕವು ದೂರದರ್ಶನದಲ್ಲಿ ಪ್ರದರ್ಶನ ಕಂಡಿದೆ. ತಂಡವು ಅಂತರ್‌ ಕಾಲೇಜು ನಾಟಕ ಸ್ಪರ್ಧೆಯಲ್ಲಿ 5 ಬಾರಿ ಪ್ರಶಸ್ತಿಯನ್ನು ತನ್ನದಾಗಿಸಿದೆ. ಸಿರಿಸಂಪಿಗೆ, ಮಹಾಮಾಯಿ ಮತ್ತು ಚಿತ್ರಪಟ ರಾಜ್ಯಪ್ರಶಸ್ತಿಯನ್ನು ಪಡೆದ ನಾಟಕಗಳಾಗಿವೆ. ಕುಸುಮಸಾರಂಗದ ನಾಟಕ ಎಚ್‌.ಎಸ್‌.ವೆಂಕಟೇಶ್‌ ಮೂರ್ತಿ ರಚಿಸಿದ, ಮಂಜುನಾಥ್‌ ಎನ್‌. ಬಡಿಗೇರ್‌ ನಿರ್ದೇಶನದ ಚಿತ್ರಪಟವು ರಾಜ್ಯ ಮಟ್ಟದ ನಾಟಕ ಸ್ಪರ್ಧೆವಿದ್ಯಾರ್ಥಿ ರಂಗ ತೋರಣದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ.

ಈ ಬಾರಿಯ ದಾರಾಷಿಕೋ ನಾಟಕ ಮೂರು ಪ್ರದರ್ಶನಗಳನ್ನು ನೀಡಿದೆ. ನಾಟಕವನ್ನು ರಾಜಪ್ಪ ದಳವಾಯಿ ರಚಿಸಿದ್ದಾರೆ. ಮೊಗಲ್‌ ರಾಜ ಷಹಜಾನ್‌ ತನ್ನ ಮಕ್ಕಳಿಗೆ ಸಾಮ್ರಾಜ್ಯವನ್ನು ಹಂಚುವ ಪ್ರಕ್ರಿಯೆಯಿಂದ ನಾಟಕ ಆರಂಭಗೊಳ್ಳುತ್ತದೆ. ಷಹಜಾನ್‌ ತನ್ನ ಹಿರಿಯ ಮಗನಾದ ದಾರಾಷಿಕೋನಿಗೆ ದಿಲ್ಲಿಯನ್ನು ಹಾಗೂ ಇತರ  ಮಕ್ಕಳಾದ   ಮುರಾದ್‌ಬಕ್ಷ, ಷಹಶೂಜ ಮತ್ತು ಔರಂಗಜೇಬರಿಗೆ ಇತರ ಭಾಗಗಳನ್ನು ಆಳುವ ಅಧಿಕಾರ ನೀಡುತ್ತಾನೆ. ದಿಲ್ಲಿಯ ಪಟ್ಟ ತನಗೆ ಸಿಗಬೇಕೆಂದು ಮುರಾದ್‌, ಷಹಶೂಜ ಹಾಗೂ ಔರಂಗಜೇಬ್‌ ಪಟ್ಟು ಹಿಡಿಯುತ್ತಾರೆ ಹಾಗೂ ದಾರಾಷಿಕೋ ಖಾಫಿರರ ಜತೆ ಸೇರಿದ್ದಾನೆಂದು ಆತ ಹಿಂದುಗಳನ್ನು ಬೆಂಬಲಿಸುತ್ತಾನೆಂದೂ ದೂರು ಹೇಳಿ ಆತನ ವಿರುದ್ಧ ಪಿತೂರಿ ನಡೆಸುತ್ತಾರೆ. ಈ ಪಿತೂರಿಯಲ್ಲಿ ಔರಂಗಜೇಬ್‌ , ಮುರಾದ್‌ ಹಾಗೂ ಷಹಶೂಜರನ್ನು ಕೊಲ್ಲಿಸಿ ದಾರಾಷಿಕೋನನ್ನು ದೇಶದಿಂದ ಹೊರಗಟ್ಟುತ್ತಾನೆ. ತಂದೆ ಷಹಜಾನನ್ನು ಸೆರೆಯಲ್ಲಿ ಇಡುತ್ತಾನೆ. ದೇಶಭ್ರಷ್ಟ ದಾರಾಷಿಕೋ ಅನಂತರ ಅಫ‌ಘಾನದಲ್ಲಿ ಸೆರೆಯಾಗಿ ಕೊಲ್ಲಲ್ಪಡುತ್ತಾನೆ. 

ರಂಗಶಿಕ್ಷಣ ಶಿಬಿರದಲ್ಲಿ ಕುಸುಮಸಾರಂಗ ತಂಡ ಇತಿಹಾಸದ ಒಂದು ಪುಟವನ್ನು ತೆರೆದಿಡುವ ಪ್ರಯತ್ನ ಮಾಡಿದೆ. ನಾಟಕವನ್ನು ಚೇತನ್‌ ತುಮಕೂರು ನಿರ್ದೇಶನ ಮಾಡಿದ್ದಾರೆ. ಸುನಿಲ ತುಮಕೂರು ವಿನ್ಯಾಸ ಮಾಡಿದ್ದಾರೆ. ಶೋಧನ್‌ ಬಸ್ರೂರು ಸಂಗೀತ ಹಾಗೂ ಮುಂಜನಾಥ ಹಿರೇಮಠ ಬೆಳಕು ನೀಡಿದ್ದರು. ರಂಗ ಶಿಕ್ಷಣಾರ್ಥಿಗಳಾದ ಶ್ರುತಿ ಮೆದು, ಪ್ರಿಯಾಂಕ ಮುಂಡೋಡಿ, ಐಶ್ವರ್ಯಾ ವಿ.ಎಂ, ಮಧುಶ್ರಿ ಎಸ್‌. ಆರ್‌., ಅನಘಾ ಮಲೆಯಾಳ, ಬಾಲಮುರಳಿ, ಶ್ರದ್ಧಾ ಕೆ. ಎಸ್‌., ವರ್ಷಾ ಮಾಯಿಪಾಜೆ, ಗಯಾಶ್ರೀ ಎಸ್‌. ಎನ್‌., ಕೀರ್ತನ್‌ ಎಂ, ಧನ್ಯಾ ಕೆ., ಭವ್ಯಾ ಎಸ್‌., ಅನಿತಾ ಹೇಮಳ, ದುರ್ಗಾಶ್ರೀ, ಅಜಿತ್‌ ಕುಮಾರ್‌, ನವ್ಯಶ್ರೀ ಕೆ., ನಟನಾ ಕೌಶಲ್ಯದ ಮೂಲಕ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. 

Advertisement

ಬಾಲಕೃಷ್ಣ ಭೀಮಗುಳಿ 

Advertisement

Udayavani is now on Telegram. Click here to join our channel and stay updated with the latest news.

Next