Advertisement

ಸೊರಗಿದ ಕಿಂಡಿ ಅಣೆಕಟ್ಟಿಗೆ ಕಾಯಕಲ್ಪ

09:47 PM Jun 01, 2019 | mahesh |

ನರಿಮೊಗರು: ಮುಂಡೂರು ಗ್ರಾ. ಪಂ. ವ್ಯಾಪ್ತಿಯ ಸರ್ವೆ ಗ್ರಾಮದ ಸೊರಕೆಯಲ್ಲಿ 20 ವರ್ಷಗಳ ಹಿಂದೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣವಾಗಿದ್ದ ಕಿಂಡಿ ಅಣೆಕಟ್ಟಿಗೆ ಅಂತೂ ದುರಸ್ತಿ ಭಾಗ್ಯ ಒದಗಿದೆ. ಇಲಾಖೆಯ ನಿರ್ಲಕ್ಷ್ಯದಿಂದ ಕಿಂಡಿ ಅಣೆಕಟ್ಟು ಉಪಯೋಗ ಶೂನ್ಯವಾಗಿದ್ದರ ಕುರಿತು “ಉದಯವಾಣಿ’ ಸುದಿನ ಫೆ. 7ರಂದು ವರದಿ ಪ್ರಕಟಿಸಿ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಿಂಡಿ ಅಣೆಕಟ್ಟಿನ ದುರಸ್ತಿಯಾಗಿದೆ. ಜನತೆಯ ಬಹು ವರ್ಷಗಳ ಬೇಡಿಕೆಯೊಂದು ಈಡೇರಿದಂತಾಗಿದೆ.

Advertisement

17 ವರ್ಷ ನಿರ್ವಹಣೆಯಿಲ್ಲ
ಸುಮಾರು 35 ಮೀ. ಅಗಲ ಮತ್ತು 2 ಮೀಟರ್‌ ಎತ್ತರವಿರುವ ಈ ಅಣೆಕಟ್ಟು ಪ್ರಸ್ತುತ ಸುಮಾರು 2 ಕೋಟಿ ರೂ. ವೆಚ್ಚದ ಯೋಜನೆಯಾಗಿದ್ದು, ಇಲಾಖಾಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿತ್ತು. ನಿರ್ಮಾಣಗೊಂಡ ಮೂರು ವರ್ಷಗಳ ಕಾಲ ಹಲಗೆ ಹಾಕಲು ಆಸಕ್ತಿ ತೋರಿದ್ದ ಇಲಾಖೆ ನಿರ್ವಹಣ ವೆಚ್ಚ ಭರಿಸಿತ್ತು. ಅನಂತರ 17 ವರ್ಷಗಳ ಕಾಲ ಅಣೆಕಟ್ಟನ್ನು ನಿರ್ವಹಿಸುವ ಗೋಜಿಗೆ ಹೋಗಿರಲಿಲ್ಲ. ಈ ನಡುವೆ ಅಣೆಕಟ್ಟೆಯ ಒಂದು ಬದಿಯ ತಡೆಗೋಡೆ ಕುಸಿದು ಹೋಗಿದ್ದು ಹಲಗೆಗಳು ಶಿಥಿಲಗೊಂಡಿತ್ತು.

ಮೂರು ವರ್ಷಗಳಿಂದ ಕಿಂಡಿ ಅಣೆಕಟ್ಟಿನ ಫಲಾನುಭವಿಗಳಲ್ಲಿ ಒಬ್ಬರಾದ ಜಿ.ಪಂ. ಮಾಜಿ ಸದಸ್ಯ ಸುರೇಶ್‌ ಕುಮಾರ್‌ ಸೊರಕೆ ಅವರು ವರ್ಷಕ್ಕೆ 25 ಸಾವಿರ ರೂ. ಖರ್ಚು ಮಾಡಿ ಶಿಥಿಲಗೊಂಡಿರುವ ಹಲಗೆಗೆ ಟಾರ್ಪಲ್‌ ಹೊದಿಸಿ ಹಲಗೆ ಅಳವಡಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಹಲಗೆಗಳು ಶಿಥಿಲಗೊಂಡಿದೆ ಹಾಗೂ ಹೊಳೆಯ ಒಂದು ಬದಿಯಲ್ಲಿ ತಡೆಗೋಡೆ ಇಲ್ಲದ ಕಾರಣ ಗರಿಷ್ಠ ಸಾಮರ್ಥ್ಯದ ತನಕ ನೀರು ಶೇಖರಣೆಯಾಗುತ್ತಿರಲಿಲ್ಲ.

ಈ ಕುರಿತು ಹಲವು ವರ್ಷಗಳಿಂದ ಇಲಾಖಾಧಿಕಾರಿಗಳಿಗೆ ಮಾಹಿತಿ ನೀಡುತ್ತಾ ಬಂದಿರುವ ಸುರೇಶ್‌ ಕುಮಾರ್‌ ಸೊರಕೆ ವಿನೂತನ ಮಾದರಿಯ ಹಲಗೆಗಳನ್ನು ನೀಡುವಂತೆ, ಕಾಂಕ್ರೀಟ್‌ ತಡೆಗೋಡೆ ನಿರ್ಮಾಣ ಹಾಗೂ ಇತರ ದುರಸ್ತಿ ಕಾರ್ಯಗಳನ್ನು ಮಾಡುವಂತೆಯೂ ಮನವಿ ಮಾಡಿದ್ದರು. ತಡೆಗೋಡೆ ನಿರ್ಮಾಣಕ್ಕೆ 2017ರಲ್ಲಿ ಗುತ್ತಿಗೆ ಪಡೆದುಕೊಂಡವರು ಕಾಮಗಾರಿಯನ್ನು ಪ್ರಾರಂಭಿಸಿರಲಿಲ್ಲ. ಈಗ ಕಿಂಡಿ ಅಣೆಕಟ್ಟಿನ ದುರಸ್ತಿ ನಡೆಯುತ್ತಿದೆ.

ಏನು ಪ್ರಯೋಜನ?
ಈ ಕಿಂಡಿ ಅಣೆಕಟ್ಟಿನಲ್ಲಿ ಗರಿಷ್ಠ ಸಾಮರ್ಥ್ಯದ ವರೆಗೆ ನೀರು ನಿಂತರೆ ಒಲೆಮುಂಡೋವು ತನಕ 2 ಕಿ.ಮೀ. ವರೆಗೆ ನೀರು ಶೇಖರಿಸಿಡುವ ಅವಕಾಶ ಇದ್ದು, ಸರ್ವೆ ಹಾಗೂ ಸವಣೂರು ಗ್ರಾ.ಪಂ. ವ್ಯಾಪ್ತಿಯ ಪುಣcಪ್ಪಾಡಿ ಗ್ರಾಮಗಳ ಅಂತರ್ಜಲ ಮಟ್ಟ ಸುಧಾರಣೆ ಆಗುವುದರಲ್ಲಿ ಸಂದೇಹವಿಲ್ಲ.

Advertisement

ಹಲವರಿಗೆ ಪ್ರಯೋಜನ
ಸರ್ವೆ, ಪುಣcಪ್ಪಾಡಿ ಗ್ರಾಮಗಳ ಅಂತರ್ಜಲ ವೃದ್ಧಿಗಾಗಿ ನಾನು ಜಿ.ಪಂ. ಸದಸ್ಯನಾಗಿದ್ದಾಗ ಅನುಷ್ಠಾನ ಗೊಂಡ ಈ ಯೋಜನೆಯನ್ನು ಉಳಿಸಿಕೊಳ್ಳಬೇಕೆಂಬ ಆಸಕ್ತಿಯಿಂದ ಆಣೆ ಕಟ್ಟೆಯ ನಿರ್ವಹಣೆ ಮಾಡುತ್ತಿದ್ದೇನೆ. ಈಗ ಇಲಾಖೆಯ ವತಿ ಯಿಂದಲೇ ದುರಸ್ತಿ ನಡೆಯುತ್ತಿದೆ. ಇದರಿಂದ ಹಲವರಿಗೆ ಪ್ರಯೋಜನವಾಗಲಿದೆ.
– ಸುರೇಶ್‌ ಕುಮಾರ್‌ ಸೊರಕೆ ಜಿ.ಪಂ. ಮಾಜಿ ಸದಸ್ಯರು

ಪ್ರವೀಣ್‌ ಚೆನ್ನಾವರ

Advertisement

Udayavani is now on Telegram. Click here to join our channel and stay updated with the latest news.

Next